ಕರ್ನಾಟಕ

karnataka

ETV Bharat / state

ಬೆಂಗಳೂರು ಸಮೀಪದಲ್ಲೇ ಮೊಬೈಲ್ ಉತ್ಪಾದನಾ ಕಂಪನಿ ಆರಂಭ, 40 ಸಾವಿರ ಉದ್ಯೋಗ ಸೃಷ್ಟಿ ಗುರಿ : ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ - ASHWINI VAISHNAV PRESS MEET

ಈ ಬಾರಿಯ ಕೇಂದ್ರ ಬಜೆಟ್​​ ಬಡ, ಮಧ್ಯಮ ವರ್ಗದ ಮೇಲೆ ಈ ಬಾರಿ ಫೋಕಸ್ ಮಾಡಿದೆ. ​​ಕರ್ನಾಟಕ ರೈಲ್ವೆಗೆ ₹7,564 ಕೋಟಿ ಅನುದಾನ ನೀಡಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

Union Railway and Information Technology Minister Ashwini Vaishnav
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (ETV Bharat)

By ETV Bharat Karnataka Team

Published : Feb 15, 2025, 6:09 PM IST

ಬೆಂಗಳೂರು: ''ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರು ಸಮೀಪದಲ್ಲೇ ಮೊಬೈಲ್ ಉತ್ಪಾದನಾ ಕಂಪನಿ ಆರಂಭವಾಗಲಿದೆ. ಇದರಿಂದ 40 ಸಾವಿರ ಉದ್ಯೋಗ ಸೃಷ್ಟಿಯಾಗುವ ಗುರಿ ಇದೆ'' ಎಂದು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಮಲ್ಲೇಶ್ವರ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ಮುಂದಿನ ಸಲ ಬಂದಾಗ ನಾನು ಈ ಕಂಪನಿಗೆ ಭೇಟಿ ಕೊಡುತ್ತೇನೆ. ಉತ್ಪಾದನಾ ವಲಯಕ್ಕೂ ಕೇಂದ್ರ ಬಜೆಟ್ ಹೆಚ್ಚಿನ ಆದ್ಯತೆ ನೀಡಿದೆ. ಉದ್ಯೋಗ ಸೃಷ್ಟಿಯಾಗುವುದೇ ಉತ್ಪಾದನಾ ವಲಯದಿಂದ. ಮೊಬೈಲ್ ಫೋನ್, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ಫುಟ್‌‌ವೇರ್ ಉತ್ಪಾದಕ ವಲಯಗಳಿಗೆ ಬಜೆಟ್ ಪುಷ್ಟಿ ನೀಡಿದೆ'' ಎಂದು ಹೇಳಿದರು.

ಕರ್ನಾಟಕ ರೈಲ್ವೆಗೆ 7,564 ಕೋಟಿ ರೂ. ಅನುದಾನ :''ಬಜೆಟ್​​ನಲ್ಲಿ ಕರ್ನಾಟಕ ರೈಲ್ವೆಗೆ 7,564 ಕೋಟಿ ರೂ. ಅನುದಾನ ನೀಡಲಾಗಿದೆ. ಯುಪಿಎ ಅವಧಿಯಲ್ಲಿ 850 ಕೋಟಿ ರೂ.‌ ಕೊಡಲಾಗುತ್ತಿತ್ತು. 51,479 ಕೋಟಿಯಷ್ಟು ರೈಲ್ವೇ ವಲಯದಲ್ಲಿ ಬಂಡವಾಳ ಹೂಡಲಾಗಿದೆ. ಅಮೃತ್ ಸ್ಟೇಷನ್ ಯೋಜನೆಯಡಿ 61 ರೈಲ್ವೇ ನಿಲ್ದಾಣಗಳ ಮರು ನಿರ್ಮಾಣ ಆಗಿದೆ. 1,652 ಕಿ.ಮೀ. ಹೊಸ ರೈಲ್ವೇ ಮಾರ್ಗದ ನಿರ್ಮಾಣ ರಾಜ್ಯದಲ್ಲಾಗಿದೆ. 10 ವಂದೇ ಭಾರತ್ ರೈಲುಗಳು ಕರ್ನಾಟಕದಲ್ಲಿ ಸಂಚರಿಸುತ್ತಿವೆ, ಮತ್ತಷ್ಟು ಬರಲಿವೆ. ಸಬ್ ಅರ್ಬನ್ ರೈಲ್ವೇ ಯೋಜನೆಗೆ 15,762 ಕೋಟಿ ರೂ. ಕೊಡಲಾಗಿದೆ. 15,611 ಕೋಟಿ ರೂ. ಮೆಟ್ರೋಗೆ ಕೊಡಲಾಗಿದೆ'' ಎಂದು ಮಾಹಿತಿ ನೀಡಿದರು.

ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಟಿ (ETV Bharat)

''ಕಳೆದ 60 ವರ್ಷದಲ್ಲಿ ಆಗದಿರುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ಆಗಿದೆ. ಒಂದು ಮತ್ತು ಎರಡನೇ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ‌ ದೇಶದ ಯಾವ ಭಾಗಕ್ಕೆ ಹೋದರೂ ಕಾಣುತ್ತದೆ. 12 ಲಕ್ಷದವರೆಗೆ ತೆರಿಗೆ ಇಲ್ಲದಿರುವುದು ಐಐಎಂ, ಐಐಟಿ ಇದೆಲ್ಲಾ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿದೆ. ವಾಜಪೇಯಿ ಅವಧಿ ಬಳಿಕ ಯುಪಿಎ ಅವಧಿಯಲ್ಲಿ ಭಾರತದ ಆರ್ಥಿಕತೆ ಬಹಳ ಕೆಟ್ಟ ಪರಿಸ್ಥಿತಿ ಇತ್ತು. 2014 ರಲ್ಲಿ ಬ್ಯಾಂಕಿಂಗ್ ವಲಯ ಅಷ್ಟು ಉತ್ತಮವಾಗಿರಲಿಲ್ಲ. ಪ್ರಧಾನಿ ಮೋದಿ ಅದಕ್ಕೊಂದು ಆಯಾಮ ನೀಡಿದರು. ಪ್ರತಿ ವರ್ಷ ಹೈವೇ, ರೈಲ್ವೇ, ಏರ್ ಪೋರ್ಟ್ ಅಭಿವೃದ್ಧಿ ಆಯಿತು'' ಎಂದು ಹೇಳಿದರು.

''ಕೇಂದ್ರ ಸರ್ಕಾರದ ಆಡಳಿತಕ್ಕೆ ಮತ್ತು ನರೇಂದ್ರ ಮೋದಿ ದೂರದೃಷ್ಟಿ ಯೋಜನೆಗಳಿಗೆ ಜನರ ಬೆಂಬಲ ಸಿಕ್ಕಿದೆ. ಜನಧನ್, ಉಜ್ವಲ, ಜಲಜೀವನ್ ಯೋಜನೆಗಳು ಜನರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿವೆ. ಮೂಲಸೌಕರ್ಯ ವೃದ್ಧಿ, ಶಿಕ್ಷಣ ಅಭಿವೃದ್ಧಿ, ರೈಲ್ವೇ ಯೋಜನೆಗಳು ಜನರ ಬದುಕಿನ ಗತಿ ಬದಲಿಸಿವೆ'' ಎಂದರು.

''ಈ ಬಾರಿಯ ಬಜೆಟ್​ನ ಬಹು‌ಮುಖ್ಯ ಅಂಶ ತೆರಿಗೆ ಸುಧಾರಣೆ. ಪ್ರಧಾನಿ ಮೋದಿ ಆರ್ಥಿಕ ಚಿಂತನೆಗಳು ಸಾಕಷ್ಟು ಬದಲಾವಣೆ ತಂದಿದೆ. ಹತ್ತು ವರ್ಷಗಳ ಹಿಂದೆ ಕಾಲ್ ಡ್ರಾಪ್ ಆಗುವುದು ದೊಡ್ಡ ಚರ್ಚೆ ಆಗುತ್ತಿತ್ತು. ಈಗ ನಮಗೆ ಉತ್ತಮ 5ಜಿ ನೆಟ್​​ವರ್ಕ್ ಇದೆ. ಕಳೆದ ಹತ್ತು ವರ್ಷದಿಂದ ವಿವಿಗಳು, ಐಐಎಂ, ಐಐಟಿ, ಮೆಡಿಕಲ್ ಕಾಲೇಜುಗಳ ಸಂಖ್ಯೆ ದುಪ್ಪಟ್ಟಾಗಿವೆ. ಬಡ, ಮಧ್ಯಮ ವರ್ಗದ ಮೇಲೆ ಈ ಬಾರಿ ಬಜೆಟ್ ಫೋಕಸ್ ಮಾಡಿದೆ. ಕಿಸಾನ್ ಸಮ್ಮಾನ್ ನಿಧಿಯಂತಹ ರೈತ ಕಲ್ಯಾಣ ಯೋಜನೆಗಳು ಬದಲಾವಣೆಗೆ ಸಾಕ್ಷಿ ಆಗಿವೆ. ಸಣ್ಣ, ಅತಿ ಸಣ್ಣ ಕೈಗಾರಿಕೆಗಳಿಗೆ ದೊಡ್ಡ ನಿರೀಕ್ಷೆ, ಭರವಸೆ ನಮ್ಮ ಸರ್ಕಾರದಿಂದ ಸಿಕ್ಕಿದೆ. ಈಗ ದೇಶ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸಿದೆ. ಹಣದುಬ್ಬರಕ್ಕೆ ಕಡಿವಾಣ ಬಿದ್ದಿದೆ'' ಎಂದು ಹೇಳಿದರು.

''ಮುಂದಿನ ವರ್ಷದ ಹೊತ್ತಿಗೆ ನಮ್ಮ ದೇಶ 356 ಲಕ್ಷ ಕೋಟಿ ಆರ್ಥಿಕತೆ ಹೊಂದಲಿದೆ. ಜಗತ್ತಿನ 5ನೇ ದೊಡ್ಡ ಆರ್ಥಿಕತೆಯ ದೇಶ ಭಾರತ. ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್​ಗಳಿಗೆ ಹೋಲಿಸಿದರೆ, ನಮ್ಮ ಆರ್ಥಿಕತೆಯ ಆರೋಗ್ಯ ಚೆನ್ನಾಗಿದೆ. ಉತ್ಪಾದನಾ ವಲಯಕ್ಕೂ ಬಜೆಟ್ ಹೆಚ್ಚಿನ ಆದ್ಯತೆ ನೀಡಿದೆ'' ಎಂದು ಕೇಂದ್ರ ಸಚಿವರು ತಿಳಿಸಿದರು.

ಮಾಧ್ಯಮಗೊಷ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಡಾ. ಮಂಜುನಾಥ್ ಉಪಸ್ಥಿತರಿದ್ದರು.

ಇದನ್ನೂ ಓದಿ:ರಾಜ್ಯದಲ್ಲಿ ಕೃಷ್ಣ, ಕಾವೇರಿ, ಗೋದಾವರಿ ನದಿ ಜೋಡಣೆಗೆ ಎಲ್ಲರೂ ಧ್ವನಿ ಎತ್ತಬೇಕಿದೆ: ಹೆಚ್.ಡಿ.ದೇವೇಗೌಡ

ABOUT THE AUTHOR

...view details