ಕರ್ನಾಟಕ

karnataka

ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲು ಕೈಬಿಟ್ಟ ಬಗ್ಗೆ ಕೇಂದ್ರ ಸಚಿವ ಸೋಮಣ್ಣ ಹೇಳಿದ್ದೇನು? - Vande Bharat Train

By ETV Bharat Karnataka Team

Published : Sep 16, 2024, 12:36 PM IST

ಬೆಳಗಾವಿಗೆ ಈಗ ಒಂದು ವಂದೇ ಭಾರತ್ ರೈಲು ಬರುತ್ತಿದ್ದು, ಕೆಲವೇ ದಿನಗಳಲ್ಲಿ ಮತ್ತೊಂದು ಬೆಳಗಾವಿಗೆ ಬರಲಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಕೇಂದ್ರ ಸಚಿವ ಸೋಮಣ್ಣ
ಕೇಂದ್ರ ಸಚಿವ ಸೋಮಣ್ಣ (ETV Bharat)

ಕೇಂದ್ರ ಸಚಿವ ಸೋಮಣ್ಣ (ETV Bharat)

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಆರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದು, ಇಂದು 7 ಹೊಸ ರೈಲುಗಳನ್ನು ಉದ್ಘಾಟಿಸಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ನಾನು ಕೊಲ್ಹಾಪುರ-ಪುಣೆ ರೈಲಿಗೆ ಹಸಿರು ನಿಶಾನೆ ತೋರಿಸುತ್ತೇನೆ. ಬಳಿಕ ಬೆಳಗಾವಿಯಲ್ಲಿ ಪುಣೆಯಿಂದ ಬರುವ ವಂದೇ ಭಾರತ ರೈಲು ಬರಮಾಡಿಕೊಳ್ಳುತ್ತೇನೆ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.

ತಾಂತ್ರಿಕ ಸಮಸ್ಯೆ ನೆಪವೊಡ್ಡಿ ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲು ಕೈ ಬಿಟ್ಟ‌ ವಿಚಾರಕ್ಕೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಬಂದು ಮೂರು ತಿಂಗಳು ಆಗಿದೆ. ಹಳೆಯದೆಲ್ಲಾ ಕೆದಕಿ ಕೆಲಸ ಮಾಡಲು ಆಗೋದಿಲ್ಲ. ಬೆಳಗಾವಿಗೆ ಈಗ ಒಂದು ವಂದೇ ಭಾರತ್ ರೈಲು ಬರುತ್ತಿದೆ. ಕೆಲವೇ ದಿನಗಳಲ್ಲಿ ಮತ್ತೊಂದು ರೈಲು ಬರಲಿದೆ. ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿನ ಬಗ್ಗೆ ನಾನು, ಪ್ರಧಾನಿ ಮೋದಿ, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಸಂಸದ ಜಗದೀಶ ಶೆಟ್ಟರ್ ಕುಳಿತುಕೊಂಡು ಚರ್ಚಿಸಿದ್ದೇವೆ. ಮೋದಿಯವರು ಹಳೆಯದು ಏನಾಯಿತು ಎಂದು ಕೆದಕಲು ಹೋಗಬಾರದು ಎಂದು ಮನವರಿಕೆ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ದಿ.‌ಸುರೇಶ ಅಂಗಡಿ ಅವರು ಇದ್ದ ಸಂದರ್ಭದಲ್ಲಿ ಬೆಳಗಾವಿ-ಕಿತ್ತೂರು-ಹುಬ್ಬಳ್ಳಿ ನೇರ ರೈಲು ಮಾರ್ಗ ವಿಚಾರದಲ್ಲಿ ಸರ್ವೇ ಕೆಲಸದ ಕುರಿತು ನಾನು ಕೂಡ ಇಲ್ಲಿನ ಜಿಲ್ಲಾಧಿಕಾರಿಗಳನ್ನು ಸಂಪರ್ಕ ಮಾಡಿದ್ದೇನೆ. ಹೇಗಾದರು ಮಾಡಿ ಈ ಅವಧಿಯಲ್ಲೇ ನೇರ ರೈಲಿನ ವ್ಯವಸ್ಥೆ ಮಾಡುತ್ತೇವೆ ಎಂದು ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಂಸದ ಜಗದೀಶ್ ಶೆಟ್ಟರ್ ಅವರು ನನ್ನ ಮತ್ತು ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆ ಚರ್ಚೆ ಮಾಡಿದ್ದಾರೆ. ಹಾಗಾಗಿ, ಮೊನ್ನೆ ತಾನೆ ಸರ್ವೇ ಕಾರ್ಯಕ್ಕೆ ಆದೇಶ ಮಾಡಿದ್ದೇವೆ. ಸರ್ವೇ ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಬೆಳಗಾವಿ-ಮುಂಬೈ ನೇರ ರೈಲು ಬಹಳ ವರ್ಷಗಳ ಬೇಡಿಕೆ ವಿಚಾರದ ಬಗ್ಗೆ ಕುಳಿತು ಮಾತನಾಡೋಣ. ವಿಶ್ವದ ಭೂಪಟದಲ್ಲಿ ಭಾರತೀಯ ರೈಲ್ವೆ ಇಲಾಖೆ ಗುರುತಿಸಿಕೊಂಡಿದೆ. ಪ್ರಧಾನಿ ಮೋದಿಯವರ ದೂರದೃಷ್ಟಿಯ ಚಿಂತನೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಿಂದಿನ ಹೋಲಿಕೆ ಮಾಡಿದರೆ ಈಗ ನೂರು ಪಟ್ಟು ಜಾಸ್ತಿ ಕೆಲಸ ಆಗಿದೆ. ಆದರೂ ಇನ್ನೂ ಕೆಲಸ ಮಾಡಬೇಕು ಎನ್ನುವುದು ಪ್ರಧಾನಿ ಮೋದಿ ಮತ್ತು ಸಚಿವ ಅಶ್ವಿನಿ ವೈಷ್ಣವ್ ಅವರ ಕನಸಾಗಿದೆ. ಹಾಗಾಗಿ, ಜನ ಸಾಮಾನ್ಯರ ಅನುಕೂಲಕ್ಕೆ ಏನು ಆಗಬೇಕೋ ಎಲ್ಲವನ್ನೂ ಮಾಡುತ್ತೇವೆ ಎಂದರು.

ಇದನ್ನೂ ಓದಿ:ಜಾರ್ಖಂಡ್​: 6 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ - Vande Bharat trains

ABOUT THE AUTHOR

...view details