ಕರ್ನಾಟಕ

karnataka

ETV Bharat / state

ಬ್ಯಾಂಕ್ ಎಟಿಎಂನಿಂದ ₹20 ಲಕ್ಷ ದರೋಡೆ: ಇಬ್ಬರು ಮಾಜಿ ಕಸ್ಟೋಡಿಯನ್ ಸೇರಿ ಮೂವರು ಅರೆಸ್ಟ್ - ATM Robbery Case - ATM ROBBERY CASE

ಎಟಿಎಂಗೆ ನುಗ್ಗಿ 20 ಲಕ್ಷ ರೂಪಾಯಿ ದರೋಡೆ ಮಾಡಿದ್ದ ಇಬ್ಬರು ಮಾಜಿ ಕಸ್ಟೋಡಿಯನ್​ಗಳೂ ಸೇರಿ ಮೂವರನ್ನು ಬೆಂಗಳೂರಿನ ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇಬ್ಬರು ಮಾಜಿ ಕಸ್ಟೋಡಿಯನ್ ಸೇರಿ ಮೂವರು ಅರೆಸ್ಟ್
ಇಬ್ಬರು ಮಾಜಿ ಕಸ್ಟೋಡಿಯನ್ ಸೇರಿ ಮೂವರು ಅರೆಸ್ಟ್ (ETV Bharat)

By ETV Bharat Karnataka Team

Published : Jun 7, 2024, 10:05 PM IST

ಬೆಂಗಳೂರು:ಸಾಲ ತೀರಿಸಲು ಎಟಿಎಂಗೆ ನುಗ್ಗಿ 20 ಲಕ್ಷ ರೂಪಾಯಿ ದರೋಡೆ ಮಾಡಿದ ಇಬ್ಬರು ಮಾಜಿ ಕಸ್ಟೋಡಿಯನ್​ಗಳು ಸೇರಿ ಮೂವರನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿ ಹಣ ಜಪ್ತಿ ಮಾಡಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಮುರುಳಿ, ವೆಂಕಟೇಶ್ ಹಾಗೂ ಸಾಯಿತೇಜ ಬಂಧಿತರು. ಬಂಧಿತರೆಲ್ಲರೂ ಯುವಕರಾಗಿದ್ದು, ಹಣಕ್ಕಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿಕ್ಟೋರಿಯಾ ಬಡಾವಣೆಯಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಎಟಿಎಂಗೆ ಮೇ 30 ರಂದು 22 ಲಕ್ಷ ಹಣ ತುಂಬಿಸಲಾಗಿತ್ತು. ಆದರೆ, ಮೇ 31ರ ತಡರಾತ್ರಿ 20 ಲಕ್ಷ ಹಣ ಕಳ್ಳತನವಾಗಿರುವ ವಿಷಯ ಬೆಳಕಿಗೆ ಬಂದಿತ್ತು. ಸಿಸಿಟಿವಿ ಪರಿಶೀಲಿಸಿದಾಗ ಅಪರಿಚಿತ ಯುವಕನೋರ್ವ ಎಟಿಎಂಗೆ ಬಂದು ಪಾಸ್​ವರ್ಡ್ ಬಳಸಿ ಹಣ ಕದ್ದಿರುವುದು ಗೊತ್ತಾಗಿತ್ತು‌. ಹಣ ತುಂಬಿಸುವ ಕಸ್ಟೋಡಿಯನ್ ಅಥವಾ ಪರಿಚಿತರೇ ಹಣ ಕಳ್ಳತನ ಮಾಡಿರುವ ಗುಮಾನಿ ವ್ಯಕ್ತವಾಗಿತ್ತು. ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿ ಹೊತ್ತಿದ್ದ ಸೆಕ್ಯೂರ್ ವ್ಯಾಲಿ ಇಂಡೇನ್ ಏಜೆನ್ಸಿಯ ನೌಕರರೇ ಕೃತ್ಯದಲ್ಲಿ ಭಾಗಿಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು.

ಹಣ ಕಳ್ಳತನ ಪ್ರಕರಣ ದಾಖಲಿಸಿಕೊಂಡ ವಿವೇಕನಗರ ಪೊಲೀಸರು ಸೆಕ್ಯೂರ್ ವ್ಯಾಲಿ ಏಜೆನ್ಸಿಯಲ್ಲಿ ಕೆಲಸ ಮಾಡಿ ತೊರೆದಿದ್ದ ನೌಕರಿಗಾಗಿ ತಲಾಶ್ ನಡೆಸಿದ್ದರು. ಅನುಮಾನಸ್ಪಾದ ನೌಕರರ ಪಟ್ಟಿ‌ ಸಿದ್ದಪಡಿಸಿಕೊಂಡು ತಾಂತ್ರಿಕವಾಗಿ ತನಿಖೆ ನಡೆಸಿದಾಗ ಮುರುಳಿ ಹಾಗೂ ವೆಂಕಟೇಶ್ ಎಂಬುವರ ಮೇಲೆ ಶಂಕೆ ವ್ಯಕ್ತವಾಗಿತ್ತು. ನಗರದಿಂದ ಆಂಧ್ರಕ್ಕೆ ಎಸ್ಕೇಪ್ ಆಗುತ್ತಿದ್ದ ಮಾಹಿತಿ ಮೇರೆಗೆ ಮೂವರು ಆರೋಪಿಗಳನ್ನ ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಏಜೆನ್ಸಿಯಲ್ಲಿ ಮುರುಳಿ ಹಾಗೂ ವೆಂಕಟೇಶ್ ಕಸ್ಟೋಡಿಯನ್ ಆಗಿ ಎರಡು ವರ್ಷ ಕೆಲಸ ಮಾಡಿದ್ದರು. ಕೊರೊನಾ ಬಂದ ಬಳಿಕ ಅನ್ಯ ಕಾರಣದಿಂದ ಕೆಲಸ ತೊರೆದು ಅನಂತಪುರದಲ್ಲಿದ್ದರು‌‌. ಇತ್ತೀಚೆಗೆ ಮುರುಳಿಗೆ ವಿವಾಹವಾಗಿದ್ದು ಲಕ್ಷಾಂತರ ಸಾಲ ಮಾಡಿದ್ದ. ಸಾಲ ತೀರಿಸಲು ಹೆಣಗಾಡುತ್ತಿದ್ದ. ಅಕ್ರಮವಾಗಿ ಹಣ ಸಂಪಾದನೆ ಮಾಡಲು ನಿರ್ಧರಿಸಿದ ಮುರುಳಿ ಸಹಚರ ವೆಂಕಟೇಶ್ ನೊಂದಿಗೆ ಚರ್ಚಿಸಿದ್ದ.‌ ಪ್ರತಿಯಾಗಿ 6 ಲಕ್ಷ ಹಣ ನೀಡುವಂತೆ ಬೇಡಿಕೆಗೆ ಮುರುಳಿ‌ ಒಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಸ್ಟೋಡಿಯನ್ ಆದವರಿಗೆ ಅಧಿಕೃತವಾಗಿ ಬ್ಯಾಂಕ್ ನಿಂದ ಇಬ್ಬರಿಗೆ ಆರು ಸಂಖ್ಯೆಯ‌ ಪಾಸ್ ವರ್ಡ್ ಗಳನ್ನ ಪ್ರತ್ಯೇಕವಾಗಿ ನೀಡಲಿದೆ. ಬಂಧಿತ ಇಬ್ಬರು ಪಾಸ್ ವರ್ಡ್ ಹೊಂದಿದ್ದರು. ಕೆಲಸ ತೊರೆದು ಹಲವು ವರ್ಷ ಕಳೆದರೂ ಎಟಿಎಂ ಯಂತ್ರದ ಪಾಸ್ ವರ್ಡ್ ಬದಲಿಸಲಿರಲ್ಲ ಎಂದು ಅರಿತ ಮುರುಳಿ, ವೆಂಕಟೇಶ್ ಜೊತೆ ಡೀಲ್ ಕುದುರಿಸಿಕೊಂಡು ಆತನ ಬಳಿ ಆರು ಸಂಖ್ಯೆ ಪಾಸ್ ವರ್ಡ್ ಪಡೆದುಕೊಂಡಿದ್ದ. ಅನುಮಾನಬಾರದರಲು ಮತ್ತೊಬ್ಬ ಸ್ನೇಹಿತ ಸಾಯಿತೇಜನನ್ನ ಕಳುಹಿಸಿ ಹಣ ದರೋಡೆಗೆ ಸಹಕರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೈಕ್‌ ಗುದ್ದಿಸಿ ವ್ಯಕ್ತಿ ಕೊಲೆಗೈದು 'ರಸ್ತೆ ಅಪಘಾತ'ವೆಂದು ಬಿಂಬಿಸಿ‌ದ 6 ಆರೋಪಿಗಳು ಸೆರೆ - Belagavi Murder Case

ABOUT THE AUTHOR

...view details