ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ):ತಿಂಗಳ ಹಿಂದೆ ಇತಿಹಾಸ ಪ್ರಸಿದ್ಧ ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ ಜರುಗಿತ್ತು. ಈ ದೇವಸ್ಥಾನದ ಹುಂಡಿಗೆ ಭಾರಿ ಪ್ರಮಾಣದ ದೇಣಿಗೆ ಬಂದಿದೆ ಎಂದು ಹೊಂಚು ಹಾಕಿದ್ದ ಕಳ್ಳರು, ನಿನ್ನೆ (ಮಂಗಳವಾರ) ರಾತ್ರಿ ಹುಂಡಿಯಲ್ಲಿ ಹಣ ಕದಿಯಲು ಯತ್ನಿಸಿದ್ದಾರೆ. ಆದ್ರೆ, ಈ ವೇಳೆ ಅವರ ಯತ್ನ ವಿಫಲವಾಗಿದೆ. ಆದ್ರೆ ಬರಿಗೈಯಲ್ಲಿ ವಾಪಸ್ ಹೋಗದ ಕಳ್ಳರು, ಪಕ್ಕದ ದೇವಸ್ಥಾನದಲ್ಲಿ ಎರಡು ಬೆಳ್ಳಿ ಕಿರೀಟ, ಚಿನ್ನ ತಾಳಿ ಕದ್ದೊಯ್ದಿದ್ದಾರೆ.
ದೊಡ್ಡಬಳ್ಳಾಪುರ ನಗರದ ತೇರಿನ ಬೀದಿಯಲ್ಲಿ ಕಳೆದ ರಾತ್ರಿ ಸರಣಿ ಕಳತನದ ಪ್ರಕರಣಗಳು ನಡೆದಿವೆ. ಮೊದಲಿಗೆ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ನುಗ್ಗಿದ್ದ ಕಳ್ಳರು, ಎರಡು ಬೆಳ್ಳಿ ಕಿರೀಟ, ಒಂದು ತಾಳಿ ಕದ್ದು ಪರಾರಿಯಾಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಕಳ್ಳರು ಪಕ್ಕದ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೂ ನುಗ್ಗಿದ್ದಾರೆ. ದೇವಸ್ಥಾನದ ಹಿಂಭಾಗದಲ್ಲಿರುವ ಕಿಂಡಿಯ ಮೂಲಕ ಒಳಗೆ ನುಗ್ಗಿರುವ ಖದೀಮರು, ಮೊದಲಿಗೆ ಆರ್ಚಕರ ಮನೆ ಬಾಗಿಲನ್ನು ಲಾಕ್ ಮಾಡಿದ್ದಾರೆ. ಹುಂಡಿಯ ಬೀಗ ಒಡೆದಿದ್ದಾರೆ. ಆದರೆ, ಹುಂಡಿಯನ್ನು ತೆರೆಯಲು ಸಾಧ್ಯವಾಗದೆ ಅಲ್ಲಿಂದ ಪರಾರಿಯಾಗಿದ್ದಾರೆ. ಬೆಳಗ್ಗೆ ಆರ್ಚಕರು ಎಂದಿನಂತೆ ನಿತ್ಯಪೂಜೆಗೆ ದೇವಸ್ಥಾನಕ್ಕೆ ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.