ಕರ್ನಾಟಕ

karnataka

By ETV Bharat Karnataka Team

Published : Mar 10, 2024, 11:37 AM IST

ETV Bharat / state

ಬೆಂಗಳೂರು: ಮದ್ಯ ಸೇವಿಸಿ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದ ಮಗನ ಹತ್ಯೆ ಮಾಡಿದ ತಂದೆ

ದಿನನಿತ್ಯ ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆ ಹತ್ಯೆಗೈದ ಘಟನೆ ಮಾರ್ಚ್ 6 ರಂದು ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

father-killed-his-son-
ಮದ್ಯ ಸೇವಿಸಿ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದ ಮಗನ ಹತ್ಯೆ ಮಾಡಿದ ತಂದೆ

ಬೆಂಗಳೂರು:ಮದ್ಯ ಸೇವಿಸಿ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದ ಮಗನನ್ನು ತಂದೆಯೇ ಹತ್ಯೆಗೈದಿರುವ ಘಟನೆ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾರ್ಚ್​ 6ರಂದು ಮಗ ಯೋಗೀಶ್​​(21) ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಂದೆ ಪ್ರಕಾಶ್​​ (55) ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಕಾರಣ ಬಯಲಾದ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ನಿಜಾಂಶ ಬಯಲಾಗಿದೆ.

ಏನಿದು ಪ್ರಕರಣ?:ಆರೋಪಿ ಪ್ರಕಾಶ್, ಪಾನೀಪುರಿ ವ್ಯಾಪಾರ ಮಾಡಿಕೊಂಡಿದ್ದರೆ ಆತನ ಮಗ ಯೋಗೀಶ್​ ಅಂತಿಮ ವರ್ಷದ ಬಿಬಿಎ ವ್ಯಾಸಾಂಗ ಮಾಡುತ್ತಿದ್ದ. ಆದರೆ ವ್ಯಾಸಂಗದ ನಡುವೆ ಪ್ರತಿದಿನ ಮದ್ಯ ಸೇವಿಸಿ ಬಂದು ಮನೆಯಲ್ಲಿ ಜಗಳವಾಡುತ್ತಿದ್ದ. ಇದರಿಂದ ಯೋಗೀಶ್ ಹಾಗೂ ಪ್ರಕಾಶ್ ನಡುವೆ ಗಲಾಟೆಯಾಗುತ್ತಿತ್ತು. ಎಷ್ಟು ಬಾರಿ ಬುದ್ಧಿ ಹೇಳಿದರೂ ಸಹ ಯೋಗೀಶ್ ತನ್ನ ತಂದೆಯ ಮಾತು ಕೇಳುತ್ತಿರಲಿಲ್ಲ.

ಮಾರ್ಚ್ 6 ರಂದು ಮತ್ತೆ ಕುಡಿದು ಬಂದಿದ್ಧ ಯೋಗೀಶ್​​ ಹಾಗೂ ಪ್ರಕಾಶ್​ ನಡುವೆ ಆರಂಭವಾದ ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಈ ವೇಳೆ ತಂದೆ ಪ್ರಕಾಶ್ ಯೋಗೀಶನ ಕೆನ್ನೆಗೆ ಬಾರಿಸಿದ್ದ. ಪರಿಣಾಮ ಯೋಗೀಶ ಕೆಳಗೆ ಬಿದ್ದಿದ್ದ. ಕೋಪದಲ್ಲಿಯೇ ತಂದೆ ಪ್ರಕಾಶ್​ ನೆಲಕ್ಕೆ ಬಿದ್ದಿದ್ದ ಯೋಗೀಶನ ಕತ್ತು ಹಿಸುಕಿದ್ದ. ಸ್ವಲ್ಪ ಹೊತ್ತಿನ ಬಳಿಕ ಮಗನ ಉಸಿರು ನಿಂತ ಕಾರಣ ಆಸ್ಪತ್ರೆಗೆ ಕೊಂಡೊಯ್ದಿದ್ದನಾದರೂ ಆತ ಮೃತಪಟ್ಟಿದ್ದ. ಬಳಿಕ ಪೊಲೀಸರ ಮುಂದೆ ಪ್ರಕಾಶ್, 'ತನ್ನ ಮಗ ನೇಣುಬಿಗಿದುಕೊಂಡಿದ್ದಾನೆ' ಎಂದು ಹೇಳಿಕೆ ನೀಡಿದ್ದ.

ಆದರೆ ಆರೋಪಿಯ ಹೇಳಿಕೆಯ ಬಗ್ಗೆ ಅನುಮಾನಗೊಂಡ ಪೊಲೀಸರು, ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾದಿದ್ದರು. ವರದಿಯಲ್ಲಿ ಕತ್ತು ಹಿಸುಕಿದ ಕಾರಣದಿಂದ ಯೋಗೀಶ್ ಸಾವನ್ನಪ್ಪಿರುವುದು ಬಯಲಾಗಿತ್ತು. ತಕ್ಷಣ ಪ್ರಕಾಶ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ತಂದೆ ಪ್ರಕಾಶ್​ನನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಮೈಸೂರು ಪಾಲಿಕೆ ಮಾಜಿ ಸದಸ್ಯನ ಸಹೋದರ ಭೀಕರ ಹತ್ಯೆ: ಮೂವರ ಬಂಧನ

ABOUT THE AUTHOR

...view details