ಕರ್ನಾಟಕ

karnataka

ನೈರುತ್ಯ ರೈಲ್ವೆ: ಜನವರಿವರೆಗೆ 40.96 ಮಿಲಿಯನ್ ಟನ್ ಸರಕು ಸಾಗಣೆ

By ETV Bharat Karnataka Team

Published : Feb 6, 2024, 10:08 PM IST

ಸರಕು ಸಾಗಣೆಯಲ್ಲಿ ನೈರುತ್ಯ ರೈಲ್ವೆ ಹೊಸ ದಾಖಲೆ ಬರೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.8.76ರಷ್ಟು ಹೆಚ್ಚಾಗಿದೆ.

ನೈರುತ್ಯ ರೈಲ್ವೆ ಹೊಸ ದಾಖಲೆ
ನೈರುತ್ಯ ರೈಲ್ವೆ ಹೊಸ ದಾಖಲೆ

ಹುಬ್ಬಳ್ಳಿ:ನೈರುತ್ಯ ರೈಲ್ವೆಯು ಸರಕು ಮತ್ತು ಪಾರ್ಸೆಲ್ ಸಾರಿಗೆ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಸರಕು ವಲಯದಲ್ಲಿ ಜನವರಿ-2024ರವರೆಗೆ 40.96 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದೆ. ಇದು ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಶೇ.8.76ರಷ್ಟು ಹೆಚ್ಚು.

ಜನವರಿ 2024ರಲ್ಲಿ 4.82 ಮಿಲಿಯನ್ ಟನ್ ಸರಕು ಲೋಡ್ ಮಾಡಲಾಗಿದೆ. ಇದು ಮಾರ್ಚ್ 2023ರ ನಂತರ ಎರಡನೇ ಅತಿ ಹೆಚ್ಚು ಮಾಸಿಕ ಲೋಡ್ ಆಗಿದೆ. ಜನವರಿ 31, 2024ರಂದು 3,431 ವ್ಯಾಗನ್‌ಗಳನ್ನು ಲೋಡ್ ಮಾಡುವ ಮೂಲಕ ಹಿಂದಿನ ಅತ್ಯುತ್ತಮ ದಾಖಲೆ ಮೀರಿ ಎರಡನೇ ಅತಿ ಹೆಚ್ಚು ಏಕದಿನದ ಲೋಡಿಂಗ್ ಸಾಧಿಸಿದೆ. ಸರಕು ಸಾಗಣೆ ಘಟಕ ಅಂದರೆ ಎನ್.ಟಿ.ಕೆ.ಎಂ (ನೆಟ್ ಟನ್ ಕಿಲೋಮೀಟರ್) ಸಹ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.4.4ರಷ್ಟು ಅತ್ಯುತ್ತಮ ಬೆಳವಣಿಗೆ ದಾಖಲಿಸಿದೆ.

ನೈರುತ್ಯ ರೈಲ್ವೆಯು ಆಟೋಮೊಬೈಲ್ ವಲಯದಲ್ಲಿ ಗಮನಾರ್ಹ ತಯಾರಕರಾದ ಟಿವಿಎಸ್, ಕೆಐಎ, ಮಾರುತಿ ಸುಜುಕಿ, ಟಾಟಾ, ಟೊಯೊಟಾ ಕಂಪನಿಗಳಿಗೆ ಆದ್ಯತೆಯ ಸಾರಿಗೆ ಆಯ್ಕೆಯಾಗಿ ಹೊರಹೊಮ್ಮಿದೆ. ಜನವರಿ 2024ರವರೆಗೆ 558 ಆಟೋಮೊಬೈಲ್ ರೇಕ್​ಗಳನ್ನು ಸಾಗಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.37.1ರಷ್ಟು ಏರಿಕೆಯಾಗಿದೆ. ಜನವರಿ 2024ರಲ್ಲಿ, 69 ಆಟೊಮೊಬೈಲ್ ರೇಕ್​ಗಳನ್ನು ಲೋಡ್ ಮಾಡುವ ಮೂಲಕ ಒಂದು ತಿಂಗಳಲ್ಲಿ ತನ್ನ ಅತ್ಯುತ್ತಮ ಆಟೋಮೊಬೈಲ್ ಲೋಡ್ ಸಾಧಿಸಿದೆ. (ವಿಭಾಗವಾರು: ಬೆಂಗಳೂರು -65 ರೇಕ್‌ಗಳು, ಮೈಸೂರು -3 ರೇಕ್‌ಗಳು, ಹುಬ್ಬಳ್ಳಿ -1 ರೇಕ್)

ಇದಲ್ಲದೆ ಕಬ್ಬಿಣದ ಅದಿರು, ಸಿಮೆಂಟ್, ಉಕ್ಕು, ಖನಿಜ ತೈಲ, ರಸಗೊಬ್ಬರ, ಆರ್‌ಎಂಎಸ್​ಪಿ, ಕಲ್ಲಿದ್ದಲು, ಆಹಾರ ಧಾನ್ಯಗಳು, ಕಂಟೇನರ್ ಮತ್ತು ಇತರ ಸರಕುಗಳ ಗಣನೀಯ ಸಾಗಣೆ ಸಾಧಿಸಿದೆ. ಇದರ ಪರಿಣಾಮವಾಗಿ, ನೈಋತ್ಯ ರೈಲ್ವೆ ಜನವರಿ 2024ರ ವೇಳೆಗೆ 4055.32 ಕೋಟಿ ರೂ.ಗಳ ಸರಕು ಆದಾಯ ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ಆದಾಯಕ್ಕೆ ಹೋಲಿಸಿದರೆ ಶೇ 10.36 ಏರಿದೆ.

ಅಸ್ತಿತ್ವದಲ್ಲಿರುವ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಆಕರ್ಷಿಸಲು ನೈರುತ್ಯ ರೈಲ್ವೆ ವ್ಯಾಪಾರಿಗಳು, ರೈತರು ಮತ್ತು ತಯಾರಕರನ್ನು ಸಕ್ರಿಯವಾಗಿ ತಲುಪುತ್ತಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಹಕ-ಮೊದಲು ಮತ್ತು ಪರಿಹಾರ-ಆಧರಿತ ವಿಧಾನಕ್ಕೆ ಸಮರ್ಪಿತರಾಗಿದ್ದಾರೆ. ಗ್ರಾಹಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಪರಿಹರಿಸುವ ಗುರಿಯನ್ನು ರೈಲ್ವೆ ಹೊಂದಿದೆ. ಈ ಸಕಾರಾತ್ಮಕ ವಿಧಾನವು ಆಟೋಮೊಬೈಲ್ ಮತ್ತು ಕಬ್ಬಿಣದ ಅದಿರು ಲೋಡಿಂಗ್ ಹೆಚ್ಚಳಕ್ಕೆ ಕಾರಣವಾಗಿದೆ.

ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರು ಅಧಿಕಾರಿಗಳ ಮತ್ತು ಸಿಬ್ಬಂದಿಯ ಪ್ರಯತ್ನಗಳನ್ನು ಅಭಿನಂದಿಸಿದ್ದಾರೆ. ರೈಲ್ವೆಯೊಂದಿಗೆ ತಮ್ಮ ನಂಬಿಕೆಯನ್ನು ಉಳಿಸಿಕೊಂಡಿದ್ದಕ್ಕಾಗಿ ಸರಕು ಮತ್ತು ಪಾರ್ಸೆಲ್ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ನೈರುತ್ಯ ವಲಯ ಮುಖ್ಯ‌ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ನೈರುತ್ಯ ರೈಲ್ವೆ ಆದಾಯದಲ್ಲಿ ದಾಖಲೆ ಪ್ರಮಾಣದ ಏರಿಕೆ

ABOUT THE AUTHOR

...view details