ಕರ್ನಾಟಕ

karnataka

ಮುಡಾ ಹಗರಣ ಕುರಿತು 500 ಪುಟಗಳ ದಾಖಲೆ ಇಡಿಗೆ ನೀಡಿದ್ದೇನೆ: ಸ್ನೇಹಮಯಿ ಕೃಷ್ಣ - Snehamayi Krishna

ಲೋಕಾಯುಕ್ತ ಸ್ಥಳ ಮಹಜರು ಹಾಗೂ ಇಡಿ ತನಿಖೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.

By ETV Bharat Karnataka Team

Published : 3 hours ago

Published : 3 hours ago

Updated : 3 hours ago

SNEHAMAYI KRISHNA
ಸ್ನೇಹಮಯಿ ಕೃಷ್ಣ (ETV Bharat)

ಮೈಸೂರು: "ಇಡಿಗೆ ಮುಡಾ ಅಕ್ರಮಗಳ ಕುರಿತು ಐನೂರು ಪುಟದ ದಾಖಲೆಯನ್ನು ನೀಡಿದ್ದೇನೆ. ಅವರು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಮಾಡುತ್ತಾರೆ" ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದರು.

ಲೋಕಾಯುಕ್ತ ಕಚೇರಿಯ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಿನ್ನೆ ಬೆಂಗಳೂರಿನಲ್ಲಿ ಇಡಿ ತನಿಖೆಗೆ ಹಾಜರಾಗಿದ್ದೆ. ತನಿಖೆ ಸಂದರ್ಭದಲ್ಲಿ ಸುಮಾರು ಐನೂರು ಪುಟಗಳಷ್ಟು ದಾಖಲೆಗಳನ್ನು ಇಡಿಗೆ ನೀಡಿದ್ದೇನೆ. ನಿನ್ನೆ ಇಡಿಯವರು ತನಿಖಾ ಸಂದರ್ಭದಲ್ಲಿ ನನ್ನ ಕುಟುಂಬದ ಹಿನ್ನೆಲೆಯ ಬಗ್ಗೆ, ಮುಡಾದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದು, ಎಫ್​ಐಆರ್ ದಾಖಲಿಸಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ" ಎಂದು ತಿಳಿಸಿದರು.

ಸ್ನೇಹಮಯಿ ಕೃಷ್ಣ (ETV Bharat)

ಇಡಿಯವರು ಎಫ್​ಐಆರ್ ಅನ್ನು ಯಾರಿಗೂ ನೀಡುವುದಿಲ್ಲ. ಇಡಿ ತನಿಖೆಗೆ ಅಕ್ರಮ ನಡೆದಿರುವ ಎಲ್ಲ ದಾಖಲೆಗಳನ್ನು ನೀಡಿದ್ದೇನೆ. ಈ ದಾಖಲೆಗಳ ಜತೆಗೆ ಅಕ್ರಮ ಹಣ ವ್ಯವಹಾರ ನಡೆದಿರುವ ಸಂಬಂಧ ಅದಕ್ಕೆ ಪೂರಕ ದಾಖಲೆಗಳನ್ನು ಸಹ ನೀಡಿದ್ದೇನೆ. ಸೆಟ್ಲ್​ಮೆಂಟ್ ಡೀಡ್​ಗಳ ರೂಪದಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ವರ್ಗಾವಣೆ ಮಾಡಿ, ಅದಕ್ಕೆ ಬದಲಾಗಿ ನಿವೇಶನ ರೂಪದಲ್ಲಿ ಪಡೆದಿದ್ದಾರೆ. ಇದರಲ್ಲಿ ಹಲವಾರು ಪ್ರಭಾವಿಗಳು ಭಾಗಿ ಆಗಿರುವ ಬಗ್ಗೆ ಇಡಿಗೆ ದಾಖಲೆಗಳನ್ನು ನೀಡಿದ್ದೇನೆ. ಬದಲಿ ನಿವೇಶನದ ರೂಪದಲ್ಲಿ ಅಕ್ರಮ ವ್ಯವಹಾರ ನಡೆದಿರುವ ಬಗ್ಗೆ ಇಡಿಗೆ ಮಾಹಿತಿ ನೀಡಿದ್ದೇನೆ" ಎಂದರು.

ಕಳ್ಳರು- ಕಳ್ಳರು ಒಂದಾಗಿದ್ದಾರೆ: ನಿನ್ನೆ ಚಾಮುಂಡಿಬೆಟ್ಟದ ದಸರಾ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ನೇಹಮಯಿ ಕೃಷ್ಣ, "ಕಳ್ಳ- ಕಳ್ಳರು ಒಂದಾಗುವುದು ಸಹಜ ಪ್ರಕ್ರಿಯೆ. ಮುಡಾದಲ್ಲಿ 50:50 ಅನುಪಾತದ ಅಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ ಪಾತ್ರವೂ ಇದೆ. ಅವರೆಲ್ಲಾ ಒಂದಾಗಿ ಕೂಟ ರಚಿಸಿಕೊಂಡು ಹೋರಾಟ ಮಾಡಲು ಸಜ್ಜಾಗಿದ್ದಾರೆ. ಅದರ ಭಾಗವಾಗಿ ನಿನ್ನೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸಿದ್ದರಾಮಯ್ಯ ಅವರ ಪರವಾಗಿ ದಸರಾದಂತಹ ಪವಿತ್ರ ವೇದಿಕೆಯಲ್ಲಿ ಮಾತನಾಡಿದ್ದಾರೆಂದರೆ ಅರ್ಥ ಮಾಡಿಕೊಳ್ಳಬೇಕು" ಎಂದು ಜಿಟಿಡಿ ವಿರುದ್ಧ ವಾಗ್ದಾಳಿ ನಡೆಸಿದರು.

14 ಸೈಟ್​ಗಳ ಸ್ಥಳ ಮಹಜರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹೆಸರಿನಲ್ಲಿ ವಿಜಯನಗರದ ಮೂರು ಮತ್ತು ನಾಲ್ಕನೇ ಹಂತದಲ್ಲಿ ಪಡೆದ 14 ಸೈಟ್​ಗಳ ಮಹಜರನ್ನು ದೂರುದಾರ ಸ್ನೇಹಮಯಿ ಕೃಷ್ಣ ಅವರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಲೋಕಾಯುಕ್ತ ಪೊಲೀಸರು, ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಿದರು.

ಇದನ್ನೂ ಓದಿ:ಇಡಿ ವಿಚಾರಣೆಗೆ ಹಾಜರಾದ ಮುಡಾ ಪ್ರಕರಣ ದೂರುದಾರ ಸ್ನೇಹಮಯಿ ಕೃಷ್ಣ - Snehamai Krishna appeared in ED

Last Updated : 3 hours ago

ABOUT THE AUTHOR

...view details