ಕರ್ನಾಟಕ

karnataka

ಸವದಿ ಮಂತ್ರಿ ಸ್ಥಾನ ಪಡೆಯಲು ಗದ್ದಲ ಎಬ್ಬಿಸಿ ಗೇಮ್​ ಆಡುತ್ತಿದ್ದಾರೆ: ಮಹೇಶ್ ಕುಮಠಳ್ಳಿ

By ETV Bharat Karnataka Team

Published : Feb 6, 2024, 12:55 PM IST

Updated : Feb 6, 2024, 2:35 PM IST

''ಶಾಸಕ ಲಕ್ಷ್ಮಣ್ ಸವದಿ ಮಂತ್ರಿ ಸ್ಥಾನ ಪಡೆಯಲು ಗದ್ದಲ ಎಬ್ಬಿಸಿ ಆಟವಾಡುತ್ತಿದ್ದಾರೆ'' ಎಂದು ಅಥಣಿ ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಟೀಕಿಸಿದರು.

ಚಿಕ್ಕೋಡಿ  ಅಥಣಿ ಮಾಜಿ ಶಾಸಕ ಮಹೇಶ್ ಕುಮಟಳ್ಳಿ  Chikodi  ಶಾಸಕ ಲಕ್ಷ್ಮಣ್ ಸವದಿ  Former MLA Mahesh Kumatalli
ಸವದಿ ಮಂತ್ರಿ ಸ್ಥಾನ ಪಡೆಯಲು ಗದ್ದಲ ಎಬ್ಬಿಸಿ ಆಟವಾಡುತ್ತಿದ್ದಾರೆ: ಮಹೇಶ್ ಕುಮಟಳ್ಳಿ ವ್ಯಂಗ್ಯ

ಅಥಣಿ ಮಾಜಿ ಶಾಸಕ ಮಹೇಶ್ ಕುಮಟಳ್ಳಿ ಪ್ರತಿಕ್ರಿಯೆ

ಚಿಕ್ಕೋಡಿ:''ಅಥಣಿ ಶಾಸಕ ಲಕ್ಷ್ಮಣ್ ಸವದಿ ಮತ್ತೆ ಬಿಜೆಪಿಗೆ ಬರುತ್ತಾರೆ ಎಂಬುದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ರಾಷ್ಟ್ರೀಯ ಪಕ್ಷಕ್ಕೆ ಓರ್ವ ವ್ಯಕ್ತಿ ಅನಿವಾರ್ಯವಲ್ಲ. ಸವದಿ ಸ್ವಾಭಿಮಾನ ಬಿಟ್ಟು ಬಿಜೆಪಿ ಬರುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ಕಾಂಗ್ರೆಸ್ ಪಕ್ಷದಲ್ಲಿ ಮಂತ್ರಿ ಸ್ಥಾನವನ್ನು ಪಡೆದುಕೊಳ್ಳುವುದಕ್ಕೆ ಗದ್ದಲ ಎಬ್ಬಿಸಿ ಆಟವಾಡುತ್ತಿದ್ದಾರೆ'' ಎಂದು ಅಥಣಿ ಮಾಜಿ ಶಾಸಕ ಮಹೇಶ್ ಕುಮಠಳ್ಳಿ ವ್ಯಂಗ್ಯವಾಡಿದ್ದಾರೆ.

ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸವದಿ ಅವರು ಹಿಂದೆ ಬಿಜೆಪಿಯಲ್ಲಿ ಇದ್ದವರು. ಪಕ್ಷ ಬಿಡುವಾಗ ಅವರು ಬಿಜೆಪಿ ಬಗ್ಗೆ ಹಲವು ಮಾತುಗಳನ್ನು ಆಡಿದ್ದಾರೆ. ನಾನು ಸತ್ತರೂ ಬಿಜೆಪಿ ಕಚೇರಿ ಮುಂದೆ ನನ್ನ ಹೆಣವನ್ನು ತೆಗೆದುಕೊಂಡು ಹೋಗಬೇಡಿ ಎಂದು ಸವದಿ ಹೇಳಿಕೆ ನೀಡಿದ್ದರು. ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ಪಕ್ಷ ಬಿಟ್ಟಿದ್ದರು. ಸದ್ಯಕ್ಕೆ ಸ್ವಾಭಿಮಾನ ಬಿಟ್ಟು ಮರಳಿ ಬಿಜೆಪಿಗೆ ಬರುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಸವದಿಯವರನ್ನು ನೀವು ಕೇಳಬೇಕು'' ಎಂದು ಕಿಡಿಕಾರಿದರು.

''ಶಾಸಕ ಲಕ್ಷ್ಮಣ್ ಸವದಿ ಹಿಂದೆ ಬಿಜೆಪಿಯನ್ನು ಬೈದಿದ್ದರು. ತಾಯಿ, ವಿಷ, ಸ್ವಾಭಿಮಾನ, ನನ್ನ ಹೆಣವು ಕೂಡ ಕಚೇರಿ ಮುಂದೆ ಹಾಯಬಾರದು ಅಂತ ಹಲವು ಮಾತುಗಳನ್ನು ಆಡಿದ್ದರು. ಸವದಿ ಮಾತುಗಳನ್ನು ಮರೆತು ಬಿಜೆಪಿ ವರಿಷ್ಠರು ದೊಡ್ಡ ಮನಸ್ಸು ಮಾಡಿ ಕರೆಯಬಹುದು. ಅವರು ಸ್ವಾಭಿಮಾನ ಬಿಟ್ಟು ಬರುತ್ತಾರಾ? ಎಂಬುದನ್ನು ನೀವು ಅವರನ್ನು ಕೇಳಬೇಕು. ಸವದಿ ಬಿಜೆಪಿಗೆ ಮರಳುವುದು ನಮಗೆ ಗೊತ್ತಿಲ್ಲ. ಆದರೆ, ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧರಾಗಿರುತ್ತೇವೆ'' ಎಂದರು.

''ಬಿಜೆಪಿ ಸೇರುತ್ತೇನೆ ಎಂಬ ಗದ್ದಲ ಸೃಷ್ಟಿಸಿ ಮಂತ್ರಿ ಆಗುವ ದೃಷ್ಟಿಯಿಂದ ಈ ರೀತಿ ಆಟವಾಡುತ್ತಿದ್ದಾರೆ. ಈ ಹಿಂದೆ ಸವದಿ ಅವರು, ನನ್ನ ಮನಸ್ಸಿನಲ್ಲಿ ಏನಿರುತ್ತದೆ ಎಂಬುದು ದೇವರಿಗೆ ಮಾತ್ರ ಗೊತ್ತು ಎಂದು ಹೇಳಿಕೆ ನೀಡಿದ್ದರು. ಇದರಿಂದ ಅವರ ಮನಸ್ಸಿನಲ್ಲಿ ಏನೋ ಇದೆ ಎಂಬುದು ನಮಗೆ ಗೊತ್ತಿಲ್ಲ. ಆ ವಿಚಾರಗಳಿಗೆ ಅವರೇ ಉತ್ತರಿಸಬೇಕು'' ಎಂದು ಗರಂ ಆದರು.

''ಸದ್ಯಕ್ಕೆ ಲೋಕಸಭಾ ಚುನಾವಣೆ ಸಮೀಪ ಬರುತ್ತಿದೆ. ಇದರಿಂದ ಅಥಣಿ ಬಿಜೆಪಿ ವಲಯದಿಂದ ನಾವು ಸಂಪೂರ್ಣವಾಗಿ ಈಗಾಗಲೇ ಒಂದು ಹಂತದ ಪ್ರಚಾರವನ್ನು ಪ್ರಾರಂಭಿಸಿದ್ದೇವೆ. ದೇಶ ಹಾಗೂ ಜಗತ್ತು ಕಂಡು ಅಪ್ರತಿಮ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ. ಈಗಾಗಲೇ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಮೂರು ಜನ ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ನಾವು ಅವರ ಪರವಾಗಿ ಕೆಲಸವನ್ನು ಮಾಡುತ್ತೇವೆ'' ಎಂದು ಮಹೇಶ್ ಕುಮಠಳ್ಳಿ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ:ದೆಹಲಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ: ರಾಜ್ಯದ ಸಂಸದರು, ಕೇಂದ್ರ ಮಂತ್ರಿಗಳಿಗೆ ಸಿಎಂ ಪತ್ರ

Last Updated : Feb 6, 2024, 2:35 PM IST

ABOUT THE AUTHOR

...view details