ಕರ್ನಾಟಕ

karnataka

ETV Bharat / state

ಸುಪ್ರೀಂ ಕೋರ್ಟ್ ತೀರ್ಪನ್ನು ಕಾಗದದ ಹುಲಿ ಎನ್ನುವ ಜೋಶಿಗೆ ಸಚಿವರಾಗಿರಲು ಅರ್ಹತೆ ಇಲ್ಲ: ಈಶ್ವರ ಖಂಡ್ರೆ

ಪಟಾಕಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಸಚಿವ ಪ್ರಹ್ಲಾದ್​ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಈಶ್ವರ ಖಂಡ್ರೆ, "ಕೋರ್ಟ್​ ತೀರ್ಪಿನ ಅನುಷ್ಠಾನ ಬೇಡವೆಂದಾದರೆ ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಲಿ" ಎಂದಿದ್ದಾರೆ.

ಸಚಿವ ಈಶ್ವರ ಖಂಡ್ರೆ , ಸಚಿವ ಪ್ರಹ್ಲಾದ ಜೋಶಿ
ಈಶ್ವರ ಖಂಡ್ರೆ, ಪ್ರಹ್ಲಾದ್ ಜೋಶಿ (ETV Bharat)

By ETV Bharat Karnataka Team

Published : Oct 27, 2024, 10:09 AM IST

ಬೆಂಗಳೂರು:"ಪಟಾಕಿ ಮೇಲಿನ ನಿರ್ಬಂಧ ಸುಪ್ರೀಂ ಕೋರ್ಟ್ ಆದೇಶದ ಪಾಲನೆಯೇ ಹೊರತು ರಾಜ್ಯ ಸರ್ಕಾರದ ಸ್ವಯಂ ನಿರ್ಧಾರವಲ್ಲ" ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

"ಹಿಂದೂ ಹಬ್ಬಗಳಿಗೆ ಮಾತ್ರ ಇವರ ಪೌರುಷ. ಪಟಾಕಿ ಹೊಡೆಯುವವರು ಹೊಡೀತಾರೆ. ಯಾರೂ ಏನೂ ಮಾಡಲೂ ಆಗಲ್ಲ. ಈ ಆದೇಶ (ಸುಪ್ರೀಂ ಕೋರ್ಟ್) ಕಾಗದ ಹುಲಿ" ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಈಶ್ವರ ಖಂಡ್ರೆ, "ಸುಪ್ರೀಂ ಕೋರ್ಟ್ ತೀರ್ಪನ್ನೇ ಕಾಗದದ ಹುಲಿ ಎನ್ನುವ ಜೋಶಿ ಅವರಿಗೆ ಸಚಿವರಾಗಿ ಮುಂದುವರಿಯಲು ಅರ್ಹತೆಯೇ ಇಲ್ಲ" ಎಂದು ಟೀಕಿಸಿದ್ದಾರೆ.

"ಸುಪ್ರೀಂ ಕೋರ್ಟ್ ರಿಟ್ ಅರ್ಜಿ (ಸಿವಿಲ್) ಸಂಖ್ಯೆ 728 -2015ರಲ್ಲಿ ದೀಪಾವಳಿ ಹಬ್ಬದ ದಿನಗಳಲ್ಲಿ ಅಥವಾ ಗುರುಪೂರಬ್‌ನಂತಹ ಬೇರೆ ಹಬ್ಬದ ದಿನಗಳಲ್ಲಿ ರಾತ್ರಿ 8ರಿಂದ ರಾತ್ರಿ 10 ಗಂಟೆಯವರಗೆ ಮಾತ್ರವೇ ಪಟಾಕಿ ಸಿಡಿಸಬೇಕು ಎಂದು ತೀರ್ಪು ನೀಡಿದೆ. ಅದರ ಅನುಷ್ಠಾನ ಮಾಡಬೇಡಿ ಎಂದು ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಲಿ" ಎಂದು ಈಶ್ವರ್​ ಖಂಡ್ರೆ ಸವಾಲು ಹಾಕಿದ್ದಾರೆ.

"ಕೋರ್ಟ್ 125 ಡೆಸಿಬಲ್​ಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಸಿಡಿಸಬಾರದು" ಎಂದೂ ತೀರ್ಪು ನೀಡಿದೆ. "ಸರ್ವೋಚ್ಛ ನ್ಯಾಯಾಲಯ ಆದೇಶ ಪಾಲನೆ ರಾಜ್ಯ ಸರ್ಕಾರದ ಕರ್ತವ್ಯವಾಗಿದ್ದು, ನಾವು ಅದನ್ನು ಅನುಷ್ಠಾನ ಮಾಡುತ್ತಿದ್ದೇವೆ. ಬಿಜೆಪಿಯವರಿಗೆ ನ್ಯಾಯಾಲಯದ ಮೇಲೆ ಗೌರವ ಇಲ್ಲ. ಹೀಗಾಗಿ ಇಂತಹ ಹೇಳಿಕೆ ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಾರೆ, ದ್ವೇಷ ಬಿತ್ತುತ್ತಾರೆ. ಅನಗತ್ಯವಾಗಿ ಪ್ರಾರ್ಥನಾ ಮಂದಿರಗಳ ಬಗ್ಗೆ ಮಾತನಾಡಿ ಎರಡು ಕೋಮಿನ ಜನರ ನಡುವೆ ದ್ವೇಷ ಹುಟ್ಟುಹಾಕುವ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು" ಎಂದು ಖಂಡ್ರೆ ಕಿಡಿ ಕಾರಿದ್ದಾರೆ.

ದೀಪದಿಂದ ದೀಪ ಹಚ್ಚಿ ದೀಪಾವಳಿ ಆಚರಿಸಿ: "ಸುಪ್ರೀಂ ಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸುತ್ತೋಲೆ ಹೊರಡಿಸಿದ್ದು, ಸ್ಥಳೀಯ ಸಂಸ್ಥೆಗಳು ಅನುಷ್ಠಾನ ಮಾಡಬೇಕಾಗುತ್ತದೆ. ಪ್ರಜ್ಞಾವಂತ ನಾಗರಿಕರು ದೀಪದಿಂದ ದೀಪ ಹಚ್ಚಿ ದೀಪಾವಳಿ ಆಚರಿಸಬೇಕು. ಪ್ರಕೃತಿ ಪರಿಸರ ಉಳಿಸಬೇಕು" ಎಂದು ಸಚಿವ ಖಂಡ್ರೆ ತಿಳಿಸಿದ್ದಾರೆ.

ಇದನ್ನೂ ಓದಿ:ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬೇಕು: ಸಚಿವ ಈಶ್ವರ ಖಂಡ್ರೆ

ABOUT THE AUTHOR

...view details