ಕರ್ನಾಟಕ

karnataka

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ರಾಜ್ಯಾದ್ಯಂತ ದಾಖಲೆಯ ಮಾನವ ಸರಪಳಿ ನಿರ್ಮಾಣ - International Democracy Day

By ETV Bharat Karnataka Team

Published : Sep 15, 2024, 8:13 PM IST

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರಾಜ್ಯದ 31 ಜಿಲ್ಲೆಗಳಲ್ಲಿ ಇಂದು ಏಕಕಾಲಕ್ಕೆ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ಈ ವಿಶ್ವ ದಾಖಲೆಯ ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲೆಯ ಬಸವ ಕಲ್ಯಾಣದಿಂದ ಚಾಮರಾಜನಗರದವರೆಗೆ ಸುಮಾರು 2,500 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸಲಾಯಿತು.

human chain
ಧಾರವಾಡದಲ್ಲಿ ಮಾನವ ಸರಪಳಿ ನಿರ್ಮಾಣ (ETV Bharat)

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ (ETV Bharat)

ಧಾರವಾಡ/ಚಾಮರಾಜನಗರ:ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು ದಾಖಲೆಯ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ವಿವಿಧ ನಗರ, ಜಿಲ್ಲಾಕೇಂದ್ರಗಳಲ್ಲಿ ಸಚಿವರು, ಶಾಸಕರು ಮಾನವ ಸರಪಳಿಗೆ ಚಾಲನೆ ನೀಡಿದರು.

ಬೀದರನಿಂದ ಚಾಮರಾಜನಗರದವರೆಗೆ ನಡೆಯುತ್ತಿರುವ ಮಾನವ ಸರಪಳಿ ಕಾರ್ಯಕ್ರಮಕ್ಕೆ ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಧಾರವಾಡ ಜಿಲ್ಲೆಯಲ್ಲಿ ಒಟ್ಟು 55 ಕಿ.ಮೀ. ಮಾನವ ಸರಪಳಿ ನಿರ್ಮಿಸಲಾಯಿತು. ಜಿಲ್ಲೆಯಲ್ಲಿ 3.40 ಲಕ್ಷ ಜನರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದರು. ರಾಜ್ಯದಲ್ಲಿಯೇ ಧಾರವಾಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೋಂದಣಿ ಮಾಡಿಕೊಂಡ ಜಿಲ್ಲೆಗೆ ಪಾತ್ರವಾಗಿದೆ.

ಕರ್ನಾಟಕ ಕಲಾ ಮಹಾವಿದ್ಯಾಲಯದ ಆವರಣದಲ್ಲಿ ಶಾಲಾ ಮಕ್ಕಳಿಂದ ಮಾನವ ಸರಪಳಿ ಮೂಲಕ ಭಾರತ ನಕ್ಷೆ ನಿರ್ಮಿಸಲಾಗಿತ್ತು. ಭಾರತ ನಕ್ಷೆಯ ಸುತ್ತ ಕನ್ನಡ ದ್ವಜ ಹಾಗೂ ರಾಷ್ಟ್ರ ದ್ವಜ ಹಿಡಿದು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಾಮರಾಜನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ (ETV Bharat)

ಚಾಮರಾಜನಗರ:ಪ್ರಜಾಪ್ರಭುತ್ವ ದಿನದ ಅಂಗವಾಗಿ ಜಗತ್ತಿನ ಅತಿದೊಡ್ಡ ಮಾನವ ಸರಪಳಿಗೆ ಚಾಮರಾಜನಗರ ಕೂಡ ಬೆಸೆದುಕೊಂಡಿತು. ಚಾಮರಾಜನಗರ ಮತ್ತು ಮೈಸೂರು ಗಡಿಭಾಗವಾದ ಮೂಗುರು ಕ್ರಾಸ್​​ನಲ್ಲಿ ಆರಂಭಗೊಂಡ ಮಾನವ ಸರಪಳಿ ಚಾಮರಾಜನಗರದ ರಾಮಸಮುದ್ರದ ಅಂಬೇಡ್ಕರ್ ಪ್ರತಿಮೆ ಬಳಿ ಕೊನೆಗೊಂಡಿತು.

ವಿವಿಧ ರಾಜ್ಯಗಳ ಸಂಸ್ಕೃತಿ ದರ್ಶನ:ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಮಾನವ ಸರಪಳಿ ಹಾದು ಹೋಗಿದ್ದ ಮಾರ್ಗದಲ್ಲಿ ಭಾರತದ ಒಂದೊಂದು ರಾಜ್ಯದ ಧಿರಿಸು ಧರಿಸಿ ವಿವಿಧೆತೆಯಲ್ಲಿ ಏಕತೆಯ ಸಂಸ್ಕೃತಿ ಬಿಂಬಿಸಿದರು. ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್ ಹೀಗೆ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಪು ಧರಿಸಿ ಆಯಾ ರಾಜ್ಯದ ಭೂಪಟ ಹಿಡಿದು ನಾವೆಲ್ಲ ಒಂದು ಎಂದರು. ಸೋಲಿಗರ ಗೊರುಕನ, ಜೇನುಕುರುಬರ ನೃತ್ಯ, ಗೊರವರ ಕುಣಿತ, ಹುಲಿ ವೇಷ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಗಮನ ಸೆಳೆದವು.

ದಾವಣಗೆರೆಯಲ್ಲಿ ಮಾನವ ಸರಪಳಿ ನಿರ್ಮಾಣ (ETV Bharat)

ದಾವಣಗೆರೆ:ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನಿಂದ ಹರಿಹರದವರೆಗೆ ಬೃಹತ್ ಮಾನವ ಸರಪಳಿ ನಿರ್ಮಾಣ ಮಾಡಲಾಗಿತ್ತು.‌ ಒಟ್ಟು 80 ಕಿ,ಮೀ ಉದ್ದ ಮಾನವ ಸರಪಳಿ ನಿರ್ಮಾಣಗೊಂಡಿತ್ತು. 1 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗಿದ್ದರು.‌ ಅಲ್ಲದೆ, ಒಂದು ಕಿಲೋಮೀಟರ್​​ಗೆ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡಲಾಗಿತ್ತು. ಶಾಲಾ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಯವರು, ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದರು. ಹರಿಹರದ ಮಹಾತ್ಮ ಗಾಂಧಿ ಮೈದಾನದಲ್ಲಿ ವಿದ್ಯಾರ್ಥಿಗಳು ಭಾರತ ನಕ್ಷೆ ನಿರ್ಮಾಣ ಮಾಡುವ ಮುಖಾಂತರ ಈ ಮಾನವ ಸರಪಳಿ ಕಾರ್ಯಕ್ರಮ ಮುಕ್ತಾಯ ಮಾಡಲಾಯಿತು. ಜಿಲ್ಲಾಧಿಕಾರಿ ಗಂಗಾಧರ್ ಸ್ವಾಮಿ, ಜಿಪಂ‌ ಸಿಇಓ ಸುರೇಶ್ ಇಟ್ನಾಳ್, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

ಬೆಳಗಾವಿ ಸುವರ್ಣಸೌಧದೆದುರು ಮಾನವ ಸರಪಳಿ ನಿರ್ಮಾಣ (ETV Bharat)

ಬೆಳಗಾವಿ:ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿಯಿಂದ ಚನ್ನಮ್ಮ ಕಿತ್ತೂರು ತಾಲೂಕಿನ ತೇಗೂರ ಗ್ರಾಮದವರೆಗೆ ಅಂದಾಜು 145 ಕಿ.ಮಿ ಉದ್ದದ ಮಾನವ ಸರಪಳಿಯನ್ನು ನಿರ್ಮಿಸಲಾಗಿತ್ತು. ಈ ವೇಳೆ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಮಾನವ ಸರಪಳಿಯನ್ನು ನಿರ್ಮಿಸಿದ್ದರು. ಈ ಮೂಲಕ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮಹತ್ವ ಸಾರುವ ಸಂವಿಧಾನ‌ ಪೀಠಿಕೆಯನ್ನು ಸಾಮೂಹಿಕವಾಗಿ ವಾಚಿಸಿದರು.

ಬೆಳಗಾವಿ ಸುವರ್ಣ ವಿಧಾ‌ನ ಸೌಧದಲ್ಲಿ‌ ಜರುಗಿದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ‌ ಸಂವಿಧಾನ ಪೀಠಿಕೆಗೆ ಪುಷ್ಪ ನಮನ ಸಲ್ಲಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇತರರು ಭಾಗವಹಿಸಿದ್ದರು.

ಮೈಸೂರಿನ ಕಾರ್ಯಕ್ರಮದಲ್ಲಿ ದಸರಾ ಆನೆಗಳು ಭಾಗಿ (ETV Bharat)

ಮೈಸೂರು:ನಗರದ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ವಾಚಿಸಲಾಯಿತು. ಮಾನವ ಸರಪಳಿಯಲ್ಲಿ ಪಾಲ್ಗೊಂಡವರು ಕೈ ಕೈ ಹಿಡಿದುಕೊಂಡು ತಮ್ಮ ಎರಡು ಕೈಗಳನ್ನು ಮೇಲಕ್ಕೆ ಎತ್ತಿ ಹಿಡಿದು ಜೈಹಿಂದ್, ಜೈ ಕರ್ನಾಟಕ ಎಂಬ ಘೋಷಣೆ ಕೂಗಿದರು. ದಸರಾ ತಾಲೀಮು ಮುಗಿಸಿ ಅರಮನೆಗೆ ವಾಪಸ್​ ಆಗುತ್ತಿದ್ದ 13 ಆನೆಗಳನ್ನು ಕೂಡ ಸಾಲಿನಲ್ಲಿ ನಿಲ್ಲಿಸಿದ್ದು ವಿಶೇಷವಾಗಿತ್ತು. ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್, ವಿಧಾನಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ಇತರರು ಭಾಗವಹಿಸಿದ್ದರು.

ಉಡುಪಿಯಲ್ಲಿ ಮಾನವ ಸರಪಳಿ ನಿರ್ಮಾಣ (ETV Bharat)

ಉಡುಪಿ:ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್​ನಿಂದ ಕಾಪು ತಾಲೂಕಿನ ಹೆಜಮಾಡಿ ಸೇತುವೆವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುಮಾರು 107 ಕಿ. ಮೀ ಉದ್ದದ ಮಾನವ ಸರಪಳಿ ರಚನೆ ಕಾರ್ಯಕ್ರಮ ನಡೆಯಿತು. ಈ ವೇಳೆ ಸಂವಿಧಾನದ ಪ್ರಸ್ತಾವನೆ ಓದಿಸಲಾಯಿತು. ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸುಮಾರು ಒಂದು ಲಕ್ಷ ಜನರು ಮಾನವ ಸರಪಳಿಯಲ್ಲಿ ಭಾಗಿಯಾಗಿದ್ದರು.

ಮಂಡ್ಯದಲ್ಲಿ ಮಾನವ ಸರಪಳಿ ನಿರ್ಮಾಣ (ETV Bharat)

ಮಂಡ್ಯ:ಸಕ್ಕರೆನಾಡು ಮಂಡ್ಯದಲ್ಲಿ ಬೃಹತ್ ಮಾನವ ಸರಪಳಿ ರಚಿಸಲಾಯಿತು. ಸುಮಾರು 62 ಕಿ.ಮೀ ಉದ್ದದ ಮಾನವ ಸರಪಳಿಗೆ ಸಚಿವ ಚಲುವರಾಯಸ್ವಾಮಿ ಕೈ ಜೋಡಿಸಿದರು. ಗಡಿಭಾಗ ನಿಡಘಟ್ಟದಿಂದ ಸಿದ್ದಲಿಂಗಪುರದವರೆಗೆ ಮಾನವ ಸರಪಳಿ ನಿರ್ಮಿಸಲಾಗಿತ್ತು. ಮಂಡ್ಯ ಮಿಮ್ಸ್ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಚಿವರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.

ಇದನ್ನೂ ಓದಿ:ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ: ಸಮಾಜ ಒಡೆಯುವ ಶಕ್ತಿ ನಾಶ ಮಾಡಿ - ಸಿಎಂ ಕರೆ - International democracy Day

ABOUT THE AUTHOR

...view details