ಬೆಂಗಳೂರು: ನಾವು ಸೆಮಿಕಂಡಕ್ಟರ್ ಕ್ಷೇತ್ರಸಹಿತ ಎಲ್ಲಾ ಕೈಗಾರಿಕಾ ವಲಯಗಳಿಗೆ ಸಂಬಂಧಿಸಿದಂತೆ ಬರೀ ಬಂಡವಾಳ ಆಕರ್ಷಿಸುವ ಬಗ್ಗೆ ಮಾತನಾಡುತ್ತಿರುತ್ತೇವೆ. ಆದರೆ, ವಾಸ್ತವವಾಗಿ ನಾವು ಪ್ರತಿಭೆ ಮತ್ತು ಸಾಮರ್ಥ್ಯ ಎರಡನ್ನೂ ಸೃಷ್ಟಿಸುವ ಜರೂರಿದೆ. ಇದು ಸಾಧ್ಯವಾದರೆ, ಬಂಡವಾಳದ ಹರಿವು ತನ್ನಿಂತಾನೇ ಆಗುತ್ತದೆ ಎಂದು ಉದ್ಯಮ ಪರಿಣತರಾದ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಿಇಒ ಸಂತೋಷ ಕುಮಾರ್, ಎನ್ಎಕ್ಸ್ಪಿ ಸೆಮಿಕಂಡಕ್ಟರ್ಸ್ ಉಪಾಧ್ಯಕ್ಷ ಹಿತೇಂದ್ರ ಗಾರ್ಗ್ ಮತ್ತು ಗ್ಲೋಬಲ್ ಫ್ಯಾಬ್ ಎಂಜಿನಿಯರಿಂಗ್ ಸೊಲ್ಯೂಷನ್ಸ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರ ಛಡ್ಡಾ ಅಭಿಪ್ರಾಯಪಟ್ಟರು.
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿಂದು ನಡೆದ 'ಸೆಮಿಕಂಡಕ್ಟರ್ ಕ್ರಾಂತಿಯಲ್ಲಿ ಭಾರತದ ನಾಯಕತ್ವದ ಸರದಿ' ಕುರಿತು ನಡೆದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮೊದಲಿಗೆ ಮಾತನಾಡಿದ ಸಂತೋಷ ಕುಮಾರ್, "ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮುಂದಿನ 10 ವರ್ಷಗಳು ಭಾರತದ್ದಾಗಿವೆ. ಈ ಅವಧಿಯಲ್ಲಿ ಈ ಕ್ಷೇತ್ರದ ಈಗಿನ 40 ಬಿಲಿಯನ್ ಡಾಲರ್ ವಹಿವಾಟು 400 ಬಿಲಿಯನ್ ಡಾಲರ್ ಮೀರಲಿದೆ. ಆದರೆ, ನಮ್ಮ ಶಿಕ್ಷಣ ರಂಗದಲ್ಲಿ ಗುಣಮಟ್ಟದ ಬೋಧಕರು, ಸಂಶೋಧನೆ ಮತ್ತು ಪ್ರಾಯೋಗಿಕ ಕಲಿಕೆ ಮೂರರ ಕಡೆಗೂ ಆದ್ಯ ಗಮನ ಕೊಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರವು ರಾಷ್ಟ್ರೀಯ ಸಮಸ್ಯೆಗಳನ್ನು ಮುಂದಿಟ್ಟು, ಅವುಗಳಿಗೆ ದಕ್ಷ ಪರಿಹಾರ ಕಂಡುಹಿಡಿಯುವಂತಹ ಸಂಶೋಧನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ" ಎಂದು ಒತ್ತಿ ಹೇಳಿದರು.
"ದೇಶವನ್ನು ಇನ್ನು ಕೆಲವೇ ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಯಾಗಿ ಬೆಳೆಸುವ ಗುರಿ ನಮ್ಮ ಮುಂದಿದೆ. ಇದರಲ್ಲಿ 3 ಟ್ರಿಲಿಯನ್ ಡಾಲರ್ ಇಎಸ್ಡಿಎಂ ವಲಯದ ಕೊಡುಗೆಯೇ ಆಗಿರಲಿದೆ. ಆದರೆ, ಅವಕಾಶಗಳು ಕೇವಲ ಭಾರತಕ್ಕೆ ಮಾತ್ರ ಇರುವುದಿಲ್ಲ. ಬದಲಿಗೆ ಅವು ಎಲ್ಲ ದೇಶಗಳಿಗೂ ಲಭ್ಯವಿರುತ್ತವೆ. ಅವು ನಮ್ಮದಾಗಬೇಕೆಂದರೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯ ಕಡೆಗೆ ಗಮನ ಕೊಡಬೇಕು" ಎಂದು ಅವರು ಪ್ರತಿಪಾದಿಸಿದರು.
ಜಿತೇಂದ್ರ ಛಡ್ಡಾ ಮಾತನಾಡಿ, "ಸೆಮಿಕಂಡಕ್ಟರ್ ಕ್ಷೇತ್ರದ ಚಿಪ್ ವಿನ್ಯಾಸದಲ್ಲಿ ಭಾರತದ ಪಾಲು ಶೇ.25 ರಷ್ಟಿದೆ. ಆದರೆ, ಉತ್ಪಾದನೆಯಲ್ಲಿ ನಾವು ಹಿಂದಿದ್ದೇವೆ. ಇನ್ನು 5ರಿಂದ 10 ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಳ್ಳಲಿದೆ. ಆಗ 15ರಿಂದ 20 ಮಿಲಿಯನ್ ಡಾಲರ್ ಹೂಡಿಕೆಯಲ್ಲಿ 'ಪರ್ಸನಲ್ ಡಿಸೈನ್' ಪರಿಣತಿಯು ಮುನ್ನೆಲೆಗೆ ಬರಲಿದೆ. ಜಗತ್ತಿನ ದೊಡ್ಡ ದೊಡ್ಡ ಆರ್ಥಿಕತೆಗಳೆಲ್ಲವೂ ಸೆಮಿಕಂಡಕ್ಟರ್ ಕ್ಷೇತ್ರವನ್ನೇ ನೆಚ್ಚಿಕೊಂಡಿವೆ. ಈಗ ತೈವಾನ್ ಮತ್ತು ಜಪಾನಿನಲ್ಲಿ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆ ಸಮೃದ್ಧವಾಗಿದೆ. ನಮ್ಮಲ್ಲಿನ್ನೂ ಸೆಮಿಕಂಡಕ್ಟರ್ ವಲಯಕ್ಕೆ ಇಂಬು ಕೊಡುವಂತಹ ಕಾರ್ಯ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ" ಎಂದು ಅಭಿಪ್ರಾಯಪಟ್ಟರು.
ಹಿತೇಶ್ ಗಾರ್ಗ್ ಮಾತನಾಡಿ, "20 ವರ್ಷಗಳ ಹಿಂದೆ ನಮ್ಮಲ್ಲಿ ಎನ್ಎಫ್ಸಿ (ನಿಯರ್ ಫೀಲ್ಡ್ ಕಮ್ಯುನಿಕೇಶನ್) ತಂತ್ರಜ್ಞಾನ ಬಂದಾಗ ಅದಕ್ಕೆ ಬಳಕೆದಾರರೇ ಇರಲಿಲ್ಲ. ಇದಕ್ಕಾಗಿ ನಾವು 10 ವರ್ಷ ಕಾಯಬೇಕಾಯಿತು. ಆದರೆ ಈಗ ಬೆಂಗಳೂರಿನಲ್ಲೇ ನ್ಯಾನೊ ಮೀಟರ್ ಲೆಕ್ಕದಲ್ಲಿ ಚಿಪ್ ವಿನ್ಯಾಸಗಳು ಸಿದ್ಧವಾಗುತ್ತಿವೆ. ಇದೇ ತಂತ್ರಜ್ಞಾನದ ಶಕ್ತಿ. ಕರ್ನಾಟಕದ ವಿಶ್ವವಿದ್ಯಾಲಯಗಳು, ಕಾಲೇಜು ಮತ್ತು ನವೋದ್ಯಮಗಳಲ್ಲಿ ಸೆಮಿಕಂಡಕ್ಟರ್ ಕ್ಷೇತ್ರದ ಬೆಳವಣಿಗೆಗೆ ಅಪಾರ ಅವಕಾಶಗಳಿವೆ" ಎಂದು ಹೇಳಿದರು.
"ಭಾರತ ಮತ್ತು ಅದರಲ್ಲೂ ಕರ್ನಾಟಕ ಸಾಫ್ಟ್ವೇರ್ ಆಡುಂಬೊಲಗಳಾಗಿವೆ. ಬೆಂಗಳೂರಿನಲ್ಲಂತೂ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ತುಂಬಾ ಸಂಶೋಧನೆಗಳು ನಡೆಯುತ್ತಿವೆ. ಆದರೆ ಇವುಗಳಿಗೆ ತಕ್ಕಂತಹ ಮಾರುಕಟ್ಟೆಯನ್ನು ಸೃಷ್ಟಿಸುವ ಅನ್ವಯಿಕತೆಯ ಕೊರತೆ ನಮ್ಮಲ್ಲಿ ಕಾಣುತ್ತಿದೆ. ಇದರ ಜೊತೆಗೆ ಹೆಚ್ಚುಹೆಚ್ಚು ಸಹಭಾಗಿತ್ವಕ್ಕೆ ಉತ್ತೇಜನ ಸಿಗುವಂತಾಗಬೇಕು. ಇದಿಲ್ಲದೆ ಹೋದರೆ, ಉದ್ಯಮದ ಬೆಳವಣಿಗೆ ಕುಂಟುತ್ತವಾಗಿ ಸಾಗುತ್ತದೆ" ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕರ್ನಾಟಕದಲ್ಲಿ ಅಮೆರಿಕದ ಲ್ಯಾಮ್ ರಿಸರ್ಚ್ ಕಂಪೆನಿಯಿಂದ ₹10 ಸಾವಿರ ಕೋಟಿ ಹೂಡಿಕೆ
ಇದನ್ನೂ ಓದಿ:ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ: ಕನ್ನಡದಲ್ಲೇ ಮಾತು ಆರಂಭಿಸಿದ ಆನಂದ್ ಮಹಿಂದ್ರಾ