ಬೆಂಗಳೂರು: "ಎಐ ವಿನಾಶಕ (ಟರ್ಮಿನೇಟರ್) ಹಂತಕ್ಕೆ ತಲಪುವ ಸಾಧ್ಯತೆ ಬಹಳಷ್ಟು ದೂರದಲ್ಲಿದೆ" ಎಂದು ಯುಎಸ್ ಇಂಧನ ಇಲಾಖೆಯ ಮಾಜಿ ಮುಖ್ಯ ಮಾಹಿತಿ ಅಧಿಕಾರಿ ಅನ್ನ್ ಡಂಕಿನ್ ಸ್ಪಷ್ಟಪಡಿಸಿದ್ದಾರೆ.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ "ಎಐ, ಸೈಬರ್ ಸೆಕ್ಯೂರಿಟಿ ಮತ್ತು ಸರ್ಕಾರ: ಅನಿಶ್ಚಿತತೆಯ ಜಗತ್ತಲ್ಲಿ ಡಿಜಿಟಲ್ ಸ್ಥಿತಿಸ್ಥಾಪಕತ್ವ ನಿರ್ಮಾಣ" ಮೇಲಿನ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐ ಸದ್ಯ ಕೇವಲ ಡೇಟಾ ಸಂಗ್ರಹ ಮಾಡಿ, ನಿಖರವಾದ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಎಐ ಸದ್ಯ ತಾನು ಸಂಗ್ರಹಿಸಿದ ಡೇಟಾದಿಂದ ವಿಕಸನವಾಗುತ್ತಿಲ್ಲ ಮತ್ತು ತಾನೇ ಕಲಿತುಕೊಳ್ಳುತ್ತಿಲ್ಲ. ಅದಕ್ಕೆ ತನ್ನದೇ ಆದ ಬುದ್ಧಿಮತ್ತೆ ಇಲ್ಲ. ಹೀಗಾಗಿ ಅದು ಕಾವಲುಗಾರನಾಗುವ ಸಾಧ್ಯತೆ ಇಲ್ಲ. ಮುಂದೆ ಜಗತ್ತು ಕೊನೆಗೊಳಿಸುವ ಟರ್ಮಿನೇಟರ್ ಆಗುವ ಸಾಧ್ಯತೆ ಇಲ್ಲ" ಎಂದು ಸ್ಪಷ್ಟಪಡಿಸಿದರು.
"ಆದರೆ ಎಐ ಮಾಡೆಲ್ಗಳನ್ನು ವಾಸ್ತವ ಎಂದು ಭಾವಿಸುವ ಅಪಾಯ ಹೆಚ್ಚಿದೆ. ಸರ್ಕಾರ ಈ ನಿಟ್ಟಿನಲ್ಲಿ ಮಧ್ಯಪ್ರವೇಶಿಸಿ ಇಂಥ ಎಐ ಮಾಡೆಲ್ಗಳ ಮೇಲೆ ನಿಯಂತ್ರಣ ಹಾಕುವ ಕೆಲಸ ಮಾಡಬೇಕು. ಎಐ ಮಾಡೆಲ್ಗಳು ನೈಜ ಅಲ್ಲ. ಅದು ಮಾನವ ಅಲ್ಲ. ಅದಕ್ಕೆ ಭಾವನೆಗಳಿಲ್ಲ. ಅದು ನಿಮ್ಮ ಸ್ನೇಹಿತ, ಬಾಳ ಸಂಗಾತಿಯಲ್ಲ ಎಂಬುದನ್ನು ಜನರು ಅರಿಯಬೇಕು. ಅವು ಕೇವಲ ಮಾಡೆಲ್ಗಳಾಗಿವೆ. ಈ ಬಗ್ಗೆ ತಿಳುವಳಿಕೆ ಮೂಡಿಸಬೇಕು" ಎಂದು ತಿಳಿಸಿದರು.
"ಎಐ ತಂತ್ರಜ್ಞಾನದಲ್ಲಿ ಅಪಾಯವೂ ಇದೆ. ಅವಕಾಶಗಳೂ ಇವೆ. ಪರಮಾಣು ಕ್ಷೇತ್ರ, ಇಂಧನ ನೀತಿ ಸೇರಿದಂತೆ ಸರ್ಕಾರದ ಕಾರ್ಯಕ್ರಮಗಳಲ್ಲಿ ಎಐ ಪ್ರಭಾವ ಹೆಚ್ಚು ಮಾಡಬಹುದಾಗಿದೆ. ಎಐ ಸದ್ಯ ಅಪಾರ ವಿದ್ಯತ್ ಬಳಕೆ ಮಾಡುತ್ತದೆ. ಆದರೆ ವಿಪರ್ಯಾಸ ಅಂದರೆ ಎಐ ಮೂಲಕ ಸ್ವಚ್ಛ ಇಂಧನದತ್ತ ಹೆಜ್ಜೆ ಹಾಕಬಹುದಾಗಿದೆ. ವಾತಾವರಣ ಬದಲಾವಣೆಗೆ ಇದು ಸಹಕಾರಿಯಾಗಲಿದೆ. ಸೋಲಾರ್ ಬ್ಯಾಟರಿ ತಂತ್ರಜ್ಞಾನ, ಪರಮಾಣು ಇಂಧನ ಮುಂತಾದ ತಂತ್ರಜ್ಞಾನದಲ್ಲಿ ಹೊಸ ನಾವಿನ್ಯತೆ ತರಲು ಇದು ಸಹಕಾರಿಯಾಗಲಿದೆ" ಎಂದು ವಿವರಿಸಿದರು.
"ಪ್ರತಿ ತಂತ್ರಜ್ಞಾನದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ. ಎಐ ತಂತ್ರಜ್ಞಾನದಲ್ಲಿ ಸದ್ಯದ ಅಪಾಯ ಡೀಪ್ ಫೇಕ್ ಹಾಗೂ ಅಪಾರ ವಿದ್ಯುತ್ ಬಳಕೆ. ನಾವು ಇದರಲ್ಲಿ ಒಳ್ಳೆಯದನ್ನು ಹುಡುಕಬೇಕಾಗಿದೆ. ಎಐನ್ನು ಈ ಸಂಬಂಧ ಸಜ್ಜುಗೊಳಿಸಬೇಕು. ಎಐ ಮೂಲಕ ಉತ್ತಮ ಪರಿಹಾರವನ್ನು ಹುಡುಕಬೇಕಾಗಿದೆ. ಎಐ ದೀರ್ಘ ಕಾಲದಲ್ಲಿ ಅಪಾಯಕ್ಕಿಂತ ಹೆಚ್ಚು ವೇಗವರ್ಧಕವಾಗಿರಲಿದೆ" ಎಂದು ಅವರು ಸ್ಪಷ್ಟಪಡಿಸಿದರು.
"ಎಐನ್ನು ಸೈಬರ್ ಕಳ್ಳರು ತಮ್ಮ ಅನುಕೂಲಕ್ಕಾಗಿ ಬಳಸುವ ಪ್ರಕರಣಗಳು ಹೆಚ್ಚಾಗಿವೆ. ಫಿಶಿಂಗ್ಗೆ ಬಳಸಿ ಸೈಬರ್ ಅಪರಾಧಗಳನ್ನು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಐನ್ನು ಸಜ್ಜುಗೊಳಿಸಿ, ಸೈಬರ್ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಸೈಬರ್ ಭದ್ರತಾ ಟೂಲ್ಸ್, ಸಾಮರ್ಥ್ಯಗಳನ್ನು ಎಐ ಭಾಗವಾಗಿಸಬೇಕು" ಎಂದು ತಿಳಿಸಿದರು.
ಇದನ್ನೂ ಓದಿ: ಜಾಗತಿಕ ಹೂಡಿಕೆದಾರರ ಸಮಾವೇಶ : ವಿಪ್ರೋ ಹೆಲ್ತ್ ಕೇರ್ನಿಂದ ರಾಜ್ಯದಲ್ಲಿ 8,000 ಕೋಟಿ ರೂ. ಹೂಡಿಕೆ