ಕರ್ನಾಟಕ

karnataka

ETV Bharat / state

ಸಂಜಯ್​ ಪಾಟೀಲ್ ಹೇಳಿಕೆಗೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು: ಕಾಂಗ್ರೆಸ್ ಮಹಿಳೆಯರಿಂದ ಪ್ರತಿಭಟನೆ - Protest against Sanjay Patil - PROTEST AGAINST SANJAY PATIL

ಸಂಜಯ್​ ಪಾಟೀಲ್ ನೀಡಿದ್ದ ಹೇಳಿಕೆಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಖಂಡಿಸಿದ್ದಾರೆ. ಜೊತೆಗೆ ಕಾಂಗ್ರೆಸ್​ ಮಹಿಳಾ ಕಾರ್ಯಕರ್ತೆಯರು ಸಂಜಯ್​ ಪಾಟೀಲ್ ಮನೆ ಎದುರು ಪ್ರತಿಭಟನೆ ನಡೆಸಿ, ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.

ಸಂಜಯ್​ ಪಾಟೀಲ್​ ವಿವಾದಾತ್ಮಕ ಹೇಳಿಕೆ
ಸಂಜಯ್​ ಪಾಟೀಲ್​ ವಿವಾದಾತ್ಮಕ ಹೇಳಿಕೆ

By ETV Bharat Karnataka Team

Published : Apr 14, 2024, 11:11 AM IST

Updated : Apr 14, 2024, 11:58 AM IST

ಸಂಜಯ್​ ಪಾಟೀಲ್ ಹೇಳಿಕೆಗೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು

ಬೆಳಗಾವಿ:'ಪ್ರಚಾರಕ್ಕಾಗಿ ನೀಚತನದ, ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ' ಎಂದು ತಮ್ಮ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಶಾಸಕ ಸಂಜಯ್​ ಪಾಟೀಲ್ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಕಿಡಿಕಾರಿದ್ದಾರೆ. ಜೊತೆಗೆ ಹೇಳಿಕೆ ಖಂಡಿಸಿ ಶನಿವಾರ ರಾತ್ರಿ ಸಂಜಯ್​ ಪಾಟೀಲ್ ನಿವಾಸದ ಎದುರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ.

ಮಾಜಿ ಶಾಸಕ ಸಂಜಯ್​ ಪಾಟೀಲ್​ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಬೇವಾಡಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಾ, 'ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದೀರಿ. ಅದರಿಂದ ಅವರಿಗೆ ಇಂದು ನಿದ್ದೆ ಬರುದಿಲ್ಲ. ಹೀಗಾಗಿ ಇಂದು ರಾತ್ರಿ ಮಾತ್ರೆ ಜತೆಗೆ ಒಂದು ಎಕ್ಸ್ಟ್ರಾ ಪೆಗ್​ ಹೊಡಿಬೇಕು' ಎಂದಿದ್ದರು.

ಇದೀಗ ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ "ಕರ್ನಾಟಕ ರಾಜ್ಯದ ಮಹಿಳೆಯರು, ಮಕ್ಕಳನ್ನು‌‌ ನಿಭಾಯಿಸುವ ಸಚಿವೆಗೆ ಈ ರೀತಿ ಹೇಳಿಕೆ‌ ನೀಡಿದ್ದಾರೆ. ಈ ಮೂಲಕ ಬಿಜೆಪಿಯವರಿಗೆ ಮಹಿಳೆಯರು ಮತ್ತು‌‌ ಮಹಿಳಾ ಕುಲದ ಬಗ್ಗೆ ಗೌರವ ಎಷ್ಟಿದೆ ಎನ್ನುವುದು ತೋರಿಸುತ್ತದೆ. ಬಿಜೆಪಿಯವರ ಅಝೆಂಡಾ ಏನು ಎನ್ನುವುದು ಈ ಮೂಲಕ ಗೊತ್ತಾಗುತ್ತದೆ. ಬರೀ ಮಾತಲ್ಲಿ ರಾಮ ಅಂತಾರೆ, ಬೇಟಿ ಬಚಾಬ್ ಬೇಟಿ ಫಡಾವೋ ಎನ್ನುತ್ತಾರೆ. ಪ್ರತಿಯೊಬ್ಬ ಮಹಿಳೆಗೆ ಗೌರವ ನೀಡುವುದು ಹಿಂದೂ ಸಂಸ್ಕೃತಿ. ಸಂಜಯ್ ಪಾಟೀಲ್ ಅವರ ಈ ಹೇಳಿಕೆ ಲಕ್ಷ್ಮಿ ಹೆಬ್ಬಾಳ್ಕರ್ ಅಷ್ಟೇ ಅಲ್ಲ, ಇಡೀ ರಾಜ್ಯದ ಹಾಗೂ ದೇಶದ‌ ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನ. ನಾನು ರಾಜ್ಯದ ಮಹಿಳೆಯರಿಗೆ ಕರೆ‌ ನೀಡುತ್ತೇನೆ. ಇಂತಹ ಹಿಡನ್​ ಅಝೆಂಡಾ ಇಟ್ಟುಕೊಂಡಿರುವ ಬಿಜೆಪಿಗೆ ದಿಕ್ಕಾರ ಕೂಗಬೇಕು. ಸಂಜಯ್​ ಪಾಟೀಲ್​ ಹೇಳಿಕೆಗೆ ವೇದಿಕೆ ಮೇಲಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಮಂಗಳಾ‌ ಅಂಗಡಿ ನಕ್ಕರು. ಇದು ಬಿಜೆಪಿಯ ಹಿಡನ್ ಅಝೆಂಡಾ ತೋರಿಸುತ್ತದೆ. ಆಗಲೇ ಆ ಹೇಳಿಕೆಯನ್ನು ವೇದಿಕೆ ಮೇಲೆ ಇದ್ದವರು ಖಂಡಿಸಬೇಕಿತ್ತು. ಖಂಡಿಸಿದ್ದರೆ ಬಿಜೆಪಿಯವರು ಹೆಣ್ಣಿಗೆ ಗೌರವ ಕೊಡುತ್ತಾರೆ ಎಂದಾಗುತ್ತಿತ್ತು. ಇದರಿಂದ ಬಿಜೆಪಿಯವರ ಮುಖವಾಡ ಕಳಚಿದೆ "ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಜಯ್ ಪಾಟೀಲ್​​ ಮನೆ ಮುಂದೆ ಮಹಿಳೆಯರ ಪ್ರತಿಭಟನೆ: ಮಾಜಿ ಶಾಸಕ ಸಂಜಯ್​ ಪಾಟೀಲ್​ ವಿರುದ್ಧ ರೊಚ್ಚಿಗೆದ್ದಿರುವ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು, ಅವರ ನಿವಾಸದ ಎದುರು ನಿನ್ನೆ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಆದರ್ಶ ನಗರದಲ್ಲಿರುವ ಸಂಜಯ್ ಪಾಟೀಲ್​ ಮನೆ ಎದುರು ಜಮಾಯಿಸಿದ ನೂರಾರು ಮಹಿಳಾ ಕಾರ್ಯಕರ್ತೆಯರು ಸಂಜಯ್ ಪಾಟೀಲ್​ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ ಸಂಜಯ್​ ಪಾಟೀಲ್​ ಮನೆಯಿಂದ ಹೊರಗೆ ಬಂದು ಕ್ಷಮೆ ಕೇಳುವವರೆಗೂ ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು.

ಸಂಜಯ್​ ಪಾಟೀಲ್​ ಹೆಣ್ಣು ಮಕ್ಕಳ ಕುರಿತು ಮಾತನಾಡುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಹಲವು ಬಾರಿ ಹೀಗೆ ಮಾತನಾಡಿದ್ದಾರೆ. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಮತ್ತೆ ಮತ್ತೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ರಾಜಕೀಯವಾಗಿ ಏನು ಬೇಕಾದರೂ ಮಾತನಾಡಲಿ, ಆದರೆ ವೈಯಕ್ತಿಕವಾಗಿ ಅವಹೇಳನ ಮಾಡುವ ರೀತಿ ಮಾತನಾಡಿದರೆ ನಾವು ಸಹಿಸುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಕಾರು ಚಾಲಕನಿಗೆ ಕಪಾಳಮೋಕ್ಷ:ಇದೇ ವೇಳೆ ಸಂಜಯ್​ ಪಾಟೀಲ್​ ಕಾರಿನ ಚಾಲಕ ವಿಡಿಯೋ ಶೂಟ್ ಮಾಡಲು ಮುಂದಾದಾಗ ಆಕ್ರೋಶಗೊಂಡ ಮಹಿಳೆಯರು, ಚಾಲಕನಿಗೆ ತರಾಟೆಗೆ ತೆಗೆದುಕೊಂಡರು. ಇನ್ನೂ‌ ಒಂದು ಹೆಜ್ಜೆ ಮುಂದೆ ಹೋದ ಓರ್ವ ಮಹಿಳೆ ಕಾರು ಚಾಲಕನಿಗೆ ಕಪಾಳಮೋಕ್ಷ ಮಾಡಿದ ಘಟನೆ ಕೂಡ ಈ ವೇಳೆ ನಡೆಯಿತು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಕಾರು ಚಾಲಕನನ್ನು ಸ್ಥಳದಿಂದ ಕರೆದೊಯ್ದು, ಪರಿಸ್ಥಿತಿ ತಿಳಿಗೊಳಿಸಿದರು.

ಇದನ್ನೂ ಓದಿ:ನಾನು ಸಿಎಂ ಆದರೆ ಪ್ರತಿ ಕುಟುಂಬಕ್ಕೆ ಮಾಸಿಕ 5 ಸಾವಿರ ರೂ. ನೀಡುತ್ತೇನೆ: ಶಾಸಕ ಬಸನಗೌಡ ಯತ್ನಾಳ್ - Basangouda Yatnal

Last Updated : Apr 14, 2024, 11:58 AM IST

ABOUT THE AUTHOR

...view details