ಬೆಂಗಳೂರು: ಕಂಪನಿಯೊಂದು ತಯಾರಿಸಿದ ಕಳಪೆ ಗುಣಮಟ್ಟದ ಕೀಟನಾಶಕಗಳನ್ನು ಮಳಿಗೆಯೊಂದರಲ್ಲಿ ಮಾರಾಟಕ್ಕಾಗಿ ಪ್ರದರ್ಶನಕ್ಕಿಟ್ಟಿದ್ದ ಆರೋಪದಲ್ಲಿ ಮಳಿಗೆ ಮಾಲೀಕರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಮಳಿಗೆಯ ಮಾಲೀಕರಾದ ದೇವಾನಂದ್ ಪಾಟೀಲ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅರ್ಜಿದಾರರು ಕಂಪನಿಯ ಉತ್ಪನ್ನಗಳನ್ನು ದಾಸ್ತಾನು ಮಾಡಿದ ಹಾಗೂ ಮಾರಾಟಕ್ಕಾಗಿ ಪ್ರದರ್ಶಿಸಿದ ಅಂಗಡಿ ಮಾಲೀಕರಾಗಿದ್ದಾರೆ. ಆದರೆ, ಉತ್ಪಾದನಾ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಆ ಉತ್ಪನ್ನದ ತಪ್ಪು ಬ್ರಾಂಡ್ಗಾಗಿ ಅವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಮತ್ತು ದಂಡ ವಿಧಿಸಲು ಅವಕಾಶವಿಲ್ಲ ಎಂದು ತಿಳಿಸಿದೆ.
ಕೀಟನಾಶಕ ಕಾಯ್ದೆಯ ಸೆಕ್ಷನ್ 33ರ ಪ್ರಕಾರ ಕಳಪೆ ಕೀಟನಾಶಕ ಉತ್ಪಾದಿಸುವ ಕಂಪನಿಯ ವ್ಯವಹಾರದಲ್ಲಿ ಆ ಕಂಪನಿಯ ಜವಾಬ್ದಾರಿಯುತ ಅಧಿಕಾರಿಗಳನ್ನು ಮಾತ್ರ ಕಂಪನಿಯೊಂದಿಗೆ ಆರೋಪಿಗಳನ್ನಾಗಿ ಹೆಸರಿಸಬಹುದು ಮತ್ತು ಕಾಯ್ದೆಯ ಸೆಕ್ಷನ್ 29 ರ ಅಡಿ ಶಿಕ್ಷಾರ್ಹ ಅಪರಾಧಗಳಿಗಾಗಿ ವಿಚಾರಣೆಯನ್ನು ಎದುರಿಸಲು ಕಂಪನಿಯ ಎಲ್ಲಾ ಉದ್ಯೋಗಿಗಳನ್ನು ಆರೋಪಿಗಳಾಗಿ ಮಾಡಲಾಗುವುದಿಲ್ಲ ಎಂದು ತಿಳಿಸಿದೆ.
ಅಲ್ಲದೆ, ಕೀಟನಾಶಕ ಕಾಯ್ದೆಯ ಸೆಕ್ಷನ್ 30 ರ ಉಪ-ಸೆಕ್ಷನ್ (3) ರ ಅಡಿ ಕೀಟನಾಶಕದ ಆಮದುದಾರ ಅಥವಾ ತಯಾರಕ ಅಥವಾ ವಿತರಣೆಗಾಗಿ ಅವನ ಏಜೆಂಟ್ ಅಲ್ಲದ ವ್ಯಕ್ತಿಗೆ ಕೆಲವು ರಕ್ಷಣೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದೆ.
ಕಳಪೆ ಗುಣಮಟ್ಟದ ಕೀಟನಾಶಕವನ್ನು ದಾಸ್ತಾನು ಮಾಡಿದ ಪ್ರತಿಯೊಬ್ಬ ವ್ಯಕ್ತಿಯು ಆರೋಪಿಯಾಗಿದ್ದು, ಕಾನೂನು ಕ್ರಮಕ್ಕೆ ಗುರಿಯಾಗುತ್ತಾನೆ ಎಂಬುದಾಗಿ ಒಪ್ಪಿಕೊಂಡಲ್ಲಿ ಚಿಲ್ಲರೆ ಅಂಗಡಿ ಮಾಲೀಕನ ಜತೆಗೆ, ಕೀಟ ನಾಶಕವನ್ನು ಖರೀದಿಸುವವರು ಸಹ ಕಾನೂನು ಕ್ರಮ ಎದುರಿಸಬೇಕಾಗಬಹುದು. ಆದ್ದರಿಂದ ಅಂತಹ ವಾದ ಒಪ್ಪಲಾಗದು ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಪರಾಧಿಕ ಮನಸ್ಸು (ಇಚ್ಛಿಸಿ ಅಪರಾಧ ಮಾಡುವುದು) ಸಿದ್ಧಾಂತ ಕ್ರಿಮಿನಲ್ ನ್ಯಾಯಶಾಸ್ತ್ರದ ಮೂಲಾಧಾರವಾಗಿದೆ. ಅಂದರೆ ತಪ್ಪಿತಸ್ಥ ಮನಸ್ಸು ಅಥವಾ ಉದ್ದೇಶವನ್ನು ಹೊಂದಿರುವುದಾಗಿರಲಿದೆ. ಈ ಪ್ರಕರಣದಲ್ಲಿ ಅಂತಹ ಆರೋಪಗಳು ಇಲ್ಲ. ಹೀಗಾಗಿ ಅರ್ಜಿದಾರರ ವಿರುದ್ಧ ಕಾನುನು ಕ್ರಮ ಜರುಗಿಸಲಾಗದು ಎಂದು ಪೀಠ ತಿಳಿಸಿದೆ.