ಕರ್ನಾಟಕ

karnataka

RSS ಕಚೇರಿಗೆ ಪೊಲೀಸರು ಅತಿಕ್ರಮ ಪ್ರವೇಶ, ತನಿಖಾ ಸಮಿತಿ ರಚಿಸಿ: ಪಿ.ರಾಜೀವ್ ಆಗ್ರಹ - P Rajeev

By ETV Bharat Karnataka Team

Published : Sep 16, 2024, 4:11 PM IST

ಪಾಂಡವರಪುರ ಆರ್​ಎಸ್​ಎಸ್ ಕಚೇರಿಗೆ ಪೊಲೀಸರು ಅತಿಕ್ರಮ ಪ್ರವೇಶ ಮಾಡಿದ್ದಾರೆ. ಈ ಘಟನೆ ಕುರಿತು ತನಿಖಾ ಸಮಿತಿ ರಚಿಸಿ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಒತ್ತಾಯಿಸಿದ್ದಾರೆ.

ಪಿ. ರಾಜೀವ್
ಪಿ. ರಾಜೀವ್ (ETV Bharat)

ಪಿ.ರಾಜೀವ್ (ETV Bharat)

ಬೆಂಗಳೂರು: ಪಾಂಡವಪುರ ಆರ್​ಎಸ್​ಎಸ್ ಕಚೇರಿಗೆ ಅತಿಕ್ರಮ ಪ್ರವೇಶ ಮಾಡಿ ಸಂಘದ ಸ್ವಯಂ ಸೇವಕರ ಜೊತೆ ಅನುಚಿತವಾಗಿ ವರ್ತಿಸಿರುವ ಡಿವೈಎಸ್​ಪಿಯನ್ನು ಕೂಡಲೇ ಅಮಾನತು ಮಾಡಬೇಕು ಹಾಗೂ ಈ ಘಟನೆ ಕುರಿತು ತನಿಖಾ ಸಮಿತಿ ರಚಿಸಿ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಪಾಂಡವಪುರ ಆರ್​ಎಸ್​ಎಸ್ ಕಚೇರಿಗೆ ಪೊಲೀಸ್ ಪ್ರವೇಶ ಪ್ರಕರಣ ಖಂಡನೀಯವಾಗಿದೆ. ರಾಜ್ಯದಲ್ಲಿ ಅರಾಜಕತೆ ನೆಲೆಸಿದೆ. ತುಷ್ಟೀಕರಣದ ಪರಾಕಾಷ್ಠೆ ನಡೆಯುತ್ತಿದೆ. ಪಾಂಡವಪುರ ಆರ್​ಎಸ್​ಎಸ್ ಕಚೇರಿಗೆ ಪೊಲೀಸ್ ಅಧಿಕಾರಿ ಪ್ರವೇಶ ಮಾಡಿದ್ದಾರೆ ಸರ್ಚ್ ವಾರಂಟ್ ಇಲ್ಲದೇ ಬಂದಿದ್ದಾರೆ. ಸರ್ಚ್ ವಾರಂಟ್ ಇಲ್ಲದಿದ್ದರೂ ಸ್ಟೇಷನ್ ಡೈರಿಯಲ್ಲಿ ಸೂಕ್ತ ಕಾರಣದ ಬಗ್ಗೆ ಬರೆದು ಬರಬೇಕು. ಆದರೆ, ಪಾಂಡವರಪುರ ಆರ್​ಎಸ್​ಎಸ್ ಕಚೇರಿಗೆ ಪೊಲೀಸರು ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ದೂರಿದರು.

ಪೊಲೀಸರು ದುರ್ವರ್ತನೆ ತೋರಿದ್ದಾರೆ:ಪ್ರವೇಶ ಮಾಡಿದ ಮೇಲೆ ಯಾರನ್ನು ಬಂಧಿಸಿದ್ದಾರೆ?. ಏನನ್ನು ಸೀಜ್ ಮಾಡಿದ್ದಾರೆ?. ಒಂದು ಸಮುದಾಯದ ಓಲೈಕೆ ಉದ್ದೇಶ ಇದರ ಹಿಂದೆ ಇದೆ. ಒಂದು ರಾಷ್ಟ್ರಾಭಿಮಾನಿ ಸಂಸ್ಥೆಯ ಒಳಗೆ ಪೊಲೀಸರು ಯಾವ ಧೈರ್ಯದ ಮೇಲೆ ಪ್ರವೇಶ ಮಾಡಿದರು?. ಇದು ಆರ್​ಎಸ್​ಎಸ್​ಗೆ ಕಳಂಕ ಮೆತ್ತುವ ಸಂಚು ಆರ್​ಎಸ್​ಎಸ್ ಕಚೇರಿಯಲ್ಲಿ ಸ್ವಯಂ ಸೇವಕರ ಜತೆ ಪೊಲೀಸರು ಸರಿಯಾಗಿ ನಡೆದುಕೊಂಡಿಲ್ಲ. ಪೊಲೀಸರು ದುರ್ವರ್ತನೆ ತೋರಿದ್ದಾರೆ ಎಂದರು.

ಪರಶುರಾಮ್ ಸಾವು ಸಹಜ ಅಲ್ಲ:ಯಾದಗಿರಿ ಪಿಎಸ್​ಐ ಪರಶುರಾಮ್​ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಪಿ.ರಾಜೀವ್, ಪರಶುರಾಮ್ ಸಾವಿನ ಬಗ್ಗೆ ಎಫ್‌ಎಸ್‌ಎಲ್ ವರದಿ ಬಂದಿದೆ. ಹೃದಯಾಘಾತ ಅಂತ ವರದಿ ಬಂದಿದೆ, ಸಾವಿಗೆ ಕಾರಣ ಹೃದಯಾಘಾತ ಆಗಿರಬಹುದು. ಆದರೆ, ಹೃದಯಾಘಾತಕ್ಕೆ ಕಾರಣ ಯಾವುದು? ಆತನ ಮೇಲೆ ಆರ್ಥಿಕ ಸಂಕಷ್ಟದ ಹೊರೆ ಹಾಕಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಮಗ ಕಾರಣ. ಇದನ್ನೆಲ್ಲ ತನಿಖಾಧಿಕಾರಿಗಳು ಗಮನಿಸಬೇಕು. ಈ ಥರದ ಪ್ರಕರಣಗಳಲ್ಲಿ ಹಲವು ಸುಪ್ರೀಂಕೋರ್ಟ್ ತೀರ್ಪುಗಳಿವೆ. ತನಿಖೆಯನ್ನು ಪ್ರಾಮಾಣಿಕವಾಗಿ ಮಾಡಲಿ ಎಂದು ಒತ್ತಾಯಿಸಿದರು.

ಹೃದಯಾಘಾತಕ್ಕೆ ದುಷ್ಪ್ರೇರಣೆ ಯಾರು?. ಯಾರ ಒತ್ತಡ ಇತ್ತು?. ಪೊಲೀಸರು ಹಿಡೀತಾರೆ ಅಂತ ಸೇತುವೆಯಿಂದ ಹಾರಿ ವಾಹನ ಸವಾರ ಸತ್ತರೆ ಅದು ಕಸ್ಟೋಡಿಯಲ್ ಸಾವು ಹಾಗೆಯೇ ಪರಶುರಾಮ್ ಸಾವು ಸಹಜ ಅಲ್ಲ. ಪರಶುರಾಮ್ ಪತ್ನಿ ಹೇಳಿಕೆ ಇಲ್ಲಿಯವರೆಗೆ ಪಡೆದಿಲ್ಲ. ಪರಶುರಾಮ್ ಆತ್ಮಹತ್ಯೆ ಪ್ರಕರಣದ ತನಿಖೆ ಸರಿಯಾಗಿ ನಡೀತಿಲ್ಲ. ಪರಶುರಾಮ್ ಪತ್ನಿ ಕೋರ್ಟ್ ಮೊರೆ ಹೋಗಲಿ, ನ್ಯಾಯಾಂಗ ತನಿಖೆಗೆ ಕೇಳಲಿ. ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರನ್ನು ಬಂಧಿಸಲಿಲ್ಲ, ಐ ವಿಟ್ನೆಸ್​ ಇದ್ದರೂ ಬಂಧಿಸಲಿಲ್ಲ ಎಂದು ಆರೋಪಿಸಿದರು.

ಅದೇ ರೀತಿ ಶಾಸಕ ಮುನಿರತ್ನ ಪ್ರಕರಣದಲ್ಲಿ ಐ ವಿಟ್ನೆಸ್ ಯಾರು?. ಆಡಿಯೋ ಸಾಕ್ಷ್ಯ ಆಗಲ್ಲ ಎಫ್‌ಎಸ್‌ಎಲ್ ವರದಿ ಬಂದ ನಂತರ ಬಂಧಿಸಬಹುದಿತ್ತು. ಇದಕ್ಕೆ ಸಮಾನಾಂತರ ನ್ಯಾಯ ಕೊಡೋರು ಯಾರು?. ಪರಶುರಾಮ್ ಕೇಸ್​ಗೆ ಒಂದು ವರ್ತನೆ, ಮುನಿರತ್ನ ಪ್ರಕರಣದಲ್ಲಿ ತನಿಖೆ ಮಾಡದೇ ಬಂಧನ ಆಗಿದೆ. ಇದು ರಾಜಕೀಯ ದ್ವೇಷ ತೋರಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್‌ ಧ್ವಜ ಹಾರಾಟದ ಬಗ್ಗೆ ಸಮಗ್ರ ತನಿಖೆಯಾಗಬೇಕು : ಸಿ.ಟಿ. ರವಿ - MLC C T RAVI

ABOUT THE AUTHOR

...view details