ಕರ್ನಾಟಕ

karnataka

ETV Bharat / state

3 ದಿನ ಅದ್ಧೂರಿ ಕಿತ್ತೂರು ಉತ್ಸವ: ಅನುಮತಿ ಸಿಕ್ಕರೆ ಏರ್ ಶೋ ಆಯೋಜನೆ - ಡಿಸಿ

ಮೂರು ದಿನಗಳ ಕಾಲ ಕಿತ್ತೂರು ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಡಿಸಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.

By ETV Bharat Karnataka Team

Published : 5 hours ago

ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್
ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ (ETV Bharat)

ಬೆಳಗಾವಿ: ಅದ್ಧೂರಿಯಾಗಿ ಕಿತ್ತೂರು ಉತ್ಸವ ಆಚರಿಸಲು ಎಲ್ಲ ರೀತಿಯ ಸಿದ್ಧತೆ ನಡೆಸಿದ್ದೇವೆ. ಚನ್ನಮ್ಮನ 200ನೇ ವಿಜಯೋತ್ಸವದ ಹಿನ್ನೆಲೆಯಲ್ಲಿ ಕಿತ್ತೂರಿನ ಕೋಟೆಯ ಆವರಣದಲ್ಲಿ‌ ಅ‌.23, 24 ಮತ್ತು 25ರಂದು ಮೂರು ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ 22ರಂದು ಬೆಳಗಾವಿಯಲ್ಲೂ ರಸಮಂಜರಿ ಆಯೋಜಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶಿಷ್ಟಾಚಾರ, ವಸತಿ, ಸಾರಿಗೆ, ವೇದಿಕೆ ಸೇರಿ ಒಟ್ಟು 21 ಸಮಿತಿಗಳನ್ನು ರಚಿಸಲಾಗಿದೆ. ಈಗಾಗಲೇ ಎಲ್ಲ ಸಮಿತಿಗಳ ಸಭೆ ಮಾಡಲಾಗಿದೆ. ಸರ್ಕಾರದಿಂದ ಉತ್ಸವ ಆಚರಿಸಲು 5 ಕೋಟಿ ರೂ ಅನುದಾನ ಬಿಡುಗಡೆ ಆಗಿದೆ. ಕೋಟೆ ಆವರಣದಲ್ಲಿ ಸ್ವಚ್ಛತೆ ಕೈಗೊಂಡಿದ್ದೇವೆ. ಪೆಂಡಾಲ್, ಟೆಂಟ್ ಹಾಕಲು ಗುತ್ತಿಗೆ ನೀಡಿದ್ದೇವೆ. ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು.

ಡಿಸಿ ಮೊಹಮ್ಮದ್ ರೋಷನ್ (ETV Bharat)

ಮೂರು ದಿನ ಕಿತ್ತೂರಲ್ಲಿ ರಸಮಂಜರಿ ಕಾರ್ಯಕ್ರಮಗಳು ನಡೆಯಲಿದ್ದು, ಚನ್ನಮ್ಮನ ಹುಟ್ಟೂರು ಕಾಕತಿಯಲ್ಲೂ ಒಂದು ದಿನ ಉತ್ಸವ ನಡೆಯಲಿದೆ. ಇದರ ಜೊತೆಗೆ ಅ.22ರಂದು ಬೆಳಗಾವಿ ನಗರದಲ್ಲೂ ಸಾಯಂಕಾಲ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಸಾಧುಕೋಕಿಲ ಮತ್ತು ಖ್ಯಾತ ಗಾಯಕ ಕುನಾಲ್ ಗಾಂಜಾವಾಲಾ ಕಾರ್ಯಕ್ರಮ ನಡೆಸಿ‌ ಕೊಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಕಿತ್ತೂರಲ್ಲಿ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರಿಗಮಪ ತಂಡ, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ಅರ್ಮಾನ್ ಮಲಿಕ್ ಅವರು ಜನರಿಗೆ ಮನರಂಜನೆ ನೀಡಲಿದ್ದಾರೆ. ವಿಶೇಷ ಕಾರ್ಯಕ್ರಮ ಮಾಡಲು ಪ್ರಯತ್ನಿಸುತ್ತಿದ್ದು, ಏರ್ ಶೋ ಆಯೋಜಿಸಲು ರಾಜ್ಯ ಸರ್ಕಾರದಿಂದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರು ಕೇಂದ್ರದ ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ದಾರೆ. ಬೇಗನೆ ಪತ್ರಕ್ಕೆ ಉತ್ತರ ಬಂದು ಅನುಮತಿ ಸಿಗುವ ವಿಶ್ವಾಸವಿದೆ. ಇನ್ನು ಕಿತ್ತೂರಿನಲ್ಲಿ ನಡೆಯುವ ಕುಸ್ತಿ ಅಖಾಡ ಪ್ರದೇಶದಲ್ಲಿ ಏರ್ ಶೋ ಹಮ್ಮಿಕೊಳ್ಳಲು ವ್ಯವಸ್ಥೆ ಮಾಡುತ್ತಿದ್ದೇವೆ. ಅದೇ ರೀತಿ ಸಾಂಬ್ರಾ ವಿಮಾನ ನಿಲ್ದಾಣದ ಅಧಿಕಾರಿಗಳ ಜೊತೆಗೂ ಮಾತುಕತೆ ನಡೆಸಿದ್ದೇವೆ. ಇದರ ಜೊತೆಗೆ ಬೇರೆ ರಾಜ್ಯಗಳ ತಿಂಡಿ ತಿನಿಸುಗಳನ್ನು ಇಲ್ಲಿನ ಜನರಿಗೆ ಪರಿಚಯಿಸಲು ಅನ್ನೋತ್ಸವ ಕೂಡ ಆಯೋಜಿಸಲಿದ್ದೇವೆ. ಜಲಕ್ರೀಡೆಗಳೂ ನಡೆಯಲಿವೆ ಎಂದು ಮೊಹಮ್ಮದ್ ರೋಷನ್ ತಿಳಿಸಿದರು.

ಉತ್ಸವಕ್ಕೆ ರಾಷ್ಟ್ರ ಮಟ್ಟದ ಸಾಧಕರನ್ನು ಆಹ್ವಾನಿಸುವ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿ, ಟಿ20 ಮಹಿಳಾ ವಿಶ್ವಕಪ್ ಮತ್ತು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳು ನಡೆಯುತ್ತಿದ್ದು, ಈಗಾಗಲೇ ನಾವು ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್, ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಸೈನಾ ನೇಹ್ವಾಲ್, ಪಿ.ವಿ.ಸಿಂಧು ಅವರನ್ನು ಅವರ ಮ್ಯಾನೇಜರ್‌ಗಳ ಮೂಲಕ ಸಂಪರ್ಕಿಸಿದ್ದೇವೆ. ಅವರು ಸಮಯ ಕೊಟ್ಟರೆ ಉತ್ಸವಕ್ಕೆ ಕರೆಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಧಾರವಾಡ: ಹನಿಟ್ರ್ಯಾಪ್ ಮಾಡುತ್ತಿದ್ದ ನಾಲ್ವರು ಸೆರೆ, ಚಿನ್ನಾಭರಣ ವಶಕ್ಕೆ

ABOUT THE AUTHOR

...view details