ಕರ್ನಾಟಕ

karnataka

ETV Bharat / state

ಸಿಎಂ ಸಿದ್ದರಾಮಯ್ಯ ಪತ್ನಿಗೆ ಸೇರಿದ ನಿವೇಶನದಲ್ಲಿ ಬಿಜೆಪಿ ರಾಜಕೀಯ: ಎ.ಎಸ್.ಪೊನ್ನಣ್ಣ - MUDA Plot Allotment

ಕಳೆದ‌ ಎರಡು ಮೂರು ದಿನಗಳಿಂದ ಪ್ರತಿಪಕ್ಷಗಳು ಮುಡಾ ಹಗರಣ ವಿಚಾರ ಪ್ರಸ್ತಾಪ ಮಾಡುತ್ತಿವೆ. ಸಿಎಂ ಪತ್ನಿಗೆ ಪರಿಹಾರ ನೀಡಿದ ವಿಚಾರದಲ್ಲಿ ಹಗರಣ ದೊಡ್ಡದಾಗಿದೆ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ. ಬಿಜೆಪಿಯವರು ದುರುದ್ದೇಶದ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಆರೋಪಿಸಿದರು.

By ETV Bharat Karnataka Team

Published : Jul 5, 2024, 7:20 AM IST

Updated : Jul 5, 2024, 7:47 AM IST

CM SIDDARAMAIAH  AS PONNANNA  MUDA PLOT ALLOTMENT  Bengaluru
ಎ.ಎಸ್.ಪೊನ್ನಣ್ಣ (ETV Bharat)

ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮಾತು (ETV Bharat)

ಬೆಂಗಳೂರು: ''ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ನೀಡಲಾಗಿರುವ ನಿವೇಶನ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡಲು ಹೊರಟಿದೆ'' ಎಂದು ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ನಿವೇಶನ ಹಂಚಿಕೆಯನ್ನೇ ದೊಡ್ಡ ಹಗರಣದ ರೀತಿಯಲ್ಲಿ ಬಿಂಬಿಸಲು ಹೊರಟಿದೆ'' ಎಂದು ತಿರುಗೇಟು ನೀಡಿದರು. ''ಕಳೆದ‌ ಎರಡು ಮೂರು ದಿನಗಳಿಂದ ಪ್ರತಿಪಕ್ಷಗಳು ಮುಡಾ ಹಗರಣ ವಿಚಾರ ಪ್ರಸ್ತಾಪ ಮಾಡುತ್ತಿವೆ. ಸಿಎಂ ಪತ್ನಿಗೆ ಪರಿಹಾರ ನೀಡಿದ ವಿಚಾರದಲ್ಲಿ ಹಗರಣ ದೊಡ್ಡದಾಗಿದೆ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ. ಮುಖ್ಯವಾಗಿ ಇದೊಂದು ಹಗರಣ ಎಂದು ತೋರಿಸುವ ಪ್ರಯತ್ನ ಆಗುತ್ತಿದೆ. ಬಿಜೆಪಿಯವರು ದುರುದ್ದೇಶದ ರಾಜಕಾರಣ ಮಾಡುತ್ತಿದ್ದಾರೆ'' ಎಂದು ದೂರಿದರು.

ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮಾತನಾಡಿದರು. (ETV Bharat)

''ನಾಗರಿಕರು ಆಸ್ತಿ ಕಳೆದುಕೊಂಡಾಗ ಅದಕ್ಕೆ ಪರಿಹಾರ ಪಡೆಯುವುದು ಮೂಲಭೂತ ಹಕ್ಕು. ಅದು ಸಿಎಂ ಧರ್ಮಪತ್ನಿಯೇ ಆಗಲಿ, ಯಾರೇ ಆಗಲಿ, ಅವರು ಕಳೆದುಕೊಂಡ ಆಸ್ತಿಗೆ ಪರಿಹಾರ ಪಡೆಯಬಹುದು'' ಎಂದು ಅವರು ಹೇಳಿದರು. ''1998 ರಲ್ಲಿ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿತ್ತು. ನಿಂಗಣ್ಣ ಎನ್ನುವವರಿಗೆ ಆ ಜಮೀನು ಸೇರಿತ್ತು. 2004ರಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ಸೇಲ್ ಡೀಡ್ ಆಗಿತ್ತು. 3.16 ಗುಂಟೆ ಜಮೀನನ್ನು ಮುಖ್ಯಮಂತ್ರಿಗಳ ಪತ್ನಿ ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿ ಅದನ್ನು ಪಾರ್ವತಿ ಅವರಿಗೆ ವರ್ಗಾವಣೆ ಮಾಡಿದ್ದರು. 2005ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಅದನ್ನು ವ್ಯವಸಾಯೇತರ ಜಮೀನಾಗಿ ಪರಿವರ್ತಿಸಿದ್ದರು. 2010ರಲ್ಲಿ ದಾನ ಪತ್ರದ ಮೂಲಕ ಅವರ ಸಹೋದರಿ ಪಾರ್ವತಿಯವರಿಗೆ ವರ್ಗಾವಣೆ ಆಗಿತ್ತು'' ಎಂದು ಪೊನ್ನಣ್ಣ ಮಾಹಿತಿ ನೀಡಿದರು.

''2010ರಲ್ಲಿ ಪಾರ್ವತಿಯವರಿಗೆ ಸೇರಿದ್ದ ಜಮೀನನ್ನು ಮುಡಾದವರು ನಿವೇಶನಕ್ಕಾಗಿ ಬಳಸಿಕೊಂಡಿರುತ್ತಾರೆ. 2014ರಲ್ಲಿ ಈ ಬಗ್ಗೆ ಮುಡಾದವರಿಗೆ ಪಾರ್ವತಿಯವರು ಪತ್ರ ಬರೆದಿದ್ದಾರೆ. ಮುಡಾದವರು ತಮ್ಮ ಜಮೀನು ಬಳಸಿಕೊಂಡಿದ್ದಾರೆ. ಅದಕ್ಕೆ ಪರಿಹಾರ ನೀಡಿ ಎಂದು ಕೇಳಿದ್ದಾರೆ. ಹೀಗಾಗಿ ಇದು ಬದಲಿ ನಿವೇಶನ ಅಲ್ಲ, ಇದು ಪರಿಹಾರ ರೂಪದ ನಿವೇಶನ. ಪರಿಹಾರದ ರೂಪದಲ್ಲಿ ಕೊಡಬೇಕಾದ ಹಣದ ಬದಲು ನಿವೇಶನ ನೀಡಲಾಗಿದೆ. 1-11-2014ರಲ್ಲಿ 50:50 ನಿಯಮ ಪ್ರಕಾರವೂ ಪರಿಹಾರ ನೀಡಿಲ್ಲ'' ಎಂದು ವಿವರಿಸಿದರು.

''ಪಾರ್ವತಿಯವರು ಕಳೆದುಕೊಂಡಿರುವ ಜಮೀನಿನ ಮೌಲ್ಯ ಸುಮಾರು 57 ಕೋಟಿ ರೂ. ಬೆಲೆ ಬಾಳುತ್ತಿತ್ತು. ಆದರೆ, ಸಿಕ್ಕಿರುವ ಮೌಲ್ಯ 15 ರಿಂದ 16 ಕೋಟಿ ರೂ. ಆಗಿದೆ. ಮುಡಾ ಪ್ರಕರಣ ಸಂಬಂಧ ಎಲ್ಲವೂ ಪಾರದರ್ಶಕ ರೀತಿಯಲ್ಲೇ ನಡದಿದೆ. ಯಾವುದೇ ಹಗರಣ ನಡೆದಿಲ್ಲ. ಈ ಬಗ್ಗೆ ತನಿಖೆ ನಡೆಸುವ ಅವಶ್ಯಕತೆಯಿಲ್ಲ'' ಎಂದು ಹೇಳಿದರು.

ಇದನ್ನೂ ಓದಿ:ಜಾಗ ಕೊಟ್ಟಿರುವುದು ತಪ್ಪೆನ್ನುವುದಾದರೆ ನಮಗೆ ಪರಿಹಾರ ಕೊಡಲಿ: ಸಿಎಂ ಸಿದ್ದರಾಮಯ್ಯ - MUDA Plot Allotment

Last Updated : Jul 5, 2024, 7:47 AM IST

ABOUT THE AUTHOR

...view details