ಜನಾರ್ದನ ರೆಡ್ಡಿ (Etv Bharat) ಕೊಪ್ಪಳ:"ಲೇ ತಮ್ಮಾ ತಂಗಡಗಿ, ನಿಮ್ಮ ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ನನ್ನನ್ನು ಏನೂ ಮಾಡಲು ಆಗಿಲ್ಲ. ಇನ್ನು ನೀ ಯಾವ ಲೆಕ್ಕ ನನಗೆ?" ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಟಾಂಗ್ ಕೊಟ್ಟಿದ್ದಾರೆ.
ಕೊಪ್ಪಳದ ಕಾರಟಗಿಯಲ್ಲಿ ಇಂದು ಸಂಜೆ ಹಮ್ಮಿಕೊಂಡಿದ್ದ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಸಚಿವ ಶಿವರಾಜ ತಂಗಡಗಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಕುರಿತು, ರೆಡ್ಡಿಯನ್ನು ಮುಂದೊಂದು ದಿನ ಬೆತ್ತಲೆ ಮಾಡುತ್ತೇನೆ ಎಂದಿದ್ದರು. ಈ ಹೇಳಿಕೆಗೆ ಇಂದು ರೆಡ್ಡಿ ತಿರುಗೇಟು ನೀಡಿದ್ದಾರೆ.
"ಈ ಹಿಂದೆ ಬಿಜೆಪಿಯಲ್ಲಿದ್ದಾಗ ನನ್ನಿಂದ ದುಡ್ಡು ತಗೊಂಡು ತಂಗಡಗಿ ಚುನಾವಣೆಯಲ್ಲಿ ಗೆದ್ದಿದ್ದ. ಆತನನ್ನು ಮಂತ್ರಿ ಮಾಡಿದ್ದು ನಾನು. ಆದರೆ ಅಧಿಕಾರದ ಮದದಿಂದ ಈ ರೀತಿ ವರ್ತಿಸುತ್ತಿದ್ದಾನೆ. ಮೋದಿ ಮೋದಿ ಅಂದ್ರೆ ಅವರ ಕಪಾಳಕ್ಕೆ ಹೊಡೀಬೇಕು ಅಂತ ಹೇಳಿದ್ದಾನೆ. ತಮ್ಮಾ ತಂಗಡಗಿ, ನಾನು ಕಾರಟಗಿ ಬಸ್ ನಿಲ್ದಾಣದ ಮುಂದೆ ನಿಂತಿದ್ದೇನೆ. ಕಾರ್ಯಕರ್ತರು ಮೋದಿ ಮೋದಿ ಅಂತ ಕೂಗುತ್ತಿದ್ದಾರೆ. ಧಮ್ ಇದ್ರೆ ಬಂದು ಕಪಾಳಕ್ಕೆ ಹೊಡೀತಿಯಾ?" ಎಂದು ಸವಾಲು ಹಾಕಿದರು.
"ತಂಗಡಗಿ ಆಫ್ಟರ್ ಆಲ್ ಓರ್ವ ಮಂತ್ರಿ. ನೀನು ಮೋದಿ ಬಗ್ಗೆ ಮಾತಾಡ್ತಿಯಾ?. ಈಗಾಗಲೇ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ತಂಗಡಗಿ ಮಂತ್ರಿ ಸ್ಥಾನ ಕಿತ್ತು ಹಾಕಲು ರೆಡಿಯಾಗಿದ್ದಾನೆ. ನೀವು ಯಾರೂ ತಂಗಡಗಿಗೆ ಹೆದರಬೇಡಿ" ಎಂದು ಶಿವರಾಜ್ ತಂಗಡಗಿ ಸ್ವಕ್ಷೇತ್ರದಲ್ಲಿ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:'ಡರೋ ಮತ್, ಭಾಗೋ ಮತ್': ಅಮೇಠಿ ಬದಲು ರಾಯ್ ಬರೇಲಿಯಲ್ಲಿ ರಾಹುಲ್ ಸ್ಪರ್ಧೆಗೆ ಮೋದಿ ಲೇವಡಿ - Narendra Modi Campaign