ಬೆಂಗಳೂರು/ಬೆಳಗಾವಿ: ಉತ್ತರ ಕರ್ನಾಟಕ ಭಾಗಕ್ಕೆ ಅಭಿವೃದ್ಧಿಯಲ್ಲಷ್ಟೇ ಅಲ್ಲದೆ ರಾಜಕೀಯವಾಗಿಯೂ ಅನ್ಯಾಯವಾಗಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಇಂದು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ದಕ್ಷಿಣ ಕರ್ನಾಟಕದ ವಿಚಾರವಾಗಿ ಅಸಹನೆ ವ್ಯಕ್ತಪಡಿಸುತ್ತಿಲ್ಲ. ಆದರೆ ಸಮಾನ ಅಭಿವೃದ್ಧಿ ಆಗಬೇಕು. ಗ್ಯಾರಂಟಿ ನೀಡುವ ಬದಲಾಗಿ ನೀರಾವರಿ ಕಲ್ಪಿಸಿ ಎಲ್ಲಾ ಕೈಗಳಿಗೆ ಉದ್ಯೋಗ ಕೊಡಿ. ಸಚಿವ ಸಂಪುಟ ಸಭೆಯಲ್ಲಿರುವ ಸಚಿವರಲ್ಲೂ ಮೂರ್ನಾಲ್ಕು ಮಂದಿಯಷ್ಟೇ ಚರ್ಚೆಯಲ್ಲಿ ತೊಡಗಿಸಿಕೊಳ್ಳುತಾರೆ. ಉಳಿದವರು ಮೌನಿಗಳು. ಸುವರ್ಣಸೌಧವನ್ನು ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟಿಸಲಾಗಿದೆ. ಯಾವ ಕಚೇರಿಯೂ ಇಲ್ಲಿಗೆ ಸ್ಥಳಾಂತರಗೊಂಡಿಲ್ಲ. ಕೃಷ್ಣಾ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಇಲ್ಲಿಗೆ ಪ್ರವಾಸಕ್ಕೆ ಬಂದಂತೆ ಬಂದು ಹೋಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗಕ್ಕೆ ತನ್ನದೇ ಆದ ವೈಭೋಗವಿದೆ. ಕರಾವಳಿ ಭಾಗಕ್ಕೆ ಹೆಚ್ಚು ಆದಾಯ ಇದೆ. ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಬರಕ್ಕೆ ತುತ್ತಾಗಿ ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿಯಲ್ಲಿರುವ ಕುಟುಂಬಗಳಿವೆ ಎಂದು ಹೇಳಿದರು.
ದಕ್ಷಿಣ ಕರ್ನಾಟಕದಲ್ಲಿ 17 ಜಿಲ್ಲೆಗಳಿದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ 14 ಜಿಲ್ಲೆಗಳಿವೆ. ಇನ್ನೂ ನಾಲ್ಕೈದು ಜಿಲ್ಲೆಗಳು ಹೆಚ್ಚುವರಿಯಾಗಿ ವಿಂಗಡಣೆಯಾಗಬೇಕಿದೆ. ನಮ್ಮ ಭಾಗದಲ್ಲಿ 96 ಮಂದಿ ಶಾಸಕರಿದ್ದರೆ, ದಕ್ಷಿಣ ಕರ್ನಾಟಕದಲ್ಲಿ 121 ಶಾಸಕರಿದ್ದಾರೆ. ಸಂಸದರ ಪೈಕಿ ನಮ್ಮಲ್ಲಿ 12 ಮಂದಿ ಇದ್ದರೆ ದಕ್ಷಿಣ ಕರ್ನಾಟಕದಲ್ಲಿ 16 ಮಂದಿ ಇದ್ದಾರೆ. ವಿಧಾನ ಪರಿಷತ್ ಸದಸ್ಯರ ಪೈಕಿ ದಕ್ಷಿಣ ಕರ್ನಾಟಕದಲ್ಲಿ 53 ಮಂದಿ ಇದ್ದರೆ, ಉತ್ತರ ಕರ್ನಾಟಕದಲ್ಲಿ 22 ಸದಸ್ಯರು ಇದ್ದಾರೆ. ರಾಜ್ಯಸಭಾ ಸದಸ್ಯರ ಪೈಕಿ 16 ಮಂದಿ ದಕ್ಷಿಣ ಕರ್ನಾಟಕ ಭಾಗದವರು, ಉತ್ತರ ಕರ್ನಾಟಕದಲ್ಲಿ ಇಬ್ಬರು ಮಾತ್ರ ಇದ್ದಾರೆ. ಮತ ಹಾಕುವವರು ನಾವು, ಅಧಿಕಾರ ಅನುಭವಿಸುವವರು ಆ ಭಾಗದ ಜನ ಎಂಬಂತಾಗಿದೆ ಎಂದರು.
ಕಂದಾಯ ಗ್ರಾಮಗಳಲ್ಲೂ ಅನ್ಯಾಯವಾಗಿದೆ. ದಕ್ಷಿಣ ಕರ್ನಾಟಕದಲ್ಲಿ 21,160 ಗ್ರಾಮಗಳಿದ್ದರೆ, ಉತ್ತರ ಕರ್ನಾಟಕದಲ್ಲಿ 9,571 ಗ್ರಾಮಗಳಿವೆ. ಅಲ್ಲಿ 3,364 ಗ್ರಾಮ ಪಂಚಾಯಿತಿಗಳಿದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ 2,792 ಗ್ರಾಮ ಪಂಚಾಯಿತಿಗಳಿವೆ. ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಅಜಗಜಾಂತರ ವ್ಯತ್ಯಾಸಗಳಿವೆ. ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಕಾನೂನು, ವೈದ್ಯಕೀಯ ಆಸ್ಪತ್ರೆಗಳು ಎಲ್ಲದರಲ್ಲೂ ದಕ್ಷಿಣ ಕರ್ನಾಟಕವೇ ಮೇಲುಗೈ ಸಾಧಿಸಿದೆ ಎಂದು ತಿಳಿಸಿದರು.