ಕರ್ನಾಟಕ

karnataka

ತುಂಗಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ಸಚಿವ ಶಿವರಾಜ್ ತಂಗಡಗಿ ಸೂಚನೆ - Minister Shivaraj Tangadagi

By ETV Bharat Karnataka Team

Published : Jul 18, 2024, 8:25 PM IST

ತುಂಗಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಸಚಿವ ಶಿವರಾಜ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

minister-shivaraj-tangadagi
ಸಚಿವ ಶಿವರಾಜ್ ತಂಗಡಗಿ (ETV Bharat)

ಬೆಂಗಳೂರು :ಉತ್ತಮ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ‌ ಒಳ ಹರಿವು ಬರುತ್ತಿರುವ ಹಿನ್ನೆಲೆ ಶುಕ್ರವಾರ ಬೆಳಗ್ಗೆಯಿಂದ ನಾಲೆಗಳಿಗೆ ನೀರು ಹರಿಸುವಂತೆ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಸಂಬಂಧ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಸಕ್ತ ಸಾಲಿನಲ್ಲಿ ಮುಂಗಾರು - ಹಂಗಾಮಿನ ಮಳೆ ಚೆನ್ನಾಗಿ ಆಗುತ್ತಿರುವುದರಿಂದ ಜಲಾನಯನ ಪ್ರದೇಶದಲ್ಲಿ‌ ಸಾಕಷ್ಟು ಒಳ ಹರಿವು ಪ್ರಾರಂಭವಾಗಿದೆ. ಜುಲೈ 18ರ ವೇಳೆಗೆ ಜಲಾಶಯದಲ್ಲಿ 46.802 ಟಿಎಂಸಿ ನೀರು ಸಂಗ್ರಹ ಇದ್ದು, ಒಳ ಹರಿವು 104060 ಕ್ಯೂಸೆಕ್ ಇದೆ ಎಂದು ಮಾಹಿತಿ ನೀಡಿದ್ದಾರೆ.

ಇದೇ ಪ್ರಮಾಣದಲ್ಲಿ ಒಳ ಹರಿವು ಮುಂದುವರೆದಲ್ಲಿ ವಾರದಲ್ಲಿ ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ. ಸದ್ಯಕ್ಕೆ ಒಳ ಹರಿವು ಉತ್ತಮವಾಗಿರುವ ಹಿನ್ನೆಲೆ ಸಭೆ ನಡೆಸದೆ ನಾಲೆಗಳಿಗೆ ನೀರು ಹರಿಸಲು ಸೂಚಿಸಲಾಗಿದ್ದು,‌ ಶೀಘ್ರದಲ್ಲೇ ಐಸಿಸಿ ಸಭೆಗೆ ದಿನಾಂಕ ನಿಗದಿಪಡಿಸಲಾಗುವುದು. ರೈತರ ಹಿತ ದೃಷ್ಟಿಯಿಂದ ಮುಂಗಡವಾಗಿ ನೀರು ಬಿಡುಗಡೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಡದಂಡೆ ಮುಖ್ಯ ಕಾಲುವೆಗೆ ಜುಲೈ 19 ರಿಂದ 4100 ಕ್ಯೂಸೆಕ್​​ನಂತೆ, ಬಲದಂಡೆ ಕೆಳಮಟ್ಟದ ವಿತರಣಾ ಕಾಲುವೆಗೆ ಜು.19 ರಿಂದ‌ 650 ಕ್ಯೂಸೆಕ್​ನಂತೆ, ಬಲದಂಡೆ ಮೇಲ್ಮಟ್ಟದ ವಿತರಣಾ ಕಾಲುವೆಗೆ ಜು.19 ರಿಂದ 1300 ಕ್ಯೂಸೆಕ್​ನಂತೆ ಹಾಗೂ ಕಾರ್ಖಾನೆಗಳಿಗೆ 60 ಕ್ಯೂಸೆಕ್​ನಂತೆ ನೀರು ಹರಿಸಲಾಗುವುದು. ಇನ್ನು ರಾಯಬಸವಣ್ಣ ಕಾಲುವೆಗೆ ಈಗಾಗಲೇ ಜೂ.1 ರಿಂದ 180 ಕ್ಯೂಸೆಕ್​ನಂತೆ ನೀರು ಹರಿಸಲಾಗುತ್ತಿದೆ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಮಾಹಿತಿ ನೀಡಿದ್ದಾರೆ.

ತುಂಗಭದ್ರಾ ಜಲಾಶಯದ ನೀರಿನ ಮಟ್ಟ
ಡ್ಯಾಂ ಸಾಮರ್ಥ್ಯ- 105.788 ಟಿಎಂಸಿ
ಸದ್ಯದ ಸಂಗ್ರಹ - 46.802 ಟಿಎಂಸಿ
ಒಳ ಹರಿವು - 104060 ಕ್ಯೂಸೆಕ್​
ಹೊರ ಹರಿವು - 300 ಕ್ಯೂಸೆಕ್​

ಕಳೆದ ವರ್ಷ ಇದೇ ಸಮಯಕ್ಕೆ:
ಸಂಗ್ರಹ - 10.947 ಟಿಎಂಸಿ
ಒಳ ಹರಿವು - 11425 ಕ್ಯೂಸೆಕ್​
ಹೊರ ಹರಿವು - 262 ಕ್ಯೂಸೆಕ್​

ಇದನ್ನೂ ಓದಿ :ಮುಂದುವರಿದ ವರುಣನ ಆರ್ಭಟ: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಹೀಗಿದೆ - WATER STATUS IN RESERVOIRS

ABOUT THE AUTHOR

...view details