ಕರ್ನಾಟಕ

karnataka

ಕಾನೂನಾತ್ಮಕವಾಗಿ ಎಲ್ಲದಕ್ಕೂ ತಾರ್ಕಿಕ ಅಂತ್ಯ, ಬಿಜೆಪಿಯವರಿಗೆ ಅನುಮಾನ ಬೇಡ: ಪ್ರಿಯಾಂಕ್​ ಖರ್ಗೆ - Covid Scam Report

By ETV Bharat Karnataka Team

Published : Sep 2, 2024, 12:44 PM IST

ಕೋವಿಡ್ ತನಿಖಾ ವರದಿಯಲ್ಲೇನಿದೆ ಎಂದು ಅವರಿಗೆ ಹೇಗೆ ಗೊತ್ತಾಗುತ್ತದೆ?, ನಾವು ಮಾಜಿ ಸಿಎಂ, ಸಚಿವರ ಹೆಸರು ಹೇಳಿದ್ವಾ?, ಕುಂಬಳಕಾಯಿ ಕಳ್ಳ ಅಂದ್ರೆ ಅವರೇಕೆ ಹೆಗಲು ಮುಟ್ಟಿ ನೋಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

Minister PRIYANK KHARGE Reaction On covid Scam Report
ಸಚಿವ ಪ್ರಿಯಾಂಕ್​ ಖರ್ಗೆ (ETV Bharat)

ಬೆಂಗಳೂರು:ಬಿಜೆಪಿ ಸರ್ಕಾರದ ಅವಧಿಯಲ್ಲಿ 21 ಹಗರಣಗಳು ನಡೆದಿದ್ದು, ಅವುಗಳ ಕುರಿತು ಸೂಕ್ತ ತನಿಖೆ ನಡೆಸುತ್ತೇವೆ ಎಂದು ಸದನದಲ್ಲಿ ಮುಖ್ಯಮಂತ್ರಿ ತಿಳಿಸಿರುವುದು ಕೇವಲ ಟ್ರೇಲರ್​ ಅಷ್ಟೇ. ಅವುಗಳನ್ನು ನಾವು ಕಾನೂನಾತ್ಮಕವಾಗಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಬಿಜೆಪಿಯವರಿಗೂ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸಚಿವ ಪ್ರಿಯಾಂಕ್​ ಖರ್ಗೆ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಒತ್ತಡ ಹಾಕಿ ಕೋವಿಡ್​ ಹಗರಣ ವರದಿ ತರಿಸಿಕೊಳ್ಳಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಕೋವಿಡ್​​ ಹಗರಣದ ವರದಿಯನ್ನು ಒತ್ತಡ ಹಾಕಿ ತರಿಸಿಕೊಂಡಿಲ್ಲ. ಈ ಸಂಬಂಧ ಬೇಗ ತನಿಖೆ ಮುಗಿಸಿ ಎಂದು ತನಿಖಾ ಸಂಸ್ಥೆಗಳಿಗೆ ತಿಳಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಕೋವಿಡ್​ ಹಗರದಲ್ಲಿ ನಾವು ಮಧ್ಯಂತರ ವರದಿ ನೀಡಿ ಎಂದು ಒತ್ತಡ ಹಾಕಿಲ್ಲ. ವರದಿಯಲ್ಲಿ ಏನಿದೆ ಎಂದೂ ಕೂಡ ನಮಗೆ ಗೊತ್ತಿಲ್ಲ. ಇನ್ನು, ಅವರಿಗೆ ಹೇಗೆ ಗೊತ್ತಾಗುತ್ತದೆ? ನಾವು ಮಾಜಿ ಸಿಎಂ, ಸಚಿವರ ಹೆಸರು ಹೇಳಿದ್ದೇವಾ?. ಕುಂಬಳಕಾಯಿ ಕಳ್ಳ ಎಂದರೆ ಅವರೇಕೆ ಹೆಗಲು ಮುಟ್ಟಿಕೊಂಡು ನೋಡುತ್ತಾರೆ? ಎಂದು ವಾಗ್ದಾಳಿ ನಡೆಸಿದರು.

ಕೆಲವು ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಏಜೆನ್ಸಿಗಳು ಬಂದು ಕೈಯಾಡಿಸುತ್ತಿವೆ. ಆದರೆ, ನಾವು ಎಲ್ಲವನ್ನೂ ಕಾನೂನಾತ್ಮಕವಾಗಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಕೋವಿಡ್ ಹಗರಣಕ್ಕೆ ಸಂಬಂಧಿಸಿದ ಮಧ್ಯಂತರ ವರದಿ ಕೊಟ್ಟಿದ್ದಾರೆ. ಮೇಲ್ನೋಟಕ್ಕೆ ಬಹಳಷ್ಟು ಪ್ರಕ್ರಿಯೆ ನಷ್ಟವಾಗಿರುವುದು ಕಂಡಿದೆ. ಅಧಿಕಾರಿಗಳಿಂದಲೂ ಕೂಡ ಲೋಪವಾಗಿದೆ. ಅಕ್ರಮ ನಡೆದಿದೆ ಎಂದು ವರದಿ ತಯಾರಿಸಿದವರು ಸಹಜವಾಗಿ ಹೇಳಿದ್ದರು. ಅಧಿಕೃತವಾಗಿ ಮಧ್ಯಂತರ ವರದಿಯಲ್ಲೇನಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ ಎಂದರು.

ಕೋವಿಡ್ ಹಗರಣದಲ್ಲಿ ಅಧಿಕಾರಿಗಳು ಸಾಕಷ್ಟು ಸಾಕ್ಷ್ಯ ನಾಶ ಮಾಡಿರಬಹುದು. ಫೈಲ್​​ಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿರಬಹುದು. ಹೀಗಾಗಿ ತನಿಖೆಗೆ ಅಧಿಕಾರಿಗಳ ಸಹಕಾರ ಸಿಗದಿದ್ದರೆ ವಿಳಂಬ ಆಗಬಹುದು. ಮಧ್ಯಂತರ ವರದಿ ಸಚಿವ ಸಂಪುಟದಲ್ಲಿ ಪ್ರಸ್ತಾಪವಾಗಲಿ. ಯಾರಿಗೂ ಈ ಬಗ್ಗೆ ಅನುಮಾನ ಬೇಡ, ನಾವು ಬಹಳ ಗಂಭೀರವಾಗಿದ್ದೇವೆ ಎಂದು ತಿಳಿಸಿದರು.

ರಾಜ್ಯಪಾಲರು ನಮ್ಮ ಪ್ರಕರಣದಲ್ಲಿ ವಿವರಣೆ ಕೇಳಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಅವರು ನಮ್ಮ ವಿಚಾರದಲ್ಲಿ ಮಾತ್ರ ಬೆಳಕಿನ ವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ದಾಖಲೆಗಳು ಅವರ ಟೇಬಲ್‌ನಲ್ಲಿ ಕೊಳೆಯುತ್ತಿವೆ‌. ಅದಕ್ಕೇನೂ ವಿವರಣೆ ಕೇಳಿಲ್ಲ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಇದನ್ನೂ ಓದಿ: ಕೋವಿಡ್ ಹಗರಣ ಆರೋಪ ಕಾನೂನಾತ್ಮಕವಾಗಿ ಎದುರಿಸುವೆ: ಸಂಸದ ಸುಧಾಕರ್

ABOUT THE AUTHOR

...view details