ಕರ್ನಾಟಕ

karnataka

ETV Bharat / state

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಲೆ ಸೃಷ್ಟಿ: ಮೂರೂ ಕಡೆ ಗೆಲುವು - ಸಚಿವ ಹೆಚ್ ಕೆ ಪಾಟೀಲ್​ ವಿಶ್ವಾಸ - MINISTER H K PATIL

ಸಚಿವ ಹೆಚ್.​ ಕೆ ಪಾಟೀಲ್ ಉಪಚುನಾವಣೆ ಕುರಿತು ಮಾತನಾಡಿದ್ದಾರೆ. ಮೂರು ಕಡೆ ನಾವು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

Minister-h-k-patil
ಸಚಿವ ಹೆಚ್ ಕೆ ಪಾಟೀಲ್ (ETV Bharat)

By ETV Bharat Karnataka Team

Published : Nov 8, 2024, 5:39 PM IST

ಬೆಳಗಾವಿ:ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಮೂರು ಕ್ಷೇತ್ರಗಳಲ್ಲಿ ಉಪ‌ ಚುನಾವಣೆ ಕಾವು ಏರುತ್ತಿದೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಲೆ ಕಾಣುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಅತ್ಯಂತ ವಿಶ್ವಾಸದಿಂದ ಚುನಾವಣೆ ಮಾಡುತ್ತಿದ್ದು, ಅಭ್ಯರ್ಥಿಗಳ ಗೆಲುವಿನ ಬಗ್ಗೆ ವಿಶ್ವಾಸ ಮತ್ತು ನಂಬಿಕೆ ಹೊಂದಿದ್ದಾರೆ.‌ ಹಾಗಾಗಿ, ಮೂರು ಕಡೆ ನಾವು ಗೆಲ್ಲುತ್ತೇವೆ ಎಂದು‌ ಸಚಿವ ಹೆಚ್. ಕೆ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಿನ್ನೆ ನಾನು ಶಿಗ್ಗಾಂವಿಯಲ್ಲಿ ಪ್ರಚಾರ ಮಾಡಿದ್ದೇನೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು ಕೂಡ ಬಂದಿದ್ದರು. ಈ ವೇಳೆ ಮೂರು ನಾಲ್ಕು ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗಿದ್ದು, ನಮ್ಮ ಪರ ಒಳ್ಳೆಯ ವಾತಾವರಣ ಕಂಡು ಬಂದಿದೆ ಎಂದು ಹೇಳಿದರು.

ಸಚಿವ ಹೆಚ್ ಕೆ ಪಾಟೀಲ್​ ಮಾತನಾಡಿದರು (ETV Bharat)

ಸಿದ್ದರಾಮಯ್ಯ ನಾಯಕತ್ವಕ್ಕೆ ಜನ ಬೆಂಬಲಿಸಲಿದ್ದಾರೆ: ಬಿಜೆಪಿಯವರು ಸಾಕಷ್ಟು ಸುಳ್ಳು ಪ್ರಚಾರ ಪ್ರಾರಂಭಿಸಿದ್ದಾರೆ. ವಕ್ಫ್​​​​ ಹೆಸರಲ್ಲಿ ಧರ್ಮ- ಧರ್ಮಗಳು ಹಾಗೂ ಜಾತಿ-ಜಾತಿಗಳ ನಡುವೆ ದ್ವೇಷದ ಭಾವನೆ ಹುಟ್ಟಿಸುತ್ತಿದ್ದಾರೆ. ಆದರೆ, ಅವರ ಸುಳ್ಳು ಪ್ರಚಾರಕ್ಕೆ ಯಾರೂ ಮಣೆ ಹಾಕುವುದಿಲ್ಲ. ಅಲ್ಲದೇ ಬಿಜೆಪಿ ಪ್ರಚಾರ ನೀತಿಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ, ಮೂರು ಕಡೆ ಗೆಲ್ಲುವ ಮೂಲಕ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಕರ್ನಾಟಕ ಜನ ಬೆಂಬಲಿಸಲಿದ್ದಾರೆ ಎಂದು ಹೇಳಿದರು.

ಪ್ರಧಾನಿ ಮೋದಿಯವರೇ ಉತ್ತರಿಸಬೇಕಾಗುತ್ತದೆ: ರಾಜ್ಯಕ್ಕೆ ಜೆಪಿಸಿ ಕಮಿಟಿ ಅವರು ಬಂದಿಲ್ಲ. ಜೆಪಿಸಿ ಅಧ್ಯಕ್ಷರು ಅನಧಿಕೃತವಾಗಿ ಬಂದಂತೆ ಕಾಣಿಸುತ್ತದೆ. ಯಾವ ಕಾರಣಕ್ಕೆ ನೀವು ಬಂದಿರಿ? ಏನು ಮಾಹಿತಿ ನಿಮಗೆ ಬೇಕಿತ್ತು? ಜನರ ಅಹವಾಲು ಸ್ವೀಕರಿಸಲು ನಿಮ್ಮ ಸಮಿತಿ ಬರಬೇಕಿತ್ತು. ಉಪಚುನಾವಣೆ ಸಂದರ್ಭದಲ್ಲಿ ನಾಟಕವಾಡಲು ನೀವು ಬರೋದಾದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ. ಕೇಂದ್ರ ಸರ್ಕಾರ ಸಿಬಿಐ, ಇಡಿ, ಐಟಿ ದುರುಪಯೋಗ ಪಡಿಸಿಕೊಂಡಿದ್ದೀರಿ. ಈಗ ಜೆಪಿಸಿ ದುರುಪಯೋಗ ಪಡಿಸಿಕೊಳ್ಳಲು ಶುರು ಮಾಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದ ಹೆಚ್. ಕೆ ಪಾಟೀಲ್, ಇದಕ್ಕೆ ಪ್ರಧಾನಿ ಮೋದಿಯವರೇ ಉತ್ತರಿಸಬೇಕಾಗುತ್ತದೆ ಎಂದು ಆಗ್ರಹಿಸಿದರು.

ನಿಮಗೆ ನಿರಾಸೆ ಕಟ್ಟಿಟ್ಟ ಬುತ್ತಿ : ಉಪಚುನಾವಣೆ ಪ್ರಚಾರಕ್ಕೆ ಜೆಪಿಸಿ ಬಳಕೆ ಮಾಡಿಕೊಳ್ಳುತ್ತಿದ್ದೀರಿ. ರಾಜ್ಯ ಸರ್ಕಾರಕ್ಕೆ ನೀವು ಏನಾದರೂ ಮಾಹಿತಿ ಕೇಳಿದ್ದಿರಾ? ಕೇಳಿದ್ದರೆ ಮಾಹಿತಿಯನ್ನು ಕೊಟ್ಟಿರಲಿಲ್ಲವೇ? ನೀವೇನು ಅಹವಾಲು ಸ್ವೀಕರಿಸುತ್ತೀರಿ? ಜೆಪಿಸಿ ಹೆಸರು ತೆಗೆದುಕೊಂಡು ಮಾಧ್ಯಮಗಳ ಮೂಲಕ ಪ್ರಚಾರ ಪಡೆದು, ಉಪ ಚುನಾವಣೆಯಲ್ಲಿ ನಾಟಕವಾಡುತ್ತಿದ್ದೀರಿ. ಇದರಿಂದ ಗೆಲುವು ಸಾಧಿಸುತ್ತೀರಿ ಎಂದು ಭಾವಿಸಿದ್ದರೆ ನಿಮಗೆ ನಿರಾಸೆ ಕಟ್ಟಿಟ್ಟ ಬುತ್ತಿ ಎಂದು ಲೇವಡಿ ಮಾಡಿದರು.

ಬಿಜೆಪಿಯವರು ಗೊಂದಲ ಮೂಡಿಸುತ್ತಿದ್ದಾರೆ: ಕರ್ನಾಟಕ ನ್ಯಾಯ, ನೀತಿ ಹಾಗೂ ಕಾನೂನು ಹೊಂದಿರುವ ರಾಜ್ಯ. ರಾಜ್ಯದಲ್ಲಿ ವಕ್ಫ್​​ ಆ್ಯಕ್ಟ್​, ರೆವಿನ್ಯೂ ಆ್ಯಕ್ಟ್, ಲ್ಯಾಂಡ್ ರಿಫಾರ್ಮ್ಸ್ ಆ್ಯಕ್ಟ್​ಗಳು ಇಲ್ಲವೇ? ಯಾರಿಗೋ ಹೊಲ ಬರೆದುಕೊಡಲು ಆಗುತ್ತದೆಯೇ‌‌? ಅಣ್ಣ-ತಮ್ಮಂದಿರು ಬೇರೆ ಆದಾಗ ಪೋಡಿ ಮಾಡಲು ತಿಂಗಳುಗಟ್ಟಲೇ ಸಮಯ ಹಿಡಿಯುತ್ತದೆ. ಹಾಗಾಗಿ, ಚುನಾವಣೆ ಸಂದರ್ಭದಲ್ಲಿ ಜನರಲ್ಲಿ ಬಿಜೆಪಿಯವರು ಗೊಂದಲ ಮೂಡಿಸುತ್ತಿದ್ದಾರೆ. ನ. 13 ರ ನಂತರ ಇವರು ವಕ್ಫ್​​ ವಿಚಾರ ತೆಗೆದರೆ ಕೇಳಿ ಎಂದು ಕಿಡಿಕಾರಿದರು.

ಲಕ್ಷ್ಮಿ ಹೆಬ್ಬಾಳ್ಕರ್ ಪಾತ್ರವಿಲ್ಲ :ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್.ಡಿ‌.ಎ ಆತ್ಮಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಯಾವುದೇ ಪಾತ್ರ ಇಲ್ಲ. ಯಾವ ಕಾರಣಕ್ಕೂ ಇಂತಹ ಬೇಡಿಕೆ ಇಡುವುದು ಕೂಡ ಅಸಮರ್ಪಕ ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ :ಎಸ್‌ಡಿಎ ಆತ್ಮಹತ್ಯೆ ಪ್ರಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೊದಲ ಪ್ರತಿಕ್ರಿಯೆ

ABOUT THE AUTHOR

...view details