ಚಿಕ್ಕೋಡಿ: ರಾಜ್ಯಾದ್ಯಂತ ಬಾಣಂತಿಯರ ಸಾವಿಗೆ ಕೊನೆಯೇ ಇಲ್ಲದಂತಾಗಿದ್ದು, ಇಂದು ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರು ಸಾವನ್ನಪ್ಪಿದ್ದಾರೆ, ಇದಕ್ಕೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಥಣಿ ಪಟ್ಟಣದ ನಿವಾಸಿ ಮುತ್ತವ್ವ ಸಂತೋಷ ಗೊಳಸಂಗಿ (21) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಮೃತ ಮಹಿಳೆ ಪತಿ ಆರೋಪ ಇದು:ಮೃತ ಮಹಿಳೆಯ ಪತಿ ಸಂತೋಷ್ ಗೊಳಸಂಗಿ ಮಾತನಾಡಿ, "31 ಹೆರಿಗೆಗೆ ದಿನಾಂಕ ನೀಡಿದ್ದರು ವೈದ್ಯರು. ಬುಧವಾರ ಮಧ್ಯಾಹ್ನ ಅಥಣಿ ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆಂದು ಬಂದೆವು. ಅವರು ಕೆಲವು ತಪಾಸಣೆ ಮಾಡಿದರು. ನಂತರ ನೀರು ಕಡಿಮೆ ಆಗಿರುವುದರಿಂದ ಒಂದು ಇಂಜೆಕ್ಷನ್ ಕೊಡುತ್ತೇವೆ ಎಂದರು. ಆಮೇಲೆ ಕೆಲವು ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಮ್ಮನ್ನು ದೂರ ಕಳುಹಿಸಿ ಸಮಾಲೋಚನೆ ನಡೆಸಿದರು. ಅಷ್ಟರಲ್ಲಿ ನನ್ನ ಹೆಂಡತಿ ತುಂಬಾ ನೋವಾಗುತ್ತಿದೆ ಎಂದು ಹೇಳಿದರು. ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗುವುದು ಎಂದರು. ಹೆಣ್ಣುಮಗು ಜನನವಾಯಿತು. ನಂತರ ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದಂತೆ, ವೈದ್ಯರು ಖಾಸಗಿ ಆಸ್ಪತ್ರೆಗೆ ಖಾಸಗಿ ವಾಹನದಲ್ಲಿ ಕಳುಹಿಸಿದರು. ಅಷ್ಟರಲ್ಲಿ ನನ್ನ ಹೆಂಡತಿ ತೀರಿಹೋದಳು. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ನಮಗೆ ನ್ಯಾಯ ಬೇಕು" ಎಂದು ಅಸಹಾಯಕತೆ ವ್ಯಕ್ತಪಡಿಸಿದರು.