ಬೆಂಗಳೂರು:ಅಪಘಾತದ ಬಳಿಕ ಉಂಟಾದ ಅವಮಾನ ಹಾಗೂ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜುಲೈ 1ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಂದಲಹಳ್ಳಿ ನಿವಾಸಿ ಶ್ರೀಶೈಲ್ ಎಂ.ಧನಕ್ (28) ಸಾವನ್ನಪ್ಪಿದ್ದಾರೆ.
ಘಟನೆಯ ಪೂರ್ಣ ವಿವರ:ಜೂನ್ 30ರಂದು ಚಿನ್ನಪ್ಪನಹಳ್ಳಿಯಲ್ಲಿ ಸ್ನೆಹಿತರನ್ನು ಭೇಟಿಯಾಗಿದ್ದ ಶ್ರೀಶೈಲ್, ಪಾರ್ಟಿ ಮುಗಿಸಿ ಸ್ಕೂಟರ್ನಲ್ಲಿ ಮನೆಗೆ ಮರಳುತ್ತಿದ್ದರು. ಮಾರ್ಗಮಧ್ಯೆ ದೊಡ್ಡನೆಕ್ಕುಂದಿ ಸಮೀಪ ಸ್ಕೂಟರ್ ಹಾಗು ಕಾರಿನ ನಡುವೆ ಅಪಘಾತವಾಗಿದೆ. ಕಾರು ಚಾಲಕ ಶ್ರೇಯಸ್ ಮತ್ತು ಆತನ ಸ್ನೇಹಿತರು, ಶ್ರೀಶೈಲ್ನ ವಿಡಿಯೋ ಚಿತ್ರೀಕರಿಸಿ, ಮದ್ಯ ಸೇವಿಸಿದ್ದಿಯಾ ಎಂದು ಬೆದರಿಸಿದ್ದರು. ಕಾರಿನ ರಿಪೇರಿ ಖರ್ಚು ನೀಡದ ಹೊರತು ಸ್ಕೂಟರ್ ಮರಳಿ ಕೊಡುವುದಿಲ್ಲ ಎಂದು ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದರು. ಆರು ತಿಂಗಳ ಹಿಂದೆ ಖರೀದಿಸಿದ್ದ ಸ್ಕೂಟರ್ ಹಾಗೂ ಶ್ರೇಯಸ್ ಕಡೆಯವರಿಂದಾದ ಅವಮಾನದಿಂದ ನೊಂದ ಶ್ರೀಶೈಲ್, ಮಾರನೇ ದಿನ ಕೆಲಸಕ್ಕೆ ಹೋಗದೆ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ಸಂಬಂಧಿಕರೊಬ್ಬರ ಮನೆಯ ಸಮಾರಂಭವೊಂದಕ್ಕೆ ಹೋಗಿದ್ದ ಅವರು, ಪೋಷಕರು ಕರೆ ಸ್ವೀಕರಿಸಿರಲಿಲ್ಲ. ಬಳಿಕ ಬೆಂಗಳೂರಿನಲ್ಲಿದ್ದ ಆತನ ಬಾವ ಮನೆ ಬಳಿ ಹೋಗಿ ಗಮನಿಸಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ.
ಮಗನ ಆತ್ಮಹತ್ಯೆಯ ನಿರ್ಧಾರಕ್ಕೆ ಕಾರಣ ತಿಳಿಯದ ಪೋಷಕರಿಗೆ ಜುಲೈ 12ರಂದು ಕರೆ ಮಾಡಿದ್ದ ಮಹಾದೇವಪುರ ಸಂಚಾರಿ ಠಾಣೆ ಪೊಲೀಸರು, ಆತನನ್ನು ಠಾಣೆಗೆ ಕರೆತರುವಂತೆ ಸೂಚಿಸಿದ್ದರು. ಅದರಂತೆ ಏನಾಗಿರಬಹುದೆಂದು ತಿಳಿದುಕೊಳ್ಳಲು ಠಾಣೆಗೆ ಶ್ರೀಶೈಲ್ ಪೋಷಕರು ತೆರಳಿದ್ದು, ಸ್ಕೂಟರ್ ಅಪಘಾತವಾಗಿರುವುದು ಮತ್ತು ಕಾರು ಚಾಲಕ ಶ್ರೇಯಸ್ ದೂರು ನೀಡಿರುವುದು ಗೊತ್ತಾಗಿದೆ.