ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಇದೇ ಜ. 22ರಂದು ನಡೆಯಲಿದೆ. ಆ ದಿನ ಅಶಾಂತಿ, ಅಡ್ಡಿ-ಆತಂಕ, ಅಹಿತಕರ ಘಟನೆ ಉಂಟಾಗದಂತೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಆಗ್ರಹಿಸಿದರು. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ. 22ರಂದು ಸರ್ಕಾರಿ ರಜೆ ಘೋಷಿಸಲು ಮನವಿ ಮಾಡಿಕೊಂಡರು. ಪಿವಿಆರ್ ಚಿತ್ರಮಂದಿರಗಳಲ್ಲಿ ನೇರಪ್ರಸಾರ ಇರಲಿದೆ. ಹಾಗೇ, ಜನರು ಉತ್ತರಾಭಿಮುಖವಾಗಿ 5 ದೀಪ ಬೆಳಗಿಸುವಂತೆ ವಿನಂತಿಸಿದರು.
ಸೋಮವಾರ ಜರುಗಲಿರುವ ಐತಿಹಾಸಿಕ ಘಳಿಗೆಗೆ ರಾಮಭಕ್ತರಷ್ಟೇ ಅಲ್ಲ, ಇಡೀ ಜಗತ್ತಿನ ಅನೇಕ ದೇಶಗಳಲ್ಲಿ ಕೂಡ ಉತ್ಸಾಹ ಕಾಣುತ್ತಿದೆ. ಪ್ರಭು ಶ್ರೀರಾಮಚಂದ್ರ ಮತ್ತು ಕರ್ನಾಟಕದ ಸಂಬಂಧ ನಿನ್ನೆ ಮೊನ್ನೆಯದಲ್ಲ. ರಾಮಾಯಣ ಯುಗದಿಂದಲೂ ಈ ಸಂಬಂಧ ಇದೆ. ಸೀತಾಮಾತೆಯ ಅಪಹರಣದ ನಂತರ ಶ್ರೀರಾಮನು ಲಕ್ಷ್ಮಣನ ಜೊತೆ ಕಿಷ್ಕಿಂಧೆಗೆ (ಇಂದಿನ ಹಂಪಿ) ಪ್ರಯಾಣ ಬೆಳೆಸಿದ ಕುರುಹುಗಳಿವೆ. ಕೊಪ್ಪಳದ ಅಂಜನಾದ್ರಿ ಬೆಟ್ಟ ಹನುಮಂತನ ಜನ್ಮಭೂಮಿ ಎಂದು ವಿವರಿಸಿದರು.
ಭಾರತೀಯ ಸಂಸ್ಕೃತಿಯ ಪುನರುಜ್ಜೀವನ: ಶ್ರೀರಾಮನು ವಾನರ ಸೇನೆಯನ್ನು ಒಗ್ಗೂಡಿಸಿದ್ದು ಕೂಡ ಕರ್ನಾಟಕದಲ್ಲೇ ಎಂದು ಉಲ್ಲೇಖಿಸಿದರು. ತೊರವೆ ರಾಮಾಯಣ ಮೇರುಕೃತಿ ಎಂದ ಅವರು, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಸಂಸ್ಕೃತಿಯ ಪುನರುಜ್ಜೀವನ ಆಗುತ್ತಿದೆ. ಇದು ರಾಮಭಕ್ತರು, ಹಿಂದೂಗಳಲ್ಲಿ ಸಂತಸಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಕಾಶಿ ವಿಶ್ವನಾಥ ಕಾರಿಡಾರ್ ಅಭಿವೃದ್ಧಿ ಆಗುತ್ತಿದೆ. ಉಜ್ಜೈನಿ ಅಭಿವೃದ್ಧಿ, ನಮೋ ಗಂಗೆ ಕಾರ್ಯಕ್ರಮಗಳು ಪ್ರಾಚೀನ ಪರಂಪರೆಯ ಪುನರುಜ್ಜೀವನಕ್ಕೆ ಸಾಕ್ಷಿ. ನರೇಂದ್ರ ಮೋದಿ ಅವರ ದೂರದೃಷ್ಟಿ ಇದಕ್ಕೆ ಕಾರಣ ಎಂದು ವಿವರಿಸಿದರು. ಕಾಂಗ್ರೆಸ್ ಸರ್ಕಾರ ಗೊಂದಲ, ದ್ವಂದ್ವ ನಿಲುವಿನಲ್ಲಿದೆ. ರಾಜ್ಯ ಸರ್ಕಾರ ಕರಸೇವಕ ಶ್ರೀಕಾಂತ ಪೂಜಾರಿಯನ್ನು ದುರುದ್ದೇಶದಿಂದ ಬಂಧಿಸಿತ್ತು. ದೇಶದಲ್ಲಿ ಕುಣಿದು ಕುಪ್ಪಳಿಸಿದ ವಾತಾವರಣವನ್ನು ಕಲುಷಿತಗೊಳಿಸಲು ಈ ಬಂಧನ ನಡೆದಿತ್ತು ಎಂದು ಟೀಕಿಸಿದರು.
ಬಿ.ಕೆ ಹರಿಪ್ರಸಾದ್ ಕಾಂಗ್ರೆಸ್ ಟಾರ್ಗೆಟ್?!ಕಾಂಗ್ರೆಸ್ಸಿನ ಬಿ.ಕೆ ಹರಿಪ್ರಸಾದ್ ಸಾಮಾನ್ಯ ವ್ಯಕ್ತಿ ಅಲ್ಲ. ಅವರೂ ಹೇಳಿಕೆ ಕೊಟ್ಟಿದ್ದಾರೆ. ಆದ್ದರಿಂದ ಅಹಿತಕರ ಘಟನೆ ಆಗದಂತೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸಲಿ. ಬಿ.ಕೆ ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡಿದೆಯೇ ಅಥವಾ ಕೇಂದ್ರ ಸರ್ಕಾರವೇ? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ನುಡಿದರು. ಇನ್ನು, ಕಾಂಗ್ರೆಸ್ಸಿಗರು ಎಲ್ಲೆಡೆ ರಾಜಕೀಯ ಮಾಡುತ್ತಿದ್ದಾರೆ. ಅಯೋಧ್ಯೆ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣ ಮತ್ತು ರಾಮಭಕ್ತರ ಕುರಿತ ತಿರಸ್ಕಾರದ ನಡವಳಿಕೆ ಸಾಕಷ್ಟು ಟೀಕೆಗೆ ಒಳಗಾಗಿದೆ ಎಂದರು.
ಅಯೋಧ್ಯೆಗೆ ಕರ್ನಾಟಕದ ಕೊಡುಗೆ: ಅತಿಹೆಚ್ಚು ಕರಸೇವಕರು ಕರ್ನಾಟಕದಿಂದ ಹೋಗಿದ್ದರು. ಯಡಿಯೂರಪ್ಪ, ರಾಮಚಂದ್ರೇಗೌಡ ಸೇರಿ ಅನೇಕ ಹಿರಿಯರು ಭಾಗವಹಿಸಿದ್ದರು. ರಾಮಮಂದಿರದ ಉಸ್ತುವಾರಿಯನ್ನು ಕನ್ನಡಿಗರೇ ನೋಡಿಕೊಳ್ಳುತ್ತಿದ್ದಾರೆ. ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಅವರ ಜೊತೆ ಕರ್ನಾಟಕದ 6 ಶಿಲ್ಪಿಗಳು ಭಾಗವಹಿಸಿದ್ದರು. ಕರ್ನಾಟಕದ ಪೇಜಾವರ ಶ್ರೀಗಳು ಟ್ರಸ್ಟಿ ಎಂದು ಹೇಳಿದರು.