ಬೆಂಗಳೂರು: ಇಂದು ನಿಧನರಾದ ಹಿರಿಯ ಸಾಹಿತಿ ಡಾ ಕಮಲಾ ಹಂಪನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆಯನ್ನು ರವೀಂದ್ರಕಲಾಕ್ಷೇತ್ರದಲ್ಲಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸಿ.ಎಂ. ಸಿದ್ದರಾಮಯ್ಯ, ಡಿ.ಸಿ.ಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವಾರು ಸಾಹಿತಿಗಳು, ಗಣ್ಯರು ಅಂತಿಮ ದರ್ಶನ ಪಡೆದರು.
ಈ ವೇಳೆ ಈಟಿವಿ ಭಾರತ ಜೊತೆಗೆ ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್, ಕರ್ನಾಟಕದಲ್ಲಿ ಹಂಪನಾ ದಂಪತಿಗಳು ಚಿರಪರಿಚಿತ. ನಾಡೋಜ ಪ್ರಶಸ್ತಿ ಪಡೆದಿದ್ದ ಅವರು ಕನ್ನಡದ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಅವರ ಸದ್ಗುಣ ಅನುಕರಣೀಯ. ಸಾವಿನ ನಂತರವೂ ಅವರು ತಮ್ಮ ದೇಹವನ್ನು ದಾನ ಮಾಡಿ ಆದರ್ಶಪ್ರಾಯರಾಗಿದ್ದಾರೆ. ಅವರು ಕ್ರಾಂತಿಕಾರಿ ಚಿಂತನೆ ಹೊಂದಿದ್ದರು. ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾರ್ವಜನಿಕವಾಗಿ ಹೇಗೆ ಬದುಕಬೇಕು ಎನ್ನದು ತೋರಿ ಇಹಲೋಕ ತ್ಯಜಿಸಿದ್ದಾರೆ. ಅವರ ಸಾಧನೆ ಜೈನ ಸಾಹಿತ್ಯದಲ್ಲಿ ಅಪಾರವಾಗಿದೆ. ರಾಮಾಯಣ, ಮಹಾಭಾರತಗಳನ್ನು ಶಾಂತಿಯುತವಾದ ವಿಧದಲ್ಲಿ ಪುನರ್ ನಿರ್ಮಾಣಗೊಂಡಿದ್ದ ಪುರಾತನ ಜೈನ ಸಾಹಿತ್ಯವನ್ನು ಹೊರ ತಂದವರು ಕಮಲಾ ಹಂಪನಾ ಆಗಿದ್ದರು. ಜೈನ ಸಾಹಿತ್ಯೆ ವೈಶಿಷ್ಟ್ಯವನ್ನು ಜಗತ್ತಿಗೆ ತೋರಿಸಿದರು ಎಂದರು.
ಅಂತರ್ ಜಾತಿಯ ವಿವಾಹವಾಗಿ ಉನ್ನತ ಆದರ್ಶವನ್ನು ಮೆರೆದರು. ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಬದುಕಿದ್ದಾರೆ. ನನ್ನ ಅತ್ಯಂತ ಆತ್ಮೀಯರಾಗಿದ್ದರು. ಅವರ ಹೆಸರಿನಲ್ಲಿ ಸಚಿವೆಯಾಗಿದ್ದಾಗ ಪ್ರಶಸ್ತಿಯನ್ನು ಸ್ಥಾಪಿಸಿದೆ. ಅವರು ಹಲವು ಸಂಗತಿಗಳನ್ನು ನನ್ನ ಜೊತೆ ಹಂಚಿಕೊಳ್ಳುತ್ತಿದ್ದರು. ರಾಜಕೀಯವಾಗಿ, ಸಾಹಿತ್ಯಿಕವಾಗಿ ಹಾಗೂ ಹತ್ತು ಹಲವು ಸಂಗತಿಗಳಲ್ಲಿ ನನ್ನ ಜೊತೆ ನಿಲ್ಲುತ್ತಿದ್ದರು ಎಂದು ನೆನೆದರು.
ಹಿರಿಯ ಸಾಹಿತಿ ಪ್ರೊ.ಕೆ. ಈ ರಾಧಾಕೃಷ್ಣ ಮಾತನಾಡಿ, ನನಗೆ ತಾಯಿಯ ಮಮಕಾರ ತೋರಿದ್ದರು. ಅವರು ಉದಾತ್ತ ವ್ಯಕ್ತಿಯಾಗಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ನಕ್ಷತ್ರವಾಗಿದ್ದರು. ಸಾಹಿತ್ಯದ ಮೂಲ ಸೆಲೆಯಾದ ಯಥಾಸ್ಥಿತಿವಾದವನ್ನು ವಿರೋಧಿಸುವುದಾಗಿದೆ, ಅದನ್ನು ಆಕ್ರೋಶವಿಲ್ಲದೆ ಶಾಂತ ಸ್ವರೂಪದಲ್ಲಿ ತಮ್ಮ ಜೀವನ ಶೈಲಿಯಿಂದ ಸಾಹಿತ್ಯದಿಂದ ತೋರಿಸಿದ್ದರು. ಅವರು ಸ್ತ್ರೀವಾದಿ ಅಲ್ಲದೆ ಮನುಷ್ಯವಾದಿಯಾಗಿದ್ದರು. ಮಹಿಳೆಯರ ಸ್ಥಾನಮಾನದ ಬಗ್ಗೆ ಗಟ್ಟಿ ಧ್ವನಿ ಎತ್ತುತ್ತಿದ್ದರು. ಕುವೆಂಪು ಅವರ ಅನುಯಾಯಿಯಾಗಿ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಬದುಕಿದರು ಎಂದು ಸ್ಮರಿಸಿದರು.
ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಸಾಹಿತಿ, ಪದ್ಮಾ ಶೇಖರ್ ಮಾತನಾಡಿ, ನಾವು ಮೈಸೂರು ವಿಶ್ವವಿದ್ಯಾಲಯಕ್ಕೆ ಒಂದೇ ಬಾರಿ ಪ್ರೊಫೆಸರ್ಗಳಾಗಿ ಸೇರಿಕೊಂಡೆವು. ಅವರು ಕನಸನ್ನು ನನಸು ಮಾಡುವ ವ್ಯಕ್ತಿಯಾಗಿದ್ದರು, ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಮಾಡಿದ್ದರು. ಹೃದಯವಂತರಾಗಿದ್ದರು ಎಂದು ತಮ್ಮ ನುಡಿ ನಮನ ಸಲ್ಲಿಸಿದರು.