ಕರ್ನಾಟಕ

karnataka

ETV Bharat / state

ಬಾಬಾ ಸಿದ್ದಿಕಿ ಕೊಲೆ: 'ಮುಂಬೈನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ'- ಡಿ.ಕೆ.ಶಿವಕುಮಾರ್

ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ಮುಖಂಡ ಬಾಬಾ ಸಿದ್ದಿಕಿ ಕೊಲೆ ಪ್ರಕರಣದ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

By ETV Bharat Karnataka Team

Published : 4 hours ago

d k shivakumar
ಡಿ.ಕೆ.ಶಿವಕುಮಾರ್ (ETV Bharat)

ಮೈಸೂರು: ''ಎನ್​ಸಿಪಿ ನಾಯಕ ಬಾಬಾ ಸಿದ್ದಿಕಿ ನನಗೂ ಕೂಡ ಆತ್ಮೀಯರಾಗಿದ್ದರು. ನಮ್ಮ ಪಕ್ಷದಲ್ಲಿದ್ದಾಗ ಮಂತ್ರಿಯೂ ಅಗಿದ್ದರು, ಆದರೀಗ ಅವರ ಹತ್ಯೆಯಾಗಿದೆ.‌ ಮುಂಬೈನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬುದು ಈ ಘಟನೆಯಿಂದ ಗೊತ್ತಾಗುತ್ತದೆ. ಮುಂದಿನ ದಿನಗಳಲ್ಲಿ ಚುನಾವಣೆ ಇದೆ, ಶಾಂತಿ ಕಾಪಾಡಬೇಕಿದೆ'' ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಮೈಸೂರಿನ ಖಾಸಗಿ ಹೋಟೆಲ್​​ನಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ''ಮುಂಬೈನಲ್ಲಿ ನಡೆದ ಬಾಬಾ ಸಿದ್ದಿಕಿ ಕೊಲೆಯನ್ನು ಖಂಡಿಸುತ್ತೇನೆ. ಕೃತ್ಯ ಮಾಡಿದವರ ವಿರುದ್ಧ ಕ್ರಮ ಆಗಬೇಕು'' ಎಂದು ಆಗ್ರಹಿಸಿದರು.

ಡಿ.ಕೆ.ಶಿವಕುಮಾರ್ (ETV Bharat)

''ಈ ಬಾರಿ ದಸರಾ ತುಂಬಾ ವಿಜೃಂಭಣೆಯಿಂದ ನಡೆಯಿತು. ಆದರೆ, ಜಂಬೂಸವಾರಿ ಆರಂಭವಾಗುವುದು ಸ್ವಲ್ಪ ತಡವಾಯಿತು. ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ತಿಳಿಸಿದರು.

''ಚನ್ನಪಟ್ಟಣದಲ್ಲಿ ನಮ್ಮ ಕುಟುಂಬದವರ ಸ್ಪರ್ಧೆ ಇಲ್ಲ, ನಾನೇ ಅಭ್ಯರ್ಥಿ ಎಂದು ಮತ ಕೇಳುತ್ತೇನೆ. ನಾವು ನಮ್ಮ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದೇವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಮಗೆ ಎದುರಾಳಿ ವಿರುದ್ಧ ಕಡಿಮೆ ಅಂತರದ ಮತಗಳು ಬಂದವು. ಬಳಿಕ ವಿಧಾನಸಭಾ ಚುನಾವಣೆಯಲ್ಲಿ ಬಹಳಷ್ಟು ಕಡಿಮೆ ಅಂತರದ ಮತಗಳು‌‌‌ ಲಭಿಸಿದ್ದು, ನಮ್ಮ ಮೇಲೆ ಜನರಿಗೆ ಭರವಸೆ ಇದೆ'' ಎಂದು ಹೇಳಿದರು.

ಇದನ್ನೂ ಓದಿ:ಮುಂಬೈನಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿಗೆ ಗುಂಡಿಕ್ಕಿ ಹತ್ಯೆ

ಚನ್ನಪಟ್ಟಣದಲ್ಲಿ‌ ಸಿದ್ಧಾಂತದ ಮೇಲೆ ಚುನಾವಣೆ:ಚನ್ನಪಟ್ಟಣದಿಂದ ಎನ್​ಡಿಎ ಅಭ್ಯರ್ಥಿಯಾಗಿ ನಿಖಲ್ ಸ್ಪರ್ಧೆ ವಿಚಾರ ಪ್ರತಿಕ್ರಿಯಿಸಿ, ''ಅದು ಅವರ ಪಾರ್ಟಿಗೆ ಬಿಟ್ಟಿದ್ದು. ಚನ್ನಪಟ್ಟಣದಲ್ಲಿ‌ ವ್ಯಕ್ತಿಯ ಮೇಲೆ ಚುನಾವಣೆ ‌ನಡೆಯುವುದಿಲ್ಲ, ಸಿದ್ಧಾಂತದ ಮೇಲೆ ನಡೆಯುತ್ತದೆ. ಅವರು ಯಾರನ್ನಾದರೂ ಅಭ್ಯರ್ಥಿ ಮಾಡಿಕೊಳ್ಳಲಿ. ನಾವು ನಮ್ಮ‌ ಮನೆಯನ್ನು ರಿಪೇರಿ‌ ಮಾಡಿಕೊಂಡರೆ ಸಾಕು'' ಎಂದರು.

ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಬಿಜೆಪಿ‌ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ''ಬಿಜೆಪಿ‌ಯವರು ಇನ್ನೂ 10 ವರ್ಷ ಇದನ್ನೇ ಮಾತನಾಡುತ್ತಾ ಇರಲಿ. ಮುಂದಿನ ಹತ್ತು ವರ್ಷ ನಾವೇ ಸಿಎಂ ಆಗಿರುತ್ತೇವೆ'' ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ:ಅದ್ಧೂರಿ, ಅಚ್ಚುಕಟ್ಟಾದ ಮೈಸೂರು ದಸರಾ: ಜಿಲ್ಲಾಡಳಿತದ ಶ್ರಮ, ಶಿಸ್ತಿಗೆ ಸಿಎಂ ಅಭಿನಂದನೆ

ABOUT THE AUTHOR

...view details