ಕರ್ನಾಟಕ

karnataka

By ETV Bharat Karnataka Team

Published : Mar 2, 2024, 6:46 AM IST

ETV Bharat / state

ಶಿಕ್ಷಣ ಕ್ಷೇತ್ರದ ಪ್ರಗತಿಗೆ ಸಮನ್ವಯತೆಯ ಕೊರತೆ ತೊಡಕಾಗಿದೆ: ಯದುವೀರ್‌ ಒಡೆಯರ್‌ ವಿಷಾದ

ಮೂಲಸೌಕರ್ಯ ಕೊರತೆಯಿಂದ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದ್ದು ಮುಖ್ಯೋಪಾಧ್ಯಾಯರು, ಪ್ರಾಂಶುಪಾರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಿದರೆ ಶಿಕ್ಷಣವೂ ಸುಧಾರಣೆಯಾಗುತ್ತದೆ ಎಂದು ಮೈಸೂರು ರಾಜವಂಶಸ್ಥ ಯದುವೀರ್‌ ಒಡೆಯರ್‌ ಹೇಳಿದ್ದಾರೆ.

ಯದುವೀರ್‌ ಒಡೆಯರ್‌
ಯದುವೀರ್‌ ಒಡೆಯರ್‌

ಬೆಂಗಳೂರು: ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ಹಲವು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದರೆ, ದುರದೃಷ್ಟವಶಾತ್‌ ಎಲ್ಲ ಸಂಸ್ಥೆಗಳ ಉದ್ದೇಶ ಒಂದೇ ಆಗಿದ್ದರೂ ಅವುಗಳ ನಡುವೆ ಸಮನ್ವಯತೆ ಕೊರತೆಯಿಂದಾಗಿ ನಿರೀಕ್ಷಿತ ಫಲಿತಾಂಶ ದೊರೆಯುತ್ತಿಲ್ಲ ಎಂದು ಮೈಸೂರಿನ ರಾಜವಂಶಸ್ಥ ಯದುವೀರ್‌ ಒಡೆಯರ್‌ ವಿಷಾದ ವ್ಯಕ್ತಪಡಿಸಿದರು.

ಬೆಂಗಳೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನಲ್ಲಿ ಶುಕ್ರವಾರ ಶಿಕ್ಷಾಲೋಕಮ್‌ ಆಶ್ರಯದಲ್ಲಿ ಆರಂಭವಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯವಾಗಿ ಗ್ರಾಮೀಣ ವಲಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಇದೆ. ಇದು ಶಿಕ್ಷಣ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರೇ ಶಿಕ್ಷಣದ ನಾಯಕರು. ಅವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಿದರೆ ಶಿಕ್ಷಣವೂ ಸುಧಾರಣೆಯಾಗುತ್ತದೆ ಎಂದು ಯದುವೀರ್‌ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

ಶಿಕ್ಷಾಲೋಕಮ್‌ನ ಸ್ಥಾಪಕ ಹಾಗೂ ಇನ್‌ಫೋಸಿಸ್‌ನ ಸಹಸ್ಥಾಪಕ ಎಸ್‌.ಡಿ. ಶಿಬುಲಾಲ್ ಮಾತನಾಡಿ, ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು. ಗುಣಮಟ್ಟದ ಶಿಕ್ಷಣ ಅವರಿಗೆ ದೊರೆಯಲು ದೇಶದ ಸಾರ್ವಜನಿಕ ಶಾಲೆಗಳು ಸುಧಾರಣೆಯಾಗಬೇಕು. ಶಿಕ್ಷಣ ಕ್ಷೇತ್ರದ ನಾಯಕರು ಸುಧಾರಣೆ ಪ್ರಕ್ರಿಯೆಯ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸಬೇಕು. ಅದಕ್ಕಾಗಿ ಅವರಿಗೆ ನಿರಂತರವಾದ ಬೆಂಬಲ ಹಾಗೂ ಸಂಪನ್ಮೂಲಗಳ ಅಗತ್ಯವಿದೆ. ಆದರೆ, ಈ ಕನಸನ್ನು ಸಾಧಿಸಲು, ಕಲಿಕಾ ಫಲಿತಾಂಶಗಳನ್ನು ಸುಧಾರಿಸುವ ನಿಟ್ಟಿನಲ್ಲಿ ತೊಡಗಿಕೊಂಡಿರುವ ಎಲ್ಲರಿಂದಲೂ ಸಂಘಟಿತ ಕ್ರಿಯೆಯ ಅಗತ್ಯವಿದೆ. ಶಿಕ್ಷಾಲೋಕಮ್‌ ಪ್ರಸ್ತುತ 27 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿದ್ದು, ದೇಶದಾದ್ಯಂತ ಒಂದು ದಶಲಕ್ಷಕ್ಕಿಂತ ಹೆಚ್ಚಿನ ಶಾಲೆಗಳಲ್ಲಿ 5,70,000ಕ್ಕಿಂತ ಹೆಚ್ಚಿನ ಶಿಕ್ಷಣ ನಾಯಕರು ಸುಧಾರಣೆಗಳನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.

ರಾಷ್ಟ್ರೀಯ ವಿಚಾರ ಸಂಕಿರಣ

ಇನ್‌ವೋಕ್ಡ್‌ನ ಹಿಂದಿನ ಎರಡು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಶಿಕ್ಷಣ ನಾಯಕತ್ವ ಹಾಗೂ ಬೇರುಮಟ್ಟದಲ್ಲಿರುವ ಸವಾಲುಗಳನ್ನು ನಿವಾರಿಸಲು ಸಹಯೋಗದ ಅಗತ್ಯದ ಮೇಲೆ ಗಮನ ಕೇಂದ್ರೀಕರಿಸಿದ್ದರೆ, ಪ್ರಸ್ತುತ ನಡೆಯುತ್ತಿರುವ ಮೂರನೇ ವಿಚಾರ ಸಂಕಿರಣವು ವಿವಿಧ ಸಾಮಾಜಿಕ ಚಳುವಳಿಗಳನ್ನು ಮುನ್ನಡೆಸುತ್ತಿರುವ ನಾಯಕರುಗಳ ಮೇಲೆ ಗಮನ ಕೇಂದ್ರೀಕರಿಸಲಿದೆ ಎಂದು ಹೇಳಿದರು.

ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

ಶಿಕ್ಷಾಲೋಕಮ್‌ನ ಸಹಸ್ಥಾಪಕಿ ಖುಷ್ಬೂ ಅವಾಸ್ಥಿ ಮಾತನಾಡಿ, ಶಿಕ್ಷಾಲೋಕಮ್‌ ಕೆ- ಶಿಕ್ಷಣ ವ್ಯವಸ್ಥೆಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಅವಕಾಶಗಳನ್ನು ಅಭಿವೃದ್ಧಿಪಡಿಸುವ ಮಾತುಕತೆಗಳು, ಪರಿಕಲ್ಪನೆಗಳು ಹಾಗೂ ಕ್ರಿಯೆಗಳ ವೇಗವರ್ಧನೆ ಮಾಡುವ ಮೂಲಕ ಶಿಕ್ಷಣ ನಾಯಕತ್ವದ ಮರುಕಲ್ಪನೆ ಮಾಡುತ್ತಾ ಬಂದಿದೆ ಎಂದರು.

ರಾಷ್ಟ್ರೀಯ ವಿಚಾರ ಸಂಕಿರಣ

ವಿಚಾರ ಸಂಕಿರಣದಲ್ಲಿ ವಿಶ್ವದ ಶಿಕ್ಷಣ ನಾಯಕರು ಭಾಗಿ:ವಿಚಾರ ಸಂಕಿರಣದಲ್ಲಿ ವಿಶ್ವದ ವಿವಿಧ ಭಾಗಗಳಿಂದ ಶಿಕ್ಷಣ ನಾಯಕರುಗಳು, ಶಿಕ್ಷರು, ಶಿಕ್ಷಣ ತಜ್ಞರು, ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಶಿಕ್ಷಣ ಸಮಾನತೆಗಾಗಿ ಪ್ರಸ್ತುತ ನಡೆಯುತ್ತಿರುವ ಜನರ ಚಳುವಳಿಯನ್ನು ಬಲಗೊಳಿಸಲು ಅಭಿಪ್ರಾಯಗಳು ಹಾಗೂ ಕ್ರಿಯಾಕೇಂದ್ರಿತ ಮಾತುಕತೆಗಳ ವಿವಿಧ ಗೋಷ್ಠಿಗಳು ನಡೆಯಲಿದೆ.

ಇದನ್ನೂ ಓದಿ:ಉಚಿತ ಶಿಕ್ಷಣ-ಆರೋಗ್ಯ ಗ್ಯಾರಂಟಿ ತನ್ನಿ, ಹಣಕಾಸು ಇಲಾಖೆಗೆ ಪ್ರತ್ಯೇಕ ಸಚಿವರ ನೇಮಿಸಿ: ಸರ್ಕಾರಕ್ಕೆ ವಿಶ್ವನಾಥ್ ಸಲಹೆ

ABOUT THE AUTHOR

...view details