ಕರ್ನಾಟಕ

karnataka

₹1 ಕೋಟಿ ಮೊತ್ತದ ಅಪಘಾತ ಪರಿಹಾರ; ಇತರ ಕಾರಣದ ಸಾವಿಗೆ ₹10 ಲಕ್ಷ ಪರಿಹಾರ ವಿತರಿಸಿದ ಕೆಎಸ್​ಆರ್​ಟಿಸಿ

By ETV Bharat Karnataka Team

Published : Feb 14, 2024, 5:45 PM IST

ಕೆಎಸ್​ಆರ್​ಟಿಸಿ ತನ್ನ ನೌಕರರ ಅವಲಂಬಿತರಿಗೆ 1 ಕೋಟಿ ರೂ ಮೊತ್ತದ ಅಪಘಾತ ಪರಿಹಾರ ವಿಮೆ ಹಾಗೂ ಇತರೆ ಕಾರಣಗಳಿಂದ‌ ಮೃತಪಟ್ಟ 16 ನೌಕರರ ಕುಟುಂಬದವರಿಗೆ ಕುಟುಂಬ ಕಲ್ಯಾಣ ಯೋಜನೆಯ 10 ಲಕ್ಷ ರೂ ಪರಿಹಾರ ವಿತರಿಸಿದೆ.

Etv Bharatksrtc-distributed-10-lakh-compensation-to-families-of-deceased-employees
₹1 ಕೋಟಿ ಮೊತ್ತದ ಅಪಘಾತ ಪರಿಹಾರ, ಇತರ ಕಾರಣದ ಸಾವಿಗೆ 10 ಲಕ್ಷ ಪರಿಹಾರ ವಿತರಿಸಿದ ಕೆಎಸ್​ಆರ್​ಟಿಸಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ(ಕೆಎಸ್‌ಆರ್‌ಟಿಸಿ) ನೌಕರರ ಅವಲಂಬಿತರಿಗೆ ಒಂದು ಕೋಟಿ ರೂ ಮೊತ್ತದ ಅಪಘಾತ ಪರಿಹಾರ ವಿಮೆ ಹಾಗೂ ಇತರೆ ಕಾರಣಗಳಿಂದ‌ ಮೃತಪಟ್ಟ (ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್) 16 ನೌಕರರ ಕುಟುಂಬದವರಿಗೆ ಇದೇ ಮೊದಲ ಬಾರಿಗೆ ಕುಟುಂಬ ಕಲ್ಯಾಣ ಯೋಜನೆಯ 10 ಲಕ್ಷ ರೂ ಪರಿಹಾರ ವಿತರಿಸಲಾಗಿದೆ.

ನಿಗಮವು ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟ ಅಥವಾ ಅಂಗನ್ಯೂನತೆಗೆ ಒಳಗಾದಲ್ಲಿ ಒಂದು ಕೋಟಿ ರೂಪಾಯಿ ಅಪಘಾತ ವಿಮಾ ಪರಿಹಾರ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಜಾರಿಯಾದ ನಂತರದಲ್ಲಿ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯನಿರತ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದುವರೆಗೆ 12 ನೌಕರರ ಕುಟುಂಬದವರಿಗೆ ತಲಾ 1 ಕೋಟಿ ರೂಪಾಯಿ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ.

ಪರಿಹಾರ ವಿತರಿಸಿದ ಕೆಎಸ್​ಆರ್​ಟಿಸಿ

ರಾಜೇಶ್ ಡಿ.ಸಿ (ಚಾಲಕ-ಕಂ-ನಿರ್ವಾಹಕ, ಅರಕಲಗೂಡು ಘಟಕ, ಹಾಸನ ವಿಭಾಗ) ಎಂಬವರು 29/07/2023ರಂದು ಮೃತಪಟ್ಟಿದ್ದು, ಮೃತರ ಅವಲಂಬಿತರಿಗೆ 1 ಕೋಟಿ ರೂಪಾಯಿ ಅಪಘಾತ ಪರಿಹಾರ ವಿಮೆಯ ಜೊತೆಗೆ, ಉಪಧನ, ಭವಿಷ್ಯ ನಿಧಿ, ನೌಕರರ ಕುಟುಂಬ ಕಲ್ಯಾಣ ಯೋಜನೆ, ಡಿಆರ್​ಬಿಎಫ್ ಹಾಗೂ ಗಂಪು ವಿಮಾ ಯೋಜನೆಯಿಂದ 14,19,980 ರೂ ಪರಿಹಾರವನ್ನು ಇಂದು ನೀಡಲಾಯಿತು.

ಆದರೆ ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಸಾವನ್ನಪ್ಪುವ ನೌಕರರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ದಾಖಲಾಗುತ್ತಿದೆ. ಈ ವಿಷಯ ಮನಗಂಡು ಪರಿಹಾರ ಮೊತ್ತವನ್ನು 10 ಲಕ್ಷ ರೂಗಳಿಗೆ ಹೆಚ್ಚಿಸಲಾಗಿದೆ. ನಿಗಮದ ಕುಟುಂಬ ಕಲ್ಯಾಣ ಪರಿಹಾರ ಯೋಜನೆ ಅಡಿಯಲ್ಲಿ ಕಳೆದ ನವೆಂಬರ್ 2023 ಮತ್ತು ಡಿಸೆಂಬರ್ 2023ರ ತಿಂಗಳಲ್ಲಿ ಮರಣ ಹೊಂದಿದ 16 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ 10 ಲಕ್ಷ ರೂ. ಪರಿಹಾರದ ಚೆಕ್​ ಅನ್ನು ಇಂದು ವಿತರಿಸಲಾಯಿತು.

ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ (ವಾಸು) ಅವರು ಕೇಂದ್ರ ಕಚೇರಿಯಲ್ಲಿ ಸೇವೆಯಲ್ಲಿರುವಾಗ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಅವಲಂಬಿತರಿಗೆ 1 ಕೋಟಿ ರೂ. ಪರಿಹಾರ ಮೊತ್ತದ ಚೆಕ್ ಹಾಗೂ ಇತರೆ ಕಾರಣಗಳಿಂದ ಮೃತಪಟ್ಟಿದ್ದ 16 ಸಿಬ್ಬಂದಿಯ ಅವಲಂಬಿತರಿಗೆ ಕುಟುಂಬ ಕಲ್ಯಾಣ ಯೋಜನೆಯಡಿ ತಲಾ 10 ಲಕ್ಷ ರೂ. ಹಾಗೂ ಅವರಿಗೆ ನಿಗಮದಿಂದ ಪಾವತಿಸಬೇಕಾದ ಭವಿಷ್ಯ ನಿಧಿ, ಉಪಧನ ಚೆಕ್ ವಿತರಿಸಿದರು.

ಪರಿಹಾರ ವಿತರಿಸಿದ ಕೆಎಸ್​ಆರ್​ಟಿಸಿ

ಮೃತರ ಕುಟುಂಬದ ಅರ್ಹರಿಗೆ ನೌಕರಿ ನೀಡಲು ಕ್ರಮ:ನಿಗಮದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಕಾರ್ಯನಿರ್ವಹಿಸುವ ಸಿಬ್ಬಂದಿ ಶ್ರಮಜೀವಿಗಳಾಗಿದ್ದು, ನಿಗಮವು ಅವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿರುವುದನ್ನು ತಿಳಿದು ಬಹಳ ಸಂತೋಷವಾಯಿತು. ಈ ಯೋಜನೆಗಳ ಅನುಷಾನಕ್ಕಾಗಿ ಸಾರಿಗೆ ಸಚಿವರು ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ತಮಗೆ ದೊರೆತಿರುವ ಪರಿಹಾರದ ಹಣವನ್ನು ಯಾರಿಗೂ ಕೊಡದೇ ಮುಂದಿನ ಜೀವನ ನಿರ್ವಹಣೆಗಾಗಿ ಸೂಕ್ತವಾಗಿ ವಿನಿಯೋಗಿಸಿ ಕಾಪಾಡಿಕೊಳ್ಳುವಂತೆ ಹಾಗೂ ಅವಲಂಬಿತರಲ್ಲಿ ನೌಕರಿಗೆ ಅರ್ಹರಿರುವವರಿಗೆ ಕಾಲವಿಳಂಬವಿಲ್ಲದೇ ನೌಕರಿ ಒದಗಿಸಲು ಕ್ರಮ ಜರುಗಿಸುವಂತೆ ತಿಳಿಸಿದರು.

ಇದಕ್ಕೂ ಮುನ್ನ ಸಾರಿಗೆ ಮತ್ತು ಮುಜರಾಯಿ ಸಚಿವರು, ಸಿಬ್ಬಂದಿಗಳ ಅವಲಂಬಿತರನ್ನು ಭೇಟಿ ಮಾಡಿ, ನಿಗಮವು ಕಳೆದ ಎರಡು ತಿಂಗಳ‌ ಹಿಂದಷ್ಟೇ ಪರಿಹಾರ ಮೊತ್ತವನ್ನು 3 ಲಕ್ಷದಿಂದ 10 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ್ದು, ಇಂದು 16 ಕುಟುಂಬಗಳಿಗೆ ಆರ್ಥಿಕವಾಗಿ ಸ್ವಲ್ಪ ಹೆಚ್ಚು ಹಣ ದೊರೆಯುವಂತಾಗಿದೆ. ಜೀವಕ್ಕೆ ಬೆಲೆ ಕಟ್ಟುವುದು ಸಾಧ್ಯವಿಲ್ಲ. ಆದರೂ ಪರಿಹಾರ ಮೊತ್ತವನ್ನು ಸದುಪಯೋಗ ಮಾಡಿಕೊಂಡು ಸುಸೂತ್ರ ಜೀವನ ನಿರ್ವಹಣೆ ಮಾಡುವಂತೆ ಸಲಹೆ ನೀಡಿದರು.

ಇದನ್ನೂ ಓದಿ:'ಹೈ ಸೆಕ್ಯುರಿಟಿ‌ ನಂಬರ್ ಪ್ಲೇಟ್' ಅಳವಡಿಕೆ ಸಮಯ 3 ತಿಂಗಳು ವಿಸ್ತರಣೆ

ABOUT THE AUTHOR

...view details