ವರದಿ: ಸಿದ್ದನಗೌಡ ಪಾಟೀಲ್
ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಹಸಿ ಕಸ - ಒಣ ಕಸ ಬೇರ್ಪಡಿಸುವಿಕೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ ಮಹಾನಗರ ಪಾಲಿಕೆ ಯಶಸ್ವಿಯಾಗಿದೆ. ಇದರಿಂದ ಪಾಲಿಕೆಗೆ ಪ್ರತಿ ತಿಂಗಳು 10 ಲಕ್ಷ ರೂ. ಹಣ ಉಳಿಕೆಯಾಗಿದೆ. ಕಸ ವಿಲೇವಾರಿ ಪ್ರಕ್ರಿಯೆ ಕುರಿತು ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.
ಬೆಳಗಾವಿ ನಗರದಲ್ಲಿ ಕಸ ನಿರ್ವಹಣೆ ದೊಡ್ಡ ಸವಾಲಾಗಿತ್ತು. ಮನೆ ಮನೆಗಳಿಂದ ಕಸ ಸಂಗ್ರಹಿಸುವ ವೇಳೆ ಜನರು ಹಸಿ ಕಸ-ಒಣ ಕಸ ಬೇರ್ಪಡಿಸಿ ನೀಡದ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಹರಸಾಹಸ ಪಡುತ್ತಿದ್ದರು. ಆದರೆ, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿ ಶುಭ ಬಿ. ಅವರು ಬಂದ ಬಳಿಕ ನಗರದಲ್ಲಿ ಕಟ್ಟು ನಿಟ್ಟಾಗಿ ಹಸಿ ಮತ್ತು ಒಣ ಕಸ ಬೇರ್ಪಡಿಕೆ ಶುರುವಾಯಿತು. ಆರಂಭದಲ್ಲಿ ಸಾರ್ವಜನಿಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪೌರ ಕಾರ್ಮಿಕರ ಜೊತೆಗೆ ಕೆಲ ಜನರು ವಾಗ್ವಾದ ಕೂಡ ಮಾಡಿದ್ದರು. ನಂತರದ ದಿನಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿದ್ದು ಈಗ ಶೇ.80ರಷ್ಟು ಹಸಿ ಮತ್ತು ಒಣ ಕಸವನ್ನು ತಾವೇ ಬೇರ್ಪಡಿಸಿ ಪೌರ ಕಾರ್ಮಿಕರಿಗೆ ನೀಡುತ್ತಿದ್ದಾರೆ.
66 ಎಕರೆಯಲ್ಲಿ ಕಸ ವಿಲೇವಾರಿ ಘಟಕ: ಬೆಳಗಾವಿ ತಾಲೂಕಿನ ತುರಮುರಿ ಗ್ರಾಮದ ಬಳಿಯ 66 ಎಕರೆ ಪ್ರದೇಶದಲ್ಲಿ 2009ರಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ನಗರದ ವಿವಿಧೆಡೆ ಮತ್ತು ಕೆಲವು ಗ್ರಾಮಗಳಿಂದ ಸಂಗ್ರಹಿಸುವ ಕಸವನ್ನು ಇಲ್ಲಿಯೇ ಸಂಸ್ಕರಿಸಲಾಗುತ್ತದೆ. ನಿತ್ಯ 120 ಟನ್ ಹಸಿ ಕಸ, 90 ಟನ್ ಒಣ ಕಸ ಶೇಖರಣೆಯಾಗುತ್ತಿದೆ. ಕಸ ಸಂಸ್ಕರಣೆ ಮಾಡಲು ತೆಲಂಗಾಣ ಮೂಲದ ರಾಮಕೀ ಕಂಪನಿಗೆ 2009 ರಿಂದ 2029ವರೆಗೆ ಟೆಂಡರ್ ನೀಡಲಾಗಿದೆ. ಟೆಂಡರ್ ಅವಧಿ ಪೂರ್ಣಗೊಂಡ ಬಳಿಕ ಎಲ್ಲ ಯಂತ್ರಗಳನ್ನು ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆಯೂ ಒಪ್ಪಂದವಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಕಸವನ್ನು ಸಂಸ್ಕರಣೆ ಮಾಡಿದ ಬಳಿಕ ಉಳಿಯುವ ನಿರುಪಯುಕ್ತ (ಇನ್ನರ್ಟ್) ತ್ಯಾಜ್ಯದ ಆಧಾರದ ಮೇಲೆ ರಾಮಕೀ ಅವರಿಗೆ ಹಣ ಪಾವತಿಸಲಾಗುತ್ತಿದೆ. ಪ್ರತಿ ಟನ್ಗೆ 1250 ರೂ. ನಿಗದಿ ಪಡಿಸಲಾಗಿದೆ. ಪ್ರತಿ ತಿಂಗಳು ಸುಮಾರು 38-40 ಲಕ್ಷ ರೂ. ಹಣ ಪಾವತಿಸಲಾಗುತ್ತಿತ್ತು. ಆದರೆ, ಈಗ ಶೇ.80ರಷ್ಟು ಹಸಿ ಮತ್ತು ಒಣ ಕಸ ಬೇರ್ಪಡಿಸುತ್ತಿರುವುದರಿಂದ ಇನ್ನರ್ಟ್ ಪ್ರಮಾಣ ಕಡಿಮೆಯಾಗಿ, ಅವರಿಗೆ ಪಾವತಿಸುವ ಮೊತ್ತವು 28-30 ಲಕ್ಷ ರೂಪಾಯಿಗೆ ಇಳಿಕೆಯಾಗಿದೆ. ಪ್ರತಿ ತಿಂಗಳು 8-10 ಲಕ್ಷ ರೂ. ಪಾಲಿಕೆಗೆ ಉಳಿತಾಯವಾಗಿದೆ.
![ಬೆಳಗಾವಿಯಲ್ಲಿ ಕಸ ವಿಲೇವಾರಿ, wet dry waste, Belagavi corporation](https://etvbharatimages.akamaized.net/etvbharat/prod-images/15-02-2025/23547309_gobbara.jpg)
ಕಸ ಸಂಸ್ಕರಣೆ ಪ್ರಕ್ರಿಯೆ ಹೇಗೆ ನಡೆಯುತ್ತೆ..? ಮನೆ ಮನೆಗಳಿಂದ ಸಂಗ್ರಹಿಸಿದ ಕಸವನ್ನು ತುಂಬಿಕೊಂಡು ಬರುವ ಪಾಲಿಕೆ ವಾಹನಗಳನ್ನು ಮೊದಲಿಗೆ ತೂಕದ ಪರೀಕ್ಷೆ ಮಾಡಲಾಗುತ್ತದೆ. ನಂತರ ಕಸವನ್ನು ಹೊರಗಡೆ ಡಂಪ್ ಮಾಡಲಾಗುತ್ತದೆ. ಅದನ್ನು 21 ದಿನ ಕೊಳೆಯಲು ಬಿಡುತ್ತಾರೆ. ಚನ್ನಾಗಿ ಕೊಳೆಯಲು ಇಎಂ ಕಲ್ಚರ್ ಕೆಮಿಕಲ್ ಸಿಂಪಡಿಸಲಾಗುತ್ತದೆ. ಕಸದಿಂದ ಹೊರ ಹೊಮ್ಮುವ ನೀರಿನ ತ್ಯಾಜ್ಯವು ಅಲ್ಲಿಯೇ ಪಕ್ಕದ ಗುಂಡಿಯಲ್ಲಿ ಸಂಗ್ರಹವಾಗುತ್ತದೆ. ಕಸ ಪೂರ್ತಿ ಕೊಳೆತ ಬಳಿಕ 35 ಎಂಎಂ ಟ್ರಾಮೆಲ್ ಯಂತ್ರದಲ್ಲಿ ಹಾಕಿದ ಮೇಲೆ ಪ್ಲಾಸ್ಟಿಕ್, ಗಾಜು, ಕಲ್ಲು ಸೇರಿದಂತೆ ಇನ್ನುಳಿದ ಕಸವನ್ನು ಪ್ರತ್ಯೇಕಿಸಲಾಗುತ್ತದೆ. ಬಳಿಕ 16 ಎಂಎಂ ಟ್ರಾಮೆಲ್ ಯಂತ್ರದಲ್ಲಿ ಮತ್ತಷ್ಟು ಕಸವನ್ನು ಪಿಲ್ಟರ್ ಮಾಡಲಾಗುತ್ತದೆ. ಕೊನೆಗೆ 4 ಎಂಎಂ ಯಂತ್ರದಲ್ಲಿ ಬೇರ್ಪಡಿಸಿದಾಗ ಉತ್ತಮ ಗುಣಮಟ್ಟದ ಗೊಬ್ಬರ ತಯಾರಾಗುತ್ತಿದೆ. ಇಲ್ಲಿ 35 ಜನರು ಎರಡು ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಾರೆ. ಪಾಲಿಕೆಯಿಂದ ಇಬ್ಬರು ಮೇಲ್ವಿಚಾರಕನ್ನು ನೇಮಕ ಮಾಡಲಾಗಿದೆ ಎಂದು ಈ ಟಿವಿ ಭಾರತಕ್ಕೆ ಪಾಲಿಕೆ ಪರಿಸರ ಅಭಿಯಂತರ ಹನುಮಂತ ಕಲಾದಗಿ ತಿಳಿಸಿದರು.
![ಬೆಳಗಾವಿಯಲ್ಲಿ ಕಸ ವಿಲೇವಾರಿ, wet dry waste, Belagavi corporation](https://etvbharatimages.akamaized.net/etvbharat/prod-images/15-02-2025/23547309_gobbar.jpg)
ಪೌರಕಾರ್ಮಿಕರು ಎಷ್ಟಿದ್ದಾರೆ..? 373 ನೇರ ಪಾವತಿ, 272 ಖಾಯಂ, 689 ಗುಂಪು ಕಾರ್ಮಿಕರು ಸೇರಿ ಒಟ್ಟು 1334 ಪೌರ ಕಾರ್ಮಿಕರು ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಸ ವಿಲೇವಾರಿಗೆ ಬಳಸುವ ವಾಹನಗಳೇಷ್ಟು..? ಬೆಳಗಾವಿ ನಗರದಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ 114 ಆಟೋ ಟಿಪ್ಪರ್ , 11 ಕಾಂಪ್ಯಾಕ್ಟರ್, 8 ಟಿಪ್ಪರ್, 3 ಜೆಸಿಬಿ, 3 ಸಕ್ಕಿಂಗ್ ಯಂತ್ರವುಳ್ಳ ವಾಹನ, 2 ಸಕ್ಕಿಂಗ್ ಕಮ್ ಜಟ್ಟಿಂಗ್ ವಾಹನ, 4 ಮ್ಯಾನ್ ಹೋಲ್ ಡಿಸಿಲ್ಟಿಂಗ್ ಯಂತ್ರಗಳ ವಾಹನ ಸೇರಿ ಒಟ್ಟು 172 ವಾಹನಗಳನ್ನು ಬಳಸಲಾಗುತ್ತಿದೆ.
ಕಸದ ಪ್ರಕಾರಗಳು:
- ಹಸಿ ಕಸ: ತರಕಾರಿ, ಹಣ್ಣು, ಆಹಾರ, ಮಾಂಸ, ಹೂ-ಎಲೆ ತ್ಯಾಜ್ಯ ಹಸಿ ಕಸ ಎಂದು ಪರಿಗಣಿಸಲಾಗುತ್ತದೆ. ಯಾವ ವಸ್ತು ಕೊಳೆಯುತ್ತದೆಯೋ ಅದು ಹಸಿ ಕಸವಾಗುತ್ತದೆ.
- ಒಣ ಕಸ: ಬಾಕ್ಸ್, ಪ್ಲಾಸ್ಟಿಕ್ ಬಾಟಲಿ, ಪೇಪರ್, ಪ್ಲಾಸ್ಟಿಕ್ ಕಪ್-ಪ್ಲೇಟ್-ಚಮಚ, ಮೆಟಲ್, ಗ್ಲಾಸ್, ಬಟ್ಟೆ, ರಬ್ಬರ ತ್ಯಾಜ್ಯ. ಯಾವುದು ಕೊಳೆಯುವುದಿಲ್ಲವೋ ಅವುಗಳೆಲ್ಲಾ ಒಣ ಕಸ.
ಸ್ಯಾನಿಟರಿ-ಅಪಾಯಕಾರಿ ತ್ಯಾಜ್ಯ: ನ್ಯಾಪಕಿನ್, ಸ್ಯಾನಿಟೈಸರ್, ಡೈಪರ್, ಸಿರಿಂಜ್, ಅವಧಿ ಮುಗಿದ ಮಾತ್ರೆ, ಬ್ಯಾಂಡೇಜ್, ಟಾಯ್ಲೇಟ್ ಪೇಪರ್.
![ಬೆಳಗಾವಿಯಲ್ಲಿ ಕಸ ವಿಲೇವಾರಿ, wet dry waste, Belagavi corporation](https://etvbharatimages.akamaized.net/etvbharat/prod-images/15-02-2025/bgm-sagrigation-special-story_14022025170122_1402f_1739532682_383.jpg)
ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ. ಈಟಿವಿ ಭಾರತ ಜೊತೆಗೆ ಮಾತನಾಡಿ, ಈ ಹಿಂದೆ ಎಲ್ಲ ಕಸ ಮಿಕ್ಸ್ ಆಗಿ ಬರುತ್ತಿತ್ತು. ಜನಪ್ರತಿನಿಧಿಗಳು, ಶಾಸಕರು, ಅಧಿಕಾರಿಗಳು, ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಶೇ.80ರಷ್ಟು ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ಸಂಗ್ರಹವಾಗುತ್ತಿದೆ. ಇದರಿಂದಾಗಿ ಪ್ರತಿದಿನ 16 ಟನ್ ನಂತೆ, ತಿಂಗಳಿಗೆ 450 ಟನ್ ಗೊಬ್ಬರ ತಯಾರಿಸಲಾಗುತ್ತಿದೆ. ಪ್ರತಿ ತಿಂಗಳು ರಾಮಕೀ ಕಂಪನಿಗೆ 4 ಲಕ್ಷ ರೂ. ಆದಾಯ ಬರುತ್ತಿದೆ. ರಾಮಕೀ ಕಂಪನಿ ಜೊತೆಗೆ ಟೆಂಡರ್ ಅವಧಿ ಮುಗಿದ ಬಳಿಕ ಪಾಲಿಕೆಯಿಂದಲೇ ಕಸ ಸಂಸ್ಕರಣೆ ಶುರು ಮಾಡುವ ಯೋಜನೆಯಿದೆ ಎಂದರು.
![ಬೆಳಗಾವಿಯಲ್ಲಿ ಕಸ ವಿಲೇವಾರಿ, wet dry waste, Belagavi corporation](https://etvbharatimages.akamaized.net/etvbharat/prod-images/15-02-2025/bgm-sagrigation-special-story_14022025170122_1402f_1739532682_536.jpg)
ಹಸಿ ಮತ್ತು ಒಣ ಕಸ ಸರಿಯಾಗಿ ಬೇರ್ಪಡಿಸದ ಮತ್ತು ಒಳಚರಂಡಿ ನಿರ್ವಹಣೆ ಸರಿಯಾಗಿ ಆಗದ ಹಿನ್ನೆಲೆಯಲ್ಲಿ ಬೆಳಗಾವಿ ಪಾಲಿಕೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 1.80 ಕೋಟಿ ರೂ. ದಂಡವನ್ನು ವಿಧಿಸಿದೆ. ಹೀಗೆ ಇಡೀ ರಾಜ್ಯಕ್ಕೆ 2,900 ಕೋಟಿ ದಂಡ ವಿಧಿಸಲಾಗಿದೆ. ಇದನ್ನು ರಾಜ್ಯ ಸರ್ಕಾರವೇ ಭರಿಸಿದೆ. ಮುಂದಿನ ವರ್ಷದಿಂದ ನಾವೇ ತುಂಬಬೇಕಾಗುತ್ತದೆ. ಹಾಗಾಗಿ, ಎಚ್ಚೆತ್ತುಕೊಂಡು ದಂಡ ವಿಧಿಸದಂತೆ ಕ್ರಮ ವಹಿಸುತ್ತಿದ್ದೇವೆ ಎಂದು ಅಭಿಯಂತರ ಹನುಮಂತ ಕಲಾದಗಿ ತಿಳಿಸಿದರು.
ಇದನ್ನೂ ಓದಿ: ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು
ಕಸ ಸಂಸ್ಕರಣೆ ಕಾರ್ಯಾಚರಣೆ ಉಸ್ತುವಾರಿ ಪುರುಷೋತ್ತಮ ರೆಡ್ಡಿ ಮಾತನಾಡಿ, ಮೂರು ತಿಂಗಳ ಹಿಂದೆ ಮಿಕ್ಸ್ ಕಸ ಬರುತ್ತಿತ್ತು. ಈಗ ಪ್ರತ್ಯೇಕವಾಗಿ ಕಸ ರವಾನೆಯಾಗುತ್ತಿದೆ. ದಿನವೂ 100-120 ವಾಹನಗಳಲ್ಲಿ ಕಸ ಬರುತ್ತದೆ. ಕಸ ತೂಕ ಮಾಡುತ್ತೇವೆ. ಬಳಿಕ ವಾಹನಗಳಿಂದ ಕಸ ಖಾಲಿ ಮಾಡಿಸುತ್ತೇವೆ. ಬಳಿಕ 35 ದಿನಗಳ ನಂತರ ಕಸ ಕೊಳೆಯುವ ಎಲ್ಲಾ ಪ್ರಕ್ರಿಯೆ ಮುಗಿದು ಗೊಬ್ಬರ ತಯಾರಾಗುತ್ತದೆ. ಕ್ರಿಬ್ಕೋ ಕಂಪನಿಯವರು ಕಸವನ್ನು ಬ್ರ್ಯಾಂಡ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಟನ್ಗೆ 2 ಸಾವಿರ ರೂ. ದರ ನಿಗದಿ ಪಡಿಸಲಾಗಿದೆ ಎಂದು ವಿವರಿಸಿದರು.
![ಬೆಳಗಾವಿಯಲ್ಲಿ ಕಸ ವಿಲೇವಾರಿ, wet dry waste, Belagavi corporation](https://etvbharatimages.akamaized.net/etvbharat/prod-images/15-02-2025/bgm-sagrigation-special-story_14022025170122_1402f_1739532682_373.jpg)
ಹಸಿ ಮತ್ತು ಒಣ ಕಸ ಬೇರ್ಪಡಿಸಿ ವಿಂಗಡಣೆ ಮಾಡಲು ಹಿಂದಿನ ಪಾಲಿಕೆ ಆಯುಕ್ತರು ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಆದರೆ, ಈಗಿನ ಆಯುಕ್ತರಾದ ಶುಭ ಬಿ. ಅವರು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ. ಜನರಲ್ಲೂ ಈ ಬಗ್ಗೆ ಜಾಗೃತಿ ಬಂದಿದ್ದು, ಸ್ವಯಂ ಪ್ರೇರಿತರಾಗಿ ಕಸ ಬೇರ್ಪಡಿಸಿ ಕೊಡುತ್ತಿದ್ದಾರೆ. ಆದರೆ, ಇದು ಬ್ಲಾಕ್ ಸ್ಪಾಟ್ಗಳಲ್ಲಿ ಸಾಧ್ಯವಾಗುತ್ತಿಲ್ಲ. ಅಲ್ಲದೇ ಬೆಳಗಾವಿ ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ನಗರದ ಸ್ವಚ್ಛತೆ ನಿರ್ವಹಣೆ ಕಷ್ಟ ಸಾಧ್ಯವಾಗುತ್ತಿದೆ. ಹಾಗಾಗಿ, ಕನಿಷ್ಠ 1500-2000 ಪೌರ ಕಾರ್ಮಿಕರ ಅವಶ್ಯಕತೆಯಿದೆ ಎನ್ನುತ್ತಾರೆ ನಗರಸೇವಕ ಶಂಕರ ಪಾಟೀಲ.
ಮಹಾನಗರ ಪಾಲಿಕೆ ಆಯುಕ್ತರು ಎಲ್ಲ ಪೌರ ಕಾರ್ಮಿಕರಿಗೂ ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸುವಂತೆ ಸಭೆ ಮಾಡಿ ಸೂಚಿಸಿದರು. ಬಳಿಕ ನಾವು ಜನರಲ್ಲಿ ಜಾಗೃತಿ ಮೂಡಿಸಿದೆವು. ಅದರ ಪರಿಣಾಮ ಈಗ ಎಲ್ಲರಿಗೂ ಅರಿವು ಬಂದಿದೆ. ಶೇ.100ರಷ್ಟು ಗುರಿ ಮುಟ್ಟಲು ನಮ್ಮ ಜೊತೆ ಕೈಜೋಡಿಸುವಂತೆ ಪೌರ ಕಾರ್ಮಿಕ ಸಂತೋಷ ಕಾಂಬಳೆ ಕೋರಿದರು.
ಇದನ್ನೂ ಓದಿ: ಕಾಲುಬಾಯಿ ಲಸಿಕಾಕರಣ, ವಿವಿಧ ಕಾರ್ಯಕ್ರಮಗಳ ಅನುಷ್ಠಾನ: ಬೆಳಗಾವಿ ರಾಜ್ಯಕ್ಕೆ ಫಸ್ಟ್