ಕರ್ನಾಟಕ

karnataka

ಬಾಗಲಕೋಟೆ: ಅದ್ಧೂರಿಯಾಗಿ ನೆರವೇರಿದ ಕಿಚಡಿ ಜಾತ್ರೆ, ಜಟಾ ಪ್ರದರ್ಶನ ಜಾತ್ರೆ - Fair In bagalkote

By ETV Bharat Karnataka Team

Published : Sep 18, 2024, 10:20 AM IST

Updated : Sep 18, 2024, 3:19 PM IST

5 ಕಿಲೋ ಮೀಟರ್​ ಅಂತರದಲ್ಲಿರುವ ಎರಡು ಊರುಗಳಾದ ಚಿಮ್ಮಡ ಪಟ್ಟಣ ಹಾಗೂ ಮಹಾಲಿಂಗಪುರ ಪಟ್ಟಣದಲ್ಲಿ ಅದ್ಧೂರಿಯಾಗಿ ಕಿಚಡಿ ಜಾತ್ರೆ ಹಾಗೂ ಜಟಾ ಪ್ರದರ್ಶನ ಜಾತ್ರೆ ನಡೆಯಿತು.

Kichadi fair and Jata Pradarshana fair
ಕಿಚಡಿ ಜಾತ್ರೆ ಮತ್ತು ಜಟಾ ಪ್ರದರ್ಶನ ಜಾತ್ರೆ (ETV Bharat)

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಪಟ್ಟಣದ ಅಲ್ಲಮ್ಮ ಪ್ರಭುಲಿಂಗೇಶ್ವರ ದೇವಾಲಯದಲ್ಲಿ ಕಿಚಡಿ ಜಾತ್ರೆ ಹಾಗೂ ಮಹಾಲಿಂಗಪುರ ಪಟ್ಟಣದಲ್ಲಿ ಜಟಾ ಪ್ರದರ್ಶನ ಜಾತ್ರೆ ಮಂಗಳವಾರ ಅದ್ಧೂರಿಯಾಗಿ ನೆರವೇರಿತು.

ಬಾಗಲಕೋಟೆ: ಅದ್ಧೂರಿಯಾಗಿ ನೆರವೇರಿದ ಕಿಚಡಿ ಜಾತ್ರೆ, ಜಟಾ ಪ್ರದರ್ಶನ ಜಾತ್ರೆ (ETV Bharat)

ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಿಚಡಿ ಜಾತ್ರೆಯ ವೇಳೆ ಬೃಹದಾಕಾರದ ಪಾತ್ರೆಯಲ್ಲಿ ಕ್ವಿಂಟಲ್‌ಗಟ್ಟಲೆ ಬೇಳೆ, ಅಕ್ಕಿ ಕಿಚಡಿ, ಸಾರು ತಯಾರಿಸಿ ಭಕ್ತರಿಗೆ ವಿತರಿಸಲಾಯಿತು. ಹಿಂದಿನ ಕಾಲದಲ್ಲಿ ರೋಗ-ರುಜಿನಗಳು ಹರಡಿದಾಗ ಗ್ರಾಮ ಬಿಟ್ಟು ಜನರು ಇಲ್ಲಿಗೆ ಬಂದಿದ್ದರಂತೆ. ಆಗಿನ ಅಲ್ಲಮಪ್ರಭು ಸ್ವಾಮೀಜಿ ಭಕ್ತರಿಗೆ ಬೇಳೆ ಹಾಗೂ ಅಕ್ಕಿ‌ ಮಿಶ್ರಣದ ಕಿಚಡಿ ಅನ್ನ, ಸಾರು ಪ್ರಸಾದ ನೀಡಿದ್ದರಂತೆ. ಆಗ ಎಲ್ಲ ರೋಗ ಮಾಯವಾಗಿತ್ತೆಂಬ ನಂಬಿಕೆ ಇಲ್ಲಿದೆ. ಈ ನಂಬಿಕೆಯಿಂದಲೇ ಪ್ರತೀ ವರ್ಷ ಜಾತ್ರೆ ಸಮಯದಲ್ಲಿ ಕಿಚಡಿ ಮಾಡಿ, ಪ್ರಸಾದ ವಿತರಿಸಲಾಗುತ್ತದೆ.

ಮೊದಲು ಕೇವಲ 10 ಕೆ.ಜಿ.ಯಿಂದ ಪ್ರಾರಂಭವಾದ ಕಿಚಡಿ ಪ್ರಸಾದ ಈಗ 125 ಕೆ.ಜಿ.ಗೂ ಹೆಚ್ಚು ಪ್ರಮಾಣದಲ್ಲಿ ತಯಾರಿಸಾಗುತ್ತಿದೆ. ಭಕ್ತರು ನೀಡಿದ ದೇಣಿಗೆಯಲ್ಲಿ ಪ್ರತೀ ವರ್ಷ ಪ್ರಮಾಣ ಹೆಚ್ಚಾಗುತ್ತಾ ಸಾಗಿದೆ. ಈಗಿನ ಪ್ರಭುಲಿಂಗೇಶ್ವರ ಸ್ವಾಮೀಜಿ ಪ್ರಸಾದಕ್ಕೆ ಪೂಜೆ ಸಲ್ಲಿಸಿದ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಶಾಸಕರು, ಸಂಸದರು ಸೇರಿದಂತೆ ಇತರೆ ಜನಪ್ರತಿನಿಧಿಗಳು, ಮಹಾರಾಷ್ಟ್ರ ಸುತ್ರಮುತ್ತಲಿನ ಭಕ್ತರು ಆಗಮಿಸಿ, ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಹರಕೆ ತೀರಿಸಿದರು.

ಜಟಾ ಪ್ರದರ್ಶನ ಜಾತ್ರೆ: ಇನ್ನೊಂದೆಡೆ, ಮಹಾಲಿಂಗಪುರ ಪಟ್ಟಣದ ಮಹಾಲಿಂಗೇಶ್ವರ ಮಠದ ಜಟಾ ಪ್ರದರ್ಶನ ಜಾತ್ರೆಯಲ್ಲಿ ಭಕ್ತರು ಪವಾಡಪುರುಷ ಮಹಾಲಿಂಗೇಶ್ವರ ಜಟೆ ವೀಕ್ಷಿಸಿ ಧನ್ಯರಾದರು. ಮಹಾಲಿಂಗೇಶ್ವರ ಜಟೆ ಲಿಂಗ್ಯಕ್ಯರಾದ ಬಳಿಕ ಅವರ ತಲೆ ಕೂದಲನ್ನು ಹಾಗೆಯೇ ಇಡಲಾಗಿದೆ. ಅದು ಜೀವಂತವಿದೆ. ಪ್ರತೀ ವರ್ಷ ಸ್ವಲ್ಪ ಪ್ರಮಾಣದಲ್ಲಿ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಭಕ್ತರಿಗೆ ಜಟೆ ವೀಕ್ಷಿಸಲು ಅವಕಾಶವಿದೆ. ಅದನ್ನೇ ಜಾತ್ರೆಯಾಗಿ ಆಚರಿಸಲಾಗುತ್ತದೆ.

ತಲೆಕೂದಲು ಈಗ ಜಟಾ ರೂಪದಲ್ಲಿ ಬೆಳೆದಿದೆ. ಮಹಾಲಿಂಗೇಶ್ವರ ಮಠದ ಈಗಿನ‌ ಸ್ವಾಮೀಜಿ ಕೊಠಡಿಯಲ್ಲಿಟ್ಟು ಬೀಗ ಹಾಕಿದ್ದ ಜಟಾ ತೆಗೆದು ಮತ್ತೆ ಶುದ್ಧ ಮಾಡಿ, ಪೂಜೆ ಸಲ್ಲಿಸಿ, ಭಕ್ತರಿಗೆ ‌ಸಾಮೂಹಿಕವಾಗಿ ಜಟಾ ಬೆಳೆದಿರುವ ಬಗ್ಗೆ ಪ್ರದರ್ಶಿಸಿ ಮರಳಿ ಕೊಠಡಿಯಲ್ಲಿ ಇರಿಸಲಾಗುತ್ತದೆ. ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಮೊದಲು ಜಟಾ ಪೂಜೆ ನಂತರ ಉಳಿದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ.

ಚಿಮ್ಮಡ ಗ್ರಾಮದಿಂದ ಮಹಾಲಿಂಗಪುರ ಪಟ್ಟಣ 5 ಕೀಲೋ ಮೀಟರ್ ಅಂತರದಲ್ಲಿದೆ.

ಇದನ್ನೂ ಓದಿ:ಚಾಮರಾಜೇಶ್ವರ ರಥೋತ್ಸವ ಸಂಪನ್ನ: ಇಲ್ಲಿ ನವಜೋಡಿಗಳದ್ದೇ ಕಲರವ - Sri Chamarajeshwar Rathothsava

Last Updated : Sep 18, 2024, 3:19 PM IST

ABOUT THE AUTHOR

...view details