ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಕಾಶಿ ವಿಶ್ವನಾಥನ ದರ್ಶನ: ಮಾದರಿ ಶಿವಲಿಂಗ ನೋಡಲು ಹರಿದು ಬಂದ ಭಕ್ತಗಣ - MAHASHIVRATRI 2025

ಮಹಾಶಿವರಾತ್ರಿ ಅಂಗವಾಗಿ ಕಾಶಿ ವಿಶ್ವನಾಥ ದೇವಸ್ಥಾನ ಮಾದರಿಯ ಶಿವಲಿಂಗವನ್ನು ಹುಬ್ಬಳ್ಳಿ ನಗರದಲ್ಲಿ ಪ್ರತಿಷ್ಠಾಪಿಸಲಾಗಿದೆ.

KASHI VISHWANATH TEMPLE MODEL SHIVALINGA INSTALLED IN HUBBALLI
ಕಾಶಿ ವಿಶ್ವನಾಥ ಮಾದರಿಯಲ್ಲಿ ಶಿವಲಿಂಗ ಪ್ರತಿಷ್ಠಾಪನೆ (ETV Bharat)

By ETV Bharat Karnataka Team

Published : Feb 26, 2025, 3:58 PM IST

ಹುಬ್ಬಳ್ಳಿ: ಇಂದು ಹುಬ್ಬಳ್ಳಿಯ ಶಿವನ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ, ಅಭಿಷೇಕ, ಭಜನೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮಹಾ ಶಿವರಾತ್ರಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದಾರೆ.

ಕ್ಷಮತಾ ಸಂಸ್ಥೆ ಮತ್ತು ಕೇಂದ್ರ ಆಹಾರ ಸಚಿವ ಪ್ರಲ್ಹಾದ್​ ಜೋಶಿ ಅವರ ವತಿಯಿಂದ ದೇಶಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಕಾಶಿ ವಿಶ್ವನಾಥ ಮಂದಿರದ ಮಾದರಿ ನಿರ್ಮಿಸಲಾಗಿದ್ದು, ಜನರು ಹುಬ್ಬಳ್ಳಿಯಲ್ಲೇ ಕಾಶಿ ವಿಶ್ವನಾಥನ ದರ್ಶನ ಪಡೆಯುತ್ತಿದ್ದಾರೆ. ಶಿವರಾತ್ರಿ ಪ್ರಯುಕ್ತ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲೇ ಶಿವಲಿಂಗವನ್ನು ಪ್ರತಿಷ್ಠಾಪಿಸಿರುವುದು ವಿಶೇಷ.

ಕಾಶಿ ವಿಶ್ವನಾಥ ಮಾದರಿಯಲ್ಲಿ ಶಿವಲಿಂಗ ಪ್ರತಿಷ್ಠಾಪನೆ (ETV Bharat)

ಭಕ್ತರಾದ ಚಂದ್ರಶೇಖರ ಬೆಳವಡಿ 'ಈಟಿವಿ ಭಾರತ್​' ಜೊತೆ ಮಾತನಾಡಿ, "ನರೇಂದ್ರ ‌ಮೋದಿಯವರು ಪ್ರಧಾನಿಯಾದ ಮೇಲೆ ಕಾಶಿಯನ್ನು ಯಾವ ರೀತಿ ಅಭಿವೃದ್ಧಿಪಡಿಸಿದ್ದಾರೆ ಎಂಬುದು ಪ್ರಪಂಚಕ್ಕೆ ಗೊತ್ತಿದೆ. ಅಂಥ ಕಾಶಿ ವಿಶ್ವನಾಥನ ದರ್ಶನವನ್ನು ಪ್ರಲ್ಹಾದ್ ಜೋಶಿಯವರು ಹುಬ್ಬಳ್ಳಿಯಲ್ಲಿ ಮಾಡಿಸಿದ್ದಾರೆ. ಇದರಿಂದ ಇಡೀ ಹುಬ್ಬಳ್ಳಿಯ ಜನತೆ ವಿಶ್ವನಾಥನ ದರ್ಶನ ಪಡೆದು ಪುನೀತರಾಗಿದ್ದಾರೆ. ಆ ಕಾಶಿಗೂ ಈ‌ ಕಾಶಿಗೂ ಏನೂ ವ್ಯತ್ಯಾಸವಿಲ್ಲ. ತದ್ರೂಪವಾಗಿ ಮಾಡಿಸಿದ್ದಾರೆ" ಎಂದರು.

ಮತ್ತೋರ್ವ ಭಕ್ತರಾದ ವಿಜಯಾ ಮಾತನಾಡಿ, "ಕಾಶಿ ವಿಶ್ವನಾಥನ ದರ್ಶನ ಮಾಡಲು‌ ಕಾಶಿಗೆ ಹೋಗಬೇಕು. ಆದರೆ ಇಲ್ಲಿಯೇ ದರ್ಶನ ಪಡೆದಿದ್ದಕ್ಕೆ ತುಂಬಾ ಖುಷಿಯಾಯಿತು. ವಯಸ್ಸಾದವರನ್ನು ಕಾಶಿಗೆ ಕರೆದುಕೊಂಡು ಹೋಗಲು ಆಗುವುದಿಲ್ಲ. ಇಲ್ಲಿಯೇ ದರ್ಶನ ಮಾಡಿಸಬಹುದು" ಎಂದು ಹೇಳಿದರು.

ಕಾಶಿ ವಿಶ್ವನಾಥ ದೇವಸ್ಥಾನ ಮಾದರಿಯಲ್ಲಿ ಪ್ರತಿಷ್ಠಾಪನೆ (ETV Bharat)

"ಹುಬ್ಬಳ್ಳಿಯಲ್ಲೇ ಕಾಶಿಯ ವಿಶ್ವನಾಥನ ದರ್ಶನ ಪಡೆದಂತಾಗಿದೆ. ತುಂಬಾ ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ. ರುದ್ರಾಭಿಷೇಕ ಸೇರಿದಂತೆ ಹೋಮ ಹವನ ಮಾಡಿದ್ದಾರೆ, ತುಂಬಾ ಸಂತಸವಾಯಿತು" ಎಂದು ಭಕ್ತೆ ರೇಖಾ ತಿಳಿಸಿದರು.

ಸಿದ್ಧಾರೂಢಶ್ರಿ‌ ಗದ್ದುಗೆ ದರ್ಶನ ಪಡೆದ ಭಕ್ತರು:ಶಿವರಾತ್ರಿ ಅಂಗವಾಗಿ ಸಿದ್ಧಾರೂಢ ಮಠಕ್ಕೆ ಭಕ್ತರು ಆಗಮಿಸಿ ಸಿದ್ಧಾರೂಢಶ್ರಿ‌ ಮತ್ತು ಗುರುನಾಥರೂಢ ಗದ್ದುಗೆ ದರ್ಶನ ಪಡೆದರು. ಇದಲ್ಲದೇ ಗೋಕುಲ ರಸ್ತೆಯಲ್ಲಿರುವ ಶಿವುಪರ ಕಾಲೊನಿ ಶಿವನ ಮೂರ್ತಿ, ಪಾಲಿಕೊಪ್ಪದ ಶಿವಧಾಮ, ಗೋಕುಲ ರಸ್ತೆಯಲ್ಲಿರುವ ಬಸವೇಶ್ವರ ದೇವಸ್ಥಾನ, ಉಣಕಲ್ ರಾಮಲಿಂಗೇಶ್ವರ, ಚಂದ್ರಮೌಳೇಶ್ವರ, ಜಯನಗರ ಈಶ್ವರ ದೇವಸ್ಥಾನ, ಸ್ಟೇಷನ್ ರಸ್ತೆ, ಈಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ, ಹೋಮ, ಹವನ ನಡೆಯಿತು.

ಇದನ್ನೂ ಓದಿ:ರಾಜ್ಯಾದ್ಯಂತ ಶಿವರಾತ್ರಿ ಸಂಭ್ರಮ: ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆ

ಇದನ್ನೂ ಓದಿ:ತ್ರಿನೇಶ್ವರ ದೇವಾಲಯದಲ್ಲಿ ಯದು ವಂಶಸ್ಥರಿಂದ ಪೂಜೆ: ಸಾರ್ವಜನಿಕವಾಗಿ 2ನೇ ಮಗನ ಹೆಸರು ಘೋಷಿಸಿದ ಯದುವೀರ್​ ಒಡೆಯರ್​

ABOUT THE AUTHOR

...view details