ಕರ್ನಾಟಕ

karnataka

ETV Bharat / state

30 ಜಿಲ್ಲೆಗಳ 30 ಕಲಾವಿದರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ - KARNATAKA FOLK ACADEMY AWARDS

ರಾಜ್ಯದ 30 ಮಂದಿ ಕಲಾವಿದರು ಜಾನಪದ ಅಕಾಡೆಮಿಯ ವಾರ್ಷಿಕ ಗೌರವ, ಇಬ್ಬರು ಜಾನಪದ ತಜ್ಞ ಪ್ರಶಸ್ತಿ ಹಾಗೂ ಐವರು ಪುಸ್ತಕ ಬಹುಮಾನಕ್ಕೆ ಭಾಜನರಾಗಿದ್ದಾರೆ.

Janapada Academy Press meet
ಜಾನಪದ ಅಕಾಡೆಮಿ ಅಧಿಕಾರಿಗಳಿಂದ ಸುದ್ದಿಗೋಷ್ಠಿ (ETV Bharat)

By ETV Bharat Karnataka Team

Published : Nov 5, 2024, 6:39 AM IST

ಬೆಂಗಳೂರು: 30 ಜಿಲ್ಲೆಗಳ 30 ಕಲಾವಿದರಿಗೆ ವಾರ್ಷಿಕ ಗೌರವ, ಇಬ್ಬರಿಗೆ ಜಾನಪದ ತಜ್ಞ ಪ್ರಶಸ್ತಿ, ಐವರಿಗೆ ಪುಸ್ತಕ ಬಹುಮಾನವನ್ನು ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿದೆ.

ವಾರ್ಷಿಕ ಗೌರವಕ್ಕೆ ಆಯ್ಕೆಯಾದವರು: ಬೆಂಗಳೂರು ನಗರ ಜಿಲ್ಲೆಯ ಕೆ.ಎಂ.ರಾಮಯ್ಯ (ಏಕತಾರಿ, ತಂಬೂರಿ), ಬೆಂಗಳೂರು ಗ್ರಾಮಾಂತರದ ಓಬಮ್ಮ (ಸೋಬಾನೆ), ರಾಮನಗರ ಜಿಲ್ಲೆ ರಂಗಯ್ಯ (ಪಟ ಕುಣಿತ), ಕೋಲಾರದ ತೋಪಣ್ಣ ಮಂಚಂಡಹಳ್ಳಿ (ಕೀಲುಕುದುರೆ), ಚಿಕ್ಕಬಳ್ಳಾಪುರದ ದೊಡ್ಡಕೂರ್ಲಪ್ಪ (ತಮಟೆ ವಾದನ), ತುಮಕೂರು ಜಿಲ್ಲೆಯ ಕದರಮ್ಮ (ಜನಪದ ಹಾಡು), ದಾವಣಗೆರೆ ಜಿಲ್ಲೆಯ ಕಾಟಮ್ಮ (ಕಥನ ಕಾವ್ಯ), ಚಿತ್ರದುರ್ಗದ ಸಿರಿಯಮ್ಮ (ಮಹಾಕಾವ್ಯ), ಶಿವಮೊಗ್ಗ ಜಿಲ್ಲೆ ಟೀಕಪ್ಪ (ಡೊಳ್ಳು ಕುಣಿತ), ಕೊಡಗು ಜಿಲ್ಲೆಯ ದೇವಕಿ ಕೆ.ಸಿ. (ಊರ್ಟಿಕೋಟ್‌), ಮಂಡ್ಯದ ಗುರುಬಸವಯ್ಯ (ತಂಬೂರಿಪದ), ಹಾಸನದ ವೀರಭದ್ರಯ್ಯ (ತತ್ವಪದ), ಚಿಕ್ಕಮಗಳೂರಿನ ನಾಗರಾಜಪ್ಪ ವೈ.ಪಿ. (ಕರಡಿಗೆ ಕಾವ್ಯ), ಮೈಸೂರಿನ ಗುರುಸಿದ್ದಯ್ಯ (ತಂಬೂರಿಪದ), ಉಡುಪಿಯ ಅಪ್ಪಿ (ಜನಪದ ಸೂಲಗಿತ್ತಿ), ದಕ್ಷಿಣ ಕನ್ನಡದ ಲೀಲಾವತಿ (ನಾಟಿವೈದ್ಯೆ), ಚಾಮರಾಜನಗರದ ಗೌರಮ್ಮ (ಸೋಬಾನೆಪದ), ಬೆಳಗಾವಿಯ ಶಿವನಪ್ಪ ಚಂದರಗಿ (ಡೊಳ್ಳುಕುಣಿತ), ಬಾಗಲಕೋಟೆಯ ಹನಮಂತ ವೆಂಕಪ್ಪ ಸುಗತೇಕರ (ಗೊಂದಳಿಪದ), ವಿಜಯಪುರದ ಇಮಾಂಬಿ ಇಮಾಮಸಾಬ (ತತ್ವಪದ), ಗದಗದ ಬಸಪ್ಪ ಹಡಗಲಿ (ಗೀಗೀ ಪದ), ಬಳ್ಳಾರಿಯ ದಳವಾಯಿ ಚಿತ್ತಪ್ಪ (ಜನಪದ ಮಹಾಕಾವ್ಯ), ಹಾವೇರಿಯ ಸಾವಕ್ಕಾ ಓಲೇಕಾರ (ಸೋಬಾನೆ, ಸಂಪ್ರಾದಯ ಪದ), ಉತ್ತರ ಕನ್ನಡದ ಈರಯ್ಯ ಮೊಗೇರ (ಕಾರಿನ್‌ಮನೆ ಕುಣಿತ, ಹೌಂದೇರಾಯನ ಕುಣಿತ), ಕಲಬುರಗಿ ಅಕ್ಕಮ್ಮ (ಸಂಪ್ರದಾಯ ಪದ), ಬೀದರ್‌ನ ಏಸಪ್ಪಾ (ಶಹನಾಯಿ), ರಾಯಚೂರಿನ ಶಾಂತಮ್ಮ (ಬುರ‍್ರಕಥೆ), ಕೊಪ್ಪಳದ ರೇವಣಪ್ಪ (ಡೊಳ್ಳಿನ ಹಾಡು, ಕುಣಿತ), ಧಾರವಾಡದ ರಾಮಪ್ಪ ಬಸವಂತಪ್ಪ ಮೂಲಗಿ (ಹಂತಿಪದ), ಯಾದಗಿರಿಯ ಅಮಯ್ಯಸ್ವಾಮಿ ಹಿರೇಮಠ (ಭಜನೆ) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ವಿಜೇತರು (ETV Bharat)

ತಜ್ಞ ಪ್ರಶಸ್ತಿ: ಜೀ.ಶಂ.ಪ ತಜ್ಞ ಪ್ರಶಸ್ತಿಗೆ ದಕ್ಷಿಣ ಕನ್ನಡದ ಕೆ. ಚಿನ್ನಪ್ಪ ಗೌಡ ಹಾಗೂ ಬಿ.ಎಸ್‌.ಗದ್ದಗಿಮಠ ತಜ್ಞ ಪ್ರಶಸ್ತಿಗೆ ವಿಜಯನಗರದ ಮಂಜುನಾಥ ಬೇವಿನಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ.

ಪುಸ್ತಕ ಬಹುಮಾನ: 2022ರ ಸಾಲಿನಲ್ಲಿ ಬೆಂಗಳೂರು ಬಿ.ಎಸ್‌.ಸ್ವಾಮಿ ಅವರ "ಜಾನಪದ ಲೇಖನ ಗುಚ್ಚ", ಬೆಂಗಳೂರು ಕುರುವ ಬಸವರಾಜು ಅವರ "ಭೌತಿಕ ವಸ್ತು ವಿಜ್ಞಾನ ಜಾನಪದ ಮತ್ತು ವಸ್ತು ಸಂಗ್ರಹಾಲಯಗಳ ಕುರಿತ ಲೇಖನಗಳು", ನಾಗ ಎಚ್‌.ಹುಬ್ಳಿ ಜಾರ್ಖಂಡ್‌ ಅವರ "ಆದಿವಾಸಿ ಸಂಸ್ಕೃತಿ", 2023ನೇ ಸಾಲಿನಲ್ಲಿ ಮೈಸೂರಿನ ವ.ನಂ.ಶಿವರಾಮು ಅವರ "ಜನಪದ–ಜಾನಪದ ಮತ್ತು ಕ್ಷೇತ್ರಕಾರ್ಯ" ಬೆಂಗಳೂರಿನ ವಿಜಯಶ್ರೀ ಸಬರದ ಅವರ "ಸಬರದ ಮತ್ತು ಜಾನಪದ" ಕೃತಿಗಳನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಶೀಘ್ರದಲ್ಲಿಯೇ ದಿನಾಂಕ ಮತ್ತು ಸ್ಥಳ ನಿಗದಿ ಮಾಡಲಾಗುವುದು. ಬೆಂಗಳೂರಿನಿಂದ ಹೊರಗೆ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ವಾರ್ಷಿಕ ಗೌರವ ಪ್ರಶಸ್ತಿಯು ತಲಾ 25 ಸಾವಿರ ರೂ., ತಜ್ಞ ಪ್ರಶಸ್ತಿ ತಲಾ 50 ಸಾವಿರ ರೂ., ಹಾಗೂ ಪುಸ್ತಕ ಪ್ರಶಸ್ತಿಯು ತಲಾ 25 ಸಾವಿರ ರೂ. ನಗದು, ಸ್ಮರಣಿಕೆ, ಶಾಲು, ಹಾರ, ಫಲ ತಾಂಬೂಲ ಹೊಂದಿರಲಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಶಂಕರಪ್ಪ ಸಂಕಣ್ಣವ‌ರ್, ಉಮೇಶ್, ಮಲ್ಲಿಕಾರ್ಜುನ ಕಲಮರಹಳ್ಳಿ, ಹುಲಿಕುಂಟೆ ಮೂರ್ತಿ, ದೇವಾನಂದ ವರಪ್ರಸಾದ, ರಿಜಿಸ್ಟ್ರಾರ್ ಎನ್.ನಮ್ರತ ಭಾಗವಹಿಸಿದ್ದರು.

ಇದನ್ನೂ ಓದಿ:ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಖಾಸಗಿ, ಸರ್ಕಾರಿ ಸಂಸ್ಥೆಗಳಲ್ಲಿ ಉತ್ಪಾದಿಸುವ ವಸ್ತುಗಳ ಮೇಲೆ ಕನ್ನಡ ಸೇರ್ಪಡೆ - ಸಿಎಂ ಘೋಷಣೆ

ABOUT THE AUTHOR

...view details