ಕಾರವಾರ(ಉತ್ತರ ಕನ್ನಡ) : ವಾಹನದ ಬ್ರೇಕ್ಡೌನ್ ಆದ ಪರಿಣಾಮ ಕಾಡಿನಲ್ಲಿ ಸಿಲುಕಿದ್ದ 20ಕ್ಕೂ ಹೆಚ್ಚು ಪ್ರವಾಸಿಗರನ್ನು 112 ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿರುವ ಘಟನೆ ಅಂಕೋಲಾ ತಾಲೂಕು ವ್ಯಾಪ್ತಿಯ ಯಾಣ ಘಟ್ಟದಲ್ಲಿ ನಡೆದಿದೆ.
ಬೆಂಗಳೂರು ಮೂಲದ 16 ಮಂದಿ ಯುವಕರು, 8 ಮಂದಿ ಯುವತಿಯರು ಹಾಗೂ ಓರ್ವ ಗೈಡ್ ಸೇರಿ 25 ಮಂದಿ ಮಿನಿ ಬಸ್ನಲ್ಲಿ ಯಾಣ ಪ್ರವಾಸಕ್ಕೆ ಬಂದಿದ್ದು, ಸಂಜೆ ಬೆಂಗಳೂರಿಗೆ ವಾಪಸ್ ಆಗುವಾಗ ವಾಹನದ ಬ್ರೇಕ್ಡೌನ್ ಆಗಿದೆ. ಯಾಣ ಘಟ್ಟದಲ್ಲಿ ನೆಟ್ವರ್ಕ್ ಇಲ್ಲದಿರುವುದು ಮತ್ತು ರಾತ್ರಿಯಾಗಿದ್ದರಿಂದ ಯಾವುದೇ ನೆರವು ದೊರೆಯದೇ ಪ್ರವಾಸಿಗರು ಕಂಗಾಲಾಗಿದ್ದರು ಎಂದು ವರದಿಯಾಗಿದೆ.
ಪ್ರವಾಸಿಗರು ಹಾಗೋ ಹೀಗೋ ಹರಸಾಹಸಪಟ್ಟು 112 ತುರ್ತು ನೆರವು ಸಂಖ್ಯೆಗೆ ಸಹಾಯ ಕೋರಿ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಗೋಕರ್ಣದ 112 ಸಿಬ್ಬಂದಿ ನೆರವಿಗೆ ಧಾವಿಸಲು ಸ್ಥಳದ ಮಾಹಿತಿಗಾಗಿ ಸಂಪರ್ಕಿಸಲು ಯತ್ನಿಸಿದರಾದರೂ ನೆಟ್ವರ್ಕ್ ಇಲ್ಲದ ಹಿನ್ನೆಲೆ ಸಂಪರ್ಕ ಸಾಧ್ಯವಾಗಿರಲಿಲ್ಲ. ಬಳಿಕ 112 ಸಿಬ್ಬಂದಿ ಯಾಣ ಘಟ್ಟದಲ್ಲಿ ಪ್ರವಾಸಿಗರನ್ನು ಹುಡುಕಿ ಹೊರಟಿದ್ದು, ರಾತ್ರಿ 9:45ರ ಸುಮಾರಿಗೆ ಪ್ರವಾಸಿಗರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರವಾಸಿಗರ ವಾಹನದ ಬ್ರೇಕ್ಡೌನ್ ಆಗಿದ್ದರಿಂದ ಜೆಸಿಬಿಯೊಂದರ ಸಹಾಯದಿಂದ ಅಚವೆ ಉಪಠಾಣೆ ಸಿಬ್ಬಂದಿ ನೆರವಿನೊಂದಿಗೆ ಪ್ರವಾಸಿಗರ ಬಸ್ನ್ನು ಸುರಕ್ಷಿತ ಸ್ಥಳಕ್ಕೆ ತಂದು ನಿಲ್ಲಿಸಿ, ಪ್ರವಾಸಿಗರನ್ನು ಬೇರೆ ವಾಹನದ ಮೂಲಕ ಹಿಲ್ಲೂರು ಮಾರ್ಗವಾಗಿ ಮುಖ್ಯ ಹೆದ್ದಾರಿಗೆ ತಲುಪಿಸಿದ್ದಾರೆ. ಬಳಿಕ ಅಲ್ಲಿಂದ ಎಲ್ಲ ಪ್ರವಾಸಿಗರೂ ಸುರಕ್ಷಿತವಾಗಿ ಬೆಂಗಳೂರಿಗೆ ತೆರಳಲು 112 ಸಿಬ್ಬಂದಿ ನೆರವಾಗಿದ್ದಾರೆ.
ತುರ್ತು ಸಂದರ್ಭದಲ್ಲಿ ನೆರವು ನೀಡಿ ಸುರಕ್ಷಿತವಾಗಿ ಕರೆತಂದ 112 ಸಿಬ್ಬಂದಿ ಕಾರ್ಯಕ್ಕೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಧನ್ಯವಾದ ತಿಳಿಸಿ ಬೆಂಗಳೂರಿಗೆ ವಾಪಸಾಗಿದ್ದಾರೆ.
ಇದನ್ನೂ ಓದಿ: ಸಿದ್ದಾಪುರ: ವಾಟೆಹೊಳೆ ಫಾಲ್ಸ್ನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಇದನ್ನೂ ಓದಿ: ಕುಸಿದ ಕಾಳಿ ಸೇತುವೆ ತೆರವು ವೇಳೆ ಪಿಲ್ಲರ್ ಮುರಿದು ನದಿಗೆ ಬಿದ್ದ ಸ್ಲ್ಯಾಬ್: ತಪ್ಪಿದ ಭಾರಿ ಅನಾಹುತ!