ಕಾಖಂಡಕಿ ಕರಿ ಹರಿಯುವ ಹಬ್ಬ (ETV Bharat) ವಿಜಯಪುರ:ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಕರಿ ಹರಿಯುವ ಹಬ್ಬ ಸಂಪ್ರದಾಯದಂತೆ ಈ ವರ್ಷವೂ ನಡೆಯಿತು. ನೋಡುಗರ ಮೈಮನ ಚಕಿತಗೊಳಿಸುವ, ಎತ್ತುಗಳನ್ನು ರೊಚ್ಚಿಗೆಬ್ಬಿಸಿ ಹುರುಪು ತುಂಬುವ ಹಬ್ಬ ಇದಾಗಿದೆ.
ಸುತ್ತಮುತ್ತಲಿನ ಹತ್ತೂರ ಜನ ಈ ಕಾಖಂಡಕಿ ಕರಿ ಹರಿಯುವ ಹಬ್ಬವನ್ನು ನೋಡಲು ಬಂದು ಪಾಲ್ಗೊಳ್ಳುತ್ತಾರಲ್ಲದೇ, ಇದರಲ್ಲಿ ಕೆಲವರು ಆಕಸ್ಮಿಕವಾಗಿ ಗಾಯಗೊಳ್ಳುತ್ತಾರೆ ಸಹ. ಕಾರಹುಣ್ಣಿಮೆಯ ಏಳನೇ ದಿನ ಆಚರಿಸಲ್ಪಡಲಾಗುತ್ತದೆ. ಒಂದರ್ಥದಲ್ಲಿ ಕಾಖಂಡಕಿ ಕರಿ ಎನ್ನುವುದು ಉತ್ತರ ಕರ್ನಾಟಕದ ಜಲ್ಲಿಕಟ್ಟು ಎಂದರೂ ಉತ್ಪ್ರೇಕ್ಷೆ ಆಗುವುದಿಲ್ಲ.
ಈ ಹಿಂದೆ ಕೆಲ ವರ್ಷಗಳಲ್ಲಿ ಎತ್ತುಗಳ ತಿವಿತಕ್ಕೊಳಗಾಗಿ ಹಲವರು ಗಾಯಗೊಂಡಿದ್ದರು. ಆ ಸಂಪ್ರದಾಯ ಈ ವರ್ಷವೂ ಮುಂದುವರೆದಿದ್ದು, ಈಗಾಗಲೇ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗ್ರಾಮದ ಅಗಸಿ, ಪಂಚಾಯಿತಿ ಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಓಡಾಡುವ ಎತ್ತುಗಳಿಂದ 2023ರಲ್ಲಿ, 2022ರಲ್ಲಿ ಐದಾರು ಜನ ಗಾಯಗೊಂಡಿದ್ದರೆ, 2021 ರಲ್ಲಿ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದ.
ಎತ್ತುಗಳನ್ನು ಶೃಂಗರಿಸಿ ಗ್ರಾಮದಲ್ಲಿ ಓಡಾಡಲು ಬಿಡಲಾಗುತ್ತದೆ. ಆ ಎತ್ತುಗಳಿಗೆ ನಾಲ್ಕು ಕಡೆಯಿಂದ ಹಗ್ಗಗಳಿಂದ ಬಂಧಿಸಿ ಹಿಡಿಯುವ ಗ್ರಾಮದ ಯುವಕರು, ಉದ್ದನೆಯ ಕೋಲಿಗೆ ಬಣ್ಣದ ಬಟ್ಟೆಯಿಂದ ಸುತ್ತಿದ ಕೋಲಿನಿಂದ ರೊಚ್ಚಿಗೇಳಿಸುತ್ತಾರೆ. ಈ ವೇಳೆ, ಎತ್ತುಗಳು ಯುವಕರನ್ನು ತಿವಿಯಲು ಪ್ರಯತ್ನಿಸುತ್ತದೆ. ಕೆಲ ಸಂದರ್ಭದಲ್ಲಿ ಈ ಕಾದಾಟ ನೋಡಲು ಬಂದ ಜನತೆಯ ಮೇಲೂ ಎತ್ತುಗಳು ತಿವಿಯಲು ಮುಂದಾಗುತ್ತದೆ. ಆದರೂ ಸಹಸ್ರಾರು ಸಂಖ್ಯೆಯಲ್ಲಿ ಸುತ್ತಲೂರಿನ ಜನತೆ ಪಾಲ್ಗೊಳ್ಳುವುದು ವಿಶೇಷತೆ.
ಪೊಲೀಸ್ ಇಲಾಖೆ, ಗ್ರಾಮದ ಗುರು ಹಿರಿಯರಿಂದ ಸಾಕಷ್ಟು ಎಚ್ಚರಿಕೆ ನೀಡಲಾಗಿರುತ್ತದೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಾಗುತ್ತದೆ. ವರ್ಷಕ್ಕೊಮ್ಮೆ ಬರುವ ಕಾಖಂಡಕಿ ಕಾರ ಹುಣ್ಣಿಮೆ ಕರಿ ಹರಿಯುವ ಹಬ್ಬ ಇದಾಗಿದ್ದು, ರೈತರ ಸಾಥಿಯಾಗಿರುವ ಬಸವಣ್ಣನಿಗೆ ಹುರುಪು ತುಂಬಲು ಆಚರಿಸಲಾಗುತ್ತದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ನಾಡಪ್ರಭುವಿನ ನಿತ್ಯ ಸ್ಮರಣೆ; ಕೊಡುಗೆ ಸ್ಮರಿಸುವ ಹಲವು ಸ್ಥಳಗಳು - Nadaprabhu Kempegowda