ಕರ್ನಾಟಕ

karnataka

By ETV Bharat Karnataka Team

Published : Jun 13, 2024, 5:22 PM IST

Updated : Jun 13, 2024, 5:43 PM IST

ETV Bharat / state

ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ನಾಳೆ ಬೆಂಗಳೂರಿಗೆ ಕುಮಾರಸ್ವಾಮಿ: ಅದ್ಧೂರಿ ಸ್ವಾಗತಕ್ಕೆ ಜೆಡಿಎಸ್ ಸಿದ್ಧತೆ - Union Minister Kumaraswamy

ಶುಕ್ರವಾರ ರಾಜ್ಯಕ್ಕೆ ಆಗಮಿಸಲಿರುವ ಕುಮಾರಸ್ವಾಮಿ ಅವರ ಸ್ವಾಗತಕ್ಕೆ ಜೆಡಿಎಸ್ ಸಿದ್ಧತೆ ಮಾಡಿಕೊಂಡಿದೆ.

ಹೆಚ್.ಡಿ. ಕುಮಾರಸ್ವಾಮಿ
ಹೆಚ್.ಡಿ. ಕುಮಾರಸ್ವಾಮಿ (ಫೋಟೋ ಕೃಪೆ: ಹೆಚ್​ಡಿಕೆ ಸಾಮಾಜಿಕ ಜಾಲತಾಣ)

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (ETV Bharat)

ಬೆಂಗಳೂರು:ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವರಾದ ನಂತರ ಮೊದಲ ಬಾರಿಗೆ ಶುಕ್ರವಾರ ಬೆಂಗಳೂರಿಗೆ ಆಗಮಿಸುತ್ತಿದ್ದು, ಅವರನ್ನು ಸ್ವಾಗತಿಸಲು ಜೆಡಿಎಸ್ ಅದ್ಧೂರಿ ಸಿದ್ಧತೆ ಮಾಡಿಕೊಂಡಿದೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾಧ್ಯಮಗೋಷ್ಟಿಯಲ್ಲಿ ಈ ಬಗ್ಗೆ ವಿವರ ನೀಡಿದರು.

ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಳೆ ಬೆಳಗ್ಗೆ 11.30ಕ್ಕೆ ಕುಮಾರಸ್ವಾಮಿ ಅವರು ಆಗಮಿಸಲಿದ್ದಾರೆ. ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಶುಕ್ರವಾರ ಮಧ್ಯಾಹ್ನ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿಮಾನ ನಿಲ್ದಾಣದಿಂದ ಜೆಡಿಎಸ್‌‍ ಕಚೇರಿಯವರೆಗೂ ಅವರನ್ನು ಮೆರವಣಿಗೆಯಲ್ಲಿ ಕರೆತರುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ‌. ಕೆಲವೊಂದು ಅನುಮತಿ ಬೇಕಿರುವ ಕಾರಣ ಸಂಜೆ ವೇಳೆಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಭಾರೀ ಮತಗಳ ಅಂತರದಿಂದ ಜಯ ಗಳಿಸಿರುವುದು ಹಾಗೂ ಮೊದಲ ಬಾರಿ ಕೇಂದ್ರ ಸಚಿವರಾಗಿರುವುದಕ್ಕೆ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಪಕ್ಷದ ವತಿಯಿಂದ ಅಭಿನಂದಿಸಲಾಗುತ್ತದೆ. ಮಾಜಿ ಸಚಿವರು, ಶಾಸಕರು ಹಾಗೂ ಪಕ್ಷದ ಮುಖಂಡರು ಅವರನ್ನು ಅಭಿನಂದಿಸಲಿದ್ದಾರೆ. ನಂತರ ಪದ್ಮನಾಭನಗರದಲ್ಲಿರುವ ನಿವಾಸಕ್ಕೆ ತೆರಳಿ ತಂದೆ ಹೆಚ್.ಡಿ. ದೇವೇಗೌಡರು ಹಾಗೂ ತಾಯಿಯ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಜೆಪಿ ನಗರದ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆದು ತಿರುಪತಿಗೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಶನಿವಾರ ರಾಮನಗರದಲ್ಲಿ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಭಾನುವಾರ ತಮ್ಮನ್ನು ಲೋಕಸಭೆಗೆ ಚುನಾಯಿಸಿದ ಮಂಡ್ಯ ಜಿಲ್ಲೆಯ ಜನರಿಗೆ ಧನ್ಯವಾದ ಅರ್ಪಿಸಲು ಮಂಡ್ಯಕ್ಕೆ ತೆರಳುವ ಕಾರ್ಯಕ್ರಮವಿದೆ ಎಂದು ತಿಳಿಸಿದರು.

ಹಾಸನದಲ್ಲಿ ಫಲಿತಾ‌ಶ ನಿರೀಕ್ಷಿಸಿರಲಿಲ್ಲ:ಹಾಸನ ಮಟ್ಟಕ್ಕೆ ಮಾತನಾಡುವುದಾದರೆ, ಅನಿರೀಕ್ಷಿತ ಬೆಳವಣಿಗೆ. ಈ ರೀತಿಯ ಫಲಿತಾಂಶ ಬರುತ್ತದೆ ಎಂಬ ನಿರೀಕ್ಷೆ ಮಾಡಿರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸಾಮಾನ್ಯ. ಅಲ್ಲಿ ಸೋತಿದ್ದೇವೆ ಎಂದು ಸುಮ್ಮನೆ ಕೂರಲ್ಲ. ಹಾಸನದಲ್ಲಿ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ. ಪಕ್ಷದ ಮುಂದಿನ ಸಂಘಟನೆಗೆ ಒತ್ತು ನೀಡುತ್ತೇವೆ. ಪೆನ್ ಡ್ರೈವ್ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದರು.

ಬೇರೆಯವರಿಗೆ ಮಾದರಿಯಾಗಿರಬೇಕು: ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ನಟ ದರ್ಶನ್ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ, ಸಾರ್ವಜನಿಕ ಬದುಕಿನಲ್ಲಿರುವಾಗ ನಮ್ಮ ನಡೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಾರೆ. ನಮ್ಮ ವೈಯಕ್ತಿಕ ಜೀವನ ತೆರೆದ ಪುಸ್ತಕ ಆಗಿರಬೇಕು. ಬೇರೆಯವರಿಗೆ ಮಾದರಿ ಆಗಿರಬೇಕು. ಅದು ಚಿತ್ರ ನಟರೇ ಆಗಲಿ, ರಾಜಕಾರಣಿಗಳೇ ಆಗಲಿ. ಸದ್ಯ ಕೊಲೆ ಸಂಬಂಧ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಮಾತನಾಡುತ್ತೇನೆ. ನಟರಾದವರು ಸಾರ್ವಜನಿಕರಿಗೆ ಆದರ್ಶ ಆಗಿರಬೇಕು ಎಂದರು.

ಇದನ್ನೂ ಓದಿ:ಮೋದಿ 3.0 ಕ್ಯಾಬಿನೆಟ್: ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ - Allocation of Portfolios

ಕೇಂದ್ರದ ಸಚಿವ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡ್ತಾರೆಂಬ ಡಿ‌.ಕೆ. ಸುರೇಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನಿಖಿಲ್​ ಕುಮಾರಸ್ವಾಮಿ ಅವರು, ಡಿ.ಕೆ. ಸುರೇಶ್ ಮಾತಿಗೆಲ್ಲ ಉತ್ತರ ಕೊಡುವ ಅಗತ್ಯತೆ ಇಲ್ಲ. ನರೇಂದ್ರ ಮೋದಿ ಅವರು ದೇಶ ಕಟ್ಟುವ ಜವಾಬ್ದಾರಿಯನ್ನು ಕುಮಾರಸ್ವಾಮಿ ಅವರಿಗೆ ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ದೇಶ ಸೇರಿ ನಾವು ರಾಜ್ಯ ಕಟ್ಟುವ ಕೆಲಸ ಮಾಡುತ್ತೇವೆ ಎಂದರು.

ವರಿಷ್ಠರ ನಿರ್ಧಾರ: ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಭ್ಯರ್ಥಿ ಯಾರು ಆಗಬೇಕೆಂದು ವರಿಷ್ಠರು ನಿರ್ಧಾರ ಮಾಡುತ್ತಾರೆ. ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರ ಅಭಿಪ್ರಾಯ ಪಡೆದು, ಅಂತಿಮವಾಗಿ ಆ ವರದಿಯನ್ನು ವರಿಷ್ಠರಿಗೆ ಸಲ್ಲಿಕೆ ಮಾಡುತ್ತೇವೆ. ಸದ್ಯಕ್ಕೆ ಅಲ್ಲಿ ನನ್ನ ಸ್ಪರ್ಧೆ ಚರ್ಚೆ ಅಪ್ರಸ್ತುತ. ಸಿ.ಪಿ‌.ಯೋಗೇಶ್ವರ್ ಕೂಡ ಮೈತ್ರಿ ಅಭ್ಯರ್ಥಿ ಗೆಲುವಿಗೆ ಕಾರಣರಾಗಿದ್ದಾರೆ. ಹೀಗಾಗಿ ಅಂತಿಮವಾಗಿ ಅಭ್ಯರ್ಥಿ ಯಾರಾಗಬೇಕೆಂದು ಎರಡು ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

ಕುಮಾರಸ್ವಾಮಿ ಅವರ ಅನುಭವ ಮೆಚ್ಚಿ ಕೇಂದ್ರದಲ್ಲಿ ಸಚಿವರಾಗಿ ಅವಕಾಶ ಮಾಡಿಕೊಟ್ಟಿದ್ದಾರೆ. ನವದೆಹಲಿಯ ಕಚೇರಿಯಲ್ಲಿ ಕೆಲಸ ಆರಂಭ ಮಾಡಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರಲ್ಲಿ ವಿಶ್ವಾಸ ಇದೆ. ಅವರಿಗೆ ಸಾಕಷ್ಟು ಚಾಲೆಂಜ್ ಇರುವ ಖಾತೆ ಕೊಟ್ಟಿದ್ದಾರೆ. ಈಗಾಗಲೇ ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಕಡತಕ್ಕೆ ಸಹಿ ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ಜನತೆ ಗೌರವವಿಟ್ಟು, ಪ್ರೀತಿ ತೋರಿಸಿದ್ದಾರೆ. ತಮ್ಮ ನಿರೀಕ್ಷೆಗೂ ಮೀರಿ ಕುಮಾರಸ್ವಾಮಿ ಅವರು ನಂಬಿಕೆ ಉಳಿಸಿಕೊಳ್ಳುತ್ತಾರೆ ಎಂದು ವಿಶ್ವಾಸ ನಿಖಿಲ್​ ಕುಮಾರಸ್ವಾಮಿ ವ್ಯಕ್ತಪಡಿಸಿದರು.

ಕೋಲಾರ ಸಂಸದ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಹೆಚ್​ಡಿಕೆ ಕೇಂದ್ರ ಸಚಿವರಾಗುತ್ತಿದ್ದಂತೆ ವಿಐಎಸ್​ಎಲ್​ ಕಾರ್ಮಿಕರಲ್ಲಿ ಹೊಸ ಭರವಸೆ - VISL Steel Factory

Last Updated : Jun 13, 2024, 5:43 PM IST

ABOUT THE AUTHOR

...view details