ಕರ್ನಾಟಕ

karnataka

ETV Bharat / state

ಲೋಕಾಯುಕ್ತ ತನಿಖೆ ಮೇಲೆ ನನಗೆ ನಂಬಿಕೆ ಇಲ್ಲ: ಆರ್​ಟಿಐ ಕಾರ್ಯಕರ್ತ ಗಂಗರಾಜು

ಮುಡಾ ಪ್ರಕರಣ ತನಿಖೆ ನಡೆಸುತ್ತಿರುವ ಇ.ಡಿ ಮೇಲೆ ನನಗೆ ನಂಬಿಕೆ ಇದೆ ಎಂದು ಆರ್​ಟಿಐ ಕಾರ್ಯಕರ್ತ ಗಂಗರಾಜು ಹೇಳಿದ್ದಾರೆ.

ಆರ್​ಟಿಐ ಕಾರ್ಯಕರ್ತ ಗಂಗರಾಜು
ಆರ್​ಟಿಐ ಕಾರ್ಯಕರ್ತ ಗಂಗರಾಜು (ETV Bharat)

By ETV Bharat Karnataka Team

Published : 3 hours ago

ಮೈಸೂರು: "ಇ.ಡಿ (ಜಾರಿ ನಿರ್ದೇಶನಾಲಯ) ಮತ್ತು ಲೋಕಾಯುಕ್ತದಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣದ ತನಿಖೆ ನಡೆಯುತ್ತಿದೆ. ಅದರೆ ಲೋಕಾಯುಕ್ತದ ಮೇಲೆ ನನಗೆ ನಂಬಿಕೆ ಇಲ್ಲ, ಇ.ಡಿ ತನಿಖೆ ಮೇಲೆ ನಂಬಿಕೆ ಇದೆ. ನನಗೆ ಇ.ಡಿ ನೋಟಿಸ್​ ನೀಡಿದೆ. ಸೋಮವಾರ ಇ.ಡಿ ತನಿಖೆ‌ಗೆ ಹಾಜರಾಗುತ್ತೇನೆ" ಎಂದು ಆರ್​ಟಿಐ ಕಾರ್ಯಕರ್ತ ಗಂಗರಾಜು ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನನಗೆ ಯಾವ ಪ್ರಕರಣ ಸಂಬಂಧ ಇ.ಡಿ ನೋಟಿಸ್​ ನೀಡಿದೆ ಗೊತ್ತಿಲ್ಲ. ಏಕೆಂದರೆ ನಾನು 3 ಪ್ರಕರಣಗಳಲ್ಲಿ ದೂರು ನೀಡಿದ್ದೇನೆ. ಮುಡಾ ವಿಚಾರ ಸಂಬಂಧ ನಾನು‌ ಇ.ಡಿಗೆ ದೂರು ನೀಡಿಲ್ಲ. ಅದರೆ ಅವರಿಗೆ ನನ್ನಿಂದ ಯಾವ ದಾಖಲೆ ಬೇಕೆಂಬುದು ಗೊತ್ತಿಲ್ಲ. ಪೊಲೀಸ್ ಭವನಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದೇನೆ. ಅದಕ್ಕೆ ವಿಚಾರಣೆಗೆ ಕರೆದಿದ್ದಾರಾ ಗೊತ್ತಿಲ್ಲ" ಎಂದರು.

ಆರ್​ಟಿಐ ಕಾರ್ಯಕರ್ತ ಗಂಗರಾಜು (ETV Bharat)

"ಯಾವ ವಿಷಯ ಸಂಬಂಧ ವಿಚಾರಣೆಗೆ ಕರೆದಿದ್ದಾರೆ ಅನ್ನೋದನ್ನು ನೋಟಿಸ್​ನಲ್ಲಿ ತಿಳಿಸಿಲ್ಲ. ಎಲ್ಲ ವೈಯಕ್ತಿಕ ಮಾಹಿತಿಯೊಂದಿಗೆ ವಿಚಾರಣೆಗೆ ಹಾಜರಾಗಿ ಎಂದಷ್ಟೇ ತಿಳಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಒಂದು ತನಿಖಾ ಸಂಸ್ಥೆ ತನಿಖೆ ಮಾಡಬೇಕಾದರೆ ನಾವು ಕಾನೂನಿನ ಚೌಕಟ್ಟಿನಲ್ಲಿ ಕೇಳಿದ ದಾಖಲೆಗಳನ್ನು ಮತ್ತು ಮಾಹಿತಿಗಳನ್ನು ಒದಗಿಸುವುದು ನಾಗರಿಕನ ಕರ್ತವ್ಯ. ಹೀಗಾಗಿ ಹಾಜರಾಗುತ್ತೇನೆ" ಎಂದು ಹೇಳಿದರು.

"ಮೈಸೂರು ಲೋಕಾಯುಕ್ತ ಪೊಲೀಸರು ಸಿಎಂ ಪತ್ನಿಯ ವಿಚಾರಣೆ ನಡೆಸಿರುವುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಗೌಪ್ಯವಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅವರನ್ನು ಗೌಪ್ಯವಾಗಿ ವಿಚಾರಣೆ ಮಾಡುವ ಅವಶ್ಯಕತೆ ಇಲ್ಲ. ಬೇರೆಯವರಿಗಾದರೆ ನೋಟಿಸ್ ನೀಡಿ ಮಾಧ್ಯಮಗಳಿಗೆ ತಿಳಿಯುವಂತೆ ವಿಚಾರಣೆ ನಡೆಯುತ್ತದೆ. ಅವರು ಕೂಡ ಪ್ರಕರಣದಲ್ಲಿ ಎಲ್ಲರಂತೆ ಆಪಾದಿತರು" ಎಂದರು.

ಇದನ್ನೂ ಓದಿ:ಮುಡಾ ವಿವಾದಿತ ಜಮೀನಿನ ಫೋಟೋಗಳನ್ನು ತನಿಖೆಗೆ ಬಳಸಿ: ಲೋಕಾಯುಕ್ತರಿಗೆ ಸ್ನೇಹಮಯಿ ಕೃಷ್ಣ ಮನವಿ

ABOUT THE AUTHOR

...view details