ಕರ್ನಾಟಕ

karnataka

By ETV Bharat Karnataka Team

Published : Jun 21, 2024, 10:36 PM IST

ETV Bharat / state

ಪ್ರಧಾನಿ, ಸಿಎಂ, ಡಿಸಿಎಂ ಮತ್ತು ಸಚಿವರ ವಿರುದ್ಧ ದುರ್ಭಾಷೆ ಬಳಸಬಾರದು: ಹೈಕೋರ್ಟ್ - High Court

ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಜಕೀಯ ನಾಯಕರ ಅವಹೇಳನಾಕಾರಿ ಹೇಳಿಕೆಗಳ ಬಗ್ಗೆ ಕಿಡಿಕಾರಿರುವ ಹೈಕೋರ್ಟ್, ರಾಜಕೀಯ ನಾಯಕರು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ತಿಳಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

ಬೆಂಗಳೂರು: ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಜಕೀಯ ನಾಯಕರ ಅವಹೇಳನಾಕಾರಿ ಹೇಳಿಕೆಗಳಿಗೆ ಕಿಡಿಕಾರಿರುವ ಹೈಕೋರ್ಟ್, ಚುನಾವಣೆಗಳ ಸಂದರ್ಭದಲ್ಲಿ ಮನುಷ್ಯನ ನಾಲಿಗೆ ಮತ್ತು ಮೆದುಳಿನ ನಡುವಿನ ಸೇತುವೆ ಕುಸಿಯದಂತೆ ನಿಗಾ ವಹಿಸಬೇಕು ಎಂದು‌ ಖಡಕ್‌ ಆಗಿ ಚಾಟಿ ಬೀಸಿದೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಂಚಿಕೊಂಡ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಸಾಮಾಜಿಕ ಜಾಲತಾಣದ ಉಸ್ತುವಾರಿ ಪ್ರಶಾಂತ್‌ ಮಾಕನೂರ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ, ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ವಿರುದ್ಧ ದುರ್ಭಾಷೆ ಬಳಸಬಾರದು ಎಂದು ಎಚ್ಚರಿಸಿತು.

ಅರ್ಜಿದಾರರ ವಿರುದ್ಧ ನಗರದ ಮಲ್ಲೇಶ್ವರಂ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಪ್ರತಿವಾದಿಯಾಗಿರುವ ಮಲ್ಲೇಶ್ವರ ಠಾಣಾ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.

ಇದಕ್ಕೂ ಮುನ್ನ ಪ್ರಕರಣದಲ್ಲಿ ಬಿಜೆಪಿ ರಾಜ್ಯಘಟಕದ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ರಾಜ್ಯದ ಸಿಎಂ ಮತ್ತು ಡಿಸಿಎಂ ಹಾಗೂ ಸಂಸದ ರಾಹುಲ್‌ ಗಾಂಧಿ ವಿರುದ್ಧ ಬಳಸಿರುವ ಭಾಷೆಯ ಕುರಿತು ಅರ್ಜಿದಾರರ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ ಪೀಠ, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ವಿರುದ್ಧ ದುರ್ಭಾಷೆ ಬಳಸಬಾರದು. ಗೌರವದ ಹಾಗೂ ಸುಂದರ ಭಾಷೆ ಬಳಸಬೇಕು. ಮಾತಿನಲ್ಲಿ ಪ್ರೀತಿ, ಜವಾಬ್ದಾರಿ, ಸೌಜನ್ಯ ಹಾಗೂ ಸಂಯಮ ಇರಬೇಕು. ಚುನಾವಣೆ ವೇಳೆ ಜನರಿಗೆ ಜ್ವರ ಬಂದಿರುತ್ತದೆ. ಅಂತಹ ಸಂದರ್ಭದಲ್ಲಿ ಏನೋನೋ ಮಾತನಾಡಿ ಜನರನ್ನು ಉದ್ವೇಗಕ್ಕೆ ಗುರಿಪಡಿಸಬಾರದು. ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಸಲಹೆ ನೀಡಿತು.

ವಿಚಾರಣೆ ವೇಳೆ ಕೆಲವೊಂದು ಅಹಿತಕರ ಘಟನೆ ನಡೆದಿರುವುದು ನಿಜ. ಅವುಗಳನ್ನು ಸರ್ಕಾರ ಸಹ ಖಂಡಿಸುತ್ತದೆ. ಆದರೆ, ಸಾರ್ವಜನಿಕವಾಗಿ ಸಿಎಂ ಹಾಗೂ ಡಿಸಿಎಂ ಅವರನ್ನು ನಿಂದಿಸುವುದು ಸರಿಯಲ್ಲ. ಹಾಗಾಗಿ, ವಿಚಾರಣೆಗೆ ಹಾಜರಾಗಲು ಅರ್ಜಿದಾರರಿಗೆ ಸೂಚಿಸುವುದಿಲ್ಲ. ಆದರೆ, ತನಿಖೆ ಮುಂದುವರಿಯಲು ಅನುಮತಿ ನೀಡಬೇಕು ಎಂದು ಸರ್ಕಾರದ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್‌.ಜಗದೀಶ್‌ ಕೋರಿದರು.

ಅದಕ್ಕೊಪ್ಪದ ನ್ಯಾಯಪೀಠ, ಚುನಾವಣೆ ಈಗಾಗಲೇ ಮುಗಿದಿದೆ. ಎಲ್ಲರ ಮೇಲೆ ತನಿಖೆ ನಡೆಸಬೇಕು ಎಂದಾದರೆ ಹೇಗೆ?. ಎಲ್ಲರನ್ನೂ ಜೈಲಿನಲ್ಲಿ ಕೂರಿಸೋದು ಹಾಗೂ ಎಲ್ಲರನ್ನೂ ಕಸ್ಟಡಿಗೆ ಕೇಳುವುದು ಸರಿಯಾದ ದಾರಿಯಲ್ಲ. ಹೀಗೆ ಮಾಡುತ್ತಾ ಹೋದರೆ ನಾಳೆ ಹೊರಗಡೆ ಇರುವವರಿಗಿಂತ ಜೈಲು ಹಾಗೂ ಕಸ್ಟಡಿಯಲ್ಲಿ ಇರುವವರ ಸಂಖ್ಯೆಯೇ ಹೆಚ್ಚಿರುತ್ತದೆ ಎಂದು ತಿಳಿಸಿತು.

ರಾಮಾಯಣ ಪ್ರಸಂಗ ಪ್ರಸ್ಥಾಪಿಸಿದ ನ್ಯಾಯಪೀಠ, ಸುಗ್ರೀವ ಹಾಗೂ ಆತನ ಸೈನ್ಯವು ಮರೆಯಲ್ಲಿ ನಿಂತು, ಸೀತೆಯನ್ನು ಹುಡುಕುತ್ತಾ ಬಂದ ರಾಮ-ಲಕ್ಷ್ಮಣ ಅವರನ್ನು ಮಾತನಾಡಿಸಲು ಹನುಮಂತನನ್ನು ಕಳುಹಿಸಿದ ಪ್ರಸಂಗ ರಾಮಾಯಣದಲ್ಲಿ ಬರುತ್ತದೆ. ಮೊದಲಿಗೆ ಹನುಮಂತನನ್ನು ನೋಡಿದ್ದ ಲಕ್ಷ್ಮಣ, ಆತ ರಾಕ್ಷಸನೇ ಇರಬೇಕು ಎಂದು ಭಾವಿಸಿದ್ದ. ಹುನುಮಂತನ ಸೌಜನ್ಯಯುತ ಮಾತು ಕೇಳಿದ ನಂತರ ಆತ ರಾಕ್ಷಸನಾಗಿರಲು ಸಾಧ್ಯವೇ ಇಲ್ಲ ನಿರ್ಧರಿಸಿದ್ದ. ಹಾಗಾಗಿ, ಮಾತನಾಡುವಾಗ ಗೌರವದ ಭಾಷೆ ಬಳಸಬೇಕು ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ವಿರೋಧ ಪಕ್ಷದವರು ಎಂದರೆ ಶತ್ರುಗಳಲ್ಲ. ಈಗ ಅವರ ಪಕ್ಷ ಅಧಿಕಾರದಲ್ಲಿ ಇರಬಹುದು. ಮುಂದಿನ ಬಾರಿ ಮತ್ತೊಂದು ಪಕ್ಷದವರು ಅಧಿಕಾರಕ್ಕೆ ಬರಬಹುದು. ಆದರೆ, ಸಾಂವಿಧಾನಿಕ ಹುದ್ದೆಯಲ್ಲಿರುವ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು. ವಿಶೇಷವಾಗಿ ಟ್ವೀಟ್‌ಗಳು ಸ್ವೀಟ್‌ ಆಗಿರಬೇಕು. ಹೊರತು ಅಸಿಡಿಟಿಯಿಂದ ಕೂಡಿರಬಾರದು. ದುರ್ಭಾಷೆ ಬಳಸಿದರೆ ನಾಗರಿಕತೆಯ ಮೌಲ್ಯಗಳು ಏನಾಗಬೇಕು?. ಶತೃಗಳನ್ನೂ ಗೌರವದಿಂದ ಕಾಣುವ ದೇಶ ನಮ್ಮದು ಎನ್ನುವುದನ್ನು ಯಾರೂ ಮರೆಯಬಾರದು ಎಂದು ಪೀಠ ಹೇಳಿತು.

ಇದನ್ನೂ ಓದಿ:ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ವಿವಾದಿತ ಹೇಳಿಕೆ: ಆಯೋಜಕರ ವಿರುದ್ಧದ ಪ್ರಕರಣಕ್ಕೆ ತಡೆ - Udhayanidhi Stalin

ABOUT THE AUTHOR

...view details