ಕರ್ನಾಟಕ

karnataka

ETV Bharat / state

ಗುರುವಾರ ಹಾಸನಾಂಬೆ ಗರ್ಭಗುಡಿ ಬಾಗಿಲು ಓಪನ್​: 9 ದಿನ ದೇವಿ ದರ್ಶನ ಭಾಗ್ಯ, ಆನ್​ಲೈನ್​ನಲ್ಲೂ​ ಬುಕ್ಕಿಂಗ್​ ವ್ಯವಸ್ಥೆ

ಗುರುವಾರ ಮಧ್ಯಾಹ್ನ ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗುತ್ತಿದೆ. ನವೆಂಬರ್ 3ರಂದು ಮಧ್ಯಾಹ್ನ 12 ಗಂಟೆಗೆ ಮತ್ತೆ ಗರ್ಭಗುಡಿ ಬಾಗಿಲನ್ನು ಮುಚ್ಚಲಾಗುತ್ತದೆ.

hassanamba temple
ಹಾಸನಾಂಬೆ ದೇವಾಲಯ (ETV Bharat)

By ETV Bharat Karnataka Team

Published : 5 hours ago

ಹಾಸನ:ದಸರಾ ಮುಗಿದ 14 ದಿನಗಳ ಬಳಿಕ, ಅಂದರೆ ಅಶ್ವಯುಜ ಮಾಸದ ಮೊದಲ ಗುರುವಾರ ಹಾಸನದ ಅಧಿದೇವತೆ ಹಾಸನಾಂಬೆ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ. ಕಳೆದ 5-6 ವರ್ಷಗಳ ಹಿಂದೆ ಇದ್ದ ದರ್ಶನದ ವ್ಯವಸ್ಥೆಗೆ ಬದಲಾಗಿ, ಈ ಬಾರಿ ವಿಭಿನ್ನ ಮತ್ತು ವಿನೂತನವಾಗಿ ಜಿಲ್ಲಾಡಳಿತವು ಸಿದ್ಧತೆ ಕೈಗೊಂಡಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಹಾಸನದಲ್ಲಿ ಹುತ್ತದ ರೂಪದಲ್ಲಿ ನೆಲೆಸಿರುವ ಶಕ್ತಿದೇವತೆ ಹಾಸನಾಂಬೆ ದೇಗುಲದಲ್ಲಿ ದೇವಿ ದರ್ಶನ ಸಿಗುವುದು ವರ್ಷಕ್ಕೆ ಒಮ್ಮೆ ಮಾತ್ರ. ಪ್ರತಿವರ್ಷ ಅಶ್ವಯುಜ ಮಾಸದ ಅಷ್ಟಮಿಯ ಗುರುವಾರ ದೇಗುಲದ ಬಾಗಿಲು ತೆರೆಯಲಾಗುತ್ತದೆ. ಈ ವರ್ಷ ಅಕ್ಟೋಬರ್ 24ರ ಮಧ್ಯಾಹ್ನ ದೇಗುಲದ ಬಾಗಿಲು ತೆರೆದರೆ, ನವೆಂಬರ್ 3ರಂದು ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುತ್ತದೆ. ಒಟ್ಟು 11 ದಿನಗಳ ಕಾಲ ಬಾಗಿಲನ್ನು ತೆರೆದರೂ, ಮೊದಲ ಹಾಗೂ ಕೊನೆಯ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಹೀಗಾಗಿ, 9 ದಿನಗಳು ಮಾತ್ರ ಈ ಬಾರಿ ದರ್ಶನಕ್ಕೆ ಅವಕಾಶವಿದೆ.

ಮೈಸೂರಿನಿಂದ ಬರಲಿದೆ ಡಬಲ್ ಡೆಕ್ಕರ್ ಬಸ್:ವರ್ಷದಿಂದ ವರ್ಷಕ್ಕೆ ಹಲವು ಆಕರ್ಷಣೆಗಳೊಂದಿಗೆ ಗಮನ ಸೆಳೆಯುತ್ತಿರುವ ಹಾಸನಾಂಬೆ ಉತ್ಸವದಲ್ಲಿ ಈ ವರ್ಷ ದಸರಾ ಮಾದರಿಯ ದೀಪಾಲಂಕಾರ, ಇದೇ ಮೊದಲ ಬಾರಿಗೆ ಫಲಪುಷ್ಪ ಪ್ರದರ್ಶನ, ಹಾಟ್ ಏರ್ ಬಲೂನ್, ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಸೇರಿದಂತೆ ಲೈಟಿಂಗ್ ವೀಕ್ಷಣೆಗೆ ಈ ಬಾರಿ ಡಬಲ್ ಡೆಕ್ಕರ್ ಬಸ್ ಬರುತ್ತಿರುವುದು ವಿಶೇಷವಾಗಿದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ಭಕ್ತಾದಿಗಳ ಮನಸೂರೆಗೊಳ್ಳಲಿವೆ.

20 ಲಕ್ಷ ಭಕ್ತರ ಆಗಮನದ ನಿರೀಕ್ಷೆ:ಅ.24ರ ಗುರುವಾರ ಮದ್ಯಾಹ್ನ 12 ಗಂಟೆಗೆ ದೇಗುಲದ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ಕಳೆದ ಬಾರಿ 14 ಲಕ್ಷ ಮಂದಿ ಭಕ್ತರು ದೇವಿಯ ದರ್ಶನ ಪಡೆದಿದ್ದರು. ಈ ವರ್ಷ ಸುಮಾರು 20ರಿಂದ 25 ಲಕ್ಷ ಭಕ್ತರು ಬರುವ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಇದ್ದು, ಭರ್ಜರಿ ತಯಾರಿ ನಡೆಸಿದೆ. ದೇಗುಲವನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿದೆ, ದೇಗುಲದ ಆವರಣದಲ್ಲಿ ಭಕ್ತರ ದರ್ಶನಕ್ಕಾಗಿ ಸರತಿ ಸಾಲುಗಳ ಬ್ಯಾರಿಕೇಡ್, ಸಾಂಪ್ರದಾಯಿಕ ಮಾದರಿಯ ಮಾಡೆಲ್​ಗಳು, ಮಳೆ, ಬಿಸಿಲಿನಿಂದ ರಕ್ಷಣೆಗಾಗಿ ಟೆಂಟ್ ಮತ್ತು ಪ್ರಸಾದದ ವಿತರಣೆಗೂ ವ್ಯವಸ್ಥೆ ಮಾಡಲಾಗಿದೆ.

24 ಗಂಟೆಗಳ ದರ್ಶನ:ಕಳೆದ ವರ್ಷ ಆಗುತ್ತಿದ್ದ ಕೆಲವು ಲೋಪದೋಷಗಳನ್ನು ಸರಿಪಡಿಸಿಕೊಂಡು, ಈ ವರ್ಷ ಅದ್ಧೂರಿ ಹಬ್ಬ ಆಚರಣೆಗೆ ತಯಾರಿ ಮಾಡಿಕೊಂಡಿದೆ. ದಿನದ 24 ಗಂಟೆಗಳೂ ಕೂಡ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಭಕ್ತರಿಗೆ ದರ್ಶನಕ್ಕೆ ಬೇಕಾದ ವಿಶೇಷ ವ್ಯವಸ್ಥೆ ಮಾಡಲಾಗಿದೆ.

300 ರೂ. ಟಿಕೆಟ್​ಗೂ ಲಾಡು ಪ್ರಸಾದ:ನೇರ ದರ್ಶನ ಪಡೆಯ ಬಯಸುವ ಭಕ್ತರಿಗೆ 1000 ರೂ. ಹಾಗೂ ಟಿಕೆಟ್ 300 ರೂ. ಟಿಕೆಟ್ ಹಾಗೂ ವಿಶೇಷ ಗಣ್ಯರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಹಾಗೂ ಸಾಮಾನ್ಯ ಭಕ್ತರ ದರ್ಶನಕ್ಕೆ ಪ್ರತ್ಯೇಕ ಇದೆ. ಈ ವರ್ಷ ಮೊದಲ ದಿನ ಬಾಗಿಲು ತೆರೆದ ನಂತರ ದೇಗುಲ ಶುದ್ಧಿ ಮಾಡಲಾಗುತ್ತೆ. ಮರುದಿನ ಬೆಳಗ್ಗೆಯಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರಲಿದೆ. ದೇವಿಗೆ ಒಟ್ಟು ನಾಲ್ಕು ಬಾರಿ ಬೇರೆ ಬೇರೆ ರೀತಿಯ ವಿಶಿಷ್ಟ ಅಲಂಕಾರ, ವಸ್ತ್ರಧಾರಣೆ ಮಾಡಲಾಗುತ್ತದೆ. ಈ ನಡುವೆ ನೈವೇದ್ಯದ ಸಂದರ್ಭ ಹೊರತುಪಡಿಸಿ ದಿನದ 24 ಗಂಟೆಯೂ ದರ್ಶನಕ್ಕೆ ಅವಕಾಶವಿರಲಿದೆ. ಜೊತೆಗೆ, ಈ ಬಾರಿ ಹಾಸನಾಂಬೆ ಆ್ಯಪ್ ಮೂಲಕ ದರ್ಶನಕ್ಕೆ ಆನ್​ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಇದನ್ನೂ ಓದಿ:ದೀಪಾವಳಿ, ಛತ್ ಪೂಜೆ: ನೈಋತ್ಯ ರೈಲ್ವೆಯಿಂದ ಈ ಮಾರ್ಗಗಳಲ್ಲಿ ವಿಶೇಷ ರೈಲುಗಳ ಸಂಚಾರ

ABOUT THE AUTHOR

...view details