ಕರ್ನಾಟಕ

karnataka

ETV Bharat / state

ಹೆಚ್‌ಎಂ‌ಟಿ ಭೂಮಿ ರಾಜ್ಯ ಸರ್ಕಾರದ ವಶಕ್ಕೆ: 'ಕಾನೂನು ಹೋರಾಟ ಮಾಡುತ್ತೇವೆ'- ಹೆಚ್.ಡಿ.ಕುಮಾರಸ್ವಾಮಿ

ಹೆಚ್‌ಎಂ‌ಟಿ ವಶದಲ್ಲಿದ್ದ ಐದು ಎಕರೆ ಖಾಲಿ ಜಮೀನನ್ನು ಮರುವಶಕ್ಕೆ ಪಡೆದಿರುವ ಕುರಿತಂತೆ ಕಾನೂನು ಹೋರಾಟ ಮಾಡುತ್ತೇವೆ ಎಂದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

kumaraswamy
ಭೂಮಿ ವಶಕ್ಕೆ ಪಡೆದಿರುವುದು, ಹೆಚ್.ಡಿ.ಕುಮಾರಸ್ವಾಮಿ (ETV Bharat)

By ETV Bharat Karnataka Team

Published : 5 hours ago

ಬೆಂಗಳೂರು: ನಗರದ ಜಾಲಹಳ್ಳಿಯಲ್ಲಿ ಹೆಚ್‌ಎಂ‌ಟಿ ಕಂಪನಿ ವಶದಲ್ಲಿದ್ದ ಐದು ಎಕರೆ ಖಾಲಿ ಜಮೀನನ್ನು ತನ್ನ ವಶಕ್ಕೆ ತೆಗೆದುಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಹೆಚ್​ಡಿಕೆ, ''ಹೆಚ್‌ಎಂ‌ಟಿ ಜಮೀನು ವಶಕ್ಕೆ ಪಡೆದಿರುವುದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ಇದರಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಆಗುವುದು ಖಚಿತ'' ಎಂದರು.

''ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್​ವೊಬ್ಬರು ನೂರಾರು ಎಕರೆ ಅರಣ್ಯ ಭೂಮಿ ಲೂಟಿ ಹೊಡೆದಿದ್ದಾರಲ್ಲ, ಸಚಿವ ಈಶ್ವರ್ ಖಂಡ್ರೆ ಅವರು ಮೊದಲು ಅದರ ಬಗ್ಗೆ ನೋಡಲಿ. ಇದರ ಬಗ್ಗೆ ನ್ಯಾಯಾಲಯ ಕೊಟ್ಟಿರುವ ತೀರ್ಪನ್ನೇ ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದಾರೆ. ಮೊದಲು ಅದನ್ನು ನೋಡಲಿ. ಎಷ್ಟು ಎಕರೆ ಲೂಟಿ ಆಗಿದೆ ಅಲ್ಲಿ ಎಂಬುದನ್ನು ನೋಡಲಿ. ನಿನ್ನೆ ಐದು ಎಕರೆ ಜಾಗವನ್ನು ಬಲವಂತವಾಗಿ ಹೋಗಿ ಫೆನ್ಸಿಂಗ್ ಹಾಕಿಕೊಂಡಿದ್ದಾರೆ. ಕೋರ್ಟ್ ಆದೇಶಗಳಿಗೆ ಹೆಚ್‌ಎಂಟಿ ಹಾಗೂ ಅಧಿಕಾರಿಗಳು ತಲೆಬಾಗಬೇಕಾಗುತ್ತದೆ'' ಎಂದು ಹೇಳಿದರು.

ಹೆಚ್ಎಂಟಿ ವಶದಲ್ಲಿದ್ದ ಪೀಣ್ಯ-ಜಾಲಹಳ್ಳಿ ಸರ್ವೆ ನಂ.1ರಲ್ಲಿ ಶುಕ್ರವಾರ ಅರಣ್ಯ ಇಲಾಖೆ ಬೆಂಗಳೂರು ನಗರ ವಲಯದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, 5 ಎಕರೆ ಖಾಲಿ ಜಮೀನನ್ನು ವಶಕ್ಕೆ ಪಡೆದಿದ್ದರು. ಜೊತೆಗೆ, ಕರ್ನಾಟಕ ಅರಣ್ಯ ಇಲಾಖೆಯ ಫಲಕವನ್ನೂ ಹಾಕಿದ್ದಾರೆ.

ಪೀಣ್ಯ, ಜಾಲಹಳ್ಳಿ ಪ್ಲಾಂಟೇಷನ್​ನಲ್ಲಿರುವ 599 ಎಕರೆ ಜಮೀನು ಅರಣ್ಯ ಪ್ರದೇಶವಾಗಿದೆ. ಅರಣ್ಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಆಗದ ಈ ಜಮೀನು ಒಂದು ಕಾಲದಲ್ಲಿದ್ದ ಅರಣ್ಯ, ಯಾವಾಗಲೂ ಅರಣ್ಯವಾಗಿಯೇ ಇರುತ್ತದೆ (Once a forest is always a forest) ಎಂಬ ಸುಪ್ರೀಂ ಕೋರ್ಟ್ ಅಭಿಪ್ರಾಯದಂತೆ ಅರಣ್ಯವೇ ಆಗಿದೆ ಎಂದಿದ್ದ ಈಶ್ವರ ಖಂಡ್ರೆ, ಹೆಚ್ಎಂಟಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್​ನ 599 ಎಕರೆ ಅರಣ್ಯದ ಪೈಕಿ ಅರಣ್ಯ ಸ್ವರೂಪದ ಮತ್ತು ಖಾಲಿ ಜಮೀನು ವಶಕ್ಕೆ ಪಡೆದು ಬೃಹತ್ ಉದ್ಯಾನ ನಿರ್ಮಿಸುವುದಾಗಿ ಈ ಹಿಂದೆ ಹೇಳಿದ್ದರು.

ಇದನ್ನೂ ಓದಿ:ಬೆಂಗಳೂರು: ಎಚ್ಎಂಟಿ ವಶದಲ್ಲಿದ್ದ 5 ಎಕರೆ ಅರಣ್ಯ ಭೂಮಿ ಮರುವಶ

ABOUT THE AUTHOR

...view details