ಕರ್ನಾಟಕ

karnataka

ಮುಡಾದಲ್ಲಿ ಸಿಎಂ ಸಿದ್ದರಾಮಯ್ಯರದ್ದು ಕೇವಲ 14 ಸೈಟಲ್ಲ, ನಾಲ್ಕು ಸಾವಿರ ಕೋಟಿ ರೂ. ವಂಚನೆ: ಗಾಲಿ ಜನಾರ್ದನ ರೆಡ್ಡಿ - MUDA SCAM ISSUE

By ETV Bharat Karnataka Team

Published : Aug 27, 2024, 9:12 AM IST

"ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಂಧು - ಬಳಗ, ಆಪ್ತರು, ಸ್ನೇಹಿತರ ಹೆಸರಲ್ಲಿ, ವ್ಯಕ್ತಿಗಳೇ ಇಲ್ಲದವರ ಹೆಸರಲ್ಲಿ, ಅನಾಮಧ್ಯೇಯರ ಹೆಸರಲ್ಲಿ ಒಟ್ಟು ನಾಲ್ಕು ಸಾವಿರ ಕೋಟಿ ರೂ. ಬೆಳೆ ಬಾಳುವ ಆಸ್ತಿ ಲೂಟಿ ಮಾಡಿ ಅಕ್ರಮ ಮಾಡಿದ್ದಾರೆ" ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.

G JANARDHAN REDDY
ಶಾಸಕ ಜಿ. ಜನಾರ್ದನ ರೆಡ್ಡಿ (ETV Bharat)

ಶಾಸಕ ಜಿ. ಜನಾರ್ದನ ರೆಡ್ಡಿ ಆರೋಪ (ETV Bharat)

ಗಂಗಾವತಿ: "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಮುಡಾದಲ್ಲಿ ಕೇವಲ ಹದಿನಾಲ್ಕು ಸೈಟುಗಳ ವಂಚನೆಯಲ್ಲ. ಅವರು ನಾಲ್ಕು ಸಾವಿರ ಕೋಟಿ ಮೊತ್ತದಷ್ಟು ವಂಚನೆ ಮಾಡಿದ್ದಾರೆ" ಎಂದು ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.

ಈ ಬಗ್ಗೆ ಸೋಮವಾರ ನಗರಸಭೆಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, "ಸಿದ್ದರಾಮಯ್ಯ ಮೂಡಾದಲ್ಲಿ ಕೇವಲ ಹದಿನಾಲ್ಕು ಸೈಟಲ್ಲಿ ರಾಜ್ಯದ ಜನರಿಗೆ ವಂಚನೆ ಮಾಡಿಲ್ಲ. ತಮ್ಮ ಬಂಧು - ಬಳಗ, ಆಪ್ತರು, ಸ್ನೇಹಿತರ ಹೆಸರಲ್ಲಿ, ವ್ಯಕ್ತಿಗಳೇ ಇಲ್ಲದವರ ಹೆಸರಲ್ಲಿ, ಅನಾಮಧ್ಯೇಯರ ಹೆಸರಲ್ಲಿ ಒಟ್ಟು ನಾಲ್ಕು ಸಾವಿರ ಕೋಟಿ ಬೆಳೆ ಬಾಳುವ ಆಸ್ತಿ ಲೂಟಿ ಮಾಡಿ ಅಕ್ರಮ ಮಾಡಿದ್ದಾರೆ. ಸಿದ್ದರಾಮಯ್ಯ ಇಷ್ಟು ದಿನಗಳ ಕಾಲ ಜನರಿಗೆ ಮೋಸ ಮಾಡುತ್ತಲೇ ಬಂದಿದ್ದಾರೆ. ಆದರೆ, ಜನರಿಗೆ ಗೊತ್ತಾಗಿರಲಿಲ್ಲ. ಈಗಷ್ಟೇ ಒಂದೊಂದೇ ವಂಚನೆಗಳು ಬೆಳಕಿಗೆ ಬರುತ್ತಿವೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"2015ರಲ್ಲಿ ಜೈಲಿಂದ ಹೊರ ಬಂದ ತಕ್ಷಣ ನನ್ನ ಮೇಲೆ ಹೆಚ್ಚುವರಿ ಆಸ್ತಿಗಳಿಕೆ ಆರೋಪದಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ಪ್ರಕರಣದಲ್ಲಿ ಸ್ವತಃ ಕಾಂಗ್ರೆಸ್ ಸರ್ಕಾರವೇ ಎರಡು ಬಾರಿ ಬಿ ರಿಪೋರ್ಟ್​ ನೀಡಿದೆ. ನನ್ನ ಸಂಪಾದನೆ ಮತ್ತು ಆಸ್ತಿಗೆ ಹೋಲಿಸಿದರೆ 148 ಕೋಟಿ ಹೆಚ್ಚುವರಿ ಹಣ ನನ್ನ ಬಳಿ ಇದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಖಾತೆಗಳನ್ನು ಪರಿಶೀಲಿಸಿದ ಬಳಿಕ ಸ್ವತಃ ಲೋಕಾಯುಕ್ತರೇ ಮೂರು ಬಾರಿ ನ್ಯಾಯಾಲಯಕ್ಕೆ ನೋ ಅಬ್ಜೆಕ್ಷನ್ ಫೈಲ್ ಮಾಡಿದ್ಧಾರೆ. ಆದರೆ ಉದ್ದೇಶ ಪೂರ್ವಕ ನನ್ನನ್ನು ಸಿಲುಕಿಸಲು ಸಿದ್ದರಾಮಯ್ಯ ಅವರೇ ಷಡ್ಯಂತ್ರ ಹೆಣೆಯುತಿದ್ದಾರೆ" ಎಂದು ರೆಡ್ಡಿ ಆರೋಪಿಸಿದ್ದಾರೆ.

ಸಿದ್ದರಾಮಯ್ಯರ ಕರ್ಮ: "ಈಗಾಗಲೇ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರೆ ಅವರಿಗೆ ಗೌರವ ಇರುತಿತ್ತು. ಇಂದಲ್ಲ ನಾಳೆ ರಾಜೀನಾಮೆ ನೀಡದೇ ಅವರಿಗೆ ಬೇರೆ ದಾರಿಯಿಲ್ಲ. ಅಹಿಂದ ಮುಖವಾಡ ತೊಟ್ಟು ಜನರ ದಾರಿ ತಪ್ಪಿಸಿ ವಂಚನೆ ಮಾಡುತ್ತಿದ್ದಾರೆ. ಇನ್ನು ಮುಂದೆ ರಾಜ್ಯದಲ್ಲಿ ಸಿದ್ದರಾಮಯ್ಯ ಆಟ ನಡೆಯೊಲ್ಲ. ಸಿದ್ದರಾಮಯ್ಯ ಸಿಎಂ ಪದವಿ ಆಸೆಗೆ ಬಿದ್ದು ನಮ್ಮಂಥವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಕೆಟ್ಟ ಹಣೆಬರಹ ಬರೆದುಕೊಂಡಿದ್ದಾರೆ. ಆ ಹಣೆಬರಹದ ಕರ್ಮ ಅನುಭವಿಸುವ ಹಂತಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ. ಇದನ್ನು ದೇವರಿಂದಲೂ ತಪ್ಪಿಸಲು ಸಾಧ್ಯವಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ.

ಮುಂದುವರೆದು, "ಇಂದು ಜನ ಮತ್ತು ಪಕ್ಷಗಳ ನಾಯಕರು ಸಿದ್ದರಾಮಯ್ಯ ಅವರನ್ನು ಕಳ್ಳನ ರೀತಿಯಲ್ಲಿ ನೋಡುತ್ತಿದ್ದಾರೆ ಎಂಬ ಕಾರಣಕ್ಕೆ ಅದೇ ರೀತಿ ಇನ್ನುಳಿದವರನ್ನೂ ನೋಡಲಿ ಎಂಬ ಕುತಂತ್ರದಿಂದ ಸಿದ್ದರಾಮಯ್ಯ ನಾಯಕರ ಮೇಲೆ ಪ್ರಾಸಿಕ್ಯೂಷನ್​​ಗೆ ಒತ್ತಾಯಿಸುತ್ತಿದ್ದಾರೆ. ಸಿದ್ದರಾಮಯ್ಯ ಈಗ ಮುಳುಗುತ್ತಿದ್ದು, ಈ ಸಂದರ್ಭದಲ್ಲಿ ಇತರರನ್ನು ಸೆಳೆದುಕೊಂಡು ಮುಳುಗುವ ಉದ್ದೇಶ ಇರಿಸಿಕೊಂಡಿದ್ದಾರೆ. ಇಂತಹ ಕೆಟ್ಟ ಆಲೋಚನೆಯಿಂದ ಕೆಳಮಟ್ಟದ ಕೆಲಸ ಮಾಡುತ್ತಿದ್ದಾರೆ. ಆದರೆ ಜನಾರ್ದನರೆಡ್ಡಿ ಇಂತಹ ಕೇಸುಗಳಿಗೆ ಹೆದುರುವುದಿಲ್ಲ" ಎಂದು ಜಿ. ಜನಾರ್ದನ ರೆಡ್ಡಿ ಟಾಂಗ್​ ನೀಡಿದ್ದಾರೆ.

ಇದನ್ನೂ ಓದಿ:ಮುಡಾ ಒತ್ತುವರಿ ಜಮೀನು ಕುಮಾರಸ್ವಾಮಿದಾ?: ಸಿಎಂ ಸಿದ್ದರಾಮಯ್ಯ ಟಾಂಗ್ - CM Siddaramaiah

ABOUT THE AUTHOR

...view details