ಕರ್ನಾಟಕ

karnataka

ETV Bharat / state

ರೈತನ ಕೈ ಹಿಡಿದ ಬೆಳ್ಳುಳ್ಳಿ: ಕ್ವಿಂಟಾಲ್​ಗೆ ₹32,500ಯಂತೆ ಮಾರಾಟ

ಈ ಬಾರಿ ಬೆಳ್ಳುಳ್ಳಿ ರೈತನ ಕೈ ಹಿಡಿದಿದೆ. ಚಿಂಚೋಳಿಯಲ್ಲಿ ರೈತರೊಬ್ಬರು 50 ಚೀಲ ಬೆಳ್ಳುಳ್ಳಿ ಮಾರಾಟ ಮಾಡಿ ದುಪ್ಪಟ್ಟು ಲಾಭ ಗಳಿಸಿದ್ದಾರೆ. ಆದರೆ ಇನ್ನೊಂದೆಡೆ, ಇದೇ ಬೆಳ್ಳುಳ್ಳಿ ಗ್ರಾಹಕನ ಜೇಬಿಗೆ ಭಾರವಾಗಿದೆ.

By ETV Bharat Karnataka Team

Published : Feb 5, 2024, 4:21 PM IST

Updated : Feb 5, 2024, 6:15 PM IST

16 ಲಕ್ಷಕ್ಕೆ ಬೆಳ್ಳುಳ್ಳಿ ಮಾರಾಟ ಮಾಡಿದ ರೈತ
16 ಲಕ್ಷಕ್ಕೆ ಬೆಳ್ಳುಳ್ಳಿ ಮಾರಾಟ ಮಾಡಿದ ರೈತ

ಬೆಳ್ಳುಳ್ಳಿ ಬೆಳೆಗೆ ಒಳ್ಳೆ ಬೆಲೆ

ದಾವಣಗೆರೆ:ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಗೆ ಒಳ್ಳೆಯ ಬೆಲೆ ಬಂದಿದೆ. ಪ್ರತಿ ಕೆ.ಜಿಗೆ 300ರಿಂದ 400 ರೂಪಾಯಿಗೆ ಮಾರಾಟವಾಗುತ್ತಿದೆ. ಹೀಗಾಗಿ ರೈತರು ಸಂತಸದಲ್ಲಿದ್ದಾರೆ. ಯಾದಗಿರಿ ಜಿಲ್ಲೆಯ ಚಿಂಚೋಳಿಯ ಯುವ ರೈತರೊಬ್ಬರು 50 ಚೀಲ ಬೆಳ್ಳುಳ್ಳಿ ಬೆಳೆದು ದಾವಣಗೆರೆ ಎಪಿಎಂಸಿಯಲ್ಲಿ ಮಾರಾಟ ಮಾಡಿದ್ದಾರೆ. ಈಗಿನ ಬೆಲೆಯಂತೆ ಇವರು 16 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಒಂದು ಕ್ವಿಂಟಾಲ್​ಗೆ 32,500 ರೂಪಾಯಿಯಂತೆ ಬೆಳೆ ಮಾರಾಟವಾಗಿದೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಯುವ ರೈತ ಹೊನ್ನಪ್ಪ ಗೌಡ ಶರಣಪ್ಪಗೌಡ ತಾರನಾಳ್, "8ರಿಂದ 10 ವರ್ಷಗಳ ಹಿಂದೆ ಬೆಳ್ಳುಳ್ಳಿ ಕ್ವಿಂಟಾಲ್​ಗೆ 15ರಿಂದ 20 ಸಾವಿರ ರೂ.ಗೆ ಮಾರಾಟವಾಗುತ್ತಿತ್ತು. ಕಳೆದ ಹತ್ತು ವರ್ಷಗಳಲ್ಲಿ ಈ ರೀತಿ ಬೆಲೆ ನಮಗೆ ಸಿಕ್ಕಿರಲಿಲ್ಲ. ಈ ವರ್ಷ ಬೆಳ್ಳುಳ್ಳಿ ಬೀಜ 15ರಿಂದ 20 ಸಾವಿರ ರೂಪಾಯಿಗೆ ಸಿಕ್ಕಿತ್ತು. ಆದ್ರೂ ಕ್ವಿಂಟಾಲ್ ಬೆಳ್ಳುಳ್ಳಿ 32 ಸಾವಿರ ರೂ.ಗೆ ಮಾರಾಟ ಮಾಡ್ತೀವಿ ಎಂದು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಇಲ್ಲಿಗೆ ಒಟ್ಟು 50 ಚೀಲ ಬೆಳ್ಳುಳ್ಳಿ ತಂದು ಮಾರಾಟ ಮಾಡಿದ್ದೇನೆ. ಕ್ವಿಂಟಾಲ್​ಗೆ 27 ಸಾವಿರದಿಂದ 32,500 ರೂ ತನಕ ಮಾರಾಟವಾಗಿದೆ. ಇಷ್ಟು ದಿನಗಳ ಕಾಲ ಬೆಳ್ಳುಳ್ಳಿ ಮಾರಾಟ ಮಾಡಿದ್ರೂ ಇಂಥ ಬೆಲೆ ನೋಡಿರಲಿಲ್ಲ" ಎಂದು ಹೇಳಿದರು.

ದಲ್ಲಾಳಿ ಎ.ಸಿ.ಅಸ್ಲಂ ಮಾತನಾಡಿ, "ಇಂದು 80ರಿಂದ 100 ಚೀಲ ಬೆಳ್ಳುಳ್ಳಿ ಮಾರುಕಟ್ಟೆಗೆ ಬಂದಿವೆ. ಬಸವನ ಬಾಗೇವಾಡಿ, ಚಿಂಚೋಳಿಯಿಂದ ಆವಕವಾಗುತ್ತಿದೆ. ಈ ಬಾರಿ ಫಸಲು ಕಡಿಮೆ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಮಾರುಕಟ್ಟೆಗೆ 400ರಿಂದ 500 ಚೀಲ ಬರಬೇಕಿತ್ತು. ಸದ್ಯ ಬೆಳ್ಳುಳ್ಳಿ ಕ್ವಿಂಟಾಲ್​ಗೆ 32,500 ರೂ ವರೆಗೆ ಮಾರಾಟವಾಗುತ್ತಿದೆ. ಮಳೆ ಕಡಿಮೆಯಾಗಿದ್ದರಿಂದ ಬೆಳೆ ಕಡಿಮೆ ಆಗಿ ಬೆಲೆ ಏರಿಕೆಗೆ ಕಾರಣವಾಗಿದೆ. ಬೆಳ್ಳುಳ್ಳಿ ಬೀಜದ ಬೆಲೆ ಕೂಡ ಹೆಚ್ಚಾಗಿದೆ. ಈ ಹಿಂದೆ 700 ರೂ ಇದ್ದಾ ಬೆಳ್ಳುಳ್ಳಿ ಬೀಜದ ಬೆಲೆ ಇದೀಗ 20 ಸಾವಿರಕ್ಕೆ ತಲುಪಿದೆ ಎಂದು ತಿಳಿಸಿದರು.

ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ನಾಟಿ ಬೆಳ್ಳುಳ್ಳಿಯ ದರ ಒಂದು ಕೆ.ಜಿಗೆ 400 ರೂಪಾಯಿ ಇದ್ದು, ಹೈಬ್ರಿಡ್ ಬೆಳ್ಳುಳ್ಳಿ ಧಾರಣೆಯು ಕೆ.ಜಿಗೆ 300 ರೂಪಾಯಿ ದಾಟಿದೆ. ಇನ್ನೊಂದೆಡೆ, ಬೆಳ್ಳುಳ್ಳಿ ದರದಲ್ಲಿ ಭಾರೀ ಏರಿಕೆಯಾಗಿದ್ದರಿಂದ ಜನಸಾಮಾನ್ಯರು ಸೇರಿದಂತೆ ಹೊಟೇಲ್​, ಡಾಬಾ ಮಾಲೀಕರು ಚಿಂತಿಸುವಂತಾಗಿದೆ.

ಇದನ್ನೂ ಓದಿ:ಮಳೆ ಕೊರತೆ: ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಏರಿಕೆ

Last Updated : Feb 5, 2024, 6:15 PM IST

ABOUT THE AUTHOR

...view details