ವಿಜಯಪುರ: ''ಅಗ್ನಿ ದುರಂತದಲ್ಲಿ ಸಂಭವಿಸುವ ಕಬ್ಬಿನ ಹಾನಿಗೆ ಪರಿಹಾರ ನೀಡಲು ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ನಿಧಿ ಸ್ಥಾಪಿಸಲಿದ್ದು, ಈ ವರ್ಷದಿಂದಲೇ 50 ಲಕ್ಷ ರೂ. ತೆಗೆದಿರಿಸಲಾಗುವುದು'' ಎಂದು ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ್ ಘೋಷಣೆ ಮಾಡಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜೇರಿ ನೇತೃತ್ವದ ರೈತ ಮುಖಂಡರೊಂದಿಗೆ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸಿದ ಸಚಿವರು, ''ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ನೀಡುವ ಪರಿಹಾರ ಅತ್ಯಲ್ಪ ಎಂಬ ಕಾರಣಕ್ಕೆ ನಿಜಲಿಂಗಪ್ಪ ಸಂಸ್ಥೆಯಿಂದಲೂ ಪರಿಹಾರ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ'' ಎಂದು ಹೇಳಿದರು.
''ಆರಂಭದಲ್ಲಿ ಗರಿಷ್ಠ ಐದು ಎಕರೆ ಮಿತಿಯಲ್ಲಿ ಪರಿಹಾರ ನೀಡಲಿದ್ದು, ನಂತರ ಈ ಪರಿಹಾರ ಯೋಜನೆಯನ್ನು ವಿಸ್ತರಣೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಮತ್ತಿತರ ಕಾರಣಗಳಿಂದ ಕಬ್ಬು ಹಾನಿಗೀಡಾದರೂ ಸಕ್ಕರೆ ಕಾರ್ಖಾನೆಗಳು ಈ ಕಬ್ಬನ್ನು ನುರಿಸಲಿವೆ. ಆದರೂ ಸರ್ಕಾರ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಪರಿಹಾರ ನೀಡುವ ನಿರ್ಧಾರ ಕೈಗೊಂಡಿದೆ'' ಎಂದು ತಿಳಿಸಿದರು.
ಬಹುಮಾನದ ಮೊತ್ತ ಹೆಚ್ಚಳ : ''ತೂಕದಲ್ಲಿ ವಂಚನೆ ಮಾಡುವ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ವಿರುದ್ಧ ಸೂಕ್ತ ದಾಖಲೆಗಳೊಂದಿಗೆ ದೂರು ನೀಡುವ ರೈತರಿಗೆ ಒಂದು ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಬೆಳಗಾವಿ ಅಧಿವೇಶನದ ವೇಳೆ ಘೋಷಣೆ ಮಾಡಲಾಗಿತ್ತು. ಈ ಬಹುಮಾನದ ಮೊತ್ತವನ್ನು 2.5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದ್ದು, ದೂರು ನೀಡುವ ಕಬ್ಬು ಬೆಳೆಗಾರರಿಗೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಲಿದೆ. ಅವರ ಕಬ್ಬನ್ನು ನುರಿಸುವ ಹೊಣೆಯನ್ನೂ ಸರ್ಕಾರ ಹೊರಲಿದೆ'' ಎಂದು ಶಿವಾನಂದ ಪಾಟೀಲ್ ಭರವಸೆ ನೀಡಿದರು.
''ರಾಜ್ಯದಲ್ಲಿ ಒಟ್ಟು 80 ಸಕ್ಕರೆ ಕಾರ್ಖಾನೆಗಳಿದ್ದು, ಅವುಗಳಲ್ಲಿ 72 ಕಾರ್ಖಾನೆಗಳಲ್ಲಿ ಹಳೆ ಪದ್ಧತಿಯ ಅನಲಾಗ್ ಯಂತ್ರಗಳ ಬದಲಿಗೆ ಡಿಜಿಟಲ್ ತೂಕದ ಯಂತ್ರಗಳನ್ನು ಹಾಕಲಾಗಿದೆ. ಐದು ಕಾರ್ಖಾನೆಗಳ ಮಾಲೀಕರು ನ್ಯಾಯಾಲಯಕ್ಕೆ ಹೋಗಿರುವುದರಿಂದ ವಿಳಂಬವಾಗಿದೆ. ಇತರ ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರ ಅಳವಡಿಕೆ ಪ್ರಗತಿಯಲ್ಲಿದೆ'' ಎಂದರು.
''ಬೆಳಗಾವಿಯಲ್ಲಿ ಮೂರು, ಬಾಗಲಕೋಟೆ ಜಿಲ್ಲೆಯಲ್ಲಿ ಎರಡು ಸೇರಿದಂತೆ ರಾಜ್ಯಾದ್ಯಂತ ಎಪಿಎಂಸಿಯಿಂದ 12 ಡಿಜಿಟಲ್ ತೂಕದ ಯಂತ್ರಗಳನ್ನು ಹಾಕಲಿದ್ದು, ರೈತ ಸಂಘಗಳು ಮುಂದೆ ಬಂದರೆ ನಿರ್ವಹಣೆ ಜವಾಬ್ದಾರಿಯನ್ನು ನೀಡಲಾಗುವುದು. ತೂಕ ಮತ್ತು ಅಳತೆ ನಮ್ಮ ಇಲಾಖೆ ವ್ಯಾಪ್ತಿಗೊಳಪಡದಿದ್ದರೂ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ'' ಎಂದು ಮಾಹಿತಿ ನೀಡಿದರು.
''ಎಫ್ಆರ್ಪಿ ದರ ಹೆಚ್ಚಳ ಮಾಡುವ ದೃಷ್ಟಿಯಿಂದ 2025-26ನೇ ಸಾಲಿಗೆ ಪ್ರತಿ ಟನ್ಗೆ 4,440 ರೂ. ನಿಗದಿಪಡಿಸುವಂತೆ ರಾಜ್ಯ ಸರ್ಕಾರವೇ ಸ್ವಪ್ರೇರಣೆಯಿಂದ ಸಿಎಸಿಪಿಗೆ ಶಿಪಾರಸು ಮಾಡಿದೆ. ಕಬ್ಬಿನ ಬೆಲೆಯನ್ನು ಕೇಂದ್ರ ಸರ್ಕಾರವೇ ನಿಗದಿಪಡಿಸಲಿದ್ದು, ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇರುವುದಿಲ್ಲ'' ಎಂದು ಸಚಿವ ಶಿವಾನಂದ ಪಾಟೀಲ್ ಸ್ಪಷ್ಟಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಚೂನಪ್ಪ ಪೂಜೇರಿ, ವಿಜಯಪುರ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ, ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ, ಮಹೇಶ್ ಗೌಡ ಸುಬೇದಾರ್, ಶರಣಪ್ಪ ದೊಡ್ಡಮನಿ, ರಾಮನಗೌಡ ಪಾಟೀಲ, ಸೋಮು ವಿಜಯಪುರ, ಈರಪ್ಪ ಕುಳೇಕುಮಟಗಿ, ಮಾಳು ಪೂಜಾರ, ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆನ್ನೂರ, ಎಸ್ಪಿ ಲಕ್ಷ್ಮಣ ನಿಂಬರಗಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ, ಕೃಷಿ ಮಾರಾಟ ಮಂಡಳಿ ಸಿಜಿಎಂ ಚಂದ್ರಕಾಂತ ಪಾಟೀಲ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ತೊಗರಿಗೆ ರಾಜ್ಯ ಸರ್ಕಾರದಿಂದ ಕ್ವಿಂಟಾಲ್ಗೆ ಹೆಚ್ಚುವರಿ ₹450 ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್