ಕರ್ನಾಟಕ

karnataka

ETV Bharat / state

ಕುಮಾರಸ್ವಾಮಿಯವರ ಯಾವುದೇ ಹೇಳಿಕೆಗಳು ನ್ಯಾಯಯುತವಾಗಿರಲ್ಲ: ಡಿ.ಕೆ.ಸುರೇಶ್ - D K SURESH

ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಅವರ ಯಾವುದೇ ಹೇಳಿಕೆಗಳು ನ್ಯಾಯಯುತವಾಗಿರುವುದಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್​ ಟೀಕಿಸಿದ್ದಾರೆ.

ಮಾಜಿ ಸಂಸದ ಡಿ.ಕೆ.ಸುರೇಶ್​
ಮಾಜಿ ಸಂಸದ ಡಿ.ಕೆ.ಸುರೇಶ್​ (ETV Bharat)

By ETV Bharat Karnataka Team

Published : Oct 9, 2024, 3:23 PM IST

ಬೆಂಗಳೂರು:"ಬೆಳಿಗ್ಗೆ ಒಂದು, ಸಂಜೆ ಒಂದು ಮಾತನಾಡುವವರಿಗೆ ನಾವು ಉತ್ತರ ನೀಡುವುದಿಲ್ಲ. ಮಾಧ್ಯಮದವರಿಗೆ ಅವರು ಗಂಭೀರ ವ್ಯಕ್ತಿ ಎನಿಸಬಹುದು, ಆದರೆ ನಮಗಲ್ಲ. ಅವರ ಯಾವುದೇ ಹೇಳಿಕೆಗಳು ನ್ಯಾಯಯುತವಾಗಿರುವುದಿಲ್ಲ" ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣ ಮುಚ್ಚಿ ಹಾಕಲು ಜಾತಿಗಣತಿ ವಿಷಯ ಮುನ್ನೆಲೆಗೆ ತಂದಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, "ಅವರಿಗೆ ಕೆಲಸವಿಲ್ಲ, ಅದಕ್ಕೆ ಮಾತನಾಡುತ್ತಾರೆ. ಅವರಿಗೆ ಮೋದಿ ಅವರು ಒಳ್ಳೆಯ ಕೆಲಸ ಕೊಟ್ಟಿದ್ದಾರೆ, ಅದನ್ನು ಬಿಟ್ಟು ಕರ್ನಾಟಕದ ವಿಚಾರಗಳನ್ನು ಮಾತನಾಡುತ್ತಿದ್ದಾರೆ" ಎಂದು ಟೀಕಿಸಿದರು.

ನಾವೆಲ್ಲ ಸಿದ್ದರಾಮಯ್ಯನವರ ಬೆನ್ನಿಗಿದ್ದೇವೆ: ಸಚಿವರಾದ ಮಹದೇವಪ್ಪ, ಪರಮೇಶ್ವರ್ ಭೇಟಿ ವಿಚಾರದ ಬಗ್ಗೆ ಮಾತನಾಡಿ, "ಮಹದೇವಪ್ಪ ಹಿರಿಯ ಸಚಿವರು. ಪರಮೇಶ್ವರ್ ಪ್ರಮುಖ ಖಾತೆ ಹೊಂದಿರುವವರು, ಇವರುಗಳು ರಾಜಕೀಯ ಹೊರತಾಗಿ ಸೇರಿದ್ದಾರೆ. ಈಗಾಗಲೇ ಸರ್ಕಾರದ 136 ಶಾಸಕರು ಸಿದ್ದರಾಮಯ್ಯರ ಬೆನ್ನಿಗಿದ್ದಾರೆ ಎನ್ನುವ ಸಂದೇಶವನ್ನು ನಾವು ಕೊಟ್ಟಿದ್ದೇವೆ" ಎಂದು ಹೇಳಿದರು.

ಡಿ.ಕೆ.ಸುರೇಶ್ (ETV Bharat)

ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ವಿಚಾರಕ್ಕೆ, "ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ರಾಜ್ಯದವರು, ಕೆಪಿಸಿಸಿ ಅಧ್ಯಕ್ಷರು ಅವರನ್ನು ಗೌರವಯುತವಾಗಿ ಭೇಟಿಯಾಗಿದ್ದಾರೆ. ಭೇಟಿಯಾಗುವುದು ಪಕ್ಷದ ಶಿಸ್ತು" ಎಂದರು.

ಕಾಂಗ್ರೆಸ್ ಸರ್ಕಾರವನ್ನು ನಾವು ಬೀಳಿಸುವುದಿಲ್ಲ, ಅವರೇ ಕಿತ್ತಾಡಿಕೊಂಡು ಸರ್ಕಾರ ಬಿದ್ದು ಹೋಗುತ್ತದೆ ಎನ್ನುವ ಬಿಜೆಪಿ ಟೀಕೆಗೆ, "ಅವರುಗಳು ಇದೇ ಗುಂಗಿನಲ್ಲಿರಲಿ" ಎಂದು ತಿರುಗೇಟು ಕೊಟ್ಟರು.

ಜಾತಿಗಣತಿ ಬಗ್ಗೆ ಮಾತನಾಡುತ್ತಾ, "ಇದರ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದು, ಸಚಿವ ಸಂಪುಟದ ಮುಂದಿಟ್ಟು ನಂತರ ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ" ಎಂದರು.

ಅತಿಯಾದ ಆತ್ಮವಿಶ್ವಾಸದಿಂದ ಸೋಲು: "ಹರಿಯಾಣ ವಿಧಾನಸಭಾ ಚುನಾವಣೆ ಸೋಲಿಗೆ ಅತಿಯಾದ ಆತ್ಮವಿಶ್ವಾಸ ಕಾರಣ. ಹೈಕಮಾಂಡ್ ಸೋಲಿನ ಬಗ್ಗೆ ಪರಾಮರ್ಶೆ ಮಾಡುತ್ತದೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎನ್ನುವುದಕ್ಕೆ ಇದು ಸಾಕ್ಷಿ ಹಾಗೂ ಉತ್ತಮ ನಿದರ್ಶನ. ಜಮ್ಮು, ಕಾಶ್ಮೀರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚನೆ ಮಾಡುತ್ತದೆ" ಎಂದರು.

ಹರಿಯಾಣ ಫಲಿತಾಂಶ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಕೇಳಿದಾಗ, "ಈ ಎರಡೂ ರಾಜ್ಯಗಳ ಪರಿಸ್ಥಿತಿ ಬೇರೆ, ಬೇರೆ ರೀತಿಯಿದೆ. ಇವು ಆಯಾ ರಾಜ್ಯಗಳ ಚುನಾವಣೆಯಾಗಿದ್ದು, ಬೇರೆ ರಾಜ್ಯಗಳ ಫಲಿತಾಂಶ ಇವುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳೇ ಬೇರೆ, ಬೇರೆ" ಎಂದು ಹೇಳಿದರು.

ಹರಿಯಾಣ ಸೋಲಿಗೆ ಮುಡಾ ಪ್ರಕರಣ ಕಾರಣ ಎನ್ನುವ ಮಾಜಿ ಸಭಾಪತಿ ಕೋಳಿವಾಡ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿ, "ಕೋಳಿವಾಡ ಅವರ ಹೇಳಿಕೆಗೂ ಹರಿಯಾಣ ಸೋಲಿಗೂ ಸಂಬಂಧವಿಲ್ಲ. ಇದರ ಬಗ್ಗೆ ಪಕ್ಷದ ವರಿಷ್ಠರು ತಿಳಿಸಲಿದ್ದಾರೆ" ಎಂದರು.

ಇದನ್ನೂ ಓದಿ:ಸಚಿವ ಮಹದೇವಪ್ಪ ಮನೆ ಡಿನ್ನರ್‌ ಮೀಟಿಂಗ್​ಗೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ: ಡಾ. ಜಿ.ಪರಮೇಶ್ವರ್

ABOUT THE AUTHOR

...view details