ಕರ್ನಾಟಕ

karnataka

ETV Bharat / state

ಮಾಜಿ ಸಿಎಂ ಎಸ್.ಬಂಗಾರಪ್ಪ ಜನ್ಮದಿನ: ಮೂವರು ಸಾಧಕರಿಗೆ ಪ್ರಶಸ್ತಿ ಪ್ರದಾನ

ತಂದೆಯ ಜನ್ಮದಿನದ ಪ್ರಯುಕ್ತ ಸಚಿವ ಮಧು ಬಂಗಾರಪ್ಪ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್​ ಮತ್ತು ನಟ ಹಾಗೂ ಅಳಿಯ ಶಿವ ರಾಜ್​ಕುಮಾರ್​ ಪತ್ನಿ ಗೀತಾ ಸಮೇತ ಭಾಗವಹಿಸಿದರು.

Former CM S. Bangarappa birthday: Awarded to three achievers
ಮಾಜಿ ಸಿಎಂ ಎಸ್.ಬಂಗಾರಪ್ಪ ಜನ್ಮದಿನ: ಮೂವರು ಸಾಧಕರಿಗೆ ಪ್ರಶಸ್ತಿ ಪ್ರದಾನ (ETV Bharat)

By ETV Bharat Karnataka Team

Published : 5 hours ago

Updated : 3 hours ago

ಶಿವಮೊಗ್ಗ: ಅಕ್ಷರ, ಆಶ್ರಯ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ 92ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸೊರಬದ ಬಂಗಾರಧಾಮದಲ್ಲಿ ನಾಡಿನ ಮೂರು ಜನ ಸಾಧಕರಿಗೆ ಗೌರವ ಸನ್ಮಾನ ಮಾಡಲಾಯಿತು.

ಬಂಗಾರಪ್ಪ ಫೌಂಡೇಶನ್ ಹಾಗೂ ಬಂಗಾರಪ್ಪ ವಿಚಾರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್​, ಸೇವಾ ಬಂಗಾರ ಪ್ರಶಸ್ತಿಯನ್ನು ಸುಮಂಗಲಿ ಸೇವಾಶ್ರಮ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ಸುಶೀಲಮ್ಮ ಅವರಿಗೆ, ಸಾಹಿತ್ಯ ಬಂಗಾರ ಪ್ರಶಸ್ತಿಯನ್ನು ಕಾದಂಬರಿಕಾರ ಕುಂ. ವೀರಭದ್ರಪ್ಪ ಅವರಿಗೆ, ಕಲಾ ಬಂಗಾರ ಪ್ರಶಸ್ತಿಯನ್ನು ಪ್ರತಿಭಾ ನಾರಾಯಣ್ ಅವರಿಗೆ ನೀಡಿ ಗೌರವಿಸಿದರು.

ಮಾಜಿ ಸಿಎಂ ಎಸ್.ಬಂಗಾರಪ್ಪ ಜನ್ಮದಿನ ಕಾರ್ಯಕ್ರಮ (ETV Bharat)

ಈ ವೇಳೆ ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ, "ಬಂಗಾರಪ್ಪ ಅವರು ಯಾವತ್ತೂ ಅಧಿಕಾರದ ಹಿಂದೆ ಹೋದ ರಾಜಕಾರಣಿಯಲ್ಲ. ಜೊತೆಗಿದ್ದವರ ಕುತಂತ್ರದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಪರಿಸ್ಥಿತಿ ಎದುರಾದಾಗ ರಾಜಭವನಕ್ಕೆ ಹೋಗಿ ಬರುತ್ತೇನೆ ಎಂದು 75 ಶಾಸಕರೆದುರು ಹೇಳಿ ಹೋಗಿದ್ದರು. ಅವರಿಗೆ ಎಂದೂ ಅಧಿಕಾರದ ಆಸೆ ಇರಲಿಲ್ಲ" ಎಂದರು.

ಇಂದು ನನ್ನನ್ನು ಸೊರಬದ ಜನ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಇಲ್ಲಿ ಬಹಳಷ್ಟು ಜನ ಬಂಗಾರಪ್ಪ ಅವರ ಅಭಿಮಾನಿಗಳು, ಹಾಗೂ ಶಿಷ್ಯವೃಂದದವರು ಬಂದಿದ್ದಾರೆ. ಮಹಾರಾಷ್ಟ್ರದಲ್ಲಿ ಚುನಾವಣೆ ಇರುವ ಕಾರಣ ನನ್ನನ್ನು ಮಹಾರಾಷ್ಟ್ರ ಉಸ್ತುವಾರಿಯನ್ನಾಗಿ ಹಾಕಿದ್ದಾರೆ. ಬೆಳಗ್ಗೆ ಮುಂಬೈಯಲ್ಲಿ ಇರಬೇಕಿತ್ತು. ಆದರೆ ಬಂಗಾರಪ್ಪ ಅವರ ಮೇಲಿನ ಗೌರವದಿಂದ ಇಲ್ಲಿಗೆ ಬಂದಿದ್ದೇನೆ. ಮಧು ಬಂಗಾರಪ್ಪ ಒಬ್ಬ ಮಗನಾಗಿ ತಂದೆಯ ಸಂದೇಶ ಹಾಗೂ ಅವರನ್ನು ನೆನಪು ಮಾಡಿಕೊಳ್ಳುತ್ತಾ ಅವರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ" ಎಂದು ಹೇಳಿದರು.

"ಬಂಗಾರಪ್ಪ ಅವರನ್ನು ಹತ್ತಿರದಿಂದ ನೋಡಿದ್ದೆ. ನಾನು ಮೊದಲ ಬಾರಿ ಶಾಸಕನಾಗಿದ್ದಾಗ ಅವರು ಮಂತ್ರಿ ಆಗಿರಲಿಲ್ಲ. ಅವರು ಬಹಳಷ್ಟು ಯುವಕರ ಜೊತೆ ಗುರುತಿಸಿಕೊಳ್ಳುತ್ತಿದ್ದರು. ಅವರ ಮಾತುಗಳು ಸ್ಫೂರ್ತಿ. ವಿರೇಂದ್ರ ಪಾಟೀಲ್ ನಂತರ ಅವರು ಸಿಎಂ ಆದರು. ಆ ವೇಳೆ ನನ್ನ ಜೊತೆಯಲ್ಲಿ ಇದ್ದವರನ್ನು ಸಚಿವರನ್ನಾಗಿ ಮಾಡಿದರು. ಆದರೆ ನನ್ನನ್ನು ಮಂತ್ರಿ ಮಾಡಿಲಿಲ್ಲ. ಇದರಿಂದ ನನಗೆ ಕೋಪ ಬಂತು. ನನ್ನನ್ನು ಕರೆದರೂ ನಾನು ಬರಲಿಲ್ಲ. ನಮ್ಮ ಜಿಲ್ಲೆಯ ಸಚಿವರಾಗಿದ್ದ ವೀರಪ್ಪನವರು ನನ್ನನ್ನು ಕರೆದುಕೊಂಡು ಹೋದ್ರು. ಆಗ ಬಂಗಾರಪ್ಪ ನನ್ನನ್ನು ಕುದುರೆ ಎಂದರು. ನಿನ್ನನ್ನು ಮುಂದೆ ಮಂತ್ರಿ ಮಾಡುತ್ತೇನೆ ಎಂದು ಹೇಳಿದಾಗ ಕೋಪ ಕಡಿಮೆ ಮಾಡಿಕೊಂಡು, ನನ್ನ ರಾಜಕೀಯ ಜೀವನ ಇರುವವರೆಗೂ ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿ ಬಂದೆ" ಎಂದು ನೆನಪಿಸಿಕೊಂಡರು.

ನಟ ಶಿವ ರಾಜ್​ಕುಮಾರ್ ಮಾತನಾಡಿ, "ಪ್ರತಿಯೊಬ್ಬರಿಗೆ ಈ ಭಾಗ್ಯ ಸಿಗಲ್ಲ. ಒಂದು ನಮ್ಮ ತಂದೆ ಇನ್ನೊಂದು ನನ್ನ ಮಾವ. ಬಂಗಾರಪ್ಪನವರ ವಿಚಾರಗಳನ್ನು ಮಧು ಬಂಗಾರಪ್ಪ ನಡೆಸಿಕೊಂಡು ಬರುತ್ತಿದ್ದಾರೆ. ಕುಂ.ವೀರಭದ್ರಪ್ಪನವರಿಗೆ ಪ್ರಶಸ್ತಿ ನೀಡುತ್ತಿರುವುದು ನನಗೆ ಹೆಮ್ಮೆ ಹಾಗೂ ಸಂತಸವಾಗಿದೆ. ಮಾವನವರು ಚೆನ್ನಾಗಿ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದರು. ಸಿಎಂ ಆದಾಗಲೂ ಸಿಎಂ ಸ್ಥಾನದಿಂದ ಕೆಳಗೆ ಇಳಿದಾಗಲೂ ಎಂದಿನಂತೆ ಆ ದಿನ ಸಂಜೆ ಬ್ಯಾಡ್ಮಿಂಟನ್ ಆಡಿದ್ದರು. ಅವರಿಗೆ ಅಧಿಕಾರದ ಆಸೆ ಇರಲಿಲ್ಲ. ಬಡವರ ಬಗ್ಗೆ ಕಾಳಜಿ ಇತ್ತು. ಒಳ್ಳೆಯ ಸಮಾರಂಭವನ್ನು ಮಧು ಬಂಗಾರಪ್ಪ ಪ್ರತಿವರ್ಷ ನಡೆಸಬೇಕು. ನಮ್ಮನ್ನು ಸೊರಬಕ್ಕೆ ಕರೆಸಬೇಕು" ಎಂದರು. ಬಳಿಕ ಮುತ್ತಣ್ಣ ಪೀಪಿ ಊದುವ, ಬೇಡುವೆನು ವರವನ್ನು ಹಾಡುಗಳನ್ನು ಹಾಡುವ ಮೂಲಕ ಜನರನ್ನು ರಂಜಿಸಿದರು.

ಕಲಾ ಪೋಷಕರಾಗಿದ್ದ ಬಂಗಾರಪ್ಪನವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಜನಪದ ಕಲೆಗಳಾದ ಡೊಳ್ಳು ಕುಣಿತ, ತಮಟೆ, ಪೂಜಾಕುಣಿತ, ವೀರಗಾಸೆ, ಸೇರಿದಂತ ವಿವಿಧ ಜಾನಪದ ಕಲೆಗಳು ಮೇಳೈಸಿದವು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ, ಮಗಳು ಗೀತಾ ಶಿವ ರಾಜ್​ಕುಮಾರ್​, ಎಂಎಲ್ಸಿ ಮಂಜುನಾಥ್ ಭಂಡಾರಿ, ಬಿಲ್ಕಿಸ್​ ಭಾನು, ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ್, ಶಾಸಕ ಭೀಮಾ ನಾಯ್ಕ್, ಪ್ರಸನ್ನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ:ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಫಲಿತಾಂಶದ ಸುಧಾರಣೆಗೆ ಶಿಕ್ಷಣ ಕೋಪೈಲಟ್ ಯೋಜನೆ: ಸಚಿವ ಮಧು ಬಂಗಾರಪ್ಪ

Last Updated : 3 hours ago

ABOUT THE AUTHOR

...view details