ಕರ್ನಾಟಕ

karnataka

ETV Bharat / state

ಕಿತ್ತೂರು ಉತ್ಸವ ಫಲಪುಷ್ಪ ಪ್ರದರ್ಶನ: ಮರಳಿನಲ್ಲಿ ರಾಣಿ ಚೆನ್ನಮ್ಮ, ಸಿರಿಧಾನ್ಯಗಳಲ್ಲಿ ಅರಳಿದ ಮಡಿವಾಳ ಅಜ್ಜ

ಕುಂದಾನಗರಿಯಲ್ಲಿ ಕಿತ್ತೂರು ಚೆನ್ನಮ್ಮನ 200ನೇ ವಿಜಯೋತ್ಸವಕ್ಕೆ ಜನ ಸಾಗರ ಹರಿದು ಬರುತ್ತಿದೆ. ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.

ಮರಳಿನಲ್ಲಿ ರಾಣಿ ಚೆನ್ನಮ್ಮ, ಸಿರಿಧಾನ್ಯಗಳಲ್ಲಿ ಅರಳಿದ ಮಡಿವಾಳ ಅಜ್ಜ
ಮರಳಿನಲ್ಲಿ ರಾಣಿ ಚೆನ್ನಮ್ಮ, ಸಿರಿಧಾನ್ಯಗಳಲ್ಲಿ ಅರಳಿದ ಮಡಿವಾಳ ಅಜ್ಜ (ETV Bharat)

By ETV Bharat Karnataka Team

Published : 4 hours ago

ಬೆಳಗಾವಿ:ವೀರರಾಣಿ ಚೆನ್ನಮ್ಮನ 200ನೇ ವಿಜಯೋತ್ಸವಕ್ಕೆ ಜನರ ದಂಡು ಕಿತ್ತೂರಿನತ್ತ ಹರಿದು ಬರುತ್ತಿದೆ. ‌ಉತ್ಸವದ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಸಿರಿಧಾನ್ಯಗಳಲ್ಲಿ ಅರಳಿದ ಗುರು ಮಡಿವಾಳೇಶ್ವರರ ಭಾವಚಿತ್ರ, ಮರಳಿನಲ್ಲಿ ಅರಳಿದ ರಾಣಿ ಚೆನ್ನಮ್ಮಾಜಿ ಚಿತ್ರ ಅದ್ಭುತವಾಗಿ ಮೂಡಿಬಂದಿವೆ.

ಹೌದು, ಕಿತ್ತೂರು ಪಟ್ಟಣದ ಕೋಟೆ ಆವರಣದಲ್ಲಿರುವ ಗ್ರಾಮದೇವಿ ದೇವಸ್ಥಾನದ ಬಳಿ ತೋಟಗಾರಿಕಾ ಇಲಾಖೆ ವತಿಯಿಂದ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಬ್ರಿಟಿಷರ ವಿರುದ್ಧ ದಿಗ್ವಿಜಯ ಸಾಧಿಸಿ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕಿತ್ತೂರು ನಾಡಿನ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಈ ಬಾರಿ ತಯಾರಿಸಲಾಗಿದೆ.

ಕಿತ್ತೂರು ಉತ್ಸವ ಫಲಪುಷ್ಪ ಪ್ರದರ್ಶನ (ETV Bharat)

ಅದರಲ್ಲೂ ಸಿರಿಧಾನ್ಯಗಳಲ್ಲಿ ತಯಾರಿಸಿರುವ ಕಿತ್ತೂರು ಸಂಸ್ಥಾನದ ರಾಜಗುರು ಮಡಿವಾಳೇಶ್ವರರ ಭಾವಚಿತ್ರವು ನೋಡುಗರ ಗಮನ ಸೆಳೆಯುತ್ತಿದೆ. ಜೋಳ, ನವಣೆ, ಚನ್ನಂಗಿ, ರಾಗಿ, ಸಾವೆ ಬಳಸಿ 6 ಅಡಿ ಎತ್ತರದ ಕಲಾಕೃತಿ ತಯಾರಿಸಲಾಗಿದೆ. ಕುಳಿತು ಆಶೀರ್ವಾದ ಮಾಡುತ್ತಿರುವ ಭಂಗಿಯು ಮಡಿವಾಳ ಅಜ್ಜನನ್ನೇ ಈ ಮೂರ್ತಿ ನೆನಪಿಸುತ್ತಿದೆ. ಜನ ಭಕ್ತಿಯಿಂದ ಕೈ ಮುಗಿಯುತ್ತಿರುವುದು ಸಾಮಾನ್ಯವಾಗಿದೆ‌.

ಮರಳಿನಲ್ಲಿ ರಾಣಿ ಚೆನ್ನಮ್ಮಾಜಿ ಡಾಲು ಮತ್ತು ಕತ್ತಿ ಹಿಡಿದಿರುವ ಹಾಗೂ ಪಕ್ಕದಲ್ಲಿ ಕಿತ್ತೂರು ಸಂಸ್ಥಾನದ ಲಾಂಛನ ನಂದಿಧ್ವಜ ಇರುವ ಕಲಾಕೃತಿ ಪ್ರಮುಖ ಆಕರ್ಷಣೆಯಾಗಿದೆ. ಮೈಸೂರಿನ ಕಲಾವಿದೆ ಗೌರಿ ಇದನ್ನು ತಯಾರಿಸಿದ್ದಾರೆ. ಇನ್ನು "ಜೈಜವಾನ್​​ ಜೈಕಿಸಾನ್​" ಘೋಷವಾಕ್ಯ ಇರುವ, ಹೆಗಲ ಮೇಲೆ ನೇಗಿಲು, ಕೈಯಲ್ಲಿ ಬಂದೂಕು ಹಿಡಿದ ವ್ಯಕ್ತಿ ಜಗತ್ತಿಗೆ ಅನ್ನ ಕೊಡುವ ರೈತನೂ ಹೌದು, ದೇಶದ ಗಡಿ ಕಾಯುವ ಸೈನಿಕನೂ ಹೌದು ಎಂಬ ಸಂದೇಶವನ್ನು ಮನೋಜ್ಞವಾಗಿ ಕಟ್ಟಿ ಕೊಟ್ಟಿದ್ದಾರೆ‌. ಬೇಟಿ ಬಚಾವೋ, ಬೇಟಿ ಪಡಾವೋ ಕಲಾಕೃತಿ ಕೂಡ ಹೆಣ್ಣು ಮಕ್ಕಳನ್ನು ಓದಿಸುವುದು ಮತ್ತು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಜಾಗೃತಿಗೊಳಿಸುತ್ತಿದೆ.

ಕಿತ್ತೂರು ಉತ್ಸವ ಫಲಪುಷ್ಪ ಪ್ರದರ್ಶನ (ETV Bharat)

ಇನ್ನು, ಚೆನ್ನಮ್ಮಾಜಿ ಯುದ್ಧದಲ್ಲಿ ಹೋರಾಡುತ್ತಿರುವ ಸನ್ನಿವೇಷವನ್ನು ರಂಗೋಲಿಯಲ್ಲಿ ಕಟ್ಟಿ ಕೊಡಲಾಗಿದೆ. ವಿವಿಧ ಬಣ್ಣಗಳ ಸೇವಂತಿ ಹೂವುಗಳಲ್ಲಿ ಕಿತ್ತೂರಿನ ಕೋಟೆ ಕಲಾಕೃತಿ, ತೆಂಗಿನಲ್ಲಿ ಅರಳಿರುವ ರವೀಂದ್ರನಾಥ ಟ್ಯಾಗೋರ, ಗಣೇಶ, ಆಂಜನೇಯ, ಬುದ್ಧ ಅವರ ಪ್ರತಿರೂಪಗಳು, ಚಕ್ಕಡಿ, ಸಂಗೀತ ವಾದ್ಯಗಳು ಸೇರಿ 57 ಅಲಂಕಾರಿಕ ವಸ್ತುಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಇದರ ಜೊತೆಗೆ ಕಲ್ಲಂಗಡಿಯಲ್ಲಿ ಯೋಗಿ ಶಿವ, ಬುದ್ಧ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸ್ವಾಮಿ ವಿವೇಕಾನಂದ ಡಾ. ಬಿ.ಆರ್. ಅಂಬೇಡ್ಕರ್​, ಡಾ. ರಾಜಕುಮಾರ ಸೇರಿ ಮತ್ತಿತರ ಮಹನೀಯರ ಚಿತ್ರಗಳು ಅದ್ಭುತವಾಗಿ ಮೂಡಿಬಂದಿವೆ‌.

ಸೇವಂತಿ ಹೂವುಗಳಲ್ಲಿ ಹಲಸು ಮತ್ತು ಮಾವಿನ ಹಣ್ಣಿನ ಕಲಾಕೃತಿಗಳು, ಟೊರೇನಿಯಾ, ಬೇಗೋನಿಯಾ, ಸಾಲ್ವಿಯಾ, ಜೆರ್ಬೆರಾ, ಚೆಂಡು ಹೂವು ಸೇರಿ ಇನ್ನಿತರ ಅಲಂಕಾರಿಕ ಪುಷ್ಪ ಕುಂಡಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಕಿತ್ತೂರು ಉತ್ಸವ ಫಲಪುಷ್ಪ ಪ್ರದರ್ಶನ (ETV Bharat)

ಸಹಾಯಕ ತೋಟಗಾರಿಕಾ ಅಧಿಕಾರಿ ಅಶ್ವಿನಿ ಯದ್ದಲಗುಂಡಿ ಈಟಿವಿ ಭಾರತ ಜೊತೆಗೆ ಮಾತನಾಡಿ, "ಐದು ದಿನಗಳ ಕಾಲ ಶ್ರಮವಹಿಸಿ ಕಲಾಕೃತಿಗಳನ್ನು ತಯಾರಿಸಿದ್ದೇವೆ. ಜನ ತುಂಬಾ ಆಸಕ್ತಿಯಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ. ಅದರಲ್ಲೂ ಮಡಿವಾಳೇಶ್ವರರ ಪ್ರತಿರೂಪವನ್ನು ಸಾರ್ವಜನಿಕರು ತುಂಬಾ ಇಷ್ಟ ಪಡುತ್ತಿದ್ದಾರೆ. ಗುರುವಾರ ಹಾಗೂ ಶುಕ್ರವಾರವೂ ಪ್ರದರ್ಶನ ಇರಲಿದೆ. ಎಲ್ಲರೂ ಆಗಮಿಸುವಂತೆ" ಕೇಳಿಕೊಂಡರು.

ಕಿತ್ತೂರು ಉತ್ಸವ ಫಲಪುಷ್ಪ ಪ್ರದರ್ಶನ (ETV Bharat)

ಮೈಸೂರಿನ ಮರಳು ಕಲಾಕೃತಿ ಕಲಾವಿದೆ ಗೌರಿ ಎಂಬುವರು ಮರಳಿನಲ್ಲಿ ಚೆನ್ನಮ್ಮನ ಚಿತ್ರವನ್ನು ಬಿಡಿಸಿದ್ದಾರೆ. "ಇದಕ್ಕಾಗಿ 3 ದಿನ ಸಮಯ ತೆಗೆದುಕೊಂಡು 3 ಟ್ರಕ್ ಮರಳನ್ನು ಬಳಸಿಕೊಂಡಿದ್ದಾರೆ. ಇದೇ ಮೊದಲ ಬಾರಿ ಚೆನ್ನಮ್ಮಾಜಿ ಕಲಾಕೃತಿ ಸಿದ್ಧಪಡಿಸಿದ್ದೇನೆ. ರಾಣಿ ಚೆನ್ನಮ್ಮನವರ ಬಗ್ಗೆ ಪುಸ್ತಕಗಳಲ್ಲಿ ಓದಿದ್ದೆ. ಈಗ ಅವರ ಪುಣ್ಯಭೂಮಿಯಲ್ಲಿ ಚಿತ್ರ ಬಿಡಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ" ಎಂದು ಹರ್ಷ ವ್ಯಕ್ತಪಡಿಸಿದರು.

ಬೈಲಹೊಂಗಲದಿಂದ ಬಂದಿದ್ದ ದೀಪಾ ಗುಡಗನಟ್ಟಿ, "ಕಿತ್ತೂರು ಉತ್ಸವ ಇಡೀ ಉತ್ತರಕರ್ನಾಟಕಕ್ಕೆ ಹಬ್ಬ. ಈ ಬಾರಿ 200ನೇ ವಿಜಯೋತ್ಸವ ಇನ್ನೂ ವಿಜೃಂಭಣೆಯಿಂದ ಜರುಗುತ್ತಿದೆ. ಫಲಪುಷ್ಪ ಪ್ರದರ್ಶನದಲ್ಲಿ ಗುರು ಮಡಿವಾಳ ಅಜ್ಜ, ರಾಣಿ ಚೆನ್ನಮ್ಮ, ಕಿತ್ತೂರು ಕೋಟೆ, ರೈತ ಮತ್ತು ಯೋಧನ‌ ಚಿತ್ರಗಳು ತುಂಬಾ ಚೆನ್ನಾಗಿ ತಯಾರಿಸಿದ್ದಾರೆ. ಇವುಗಳನ್ನು ನೋಡಿ ತುಂಬಾ ಖುಷಿ ಆಯಿತು" ಎಂದರು.

ಇದನ್ನೂ ಓದಿ:ದೆಹಲಿಗೂ ಚೆನ್ನಮ್ಮನ ಇತಿಹಾಸ ಕೊಂಡೊಯ್ಯಬೇಕಿದೆ: 200ನೇ ಕಿತ್ತೂರು ವಿಜಯೋತ್ಸವದಲ್ಲಿ ಸಚಿವ ಸತೀಶ್ ಜಾರಕಿಹೊಳಿ

ABOUT THE AUTHOR

...view details