ಕರ್ನಾಟಕ

karnataka

ETV Bharat / state

ಟ್ರ್ಯಾಕ್ಟರ್, ಕೃಷಿ ಯಂತ್ರೋಪಕರಣಗಳ ಮೇಲೆ ಎಂಆರ್‌ಪಿ ಪ್ರಕಟಿಸಲು ಕೋರಿದ್ದ ಅರ್ಜಿದಾರರಿಗೆ ₹5 ಸಾವಿರ ದಂಡ

ಟ್ರ್ಯಾಕ್ಟರ್ ಹಾಗೂ ಇತರ ಕೃಷಿ ಯಂತ್ರೋಪಕಣಗಳ ಮೇಲೆ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು (ಎಂಆರ್‌ಪಿ) ಮುದ್ರಣ ಕಡ್ಡಾಯಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ. ಅಲ್ಲದೆ, ಅರ್ಜಿದಾರರಿಗೆ ದಂಡ ವಿಧಿಸಿದೆ.

By ETV Bharat Karnataka Team

Published : 4 hours ago

HIGH COURT
ಹೈಕೋರ್ಟ್ (ETV Bharat)

ಬೆಂಗಳೂರು: ಭಾರತದಲ್ಲಿ ತಯಾರಾಗುವ ಟ್ರ್ಯಾಕ್ಟರ್ ಹಾಗೂ ಇತರ ಕೃಷಿ ಯಂತ್ರೋಪಕಣಗಳ 'ಗರಿಷ್ಠ ಚಿಲ್ಲರೆ ಮಾರಾಟ ದರ'ವನ್ನು (ಎಂಆರ್‌ಪಿ) ಆಯಾ ಉತ್ಪಾದಕ ಕಂಪನಿಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ಹಾಗೂ ಉಪಕರಣಗಳ ಮೇಲೆ ಮುದ್ರಿಸುವುದನ್ನು ಕಡ್ಡಾಯಗೊಳಿಸುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿದಾರರಿಗೆ ಹೈಕೋರ್ಟ್ 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ದಾವಣಗೆರೆಯ ವಿ.ರಾಘವೇಂದ್ರ ಪ್ರಸಾದ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾ.ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಈ ಆದೇಶ ನೀಡಿದೆ.

ಅಲ್ಲದೆ, ಇದೊಂದು ಸರ್ಕಾರದ ನೀತಿ ನಿರ್ಧಾರಕ ವಿಚಾರವಾಗಿದ್ದು, ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ. ಅರ್ಜಿದಾರರು ತಮ್ಮ ಮನವಿಯನ್ನು ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳ ಮುಂದೆ ಸಲ್ಲಿಸಲು ಸ್ವತಂತ್ರರಾಗಿದ್ದಾರೆ ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸುವುದಾಗಿ ಕೋರ್ಟ್​ ಹೇಳಿತ್ತು.

ಆದರೆ, ಕೇಂದ್ರ ಸರ್ಕಾರದ ಪರ ವಕೀಲರು, ''ಸ್ವತಃ ಅರ್ಜಿದಾರರು ಕಳೆದ 30 ವರ್ಷಗಳಿಂದ ಸ್ವರಾಜ್ ಮಜ್ದಾ ಟ್ರ್ಯಾಕ್ಟರ್‌ಗಳ ಸೇಲ್ಸ್ ಮತ್ತು ಸರ್ವಿಸ್ ಸೆಂಟರ್ ನಡೆಸುತ್ತಿದ್ದಾರೆ'' ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ''ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಲು ಸಾಧ್ಯವಿಲ್ಲ'' ಎಂದು ಅರ್ಜಿದಾರರಿಗೆ 5 ಸಾವಿರ ರೂ. ದಂಡ ವಿಧಿಸಿದೆ. ದಂಡದ ಮೊತ್ತವನ್ನು ಮೂರು ವಾರಗಳಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸುವಂತೆ ನಿರ್ದೇಶನ ನೀಡಿ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

ಇದನ್ನೂ ಓದಿ:ಮುಸ್ಲಿಂರ ವಿವಾಹ ನೋಂದಣಿ ಪ್ರಮಾಣಪತ್ರ ವಿತರಿಸುವ ಅಧಿಕಾರ ವಕ್ಫ್​ ಮಂಡಳಿಗೆ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್​

ಟ್ರ್ಯಾಕ್ಟರ್‌ ಹಾಗೂ ಕೃಷಿ ಉಪಕರಣಗಳ ತಯಾರಿಕಾ ಸಂಸ್ಥೆಗಳು ಎಂಆರ್‌ಪಿ ದರ ನಮೂದಿಸುವುದಿಲ್ಲ ಎಂಬುದನ್ನೇ ಬಂಡವಾಳ ಮಾಡಿಕೊಂಡು ಅನೇಕ ಡೀಲರ್‌ಗಳು ಮನಬಂದಂತೆ ದರ ನಿಗದಿಪಡಿಸಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಆದ್ದರಿಂದ ಭಾರತದಲ್ಲಿ ತಯಾರಾಗುವ ಟ್ರ್ಯಾಕ್ಟರ್ ಹಾಗೂ ಇತರ ಕೃಷಿ ಯಂತ್ರೋಪಕಣಗಳ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು ಆಯಾ ಉತ್ಪಾದಕ ಕಂಪೆನಿಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ಹಾಗೂ ಉಪಕರಣಗಳ ಮೇಲೆ ಮುದ್ರಿಸುವುದನ್ನು ಕಡ್ಡಾಯಗೊಳಿಸುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

ಕರ್ನಾಟಕದಲ್ಲಿ ದಸರಾ, ದೀಪಾವಳಿ, ಯುಗಾದಿ ಹಬ್ಬಗಳ ಸಂದರ್ಭದಲ್ಲಿ ರೈತರು ಹೆಚ್ಚಾಗಿ ಕೃಷಿ ಉಪಕರಣಗಳನ್ನು ಖರೀದಿಸುತ್ತಾರೆ. ಈ ಸಂದರ್ಭದಲ್ಲಿ ಎಂಆರ್‌ಪಿ ಬಗ್ಗೆ ಪತ್ರಿಕೆಗಳಲ್ಲಿ ವ್ಯಾಪಕ ಜಾಹೀರಾತು ನೀಡಬೇಕು. ಯಾವುದೇ ಕೃಷಿ ಉಪಕರಣ ತಯಾರಿಕಾ ಘಟಕಗಳಿಂದ ಹೊರಬರುವ ವೇಳೆ ಅವುಗಳ ಮೇಲೆ ಎಂಆರ್‌ಪಿ ಸೀಲ್ ಹಾಕಿರಬೇಕು. ಎಲ್ಲಾ ಮಾದರಿಯ ಕೃಷಿ ಉಪಕರಣಗಳ ಮಾರಾಟದ ದರ ಜಿಲ್ಲಾ ಮತ್ತು ತಾಲೂಕು ಮಟ್ಟದ ಕೃಷಿ ಅಧಿಕಾರಿಗಳ ಕಚೇರಿಯಲ್ಲಿ ಲಭ್ಯವಾಗಿಸಬೇಕು. ಟ್ರ್ಯಾಕ್ಟರ್‌ ಕಂಪನಿಗಳ ಏಕಸ್ವಾಮ್ಯತೆ ಮತ್ತು ಅನ್ಯಾಯಗಳ ಮೇಲೆ ಸರ್ಕಾರ ನಿಗಾ ವಹಿಸಬೇಕು. ದರ ನಿಗದಿ ಮತ್ತು ಏರಿಕೆ ಮೇಲೆ ಸರ್ಕಾರ ಮಿತಿ ಹೇರಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಇದನ್ನೂ ಓದಿ:'ಚಾಮುಂಡೇಶ್ವರಿ ದೇವಾಲಯ ಪ್ರಾಧಿಕಾರದಲ್ಲಿ ತೀರ್ಮಾನ ಕೈಗೊಳ್ಳುವ ಮುನ್ನ ಕೋರ್ಟ್‌ ಅನುಮತಿ ಕಡ್ಡಾಯ'

ABOUT THE AUTHOR

...view details