ಕರ್ನಾಟಕ

karnataka

ETV Bharat / state

ನಾಳೆಯಿಂದ ಶಾಲೆಗಳು ಆರಂಭ; ಎಲ್ಲಾ ಸ್ಕೂಲ್​ಗಳಿಗೂ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆಯಾಗಿದೆ : ಮಧು ಬಂಗಾರಪ್ಪ - Madhu Bangarappa

ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

By ETV Bharat Karnataka Team

Published : May 30, 2024, 5:48 PM IST

Updated : May 30, 2024, 6:34 PM IST

Madhu-bangarappa
ಶಿಕ್ಷಣ ಸಚಿವ ಮಧು ಬಂಗಾರಪ್ಪ (ETV Bharat)

ಶಿಕ್ಷಣ ಸಚಿವ ಮಧು ಬಂಗಾರಪ್ಪ (ETV Bharat)

ಶಿವಮೊಗ್ಗ: ನಾಳೆಯಿಂದ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳು ಪ್ರಾರಂಭವಾಗಲಿದ್ದು, ಎಲ್ಲ ಶಾಲೆಗಳಿಗೂ ಪಠ್ಯ ಪುಸ್ತಕ ಹಾಗೂ ಸಮವಸ್ತ್ರಗಳನ್ನು ಪೂರೈಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆಯಿಂದ ಶಾಲೆಗಳು ಆರಂಭವಾಗಲಿದೆ. ಎಲ್ಲೆಡೆ ಪಠ್ಯಪುಸ್ತಕ ಮತ್ತು ಯೂನಿಫಾರಂ ವಿತರಣೆ ಆಗಿದೆ. ರಾಜ್ಯದಲ್ಲಿ 600ಕ್ಕೂ ಹೆಚ್ಚು ಕೆಪಿಎಸ್ ಶಾಲೆಗಳನ್ನು ಆರಂಭಿಸಬೇಕಿದೆ. ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗಿದೆ. ಈ ಬಾರಿ ಅನೇಕ ಬದಲಾವಣೆ ತರಲಾಗಿದೆ. ಹೀಗಾಗಿ ಫಲಿತಾಂಶ ಕುಸಿತವಾಗಿದೆ ಎಂದರು.

ಹೀಗಿದ್ದೂ ಸರ್ಕಾರಿ ಶಾಲೆಯ ಅಂಕಿತಾ 625ಕ್ಕೆ 625 ಅಂಕಗಳಿಸಿದ್ದಾಳೆ. 10 ಗ್ರೇಸ್ ಮಾರ್ಕ್ಸ್ ಹಿಂದಿನ ಬಿಜೆಪಿ ಸರ್ಕಾರದಲ್ಲೂ ನೀಡಲಾಗಿತ್ತು. ನಾವು 10 ಗ್ರೇಸ್ ಮಾರ್ಕ್ಸ್ ನೀಡಿದ್ದೆವು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು 12 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಹಿಂದಿನ ಬಿಜೆಪಿ ಹಾಗೂ ಜೆಡಿಎಸ್ ಅವಧಿಯಲ್ಲಿ ನಡೆದಿದ್ದ ನೇಮಕಾತಿಗಿಂತ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ಅವರು ಮಾಡಿರುವ ಹೊಲಸನ್ನು ನಾವು ಕ್ಲೀನ್ ಮಾಡುತ್ತಿದ್ದೇವೆ. ಮಾಜಿ ಸಚಿವ ಸುರೇಶ್ ಕುಮಾರ್ ತುಂಬಾ ಲಘುವಾಗಿ ಮಾತನಾಡಿದ್ದಾರೆ. ಅವರ ಮೇಲೆ ಇದ್ದ ಗೌರವ ಕಳೆದುಕೊಂಡಿದ್ದಾರೆ ಎಂದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ಸುಧಾರಣೆ ತರಲಾಗಿದೆ. ಪಿಯುಸಿ ಮತ್ತು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಫ್ರೆಂಡ್ಲಿಯಾಗಿ ನಡೆಸಲಾಗುತ್ತಿದೆ. ಸಿಇಟಿ ಪರೀಕ್ಷೆಗೆ ಶಾಲಾ - ಕಾಲೇಜಿನಲ್ಲೇ ಕೋಚಿಂಗ್ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲೇ ಆಯಾ ವಿಷಯದ ಶಿಕ್ಷಕರು ಹೆಚ್ಚುವರಿ ತರಗತಿ ತೆಗೆದುಕೊಳ್ಳಲಿದ್ದಾರೆ. ನಮ್ಮಲ್ಲಿ ಬೆಸ್ಟ್ ಟೀಚರ್ಸ್ ಗಳಿದ್ದಾರೆ. ಅದನ್ನು ಸದುಪಯೋಗ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಬಿಜೆಪಿ ಆಡಳಿತದಲ್ಲಿ ಶಿಕ್ಷಣ ಇಲಾಖೆಯನ್ನು ಸಂಪೂರ್ಣ ಹಾಳು ಮಾಡಲಾಗಿತ್ತು. ಅದನ್ನು ಸರಿಪಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಖಾಸಗಿ ಶಾಲೆಯಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಖಾಸಗಿ ಸಂಸ್ಥೆಗಳಲ್ಲಿ ಅವರದ್ದೇ ಆದ ಫೀಸ್ ನಿಗದಿ ಮಾಡಿಕೊಂಡಿದ್ದಾರೆ ಎಂದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟ್​ನ ನಿರ್ದೇಶನಗಳಿವೆ. ಆದಾಗ್ಯೂ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುತ್ತೇವೆ, ವಿಶ್ವಾಸವಿಡಿ ಎಂದರು. ಸಿಎಂ, ಡಿಸಿಎಂ‌ ಸ್ವತಃ ನನ್ನ ಇಲಾಖೆಯನ್ನು ಗಮನಿಸುತ್ತಿದ್ದಾರೆ. ಪೂರ್ಣ ಸಹಕಾರ ನೀಡುತ್ತಿದ್ದಾರೆ. ಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಯೋಗದೊಂದಿಗೆ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ ಸಿಬಿಐ ವಹಿಸುವ ವಿಚಾರ:ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಕ್ಕೆ ತಿರುಗೇಟು ನೀಡಿದ ಮಧು ಬಂಗಾರಪ್ಪ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೆ ಹೀಗೆ ಹೇಳುತ್ತಿದ್ದರೆ? ಎಂದು ಪ್ರಶ್ನಿಸಿದರು. ಸಿಬಿಐ, ಐಟಿ, ಇಡಿ ಮೊದಲಾದ ಸಂಸ್ಥೆಗಳನ್ನು ಪ್ರೈವೇಟ್ ಏಜೆನ್ಸಿ ರೀತಿ ಬಳಸಿಕೊಂಡಿದ್ದಾರೆ. ಹೀಗಾಗಿ ಅವರು ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದರು.

ನಿಗಮದ ಹಣ ಚುನಾವಣೆ ವೇಳೆ ನೆರೆಯ ರಾಜ್ಯಕ್ಕೆ ವರ್ಗಾವಣೆ ಆಗಿತ್ತು ಎಂದು ಆರೋಪಿಸಿದ್ದಾರೆ. ಹಾಗಾದರೆ ಸಮ್ಮಿಶ್ರ ಸರ್ಕಾರ ಬೀಳಿಸುವಾಗ, ಶಾಸಕರನ್ನು ಮುಂಬಯಿಗೆ ಕರೆದುಕೊಂಡು ಹೋಗಿದ್ದಾಗ ಹೀಗೆ ಹಣ ವರ್ಗಾವಣೆ ಮಾಡಿದ್ದರಾ? ಎಂದರು. ಅವರದೇ ಸರ್ಕಾರ ಕೇಂದ್ರದಲ್ಲಿದೆ. ತನಿಖೆ ಮಾಡಲಿ ಬಿಡಿ ಎಂದು ಹೇಳಿದರು.

ಇದನ್ನೂ ಓದಿ :ಎಸ್​ಎಸ್​ಎಲ್​ಸಿ ಟಾಪರ್ ಅಂಕಿತಾಗೆ ಕರೆ ಮಾಡಿ ಶುಭಹಾರೈಸಿದ ಸಚಿವ ಮಧು ಬಂಗಾರಪ್ಪ - Madhu Bangarappa Called Sslc Topper

Last Updated : May 30, 2024, 6:34 PM IST

ABOUT THE AUTHOR

...view details