ಶಿವಮೊಗ್ಗ: ನಾಳೆಯಿಂದ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳು ಪ್ರಾರಂಭವಾಗಲಿದ್ದು, ಎಲ್ಲ ಶಾಲೆಗಳಿಗೂ ಪಠ್ಯ ಪುಸ್ತಕ ಹಾಗೂ ಸಮವಸ್ತ್ರಗಳನ್ನು ಪೂರೈಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆಯಿಂದ ಶಾಲೆಗಳು ಆರಂಭವಾಗಲಿದೆ. ಎಲ್ಲೆಡೆ ಪಠ್ಯಪುಸ್ತಕ ಮತ್ತು ಯೂನಿಫಾರಂ ವಿತರಣೆ ಆಗಿದೆ. ರಾಜ್ಯದಲ್ಲಿ 600ಕ್ಕೂ ಹೆಚ್ಚು ಕೆಪಿಎಸ್ ಶಾಲೆಗಳನ್ನು ಆರಂಭಿಸಬೇಕಿದೆ. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗಿದೆ. ಈ ಬಾರಿ ಅನೇಕ ಬದಲಾವಣೆ ತರಲಾಗಿದೆ. ಹೀಗಾಗಿ ಫಲಿತಾಂಶ ಕುಸಿತವಾಗಿದೆ ಎಂದರು.
ಹೀಗಿದ್ದೂ ಸರ್ಕಾರಿ ಶಾಲೆಯ ಅಂಕಿತಾ 625ಕ್ಕೆ 625 ಅಂಕಗಳಿಸಿದ್ದಾಳೆ. 10 ಗ್ರೇಸ್ ಮಾರ್ಕ್ಸ್ ಹಿಂದಿನ ಬಿಜೆಪಿ ಸರ್ಕಾರದಲ್ಲೂ ನೀಡಲಾಗಿತ್ತು. ನಾವು 10 ಗ್ರೇಸ್ ಮಾರ್ಕ್ಸ್ ನೀಡಿದ್ದೆವು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು 12 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಹಿಂದಿನ ಬಿಜೆಪಿ ಹಾಗೂ ಜೆಡಿಎಸ್ ಅವಧಿಯಲ್ಲಿ ನಡೆದಿದ್ದ ನೇಮಕಾತಿಗಿಂತ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ಅವರು ಮಾಡಿರುವ ಹೊಲಸನ್ನು ನಾವು ಕ್ಲೀನ್ ಮಾಡುತ್ತಿದ್ದೇವೆ. ಮಾಜಿ ಸಚಿವ ಸುರೇಶ್ ಕುಮಾರ್ ತುಂಬಾ ಲಘುವಾಗಿ ಮಾತನಾಡಿದ್ದಾರೆ. ಅವರ ಮೇಲೆ ಇದ್ದ ಗೌರವ ಕಳೆದುಕೊಂಡಿದ್ದಾರೆ ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ಸುಧಾರಣೆ ತರಲಾಗಿದೆ. ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಫ್ರೆಂಡ್ಲಿಯಾಗಿ ನಡೆಸಲಾಗುತ್ತಿದೆ. ಸಿಇಟಿ ಪರೀಕ್ಷೆಗೆ ಶಾಲಾ - ಕಾಲೇಜಿನಲ್ಲೇ ಕೋಚಿಂಗ್ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲೇ ಆಯಾ ವಿಷಯದ ಶಿಕ್ಷಕರು ಹೆಚ್ಚುವರಿ ತರಗತಿ ತೆಗೆದುಕೊಳ್ಳಲಿದ್ದಾರೆ. ನಮ್ಮಲ್ಲಿ ಬೆಸ್ಟ್ ಟೀಚರ್ಸ್ ಗಳಿದ್ದಾರೆ. ಅದನ್ನು ಸದುಪಯೋಗ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.