ಕರ್ನಾಟಕ

karnataka

By ETV Bharat Karnataka Team

Published : Jun 6, 2024, 10:49 PM IST

ETV Bharat / state

"ಮಾಟ ಮಂತ್ರದ ಮೂಲಕ ವಶೀಕರಣ ಪ್ರಯತ್ನ, ದುರುದ್ದೇಶಪೂರ್ವಕವಾಗಿ ಪ್ರಕರಣ ದಾಖಲು": ಜಾಮೀನು ಕೋರಿ ದೇವರಾಜೇಗೌಡ ಅರ್ಜಿ - High Court

ಮಾಟ ಮಂತ್ರ ಮಾಡಿ ನನ್ನನ್ನು ವಶೀಕರಣ ಮಾಡಿಕೊಂಡಿದ್ದಾರೆ. ಜೊತೆಗೆ, ದುರುದ್ದೇಶಪೂರ್ವಕವಾಗಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಾಸನ ಪೆನ್‌ಡ್ರೈವ್‌ ಪ್ರಕರಣದ ಆರೋಪಿ ದೇವರಾಜೇಗೌಡ ಹೈಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

high-court
ಹೈಕೋರ್ಟ್ (ETV Bharat)

ಬೆಂಗಳೂರು: "ನನ್ನ ವಿರುದ್ಧ ಮಾಟಮಂತ್ರ ನಡೆಸಿ ವಶೀಕರಣ ಮಾಡಿದ್ದಾರೆ. ಅಷ್ಟೇ ಅಲ್ಲದೇ ದುರುದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು" ಎಂದು ಹಾಸನ ಪೆನ್‌ಡ್ರೈವ್ ಪ್ರಕರಣದ ಆರೋಪಿಗಳಲ್ಲೊಬ್ಬರಾದ ದೇವರಾಜೇಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣ ಸಂಬಂಧ ಹೊಳೆನರಸೀಪುರ ಠಾಣಾ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಕಾಮಸಮುದ್ರ ಗ್ರಾಮದ ನಿವಾಸಿಯಾದ ಆರೋಪಿ ಜಿ.ದೇವರಾಜೇ ಗೌಡಗೆ(49) ಜಾಮೀನು ನಿರಾಕರಿಸಿ ಜೂನ್ 5ರಂದು ಹಾಸನದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ದೇವರಾಜೇಗೌಡ ಜಾಮೀನು ಕೋರಿ ಹೈಕೋರ್ಟ್​ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯಲ್ಲಿ ಹೊಳೆನರಸೀಪುರದ ಟೌನ್ ಠಾಣೆಯ ಇನ್​ಸ್ಪೆಕ್ಟರ್ ಮತ್ತು ದೂರುದಾರೆಯ ಮಹಿಳೆಯನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಶೀಘ್ರ ವಿಚಾರಣೆಗೆ ಬರುವ ಸಾಧ್ಯತೆಯಿದೆ.

"ನಾನು ಪ್ರಕರಣದಲ್ಲಿ ಅಮಾಯಕ. ನನ್ನ ವಿರುದ್ಧ ಮಾಟ ಮಂತ್ರದಿಂದ ವಶೀಕರಣ ಮಾಡಿದ್ದ ದೂರುದಾರೆ, ಸುಳ್ಳು ಆರೋಪ ಮಾಡಿ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಪೊಲೀಸರು ಹಾಗೂ ದೂರುದಾರೆ ಮಹಿಳೆ ದುರದ್ದೇಶ ಹೊಂದಿದ್ದಾರೆ. ದೂರುದಾರೆ ಮಹಿಳೆಯೇ ನನ್ನ ನಿವೇಶನದ ವ್ಯಾಜ್ಯದ ವಿಚಾರವಾಗಿ ನನ್ನನ್ನು ಸಂಪರ್ಕಿಸಿದ್ದರು. ನಂತರ ಫೋನ್ ನಂಬರ್ ಪಡೆದು ಸಂದೇಶ ಕಳುಹಿಸಿದ್ದರು. ಕೆಲ ಕಾಲದ ನಂತರ ನನ್ನ ಕಚೇರಿಗೆ ದೂರುದಾರೆಯ ಪತಿ ಭೇಟಿ ನೀಡಿ ನನ್ನ ಮೇಲೆ ಮಾಟ ಮಂತ್ರ ಮಾಡಿಸಿದ್ದರು. ನನ್ನ ಹಣೆಗೆ ಕುಂಕುಮ ಹಚ್ಚಿದರು. ಆಗ ನನಗೆ ತಲೆ ತಿರುಗಿತು. ನಂತರ ವಿಡಿಯೋಕಾಲ್ ಮಾಡಿ ಲೈಂಗಿಕ ಪ್ರಚೋದನೆ ನೀಡುತ್ತಿದ್ದರು. ಮಾಟ ಮಂತ್ರದಿಂದ ನಾನು ಬಲಿಪಶುವಾದೆ. ಆಕೆಯೇ ಕರೆ ಮಾಡಿ ಖಾಸಗಿ ಅಂಗ ತೋರಿಸುತ್ತಿದ್ದರು. ಮಹಿಳೆಯರನ್ನು ತೋರಿಸಿ ಕಾಮ ಪ್ರಚೋದನೆ ನೀಡುತ್ತಿದ್ದರು" ಎಂದು ಆರೋಪಿಸಿದ್ದಾರೆ.

"ಇದರಿಂದಾಗಿ ದೂರುದಾರೆ ಮತ್ತವರ ಗಂಡ ನನ್ನೊಂದಿಗೆ ಕಳ್ಳಾಟವಾಡುತ್ತಿದ್ದಾರೆ ಎಂಬ ಬಗ್ಗೆ ಅನುಮಾನವಾಯಿತು. ಅದನ್ನು ನಾನು ವಿಡಿಯೋ ರೆಕಾರ್ಡ್ ಮಾಡಿಕೊಂಡೆ. ಮರುದಿನವೇ ಅನಾರೋಗ್ಯಕ್ಕೆ ಗುರಿಯಾದೆ. ಆ ಮೇಲೆ ನಾನು ಮಾಟಮಂತ್ರದಿಂದ ವಶೀಕರಣವಾಗಿದ್ದೇನೆ ಎಂಬುದು ನನಗೆ ಅರ್ಥವಾಯಿತು. ನಂತರ ಅನಾಮದೇಯ ವ್ಯಕ್ತಿ ನನಗೆ ಕರೆ ಮಾಡಿ ಎರಡು ಕೋಟಿ ಹಣ ನೀಡಬೇಕು. ಇಲ್ಲವಾದರೆ ನಿನ್ನ ಅಶ್ಲೀಲ ಪೋಟೋ-ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ತಿಳಿಸಿದರು".

"ಈ ಬಗ್ಗೆ ನಾನು ಬೆಂಗಳೂರಿನ ಹೆಬ್ಬಾಳ ಠಾಣೆಗೆ ದೂರು ನೀಡಿದೆ. ವಿಚಾರಣೆಗೆ ಹಾಜರಾದ ದೂರುದಾರೆಯು ಆ ವೇಳೆ ನನ್ನ ಮೇಲೆ ಯಾವುದೇ ಆರೋಪ ಮಾಡಿಲ್ಲ. ನಂತರ ಏ.4ರಂದು ಆಕೆ ದೂರು ನೀಡಿದ್ದಾರೆ. ಅಲ್ಲದೆ, ಮಹಿಳೆಯೊಬ್ಬರು ಹೊಳೆನರಸೀಪುರ ಠಾಣೆಗೆ 2024 ರ ಏ. 1ರಂದು ದೂರು ದಾಖಲಿಸಿದ್ದರು".

"ಹಾಸನದ ನಿಲವಾಗಿಲು ಗ್ರಾಮದ ರಸ್ತೆಯಲ್ಲಿ ತನ್ನ ಒಡೆತನದ 30*40 ಅಡಿ ವಿಸ್ತೀರ್ಣದ ನಿವೇಶನ ಹೊಂದಿದ್ದೇನೆ. ಅದನ್ನು ಮಾರಾಟ ಮಾಡುವ ವಿಚಾರವಾಗಿ ದೂರು ದಾಖಲಾಗುವ ದಿನದಿಂದ 10 ತಿಂಗಳ ಹಿಂದೆ ರಾಜೇಗೌಡ ಅವರನ್ನು ಭೇಟಿ ಮಾಡಿದ್ದೆ. ಅಂದಿನಿಂದ ತನ್ನೊಂದಿಗೆ ಅವರು ಮಾತನಾಡುತ್ತಿದ್ದರು. ಆ ನಿವೇಶನದಲ್ಲಿ ನಾನೇ ಮನೆಯನ್ನು ಕಟ್ಟಿಸಿಕೊಡುತ್ತೇನೆ. ಉಪ ವಿಭಾಗಾಧಿಕಾರಿ ನನಗೆ ಪರಿಚಯವಿದ್ದು, ನಿಮ್ಮ ಕೆಲಸ ಮಾಡಿಕೊಡುತ್ತೇನೆ. ನೀನು ಒಬ್ಬಳೇ ಹಾಸನಕ್ಕೆ ಬರಬೇಕು ಎಂದು ಹೇಳಿದ್ದರು".

"ನಾನು ಹಾಸನಕ್ಕೆ ಹೋದಾಗ ಹೊಳೆನರಸೀಪುರ ರಸ್ತೆಗೆ ಹೊಂದಿಕೊಂಡಿರುವ ಬಿಯರ್ ತಯಾರಿಕಾ ಘಟಕದ ಹಿಂದಿರುವ ಜನನಿಬಿಡ ಪ್ರದೇಶಕ್ಕೆ ಕರೆದೊಯ್ದು, ಮೈ ಕೈ ಮುಟ್ಟಿ ದೈಹಿಕ ಹಿಂಸೆ ನೀಡುತ್ತಾರೆ. ನಂತರ ತಮ್ಮ ಮನೆಗೆ ಕರೆದೊಯ್ದು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು".

"ನಂತರ ಹೆದರಿಸಿ ದೈಹಿಕವಾಗಿ ಬಳಸಿಕೊಂಡು ಜೀವಬೆದರಿಕೆ ಹಾಕಿದ್ದಾರೆ. ಫೆ.2ರಂದು ನಾನು ಹೇಳಿದ ಜಾಗಕ್ಕೆ ನೀನು ಬರಲಿಲ್ಲವೆಂದರೆ ನಾನು ನಿನಗೆ ಕಳುಹಿಸುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಗದರಿಸಿದ್ದಾರೆ."

"ಈ ದೂರಿನ ಮೇರೆಗೆ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಜೀವ ಬೆದರಿಕೆ, ಅವಮಾನ ಮಾಡಿರುವುದು ಸೇರಿದಂತೆ ಇನ್ನಿತರ ಎಫ್‌ಐಆರ್ ದಾಖಲಿಸಿ, ದೇವರಾಜೇಗೌಡ ಅವರನ್ನು ಬಂಧಿಸಿದ್ದರು" ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ:ಮಾದಕ ವಸ್ತುಗಳ ತೂಕದಲ್ಲಿ ಬ್ಲಾಟರ್ ಪೇಪರ್‌ ಪರಿಗಣಿಸಬೇಕು: ಹೈಕೋರ್ಟ್ - Blotter Paper

ABOUT THE AUTHOR

...view details