ಕರ್ನಾಟಕ

karnataka

ಪಂಚ ಗ್ಯಾರಂಟಿಗೆ SCSP-TSP ಹಣ ಬಳಕೆ: ಜುಲೈವರೆಗೆ ಬಿಡುಗಡೆಯಾದ ಹಣವೆಷ್ಟು? - Five Guarantee Schemes

By ETV Bharat Karnataka Team

Published : Aug 14, 2024, 7:44 AM IST

ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಗಳ ಅನುದಾನದಿಂದ ಬಿಡುಗಡೆಯಾದ ಹಣವೆಷ್ಟು ಎಂಬ ಮಾಹಿತಿ ಇಲ್ಲಿದೆ.

guarantee schemes
ವಿಧಾನಸೌಧ (ETV Bharat)

ಬೆಂಗಳೂರು:ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ (SCSP-TSP) ಅನುದಾನ ಬಳಕೆ ಮಾಡುತ್ತಿರುವ ಬಗ್ಗೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೆಲ್ಲದರ ನಡುವೆಯೂ, ಎಸ್​ಸಿಎಸ್​ಪಿ-ಟಿಎಸ್​ಪಿ ಅನುದಾನದಿಂದ ಪಂಚ ಗ್ಯಾರಂಟಿಗಳಿಗಾಗಿ ಈವರೆಗೆ ಬಿಡುಗಡೆಯಾದ ಹಣ ಎಷ್ಟು ಎಂಬ ವರದಿ ಇಲ್ಲಿದೆ.

ಸಿದ್ದರಾಮಯ್ಯ ಸರ್ಕಾರ 2024-25ನೇ ಸಾಲಿನ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಸುಮಾರು 52,000 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ನಾನಾ ಕಸರತ್ತು ಮಾಡುತ್ತಿದೆ.‌ ಪ್ರಮುಖವಾಗಿ ದಲಿತ ಸಮುದಾಯಕ್ಕಾಗಿ ಮೀಸಲಿಡುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ (SCSP-TSP) ಅಡಿ ದೊಡ್ಡ ಪ್ರಮಾಣದ ಅನುದಾನವನ್ನು ಬಳಕೆ ಮಾಡಲಾಗುತ್ತಿದೆ. ಎಸ್​ಸಿಎಸ್​ಪಿ-ಟಿಎಸ್​ಪಿ ಯೋಜನೆಯ ಅನುದಾನ ಬಳಕೆಗೆ ಪ್ರತಿಪಕ್ಷ ಬಿಜೆಪಿ ಹಾಗೂ ದಲಿತ ನಾಯಕರಲ್ಲದೇ, ಕಾಂಗ್ರೆಸ್​​ನ ಅದೇ ಸಮುದಾಯದ ಕೆಲ ಶಾಸಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.‌

ಯಾವ ಗ್ಯಾರಂಟಿಗೆ ಎಷ್ಟು ಅನುದಾನ ಹಂಚಿಕೆ?:ಕೆಡಿಪಿ ಅಂಕಿ-ಅಂಶದ ಪ್ರಕಾರ, ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಎಸ್​ಸಿಎಸ್​ಪಿ-ಟಿಎಸ್​ಪಿ ಯೋಜನೆಯಿಂದ 2024-25ರಲ್ಲಿ ಒಟ್ಟು ಸುಮಾರು 14,282 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಶಕ್ತಿಯೋಜನೆಗಾಗಿ ಪರಿಶಿಷ್ಟ ಜಾತಿ ಉಪಯೋಜನೆ (ಎಸ್​ಸಿಎಸ್​ಪಿ)ಯಿಂದ 1001 ಕೋಟಿ ರೂ. ಹಂಚಿಕೆ ಮಾಡಿದ್ದರೆ, ಪರಿಶಿಷ್ಟ ಪಂಗಡ ಉಪಯೋಜನೆ (ಟಿಎಸ್​ಪಿ)ಯಿಂದ 450.45 ಕೋಟಿ ರೂ. ಹಂಚಿಕೆಯಾಗಿದೆ.

ಅನ್ನಭಾಗ್ಯಯೋಜನೆಯಡಿ ಕೊಡುವ ಸಹಾಯಧನಕ್ಕಾಗಿ ಎಸ್​ಸಿಎಸ್​ಪಿಯಿಂದ 1,539.18 ಕೋಟಿ ರೂ., ಟಿಎಸ್​ಪಿಯಿಂದ 648.41 ಕೋಟಿ ರೂ. ಸೇರಿದಂತೆ ಒಟ್ಟಾರೆ 2,187.59 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ.

ಗೃಹ ಲಕ್ಷ್ಮಿಯೋಜನೆಗಾಗಿ ಎಸ್​ಸಿಎಸ್​ಪಿಯಿಂದ 5,546.53 ಕೋಟಿ ರೂ., ಟಿಎಸ್​ಪಿಯಿಂದ 2,335.38 ಕೋಟಿ ಸೇರಿ ಒಟ್ಟೂ 7,881.91 ಕೋಟಿ ರೂ. ಬಳಸಿಕೊಳ್ಳಲಾಗುತ್ತಿದೆ.

ಗೃಹ ಜ್ಯೋತಿಯೋಜನೆಗಾಗಿ ಎಸ್​ಸಿಎಸ್​ಪಿಯಿಂದ ಪ್ರಸಕ್ತ ಸಾಲಿನಲ್ಲಿ 1,770.45 ಕೋಟಿ ರೂ., ಟಿಎಸ್​ಪಿಯಿಂದ 815.48 ಕೋಟಿ ರೂ. ಸೇರಿದಂತೆ ಒಟ್ಟು 2,585.93 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ.

ಯುವನಿಧಿಯೋಜನೆಗಾಗಿ ಎಸ್​ಸಿಎಸ್​ಪಿಯಿಂದ 123.50 ಕೋಟಿ ರೂ., ಟಿಎಸ್​ಪಿಯಿಂದ 52 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಒಟ್ಟು 175.50 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ.

ಈವರೆಗೆ ಬಿಡುಗಡೆಯಾದ ಅನುದಾನವೆಷ್ಟು?:ಕೆಡಿಪಿ ಪ್ರಗತಿ ಪರಿಶೀಲನಾ ಅಂಕಿ-ಅಂಶದ ಪ್ರಕಾರ, ಗೃಹ ಲಕ್ಷ್ಮಿ ಯೋಜನೆಗೆ ಎಸ್​ಸಿಎಸ್​ಪಿ-ಟಿಎಸ್​ಪಿಯಿಂದ ಹಂಚಿಕೆಯಾದ ಒಟ್ಟು 7,881.91 ಕೋಟಿ ರೂ. ಹಣದ ಪೈಕಿ ಜುಲೈವರೆಗೆ 4,597.79 ಕೋಟಿ ರೂ. ಬಿಡುಗಡೆಯಾಗಿದೆ. ಈ ಪೈಕಿ ಎಸ್​ಸಿಎಸ್​ಪಿಯಿಂದ 3,235.48 ಕೋಟಿ ರೂ. ಹಾಗೂ ಟಿಎಸ್​ಪಿಯಿಂದ 1362.31 ಕೋಟಿ ಅನುದಾನ ಬಿಡುಗಡೆಗೊಂಡಿದೆ.

ಅನ್ನ ಭಾಗ್ಯಯೋಜನೆಗೆ ಎಸ್​​ಸಿಎಸ್​ಪಿ-ಟಿಎಸ್​ಪಿಯಿಂದ ಹಂಚಿಕೆಯಾದ 2,187.59 ಕೋಟಿ ರೂ. ಪೈಕಿ ಜುಲೈವರೆಗೆ 321.22 ಕೋಟಿ ರೂ. ಬಿಡುಗಡೆಯಾಗಿದೆ. ಈ ಪೈಕಿ ಎಸ್​ಸಿಎಸ್​ಪಿಯಿಂದ 225.31 ಕೋಟಿ ರೂ., ಟಿಎಸ್​ಪಿಯಿಂದ 95.91 ಕೋಟಿ ರೂ. ಹಂಚಿಕೆಯಾಗಿದೆ.

ಗೃಹ ಜ್ಯೋತಿಯೋಜನೆಗೆ ಎಸ್​​ಸಿಎಸ್​ಪಿ-ಟಿಎಸ್​ಪಿಯಿಂದ ಹಂಚಿಕೆ ಮಾಡಲಾದ 2,585.93 ಕೋಟಿ ರೂ. ಪೈಕಿ, 1,926 ಕೋಟಿ ರೂ. ಬಿಡುಗಡೆ ‌ಮಾಡಿದೆ. ಈ ಪೈಕಿ ಎಸ್​ಸಿಎಸ್​ಪಿಯಿಂದ 1,323 ಕೋಟಿ ರೂ., ಟಿಎಸ್​ಪಿಯಿಂದ 603 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.

ಶಕ್ತಿಯೋಜನೆಗೆ ಎಸ್​​ಸಿಎಸ್​ಪಿ-ಟಿಎಸ್​ಪಿಯಿಂದ ಹಂಚಿಕೆಯಾದ ಒಟ್ಟು 1,451.45 ಕೋಟಿ ರೂ. ಪೈಕಿ ಜುಲೈವರೆಗೆ 967.63 ಕೋಟಿ ರೂ. ಬಿಡುಗಡೆಯಾಗಿದೆ. ಈ ಪೈಕಿ ಎಸ್​ಸಿಎಸ್​ಪಿಯಿಂದ 667.33 ಕೋಟಿ ರೂ., ಟಿಎಸ್​ಪಿಯಿಂದ 300.30 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಇತ್ತ ಯುವ ನಿಧಿ ಯೋಜನೆಗೆ ಎಸ್​​ಸಿಎಸ್​ಪಿ-ಟಿಎಸ್​ಪಿಯಿಂದ ಹಂಚಿಕೆಗೊಂಡ ಒಟ್ಟು 175.50 ಕೋಟಿ ರೂ. ಅನುದಾನದ ಪೈಕಿ ಜುಲೈವರೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿ:ದೇಶದಲ್ಲಿ ಅಕ್ರಮವಾಗಿ ಮಾರಾಟವಾದ ಎಲ್ಲ ಅರಣ್ಯ ಭೂಮಿ ಹಿಂಪಡೆಯಲು ಕುಮಾರಸ್ವಾಮಿ ಕ್ರಮ ವಹಿಸಲಿ: ಸಚಿವ ಈಶ್ವರ್ ಖಂಡ್ರೆ - Ishwar Khandre

ABOUT THE AUTHOR

...view details